ನಂದಿ ಬೆಟ್ಟ ಪ್ರವಾಸಿಗರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ಗಿರಿಧಾಮ ಮಾರ್ಗ ಓಪನ್
ಚಿಕ್ಕಬಳ್ಳಾಪುರ, ನವೆಂಬರ್ 17: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಪ್ರವಾಸಿಗರ ಪೆವರೇಟ್ ಹಾಗೂ ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟ ಪ್ರಿಯರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಿಹಿ ಸುದ್ದಿಯೊಂದನ್ನು ನೀಡಿದೆ.
ನಂದಿ ಗಿರಿಧಾಮದ ಮೇಲೆ ಸುರಿದ ವರ್ಷಧಾರೆಯಿಂದ ಪ್ರೇಮಧಾಮಕ್ಕೆ ಹೋಗುವ ಮಾರ್ಗ ಕುಸಿದು ಬಿದ್ದಿತ್ತು. ಕಳೆದ ಎರಡೂವರೆ ತಿಂಗಳುಗಳಿಂದ ಸ್ವರ್ಗದ ಬಾಗಿಲು ಮುಚ್ಚಿಹೋಗಿತ್ತು, ಪ್ರತಿ ವೀಕೆಂಡ್ನಲ್ಲೂ ಪ್ರೇಮಪಕ್ಷಿಗಳು ಅಲ್ಲಿಗೆ ಬಂದು ನಿರಾಸೆಯಿಂದ ಬೇರೆ ಕಡೆಗೆ ಹೋಗುತ್ತಿದ್ದರು. ಆದರೆ ಮೂರು ತಿಂಗಳ ನಂತರ ನಂದಿ ಬೆಟ್ಟದ ಮಾರ್ಗ ಮತ್ತೆ ತಗೆಯಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದೆ.
ಕಳೆದ ಆಗಸ್ಟ್ 24ರಂದು ಸುರಿದ ಬಾರಿ ಮಳೆಯಿಂದಾಗಿ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗ ಕೊಚ್ಚಿಕೊಂಡು ಹೋಗಿದ್ದು, ನಂದಿ ಬೆಟ್ಟದ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇನ್ನು ನಂದಿ ಬೆಟ್ಟ ಮಳೆಗಾಲ, ಚಳಿಗಾಲ, ಬೇಸಿಗೆ ಹೀಗೆ ಎಲ್ಲ ಕಾಲಕ್ಕೂ ಹೇಳಿ ಮಾಡಿಸಿದಂತಿರುವ ತಾಣವಾಗಿದೆ.
ಆದರೆ, ನಂದಿಬೆಟ್ಟದ ಸೊಬಗನ್ನು ಕೊರೊನಾ ಲಾಕ್ಡೌನ್ ಮತ್ತು ರಸ್ತೆ ಕುಸಿತದಿಂದ ಕಳೆದ ಎರಡು ವರ್ಷದಿಂದ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಿ, ಪ್ರವಾಸಿಗರಿಂದ ದೂರ ಉಳಿದುಕೊಂಡಿತ್ತು. ಆದರೆ ಈಗ ಎಲ್ಲದಕ್ಕೂ ಮುಕ್ತಿ ಸಿಕ್ಕಿದ್ದು, ಇದೇ ತಿಂಗಳು ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಲಿದೆ.

ನಂದಿ ಬೆಟ್ಟ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು
ಇನ್ನೂ ವಾರಾಂತ್ಯ ಬಂತೆಂದರೆ ಸಾಕು ನಂದಿಬೆಟ್ಟ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ರಸ್ತೆ ತುಂಬೆಲ್ಲಾ ಬೈಕ್ಗಳು, ಕಾರುಗಳಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಆದರೆ ರಸ್ತೆಯ ಮಾರ್ಗ ಕಡಿತದಿಂದ ಎಲ್ಲವೂ ಬಂದ್ ಆಗಿತ್ತು. ಇದೀಗ ನಂದಿಬೆಟ್ಟ ಸಂಪೂರ್ಣ ಹಸಿರು ಹೊದ್ದು ಮಲಗಿದೆ. ನಂದಿಬೆಟ್ಟದ ಅಂದ ಚೆಂದ ನೂರ್ಮಡಿಯಾಗಿದೆ.
ಜನ, ವಾಹನ, ಬೈಕ್, ಅಂಗಡಿಗಳ ವ್ಯವಹಾರ ಹೀಗೆ ಎಲ್ಲವೂ ಬಂದ್ ಆಗಿ ಸ್ವರ್ಗದಂತೆ ನಿರ್ಮಾಣವಾಗುತ್ತಿದೆ. ಪ್ರವಾಸಿಗರು ನಂದಿಬೆಟ್ಟದ ಸೌಂದರ್ಯವನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ಮುಂದೆ ಪ್ರವಾಸಿಗರ ಕಣ್ಣಿಗೆ ನಂದಿ ಗಿರಿಧಾಮ ಮತ್ತಷ್ಟು ಮುದ ನೀಡಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ
ನಂದಿ ಬೆಟ್ಟದಲ್ಲಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಮೇಲ್ಭಾಗದಲ್ಲಿ ಕಾಂಕ್ರಿಟ್ ಹಾಕಿ 10 ದಿನ ಕ್ಯೂರಿಂಗ್ ಮಾಡಲಾಗಿದೆ. ಹೀಗಾಗಿ ನಂದಿಬೆಟ್ಟಕ್ಕೆ ಬೈಕ್, ಕಾರು, ಬಸ್ಗಳಲ್ಲಿ ಹೋಗಬಹುದು. 4 ಸಿಮೆಂಟ್ ಕಾಂಕ್ರಿಟ್ ಪೈಪ್ಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿದ್ದಾರೆ. ಬೆಟ್ಟದ ಮೇಲಿನಿಂದ ಬರುವ ನೀರು ಸರಾಗವಾಗಿ ಕೆಳಗೆ ಹರಿದು ಹೋಗಲಿದೆ ಎಂದು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ತಿಮ್ಮರಾಯಪ್ಪ ಮಾಹಿತಿ ಕೊಟ್ಟಿದ್ದಾರೆ.
ಒಟ್ಟಾರೆ ಕಳೆದ ಎರಡು ವರ್ಷಗಳ ನಂತರ ಕೊರೊನಾ ಹಾಗೂ ರಸ್ತೆಯ ಮಾರ್ಗದಿಂದ ಬಂದ್ ಆಗಿದ್ದ ನಂದಿ ಗಿರಿಧಾಮ ಮತ್ತೆ ಸಂಪೂರ್ಣವಾಗಿ ರೀ ಓಪನ್ ಆಗುತ್ತಿದ್ದು, ಪ್ರವಾಸಿಗರಿಗೆ ಮತ್ತಷ್ಟು ಸಂತಸವನ್ನು ತಂದಂತಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ; ರಸ್ತೆ ಸಂಚಾರ ನಿಷೇಧ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆ ಆರ್ಭಟ ಹಿನ್ನೆಲೆಯಲ್ಲಿ ಗುಡಿಬಂಡೆ ತಾಲೂಕಿನ ಲಕ್ಕೇನಹಳ್ಳಿ, ಹಂಪಸಂದ್ರ ಕೆರೆ ಬಳಿಯ ರಸ್ತೆ ಸಂಚಾರ ನಿಷೇಧ ಮಾಡಲಾಗಿದೆ. ಕೆರೆ ಬಳಿ ಖುದ್ದು ಗುಡಿಬಂಡೆ ತಹಶೀಲ್ದಾರ್ ಲಾಠಿ ಹಿಡಿದು ನಿಂತಿದ್ದಾರೆ.
ಗುಡಿಬಂಡೆ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಹೆಚ್ಚು ಮಳೆ ಸುರಿದಿದ್ದು, ನೀರು ಹರಿವು ಹೆಚ್ಚಳದಿಂದ ಯಾವುದೇ ಅನಾಹುತ ಆಗಬಾರದೆಂದು ಕ್ರಮ ಕೈಗೊಳ್ಳಲಾಗಿದೆ. ನೀರಿನ ಹರಿವು ಹೆಚ್ಚಾದ ಸೇತುವೆ, ಕೆರೆ ಕಟ್ಟೆಗಳ ಮೇಲೆ ಸಂಚಾರ ನಿಷೇಧ ಮಾಡಿ ಆದೇಶಿಸಲಾಗಿದೆ.

ರಾಜ್ಯದ ವಾತಾವರಣ ಹೇಗಿರಲಿದೆ?
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.












Click it and Unblock the Notifications