ನಮ್ ಗೌಡ್ರಿಗೆ ಏನೂ ಅನ್ನಬೇಡಿರಪ್ಪಾ; ಕಾಂಗ್ರೆಸ್ ಕೊಟ್ಟ ಕಟ್ಟಪ್ಪಣೆ ಅಸಲಿಯತ್ತು ಏನು!?
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್ ಕಟ್ಟಾಳುಗಳನ್ನು ಕೂಗಿ ಕರೆದ ಹೈಕಮಾಂಡ್ ಕಟ್ಟುನಿಟ್ಟಿನ ಕಟ್ಟಪ್ಪಣೆಯೊಂದನ್ನು ನೀಡಿದೆ. ಸುಖಾಸುಮ್ಮನೆ ವೈಯಕ್ತಿಕ ದಾಳಿ ನಡೆಸದಂತೆ ಎಚ್ಚರಿಕೆ ನೀಡಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌಪ್ಯ ಸಭೆಯೊಂದನ್ನು ನಡೆಸಿದ್ದಾರೆ. ಈ ವೇಳೆ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಾಗಿದ್ದು, ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಯಾವ ರೀತಿ ಸಜ್ಜುಗೊಳ್ಳಬೇಕು ಎಂಬುದನ್ನು ತಿಳಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ಚುನಾವಣೆ ಭವಿಷ್ಯದ ಸುಳಿವು ಕಾಂಗ್ರೆಸ್ ಕಂಡುಕೊಂಡಿದೆ. ಈ ಹಿನ್ನೆಲೆ 'ತೆನೆ ಹೊತ್ತ ಮಹಿಳೆ' ಬಗ್ಗೆ ಸಾಫ್ಟ್ ಕಾರ್ನರ್ ಹೊಂದುವಂತೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದೆ. ಹೈಕಮಾಂಡ್ ಹಾಕಿಕೊಂಡಿರುವ ಲೆಕ್ಕಾಚಾರಗಳೇನು?, ಜೆಡಿಎಸ್, ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಬಗ್ಗೆ ಕೈ ನಾಯಕರಿಗೆ ಹೈಕಮಾಂಡ್ ಕೊಟ್ಟ ಸೂಚನೆ ಏನು?, ರಾಹುಲ್ ಗಾಂಧಿ ಸೂಚನೆ ಹಿಂದಿರುವ ತಂತ್ರಗಾರಿಕೆಗಳೇನು?, ಅಸಲಿಗೆ ಕಾಂಗ್ರೆಸ್ ಕಂಡುಕೊಂಡಿರುವ ಅದೊಂದು ಸುಳಿವಾದರೂ ಏನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕರ್ನಾಟಕದಲ್ಲಿ ಮುಂದಿನ ವರ್ಷವೇ ಚುನಾವಣೆ
ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಿಗೆ 2023ರಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸ್ಥಳೀಯ ಪಕ್ಷವಾಗಿರುವ ಜೆಡಿಎಸ್ ರಾಜ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಾತ್ರಿಯಾಗಿದೆ. ಯಾವುದೇ ಪಕ್ಷವು ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಅದಕ್ಕೆ ಗೌಡರ ಕೃಪಾಕಟಾಕ್ಷ ಬೇಕಾಗುತ್ತದೆ ಎಂಬುದು ಕಾಂಗ್ರೆಸ್ ಕಂಡುಕೊಂಡಿರುವ ಗೌಪ್ಯ ಸಮೀಕ್ಷೆಯ ಫಲಿತಾಂಶವಾಗಿದೆ.
ಏಕೆಂದರೆ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂಬುದನ್ನು ಕಾಂಗ್ರೆಸ್ ಆಂತರಿಕ ಸಮೀಕ್ಷೆಯು ಕಂಡುಕೊಂಡಿದೆ. ಈ ಬಾರಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದು ತೀರಾ ವಿರಳವಾಗಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಮನೆ ಬಾಗಿಲು ತಟ್ಟುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಲಿದೆ. ಹೀಗಾಗಿ ಜೆಡಿಎಸ್ ಜೊತೆಗೆ ಯಾವುದೇ ರೀತಿ ವಿರೋಧ ಕಟ್ಟಿಕೊಳ್ಳದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಜೆಡಿಎಸ್ ಬಲಾಢ್ಯ ಪಕ್ಷ
ಕರ್ನಾಟಕದ ಮೈಸೂರು, ಹಾಸನ ಮತ್ತು ಮಂಡ್ಯ ಭಾಗದಲ್ಲಿ ಜೆಡಿಎಸ್ ಬಲಾಢ್ಯ ಪಕ್ಷ ಎನಿಸಿದೆ. ದೇವೇಗೌಡರು ಮತ್ತು ಅವರ ಕುಟುಂಬವು ದಕ್ಷಿಣ ಕರ್ನಾಟಕದಲ್ಲಿ ತನ್ನದೇ ಆಗಿರುವ ವೋಟ್ ಬ್ಯಾಂಕ್ ಅನ್ನು ಹೊಂದಿದೆ. ಒಕ್ಕಲಿಗ ಸಮುದಾಯವು ಗೌಡರ ಕುಟುಂಬಕ್ಕೆ ತೀರಾ ನಿಷ್ಠೆಯನ್ನು ಹೊಂದಿರುವ ವರ್ಗವಾಗಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಯಾವುದೇ ರೀತಿ ವೈಯಕ್ತಿಕ ವಾಗ್ದಾಳಿಗಳನ್ನು ನಡೆಸದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಚುನಾವಣಾ ತಂತ್ರಜ್ಞರು ಸಲಹೆ ನೀಡಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಬಲ ನೆಲೆಯನ್ನು ಹೊಂದಿದ್ದು, ತೀರಾಕೆಟ್ಟ ಸನ್ನಿವೇಶದಲ್ಲೂ ಪಕ್ಷವು ಕನಿಷ್ಠ 25 ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್ ಬಹುಮತಕ್ಕೆ ಕಡಿಮೆಯಾದರೆ, ಸರ್ಕಾರ ರಚಿಸಲು ಜೆಡಿಎಸ್ (ಎಸ್) ಸಹಾಯ ಪಡೆಯಲು ತನ್ನ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತದೆ ಎಂದು ನಾಯಕರು ಹೇಳಿದ್ದಾರೆ.

ದೇವೇಗೌಡರ ಬಗ್ಗೆ ಅವಹೇಳನ ಮಾಡುವಂತಿಲ್ಲ
ತುಮಕೂರಿನ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಕೆ. ಎನ್. ರಾಜಣ್ಣ ದೇವೇಗೌಡರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯು ರಾಜ್ಯ ನಾಯಕರನ್ನು ಮುಜುಗರಕ್ಕೆ ನೂಕಿತ್ತು. ಸದ್ಯ ಇಬ್ಬರ ಹೆಗಲ ಮೇಲೆ ಕೈ ಇಟ್ಟುಕೊಂಡು ಓಡಾಡುವ ದೇವೇಗೌಡರು, ನಾಲ್ಕು ಜನರ ಹೆಗಲ ಮೇಲೆ ಹೋಗುವ ದಿನಗಳು ದೂರವಿಲ್ಲ ಎಂಬ ಹೇಳಿಕೆಯು ತೀವ್ರ ಆಕ್ಷೇಪಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಾರ್ವಜನಿಕರವಾಗಿ ಕ್ಷಮಾಪಣೆ ಕೇಳುವಂತೆ ಕೆ. ಎನ್. ರಾಜಣ್ಣಗೆ ಸೂಚನೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ಸ್ವತಃ ಹೈಮಾಂಡ್ ಶಿವಕುಮಾರ್ ಪ್ರತಿಕ್ರಿಯೆ ಕೋರಿದ್ದು, ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.

ಚುನಾವಣೆಗೂ ಮೊದಲೇ ಜೆಡಿಎಸ್ ಜೊತೆ ಮೈತ್ರಿ ಇರುವುದಿಲ್ಲ
ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಕ್ಕೆ ಕಾಂಗ್ರೆಸ್ ಅಣಿಯಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಅಲ್ಲದೇ ಯಾವುದೇ ಪಕ್ಷದೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಹಿಂದೆ 2018ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ದೇವೇಗೌಡರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಅದರ ಹೊರತಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ 2018ರಲ್ಲಿ ಸರ್ಕಾರ ರಚಿಸಲು ಚುನಾವಣೋತ್ತರ ಮೈತ್ರಿ ಮಾಡಿಕೊಂಡವು, ಅಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ನಂತರದಲ್ಲಿ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 13 ತಿಂಗಳಿನಲ್ಲೇ ಪತನ
2019ರಲ್ಲಿ ಕರ್ನಾಟಕದ ಆಪರೇಷನ್ ಕಮಲ ಸರ್ಕಾರವನ್ನೇ ತಿರುವು-ಮುರುವು ಮಾಡಿತು. ಕಾಂಗ್ರೆಸ್ ಪಕ್ಷದಿಂದ 15 ಶಾಸಕರು ಬಿಜೆಪಿಯ ಕಡೆಗೆ ಮುಖ ಮಾಡಿದರು. ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು 13 ತಿಂಗಳಿನಲ್ಲಿಯೇ ಪತನವಾಯಿತು. ರಾಜ್ಯದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ 12 ರಿಂದ 14 ಸ್ಥಾನಗಳನ್ನು ಗೆದ್ದುಕೊಳ್ಳುನ ನಿರೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ರಚಿಸಿಕೊಂಡಿದ್ದವು. ಅದಾಗ್ಯೂ, ರಾಜಕೀಯ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಹೊಡೆದವು. ಲೋಕಸಭೆ ಚುನಾವಣೆಯಲ್ಲಿ ಎರಡೂ ಮಿತ್ರಪಕ್ಷಗಳು ಕೇವಲ 4 ಸ್ಥಾನಗಳನ್ನು ಗೆದ್ದುಕೊಳ್ಳುವುದಕ್ಕೆ ಸಾಧ್ಯವಾಯಿತು. ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.











Click it and Unblock the Notifications