ನಿಜವಾಯಿತು! ಅಲ್ಲುಇಲ್ಲು ಎಲ್ಲೂ ಸಲ್ಲದ ಸಿ.ಎಂ.ಇಬ್ರಾಹಿಂ ಭವಿಷ್ಯ
ತಮ್ಮ ವರ್ಣರಂಜಿತ ಮಾತುಗಳಿಂದ ಜನಪ್ರಿಯರಾಗಿರುವ ಸದ್ಯಕ್ಕೆ ಕಾಂಗ್ರೆಸ್ಸಿನಲ್ಲಿರುವ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದದ್ದು ಗೊತ್ತಿರುವ ವಿಚಾರ. ಜೆಡಿಎಸ್ ಪಕ್ಷಕ್ಕೆ ಇವರು ಸೇರ್ಪಡೆಯಾಗಬಹುದು ಎನ್ನುವ ಮಾತು ಚಾಲ್ತಿಯಲ್ಲಿದ್ದಾಗ, ಕಾಂಗ್ರೆಸ್ ಬಗ್ಗೆ ಒಂದು ಮಾತನ್ನು ಹೇಳಿದ್ದರು.
ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಬರೀ ವೋಟ್ ಬ್ಯಾಂಕ್ ಆಗಿ ನೋಡಿಕೊಳ್ಳುತ್ತಿದೆ. ಸಮುದಾಯದ ಯಾವ ನಾಯಕರನ್ನಾದರೂ ಮುಖ್ಯಮಂತ್ರಿ ಮಾಡಿತ್ತೇ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿತ್ತೇ, ಅಥವಾ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿತ್ತೇ ಎಂದು ಇಬ್ರಾಹಿಂ ಬೇಸರ ವ್ಯಕ್ತ ಪಡಿಸಿದ್ದರು.
ಇಬ್ರಾಹಿಂ ಅವರು ಉತ್ತಮ ಭಾಷಣಕಾರರೂ ಆಗಿರುವುದರಿಂದ, ಕಾಂಗ್ರೆಸ್ ಬಿಟ್ಟು ಹೋಗದಂತೆ ಪಕ್ಷದ ಮುಖಂಡರು ಅವರ ಮೇಲೆ ಒತ್ತಡ ಹೇರಲಾರಂಭಿಸಿದರು. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದರು.
ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಇಬ್ರಾಹಿಂ ಮಣಿದರೋ ಅಥವಾ ದಳಪತಿಗಳಿಂದ ಸರಿಯಾದ ಕಮಿಟ್ಮೆಂಟ್ ಸಿಗಲಿಲ್ಲವೋ ಒಟ್ಟಿನಲ್ಲಿ, ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯುವ ಸುದ್ದಿ ತೆರೆಮೆರೆಗೆ ಸರಿದಿತ್ತು. ಈಗ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಅವರು ಅಂದು ಹೇಳಿದಂತೆಯೇ ಬೆಳವಣಿಗೆ ನಡೆದಿದ್ದು, ಇಬ್ರಾಹಿಂ ಮತ್ತೆ ಹಿನ್ನಡೆಯನ್ನು ಅನುಭವಿಸುವಂತಾಗಿದೆ.

ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ನಮ್ಮ ಸಮುದಾಯವನ್ನು ಪರಿಗಣಿಸುತ್ತಿಲ್ಲ
"ನಾವೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ದುಡಿದು ಮತದಾರನ ಓಲೈಸಿ ವೋಟ್ ಹಾಕಿಸಬೇಕು, ಆದರೆ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ನಮ್ಮ ಸಮುದಾಯದವರನ್ನು ಪರಿಗಣಿಸುತ್ತಿಲ್ಲ. ಸ್ಟಾರ್ ಕ್ಯಾಂಪೇನರ್ ಎಂದು ನಮ್ಮ ಸಮುದಾಯದವರನ್ನು ಕರೆಸಿ, ಕೆಲಸ ಮುಗಿದ ಮೇಲೆ ಶಾಲು ಹಾಕಿ ಹೊರಗೆ ಕಳುಹಿಸುವ ಕೆಲಸ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ. ಇದು ನಮಗೆ ಸರಿ ಅನಿಸುವುದಿಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮನೆಯಲ್ಲಿ ಇರುತ್ತೇನೆ. ಕೌನ್ಸಿಲ್ ನಲ್ಲಿ ಯಾರು ಸೀನಿಯರ್, ಯಾರನ್ನು ಲೀಡರ್ ಆಗಿ ಮಾಡಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ" ಎಂದು ಇಬ್ರಾಹಿಂ ಬೇಸರ ವ್ಯಕ್ತ ಪಡಿಸಿದ್ದರು.

ಹೈಕಮಾಂಡಿನಲ್ಲಿ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಪಾಲಾಗಿದೆ
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ವೋಟಿಗಾಗಿ ಮಾತ್ರ ಬಳಸಿಕೊಳ್ಳುತ್ತದೆ ಎನ್ನುವ ಇಬ್ರಾಹಿಂ ಮಾತಿನಂತೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನ ಸಿ.ಎಂ.ಇಬ್ರಾಹಿಂ ಕೈತಪ್ಪಿದೆ. ಹಿರಿತನದ ಆಧಾರದ ಮೇಲೆ ಇಬ್ರಾಹಿಂ ಅವರಿಗೆ ಸಿಗಬೇಕಾಗಿದ್ದ ಈ ಹುದ್ದೆ, ಹೈಕಮಾಂಡಿನಲ್ಲಿ ಆಪ್ತರಾಗಿರುವ ಬಿ.ಕೆ.ಹರಿ ಪ್ರಸಾದ್ ಪಾಲಾಗಿದೆ. ಹಿಂದುಳಿದ ವರ್ಗದ ನಾಯಕರಾಗಿರುವ ಹರಿ ಪ್ರಸಾದ್ ಆಯ್ಕೆಯನ್ನು ಹೈಕಮಾಂಡ್ ಘೋಷಣೆ ಮಾಡಿದೆ. ಆ ಮೂಲಕ, ಇಬ್ರಾಹಿಂ ಮತ್ತೆ ಹಿನ್ನಡೆ ಅನುಭವಿಸುವಂತಾಗಿದೆ.

ವಿದ್ಯಾರ್ಥಿ ಸಂಘಟನೆಯಿಂದಲೂ ಕಾಂಗ್ರೆಸ್ಸಿನ ಅಪ್ಪಟ ಕಾರ್ಯಕರ್ತರಾಗಿರುವ ಹರಿ ಪ್ರಸಾದ್
ವಿರೋಧ ಪಕ್ಷದ ನಾಯಕನ ಹುದ್ದೆಗೆ ಸಿ.ಎಂ.ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್ ಮತ್ತು ಕೆ.ಸಿ.ಕೊಂಡಯ್ಯ ನಡುವೆ ಪೈಪೋಟಿಯಿತ್ತು. ಆದರೆ, ಕೊಂಡಯ್ಯ ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ ಇಬ್ರಾಹಿಂ ಮತ್ತು ಹರಿ ಪ್ರಸಾದ್ ಈ ಹುದ್ದೆಗೆ ಮಂಚೂಣಿಯಲ್ಲಿದ್ದರು. ವಿದ್ಯಾರ್ಥಿ ಸಂಘಟನೆಯಿಂದಲೂ ಕಾಂಗ್ರೆಸ್ಸಿನ ಅಪ್ಪಟ ಕಾರ್ಯಕರ್ತರಾಗಿರುವ ಹರಿ ಪ್ರಸಾದ್ ದೆಹಲಿ ಮಟ್ಟದಲ್ಲಿ ಪ್ರಭಾವೀ ನಾಯಕರಾಗಿದ್ದಾರೆ. ಇನ್ನು, ಕೆಪಿಸಿಸಿ ಬಣ ರಾಜಕೀಯದ ವಿಚಾರ ಬಂದಾಗ, ಡಿ.ಕೆ.ಶಿವಕುಮಾರ್ ಬಣದವರು ಎನ್ನುವ ಮಾತಿದೆ.

ಸಿದ್ದರಾಮಯ್ಯನವರಿಗಾಗಿ ದೇವೇಗೌಡ್ರನ್ನು ಬಿಟ್ಟಿದ್ದೆ, ಇಬ್ರಾಹಿಂ
ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿದ್ದಕ್ಕೆ ತೀವ್ರ ಬೇಸರವನ್ನು ವ್ಯಕ್ತ ಪಡಿಸಿರುವ ಸಿ.ಎಂ.ಇಬ್ರಾಹಿಂ, "ನನಗೆ ವಿರೋಧ ಪಕ್ಷದ ನಾಯಕನ ತಪ್ಪಿದ್ದು ಯಾಕೆ ಎನ್ನುವುದಕ್ಕೆ ಸಿದ್ದರಾಮಯ್ಯನವರು ಉತ್ತರಿಸಬೇಕು. ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ಆಗಿ ಬರುವುದಿಲ್ಲ. ಸಿದ್ದರಾಮಯ್ಯನವರಿಗಾಗಿ ದೇವೇಗೌಡ್ರನ್ನು ಬಿಟ್ಟಿದ್ದೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ, ಎಲ್ಲಾ ವಿಚಾರವನ್ನು ಒಂದೇ ಬಾರಿ ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರಿಗಾಗಿ ಬಾದಾಮಿಯಲ್ಲಿ ಅಲ್ಲಿನ ಮುಖಂಡರ ಮನವೊಲಿಸುವ ಕೆಲಸ ಮಾಡಿದ್ದೆ. ಈಗ, ನನಗೆ ಅವರು ಈ ಗಿಫ್ಟ್ ಅನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗೆ ನಾನು ರಾಜೀನಾಮೆ ನೀಡುತ್ತೇನೆ" ಎಂದು ಇಬ್ರಾಹಿಂ, ಸಿದ್ದರಾಮಯ್ಯನವರ ವಿರುದ್ದ ನೇರವಾಗಿ ಬೇಸರ ವ್ಯಕ್ತ ಪಡಿಸಿದರು.












Click it and Unblock the Notifications