ಜಿಲ್ಲಾ ಉಸ್ತುವಾರಿ ಬಟವಾಡೆ: ಅನಾಥರಾದ ಇಬ್ಬರು ಸಚಿವರು
ಇತ್ತೀಚೆಗೆ ರಾಮನಗರದ ಸರಕಾರಿ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಗಂಡಸ್ಥನದ ಗಲಾಟೆಯಾದಾಗ, ನೀವೇನು ಅಧಿಕೃತವಾಗಿ ಜಿಲ್ಲಾ ಉಸ್ತುವಾರಿಯಲ್ಲ, ಆ ಪಟ್ಟಿಯನ್ನು ಎಲ್ಲಿ ಬಿಡುಗಡೆ ಮಾಡಿದ್ದೀರಿ ತೋರಿಸಿ ನೋಡೋಣ ಎಂದು ಸಂಸದ ಡಿ.ಕೆ.ಸುರೇಶ್ ಅವರು ಸಚಿವ ಡಾ.ಅಶ್ವಥ್ ನಾರಾಯಾಣಗೆ ಸವಾಲು ಎಸೆದಿದ್ದರು.
ಹಲವು ಕಾರಣಗಳಿಂದ ಜಿಲ್ಲಾ ಉಸ್ತುವಾರಿಯನ್ನು ನೇಮಿಸುವ ಗೋಜಿಗೆ ಸರಕಾರ ಹೋಗಿರಲಿಲ್ಲ. ಜಿಲ್ಲಾ ಅಭಿವೃದ್ದಿ, ಕೆಡಿಪಿ ಮುಂತಾದ ಸಭೆಗಳು ಉಸ್ತುವಾರಿಯ ನೇತೃತ್ವದಲ್ಲಿ ನಡೆಯಬೇಕಾಗಿರುವುದರಿಂದ, ಆಡಳಿತ ಚುರುಕುಗೊಳಿಸಲು ಈ ಪ್ರಕ್ರಿಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಿ ಮುಗಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಮುಖ್ಯಮಂತ್ರಿಗಳ ಲೆಕ್ಕಾಚಾರ!
ಸಂಪುಟ ವಿಸ್ತರಣೆಯ ವಿಚಾರ ಮತ್ತೆ ಬಿಜೆಪಿಯಲ್ಲಿ ಮುನ್ನಲೆಗೆ ಬಂದ ಹಿನ್ನಲೆಯಲ್ಲಿ ಮೊದಲಿಗೆ ಸಿಎಂ ಬೊಮ್ಮಾಯಿ ಸದ್ದಿಲ್ಲದೇ ಜಿಲ್ಲಾ ಉಸ್ತುವಾರಿಯನ್ನು ಚಾಣಾಕ್ಷತನದಿಂದ ಮಾಡಿ ಮುಗಿಸಿದ್ದಾರೆ. ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಮುಖ್ಯಮಂತ್ರಿಗಳು ಈ ಕೆಲಸವನ್ನು ಮಾಡಿದ್ದಾರೆ.
ಎಂದಿನಂತೇ ಉಸ್ತುವಾರಿ ಹಂಚಿಕೆಯ ವಿಚಾರದಲ್ಲಿ ಅಲ್ಲಲ್ಲಿ ಅಪಸ್ವರ ಎದ್ದಿದೆ. ಬಯಸದ ಜಿಲ್ಲೆ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಸಚಿವರು ಮತ್ತೆ ತಗಾದೆ ತೆಗೆಯುವ ಸಾಧ್ಯತೆಯಿದೆ. ಇವರಿಗೆಲ್ಲಾ ಯಾವುದಾದರೂ ಒಂದು ಜಿಲ್ಲೆಯ ಉಸ್ತುವಾರಿಯಾದರೂ ಸಿಕ್ಕಿದೆ, ಆದರೆ, ಬೊಮ್ಮಾಯಿ ಸಂಪುಟದ ಕ್ಯಾಬಿನೆಟ್ ರ್ಯಾಂಕಿನ ಇಬ್ಬರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ಸಿಗಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಪಂಚ ರಾಜ್ಯಗಳ ಚುನಾವಣೆಯ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಬ್ಯೂಸಿ
ಸಚಿವ ಸಂಪುಟ ವಿಸ್ತರಣೆಯ ವಿಚಾರ ಮತ್ತೆ ರಾಜ್ಯ ರಾಜಕೀಯದಲ್ಲಿ ಗರಿಗೆದರಿದೆ. ಅಲ್ಲಲ್ಲಿ ಆಕಾಂಕ್ಷಿಗಳು ಪ್ರತ್ಯೇಕವಾಗಿ ಸಭೆಯನ್ನು ನಡೆಸುತ್ತಿದ್ದಾರೆ. ಒಂದು ವೇಳೆ ಸಂಪುಟ ವಿಸ್ತರಣೆ ಮಾಡಿದರೆ, ಈ ಕಸರತ್ತಿನ ನಂತರ ಅಸಮಾಧಾನ ಏಳುವುದು ಸ್ವಾಭಾವಿಕವಾಗಿರುವುದರಿಂದ ವರಿಷ್ಠರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ. ಪಂಚ ರಾಜ್ಯಗಳ ಚುನಾವಣೆಯ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಬ್ಯುಸಿಯಾಗಿರುವುದರಿಂದ, ಏನಿದ್ದರೂ ಮಾರ್ಚ್ ಹತ್ತರ ನಂತರ ಈ ಬಗ್ಗೆ ವರಿಷ್ಠರು ಯೋಚಿಸಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ, ಸದ್ಯಕ್ಕೆ ಜಿಲ್ಲಾ ಉಸ್ತುವಾರಿಯ ಪಟ್ಟಿಯನ್ನು ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಎಂದು ಹೇಳಲಾಗುತ್ತಿದೆ.
ಕಂದಾಯ ಸಚಿವರಾಗಿರುವ ಆರ್.ಅಶೋಕ್
ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಆರ್.ಅಶೋಕ್ ಮತ್ತು ಕಾನೂನು ಮತ್ತು ಸಣ್ಣ ನೀರಾವರಿ ಖಾತೆಯ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡದೇ ಇರುವುದು ಎಲ್ಲರ ಹುಬ್ಭೇರುವಂತೆ ಮಾಡಿದೆ. ಪ್ರಮುಖವಾಗಿ, ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜೊತೆಗೆ ಹತ್ತಿರದಿಂದ ಕೆಲಸ ಮಾಡಿರುವ ಅಶೋಕ್ ಗೆ, ಜಿಲ್ಲಾ ಉಸ್ತುವಾರಿಯಿಂದ ದೂರ ಇಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುವ ಅಶೋಕ್ ಅವರಿಗೆ ನಗರ ಕೋವಿಡ್ ಉಸ್ತುವಾರಿಯನ್ನು ಹಿಂದೆ ನೀಡಲಾಗಿತ್ತು.
ಸಮರ್ಥವಾಗಿ ಸರಕಾರದ ಪರ ಮಾತನಾಡುವ ಜೆ.ಸಿ.ಮಾಧುಸ್ವಾಮಿ
ಇನ್ನು, ಅಧಿವೇಶನದ ವೇಳೆ ಸಮರ್ಥವಾಗಿ ಸರಕಾರದ ಪರ ಮಾತನಾಡುವ ಜೆ.ಸಿ.ಮಾಧುಸ್ವಾಮಿಗೂ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿಲ್ಲ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುವ ಮಾಧುಸ್ವಾಮಿಗೆ ಉಸ್ತುವಾರಿ ನೀಡದೇ ಇರುವುದಕ್ಕೆ ಯಾವುದೇ ಕಾರಣಗಳು ಕಾಣಿಸುತ್ತಿಲ್ಲ. ತುಮಕೂರು ಜಿಲ್ಲಾ ಉಸ್ತುವಾರಿಯನ್ನಾಗಿ ಆರಗ ಜ್ಞಾನೇಂದ್ರ ಅವರನ್ನು ನೇಮಿಸಲಾಗಿದೆ.
ಬೆಂಗಳೂರು ನಗರ ಉಸ್ತುವಾರಿಯನ್ನು ಸಿಎಂ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು
ಮಾಧುಸ್ವಾಮಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಯಡಿಯೂರಪ್ಪನವರ ಸರಕಾರದ ಅವಧಿಯಿಂದಲೂ ಬೆಂಗಳೂರು ನಗರ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಯಾಕೆಂದರೆ, ಸಂಪದ್ಭರಿತ ಹುದ್ದೆಯಾಗಿರುವುದರಿಂದ ಇದರ ಮೇಲೆ ಅಶೋಕ್, ಅಶ್ವಥ್ ನಾರಾಯಣ್ ಮತ್ತು ವಿ.ಸೋಮಣ್ಣ ಅವರಿಗೆ ಕಣ್ಣಿತ್ತು. ಅಶೋಕ್ ಮತ್ತು ಮಾಧುಸ್ವಾಮಿಯವರಿಗೆ ಜಿಲ್ಲಾ ಉಸ್ತುವಾರಿ ನೀಡದೇ ಇರುವುದು, ಇನ್ನೂ ಹೆಚ್ಚಿನ ಜವಾಬ್ದಾರಿ ಅವರಿಗೆ ಸಿಗಲಿದೆ ಎಂದೂ ಹೇಳಲಾಗುತ್ತಿದೆ.
Recommended Video