ಪರಿಷತ್ ಚುನಾವಣೆ: ಬಿಜೆಪಿ ನಾಯಕನ ಮಗನಿಗೆ ಕಾಂಗ್ರೆಸ್ ಟಿಕೆಟ್, ಇದೇ ರಾಜಕೀಯದ ಅಂತರಂಗ
25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ (ನ 23) ಕೊನೆಯ ದಿನವಾಗಿದೆ. ಹಾಗಾಗಿ, ಮೂರೂ ಪಕ್ಷಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ. ದ್ವಿಸದಸ್ಯತ್ವನ್ನು ಹೊಂದಿರುವ ಬೆಳಗಾವಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಯಾವ ಪಕ್ಷಗಳಿಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ರಾಜಕೀಯ ನಿಂತ ನೀರಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕನ ಮಾತಿಗೆ ಕವಡೆ ಕಾಸು ಬೆಲೆಯಿಲ್ಲ
ಕಾಂಗ್ರೆಸ್ ಬಿಡುಗಡೆ ಮಾಡಿರುವ ಇಪ್ಪತ್ತು ಜನರ ಪಟ್ಟಿಯಲ್ಲಿ ಹನ್ನೆರಡು ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಈ ಪಟ್ಟಿಯಲ್ಲಿ ಬೇರೆ ಪಕ್ಷದ ಜೊತೆ ಗುರುತಿಸಿಕೊಂಡಿದ್ದ, ಗುರುತಿಸಿಕೊಂಡಿರುವ ನಾಯಕರ ಮಕ್ಕಳೂ ಇದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ.
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್, ಜೆಡಿಎಸ್ನಲ್ಲಿ ಹಾಲಿಗಳಿಗೆ ಕೈತಪ್ಪಿದ ಟಿಕೆಟ್, ಬಿಜೆಪಿಯಲ್ಲೂ ಇದೆ ಅಸಮಾಧಾನ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಹಿಂದೊಮ್ಮೆ ಟೀಕಿಸಿದ್ದರು. ಈಗ ಅದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಬಿಜೆಪಿಯ ಎ, ಬಿ, ಸಿ ಟೀಂ ಎಂದು ವ್ಯಂಗ್ಯವಾಡಿದ್ದಾರೆ.
ಎ.ಮಂಜು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದರು
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಒಂದೇ ಒಂದು ಕ್ಷೇತ್ರವೆಂದರೆ ಅದು ಹಾಸನ. ಅಲ್ಲಿ ಪ್ರಜ್ವಲ್ ರೇವಣ್ಣ ಅವರು ಬಿಜೆಪಿಯ ಎ.ಮಂಜು ಅವರನ್ನು ಸುಮಾರು 1.4ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಇದಾದ ನಂತರ, ಮಂಜು ಅವರು ಬಿಜೆಪಿಯ ಪಕ್ಷ ಚಟುವಟಿಕೆಯಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಎ.ಮಂಜು ಪುತ್ರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದರು. ಬಿಜೆಪಿ-ಕಾಂಗ್ರೆಸ್ ನಡುವೆ ಮ್ಯೂಸಿಕಲ್ ಚೇರ್ ರಾಜಕೀಯ ಚರಿತ್ರೆಯನ್ನು ಹೊಂದಿರುವ ಮಂಜು, ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು.
ಮಂಜು ಪುತ್ರ ಡಾ. ಮಂಥರ್ ಗೌಡಗೆ ಕಾಂಗ್ರೆಸ್ ಬಿಫಾರಂ
ಸ್ವಾಭಾವಿಕವಾಗಿ ಕಾಂಗ್ರೆಸ್ ಸೇರುವ ವಿಚಾರವನ್ನು ಎ.ಮಂಜು ನಿರಾಕರಿಸಿದ್ದರು. ಈಗ, ಅವರ ಪುತ್ರ ಡಾ. ಮಂಥರ್ ಗೌಡಗೆ ಕಾಂಗ್ರೆಸ್ ಬಿಫಾರಂ ಅನ್ನು ನೀಡಿದೆ. ವಿಧಾನ ಪರಿಷತ್ತಿನ ಕೊಡಗು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಥರ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ ತಂದೆ ಎ.ಮಂಜು ಬಿಜೆಪಿಗೆ ಸೇರಿದ್ದರೂ, ಅವರ ಪುತ್ರ ಮಂಥರ್ ಗೌಡ ಕಾಂಗ್ರೆಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಮುಂದುವರಿದಿದ್ದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಜೊತೆಗೆ ಸಿದ್ದರಾಮಯ್ಯ ಭೇಟಿ
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಜೊತೆಗೆ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದ್ದ ಮಂಥರ್ ಗೌಡ ಟಿಕೆಟಿಗಾಗಿ ಲಾಬಿ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರಕ್ಕೆ ಬಂದಿಲ್ಲ ಎಂದು ಮಂಥರ್ ಗೌಡ ಅವರನ್ನು ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಸಹೋದರ ಸುಜಾ ಕುಶಾಲಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಿಂದ ಹೆಚ್.ಯು. ಇಸಾಕ್ ಖಾನ್ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಜೆಪಿ ಎ,ಬಿ,ಸಿ ಟೀಂ"ಎಂದು ಕುಮಾರಸ್ವಾಮಿ ಲೇವಡಿ
ಬಿಜೆಪಿ ಮುಖಂಡನ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ, "ಹಾಸನದ ಬಿಜೆಪಿ ನಾಯಕರ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಕಾಂಗ್ರೆಸ್ಸಿನವರು ನಮ್ಮನ್ನು ಬಿಜೆಪಿಯ ಬಿಟೀಂ ಎಂದು ಕರೆಯುತ್ತಿದ್ದರು. ಈಗ ಜನಗಳೇ ನೋಡುತ್ತಿದ್ದಾರೆ, ಯಾರು ಯಾರ ಟೀಂ ಎಂದು, ಕಾಂಗ್ರೆಸ್ ಪಕ್ಷ ಬಿಜೆಪಿ ಎ,ಬಿ,ಸಿ ಟೀಂ"ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.