ರಾಜ್ಕುಮಾರ್ ಬಗ್ಗೆ ಮಾತನಾಡಲು ನಟ ಚೇತನ್ಗೆ ಯಾವುದೇ ಅಧಿಕಾರ ಇಲ್ಲ, ಇದು ಬೆಂಕಿ ಹಚ್ಚುವ ಕೆಲಸ: ನಟಿ ಜಯಮಾಲ
ನಟ ಚೇತನ್ ಅಹಿಂಸಾ ಅವರು ಕನ್ನಡದ ವರನಟ ಡಾ. ರಾಜ್ಕುಮಾರ್ ಮತ್ತು ಅವರ ಸ್ಮಾರಕದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಅಧ್ಯಕ್ಷೆ ಹಾಗೂ ಹಿರಿಯ ನಟಿ ಜಯಮಾಲ ಅವರು ಕಿಡಿಕಾರಿದ್ದಾರೆ. ಚೇತನ್ ಮಾತನಾಡಿರುವುದು ಸಂಪೂರ್ಣ ತಪ್ಪು ಎಂದು ಖಂಡಿಸಿರುವ ಅವರು, ಡಾ. ರಾಜ್ಕುಮಾರ್ ಅಂತಹ ಮಹಾನ್ ಚೇತನದ ಬಗ್ಗೆ ಮಾತನಾಡಲು ಚೇತನ್ಗೆ ಯಾವುದೇ ಅಧಿಕಾರವಿಲ್ಲ ಎಂದು ಗುಡುಗಿದ್ದಾರೆ.
ಚೇತನ್ ಯಾಕೆ ಈ ರೀತಿ ಮಾತನಾಡುತ್ತಿದ್ದಾರೋ ತಿಳಿಯುತ್ತಿಲ್ಲ, ಅವರು ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಂಡು ಮಾತನಾಡುತ್ತಿದ್ದಾರಾ ಅಥವಾ ತಿಳುವಳಿಕೆ ಇಲ್ಲದೆ ಮಾತನಾಡುತ್ತಿದ್ದಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಅವರ ನಿಲುವುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಯಮಾಲ ಅವರು, ಚೇತನ್ ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಿಸುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚೇತನ್ ಭಾರತದ ಪ್ರಜೆಯಲ್ಲ ಅನಿಸುತ್ತಿದೆ
"ಒಂದು ದಿನ ಕ್ಷಮೆ ಕೇಳುತ್ತೇನೆ ಎನ್ನುವ ಅವರು, ಮರುದಿನವೇ ನಾನು ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಈ ಹಿಂದೆ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಸಂದರ್ಭದಲ್ಲೇ ಅವರ ಮೇಲೆ ನನಗೆ ಬಹಳ ಕೋಪವಿತ್ತು. ಅವರ ವರ್ತನೆ ಮತ್ತು ದೇಶದ ಬಗ್ಗೆ ಅವರಿಗಿರುವ ನಿಲುವನ್ನು ನೋಡಿದಾಗ, ಅವರು ನಿಜಕ್ಕೂ ನಮ್ಮ ಭಾರತದ ಪ್ರಜೆಯೋ ಅಲ್ವೋ ಎನ್ನುವ ಸಂಶಯ ನನಗಿದೆ" ಎಂದು ಜಯಮಾಲ ಕಟುವಾಗಿ ಟೀಕಿಸಿದ್ದಾರೆ.
ಚೇತನ್ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಜಯಮಾಲ ಗಂಭೀರವಾಗಿ ದೂರಿದ್ದಾರೆ. ಕನ್ನಡಪರ ಸಂಘಟನೆಗಳು ಮತ್ತು ರಾಜ್ಕುಮಾರ್ ಅಭಿಮಾನಿಗಳು ಫಿಲ್ಮ್ ಚೇಂಬರ್ಗೆ ಮನವಿ ನೀಡಿ ಚೇತನ್ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಗಡಿಪಾರು ಮಾಡುವುದು ಚಿತ್ರರಂಗದ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಚೇತನ್ ನೀಡಿರುವ ಉದ್ವಿಗ್ನಕಾರಿ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಜೊತೆ ಗಂಭೀರವಾಗಿ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಇಂತಹ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.
ರಾಜ್ಕುಮಾರ್ ಏನೂ ಕೇಳಿದವರಲ್ಲ
ರಾಜ್ಕುಮಾರ್ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಜಯಮಾಲ, ಅವರು ಎಂದಿಗೂ ಸ್ವಾರ್ಥಕ್ಕಾಗಿ ಏನನ್ನೂ ಕೇಳಿದವರಲ್ಲ ಎಂದು ಭಾವುಕರಾಗಿದ್ದಾರೆ. ರಾಜ್ಕುಮಾರ್ ಅವರು ಸದಾ ಕನ್ನಡ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ಹಿತಕ್ಕಾಗಿ ಮಿಡಿದವರು. ಅವರ ಕುಟುಂಬದವರು ಸಹ ಸ್ಮಾರಕಕ್ಕಾಗಿ ಜಾಗ ನೀಡಿ ಎಂದು ಸರ್ಕಾರದ ಮುಂದೆ ಹೋದವರಲ್ಲ. ಅಂತಹ ಮಹಾನ್ ವ್ಯಕ್ತಿ ಮತ್ತು ಅವರ ನಿಸ್ವಾರ್ಥ ಕುಟುಂಬದ ಬಗ್ಗೆ ಈ ರೀತಿಯ ಟೀಕೆಗಳು ಬಂದಾಗ ಅವರಿಗೂ ನೋವಾಗುತ್ತದೆ ಎಂಬ ಸಂಕಟವನ್ನು ಅವರು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚೇತನ್ ಅವರನ್ನು ಫಿಲ್ಮ್ ಚೇಂಬರ್ಗೆ ಕರೆಸಿ ಅವರ ತಪ್ಪಿನ ಬಗ್ಗೆ ತಿಳಿಹೇಳಲಾಗುವುದು ಮತ್ತು ಸರ್ಕಾರದ ಮಟ್ಟದಲ್ಲಿ ಅವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದು ಜಯಮಾಲ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications