ಬಿಎಸ್ಪಿ ಅಭ್ಯರ್ಥಿ ದ್ವಾರಕನಾಥ್ ಸಂದರ್ಶನ: 'ಬಿಜೆಪಿ ನಿಜವಾದ ದೇಶದ್ರೋಹಿ'
ಪತ್ರಕರ್ತರು, ವಕೀಲರು, ಸಾಮಾಜಿಕ ಹೋರಾಟಗಾರರು ಆಗಿ ಗುರುತಿಸಿಕೊಂಡಿರುವ ಸಿ.ಎಸ್.ದ್ವಾರಕಾನಾಥ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜ್ಯದ ದಲಿತ ರಾಜಕಾರಣ, ಬಿಜೆಪಿ-ಕಾಂಗ್ರೆಸ್ ಬಗೆಗೆ ಅವರಿಗಿರುವ, ಜನಕ್ಕೆ ಇರುವ ಅಸಮಾಧಾನ, ಪಗತಿಪರರ ಸೋಗಿನಲ್ಲಿರುವ ಬ್ರೋಕರ್ಗಳು, ಕ್ಷೇತ್ರದ ಸಮಸ್ಯೆಗಳು, ಪರಿಹಾರಗಳ ಬಗ್ಗೆ ಅವರು ಒನ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರ ಆಯ್ಕೆ ಏಕೆ?, ನಿಮ್ಮ ಮೊದಲ ಚುನಾವಣೆಗೆ ಹೇಗೆ ತಯಾರಿ ನಡೆಸಿದ್ದೀರಿ?
ನಾನು ಅವಿಭಜಿತ ಕೋಲಾರ ಜಿಲ್ಲೆಯವನು, 20 ವರ್ಷಗಳ ನಾನು ಲಂಕೇಶ್ ಪತ್ರಿಕೆಗೆ ವರದಿಗಾರನಾಗಿ ಕೆಲಸ ಮಾಡಿದ್ದೆ, ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವಿಷಯಗಳ ಬಗ್ಗೆ ವರದಿ ಮಾಡಿದ್ದೇನೆ, ಅದರ ಮೂಲಕವೇ ಕ್ಷೇತ್ರದ ಪೂರ್ಣ ಪರಿಚಯವನ್ನು ಪಡೆದಿದ್ದೇನೆ, ಕ್ಷೇತ್ರದ ಸಮಸ್ಯೆಗಳ ಅರಿವು ನನಗೆ ಇದೆ. ನನ್ನ ಸಿದ್ಧತೆ ಎಂದರೆ ನನ್ನ ಈವರೆಗಿನ ಸಾಮಾಜಿಕ ಹೋರಾಟಗಳೇ ನನಗೆ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆಯನ್ನು, ಮಾನಸಿಕ ಗಟ್ಟಿತನವನ್ನು ನೀಡಿವೆ. ವಕೀಲನಾಗಿ, ಸಾಮಾಜಿಕ ಹೋರಾಟಗಾರನಾಗಿ, ಪತ್ರಕರ್ತನಾಗಿ ನಾನು ಮಾಡಿದ ಕಾರ್ಯಗಳೇ ನನ್ನ ಸಿದ್ಧತೆ.

ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ನಿಮಗಿರುವ ದೂರು ಏನು?
ಕಾಂಗ್ರೆಸ್-ಬಿಜೆಪಿ ಅಭಿವೃದ್ಧಿ ವಿಷಯ ಬಿಟ್ಟು, ಧಾರ್ಮಿಕ ವಿಷಯಗಳು, ಕೆಲವು ಫೇಕ್ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ, ವಿಶೇಷವಾಗಿ ಬಿಜೆಪಿಗೆ ಈ ಮಾತು ಹೇಳುತ್ತಿದ್ದೇನೆ. ದೇಶಕ್ಕೆ ರಕ್ಷಣೆ ಇದೆ, ಆದರೆ ಇವರು ದೇಶಕ್ಕೆ ರಕ್ಷಣೆಯ ತೊಂದರೆ ಇದೆ ಎಂದು ಜನರಲ್ಲಿ ಭಾವನೆ ಮೂಡುವಂತೆ ಮಾಡಿ, ತಮ್ಮ ಅಸಫಲತೆಯನ್ನು, ತಮ್ಮ ಶೂನ್ಯ ಸಾಧನೆಯನ್ನು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಬಡ-ಮಧ್ಯಮ ವರ್ಗದ ಜನರನ್ನು ನಿರ್ಲಕ್ಷಿಸಿ, ಅಂಬಾನಿ-ಅದಾನಿಗಳಂತಹಾ ಬಂಡವಾಳದಾರರಿಗೆ ಅವರು ನೀಡುತ್ತಿರುವ ಬೆಂಬಲ ಆತಂಕ ತರುತ್ತಿದೆ. ಬಿಎಸ್ಎನ್ಎಲ್ ಅನ್ನು ಮುಗಿಸಿ ಜಿಯೋ ಅನ್ನು ತರುತ್ತಿರುವುದು ಇದೆಲ್ಲಾ ಜನವಿರೋಧಿ ನಡೆ, ಇದು ದೇಶವಿರೋಧಿ ನಡೆ, ನಾನು ಬಿಜೆಪಿಯನ್ನು ದೇಶವಿರೋಧಿ ಎಂದೇ ಕರೆಯುತ್ತೇನೆ. ಕಾಂಗ್ರೆಸ್ ಇದನ್ನೆಲ್ಲಾ ಜನರಿಗೆ ತಿಳಿಸಬೇಕಿತ್ತು, ಆದರೆ ಕಾಂಗ್ರೆಸ್ ಆ ಕೆಲಸ ಮಾಡಲು ವಿಫಲವಾಗಿದೆ. ನನ್ನ ಕ್ಷೇತ್ರದಿಂದ ವೀರಪ್ಪ ಮೊಯ್ಲಿ ಕಳೆದ ಬಾರಿ ಆಯ್ಕೆ ಆಗಿದ್ದರು, ಅವರು ಅನುಭವಿ ರಾಜಕಾರಣಿ ಅವರಿಗೆ ಇವೆಲ್ಲಾ ವಿಷಯ ಗೊತ್ತಿಲ್ಲದೇ ಇಲ್ಲ, ಆದರೆ ಅವರೇಕೆ ಈ ಬಗ್ಗೆ ಮಾತನಾಡುತ್ತಿಲ್ಲ, ಬಿಜೆಪಿ ಸಂವಿಧಾನದ ಮೇಲೆ ಸತತ ದಾಳಿ ಮಾಡುತ್ತಿದೆ, ಆದರೆ ವೀರಪ್ಪ ಮೊಯ್ಲಿ ಒಂದು ಬಾರಿಯೂ ಈ ಬಗ್ಗೆ ಮಾತನಾಡಿಲ್ಲ. ಬಿಜೆಪಿಯು ದಲಿತರ ಮೇಲೆ ಅಲ್ಪಸಂಖ್ಯಾತರ ಮೇಲೆ ಸತತ ದಾಳಿ ನಡೆಸುತ್ತಲೇ ಇದೆ, ಇದನ್ನು ಮೊಯ್ಲಿ ಅವರು ಒಮ್ಮೆಯೂ ಟೀಕಿಸಿಲ್ಲ. ನನಗನ್ನಿಸುತ್ತೆ, ಮೊಯ್ಲಿ-ಮೋದಿ ಇಬ್ಬರೂ ಒಂದೇ ಎಂದು, ಇಬ್ಬರ ಯೋಚನಾ ಲಹರಿ ಒಂದೇ ಇದೆ. ಇವರಿಬ್ಬರ ಹಿಂದೆಯೂ ಅಂಬಾನಿ-ಅದಾನಿಗಳೇ ಇದ್ದಾರೆ. ಇವರೆಲ್ಲರನ್ನೂ ಪ್ರಶ್ನೆ ಮಾಡಲು ನಾನು ತಯಾರಾಗಿದ್ದೇನೆ, ಹಾಗಾಗಿಯೇ ನಾನು ಈ ಬಾರಿ ಗೆಲ್ಲಬೇಕಿದೆ.

ಕರ್ನಾಟಕದಲ್ಲಿ ದಲಿತ ರಾಜಕಾರಣ ಹೇಗಿದೆ? ಅದಕ್ಕೆ ಅಧಿಕಾರ ಕೊಡುವ, ಕಸಿದುಕೊಳ್ಳುವ ಶಕ್ತಿ ಇದೆಯೇ?
ಕರ್ನಾಟಕದಲ್ಲಿ ದಲಿತ ರಾಜಕಾರಣಕ್ಕೆ ಅಧಿಕಾರ ಕೊಡುವ, ಕಸಿದುಕೊಳ್ಳುವ ಶಕ್ತಿ ಪ್ರಸ್ತುತವಂತೂ ಇಲ್ಲ. ನಮ್ಮ ರಾಜ್ಯದಲ್ಲಿ ದಲಿತ ಚಳುವಳಿ ರಾಜಕೀಯ ರೂಪವನ್ನು ಪಡೆದುಕೊಳ್ಳಲೇ (ಪೊಲಿಟಿಕಲೈಜ್) ಇಲ್ಲ. ಅದು ಸಾಮಾಜಿಕ ಚಳುವಳಿಯಾಗಿಯೇ ಉಳಿದುಕೊಂಡಿತೆ ಹೊರತು, ಅಧಿಕಾರ ಕೇಂದ್ರದ ಮಟ್ಟಕ್ಕೆ ಏರಲೇ ಇಲ್ಲ. ಇಂದಿನ ದಲಿತ ಬಣಗಳು ಕೆಲವು ಕಾಂಗ್ರೆಸ್ ಜೊತೆ, ಬಿಜೆಪಿ ಜೊತೆ, ಜೆಡಿಎಸ್ ಜೊತೆ ಗುರುತಿಸಿಕೊಂಡಿವೆ. ಆದರೆ ಅವು ಬಹುಜನ ಚಳುವಳಿ ಜೊತೆ ಇರಬೇಕಿತ್ತು. ಬಹುಜನ ಚಳುವಳಿಯಲ್ಲಿರುವ ದಲಿತರು ಜಾಗೃತವಾಗಿದ್ದಾರೆ, ಬಹುಜನ ವಿದ್ಯಾರ್ಥಿ ಸಂಘ ಪ್ರಜ್ಞಾವಂತರಾಗಿದ್ದಾರೆ. ಅದರಿಂದ ದಲಿತ ರಾಜಕೀಯ ಚಳುವಳಿ ಪ್ರಾರಂಭ ಮಾಡಲು ಸಾಧ್ಯವಾಗುತ್ತಿದೆ.

ದಲಿತಪರ ಚಿಂತಕರು, ವಿಚಾರವಾದಿಗಳು ಬೆಂಗಳೂರಿನ ಸಭೆಗಳ ವೇದಿಕೆಗಳಿಗೆ ಮಾತ್ರವೇ ಸೀಮಿತರಾಗಿದ್ದಾರೆಯೇ? ಇಂತಹಾ ಸಂದರ್ಭದಲ್ಲಿ ಅವರು ನಿಮ್ಮಂತಹವರೊಂದಿಗೆ ನಿಲ್ಲಬೇಕಿತ್ತಲ್ಲವೆ?
ಕಳೆದ 45 ವರ್ಷಗಳಿಂದ ಪ್ರಗತಿಪರರ ಜೊತೆ ನಾನು ಕೆಲಸ ಮಾಡುತ್ತಲೇ ಬಂದಿದ್ದೇನೆ, 45 ವರ್ಷ ನನ್ನ ಸಂಗಾತಿಗಳಾಗಿದ್ದವರು, ಇಂದು ನನ್ನೊಂದಿಗೆ ಅವರು ನಿಲ್ಲಬೇಕಿತ್ತು. ಆದರೆ ಅವರು ಮೊಯ್ಲಿ ಅವರ ಪರವಾಗಿ ನಿಂತಿದ್ದಾರೆ. ಮೊಯ್ಲಿ ಅವರು ದಲಿತ, ಅಲ್ಪಸಂಖ್ಯಾತರ ವಿಷಯಗಳನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡರೇ ಹೊರತು, ಅವನ್ನು ಪರಿಹರಿಸುವ ಯತ್ನ ಮಾಡಲಿಲ್ಲ, ಆದರೆ ಪ್ರಗತಿಪರರು ಅವರ ವೈಯಕ್ತಿಕ ಲಾಭಕ್ಕಾಗಿ ಅವರ ಜೊತೆ ನಿಂತಿದ್ದಾರೆ, ಇದರಿಂದ ಅವರು ವಿಶ್ವಾಸರ್ಹತೆ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಕಾಶ್ ರೈ ಅವರು ಬಂದಾಗ ಅವರನ್ನು ತಲೆಮೇಲೆ ಹೊತ್ತು ಮೆರೆಸಿದರು, ಇವತ್ತು ಪ್ರಕಾಶ್ ರೈ ಅವರ ಕೈ ಬಿಟ್ಟಿದ್ದಾರೆ. ಇದರರ್ಥ ಪ್ರಗತಿಪರರು ಕಾಂಗ್ರೆಸ್ನ ಒಂದು ರೆಕ್ಕೆಯೇ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಪ್ರಗತಿಪರರ ವೇಷ ಹಾಕಿಕೊಂಡ ಕೆಲವು ಬ್ರೋಕರ್ಸ್ ಇದ್ದರು, ಆ ಬ್ರೋಕರ್ಗಳು ದಲಿತ ಹೋರಾಟಗಾರರು, ಪ್ರಗತಿಪರರನ್ನು ಕಾಂಗ್ರೆಸ್ಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದರಿಂದ ದೊಡ್ಡ ಹಾನಿಯೇನು ಆಗುವುದಿಲ್ಲ, ಈ ಸೋ ಕಾಲ್ಡ್ ಪ್ರಗತಿಪರರಿಗೆ ನೂರು ಓಟು ಹಾಕಿಸುವ ಶಕ್ತಿಯೂ ಇಲ್ಲ.

ನಿಮ್ಮ ಮಾತುಗಳು ಕೇಳುತ್ತಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ಚಳುವಳಿ ನಿರ್ನಾಮವೇ ಆಗಿಬಿಡಬಹುದೇನೋ ಅನ್ನಿಸುತ್ತಿದೆ, ಈ ಆತಂಕ ನಿಜವೇ?
ಖಂಡಿತ, ಸಿದ್ದರಾಮಯ್ಯ ಅವರ ಸಮಯದಲ್ಲಿ ಒಂದೂ ಪ್ರಮುಖವಾದ ದಲಿತ ಹೋರಾಟ ಆಗಲೇ ಇಲ್ಲ. ಎಲ್ಲರೂ ಸರ್ಕಾರದ ಮಂತ್ರಿಗಳ ಜೊತೆ ಇದ್ದರೇ ಹೊರತು, ಬೀದಿಗೆ ಬಂದು ಹೋರಾಟ ಮಾಡಲಿಲ್ಲ. ಪ್ರಗತಿಪರರು ಆಗಾಗ ಬಿಜೆಪಿ ವಿರುದ್ಧ ಮಾತನಾಡುತ್ತಾರೆ, ಅದೂ ಸಹ ಕಾಂಗ್ರೆಸ್ಗೆ ಸಹಾಯವಾಗಲಿ ಎಂದು. ನನಗನ್ನಿಸುತ್ತೆ ಯಾವುದೇ ಚಳುವಳಿ ರಾಜಕೀಯಗೊಳ್ಳದೆ ಹೋದರೆ ಅದು ಉಳಿವುದಿಲ್ಲ, ಕಾನ್ಶಿರಾಂ ಅವರು ಯುಪಿಯಲ್ಲಿ ದಲಿತರನ್ನು, ಬಹುಜನರನ್ನು ಅಧಿಕಾರದ ಕೇಂದ್ರಕ್ಕೆ ತೆಗೆದುಕೊಂಡು ಹೋದ ಕಾರಣ ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಯಿತು. ಆದರೆ ಇಲ್ಲಿ ಅದು ಆಗಲಿಲ್ಲ, ದಲಿತ ಚಳುವಳಿ ಬಲ ಪಂಥೀಯ, ಮಧ್ಯ ಪಂಥೀಯ ಪಕ್ಷಗಳ ಜೊತೆ ಸೇರಿಕೊಂಡಾಗ ಚಳುವಳಿಗಳು ನಿರ್ಮಾನವಾಗುತ್ತವೆ. ರಾಜ್ಯದಲ್ಲಿಯೂ ಅದೇ ಆಗುತ್ತಿದೆ.

ಎಡಪಕ್ಷಗಳೇಕೆ ಪರಸ್ಪರ ವಿರುದ್ಧ ಸ್ಪರ್ಧಿಸುತ್ತಿವೆ? ಕಾಂಗ್ರೆಸ್ ಚಿಂತನೆಗಳಿಗೂ, ನಿಮ್ಮ ಚಿಂತನೆಗಳಿಗೂ ಸಮಾನತೆ ಇಲ್ಲವೆ?
ಕಾಂಗ್ರೆಸ್ ಮಧ್ಯಪಂಥೀಯವೂ ಅಲ್ಲ, ಅದೂ ಸಹ ಬಲಪಂಥೀಯವೇ, ಕಾನ್ಶೀರಾಂ ಅವರು ಹೇಳಿದಂತೆ, 'ಬಿಜೆಪಿ ಹೆಡೆ ಎತ್ತಿರುವ ಹಾವಾದರೆ, ಕಾಂಗ್ರೆಸ್ ಹುಲ್ಲಿನಲ್ಲಿ ಮಲಗಿರುವ ಹಾವು', ಅದು ಹೆಚ್ಚು ಅಪಾಯಕಾರಿ. ಕಾಂಗ್ರೆಸ್ನ ಉದ್ದೇಶಗಳು ಎಡಪಂಥದ ಜೊತೆಗಿಲ್ಲ, ಬಾಬ್ರಿ ಮಸೀದಿಯನ್ನು ತೆರೆಸಿದ್ದೆ ಅದು, ಅದರಿಂದಲೇ ಅಡ್ವಾಣಿ, ಇಂದಿನ ಮೋದಿ, ಅಮಿತ್ ಶಾ ಎಲ್ಲ ಹೊರ ಬಂದರು. ಬಿಜೆಪಿ ಬಲಗೊಳ್ಳಲು ಪ್ರಮುಖ ಕಾರಣವೇ ಕಾಂಗ್ರೆಸ್ , ಕಾಂಗ್ರೆಸ್-ಬಿಜೆಪಿಯ ಜಂಡಾ ಬೇರೆ-ಬೇರೆ ಆದರೆ ಅಜೆಂಡಾ ಒಂದೇ.

ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳೇನು? ಅವುಗಳ ಪರಿಹಾರ ಹೇಗೆ?
ನೀರಿನ ಸಮಸ್ಯೆಯೇ ಕ್ಷೇತ್ರದ ಬಹುದೊಡ್ಡ ಸಮಸ್ಯೆ. ಎತ್ತಿನಹೊಳೆ ಯೋಜನೆ ಇನ್ನೂ 10% ಸಹ ಮುಗಿದಿಲ್ಲ. ಅಲ್ಲಿಂದ ಕೇವಲ ಖಾಲಿ ಪೈಪುಗಳು ಮಾತ್ರವೇ ಬರಲಿವೆ. ಮಳೆ ನಂಬಿಕೊಂಡ ಹೊಳೆಗಳಿಂದ ಇಷ್ಟು ದೂರ ನೀರು ತರುವುದು ಅಸಾಧ್ಯ. ಇದಕ್ಕಿಂತಲೂ ವೈಜ್ಞಾನಿಕ ಎನಿಸುವುದೆಂದರೆ, ಗೌರಿಬಿದನೂರು, ವಿಧುರಾಶ್ವತಕ್ಕೆ ಹೋದರೆ ಅಲ್ಲಿಂದ ಆರು ಕಿ.ಮೀ ಅಂತರದಲ್ಲಿ ಕೃಷ್ಣ ನದಿ ಕಾಲುವೆ ಇದೆ, ಅಲ್ಲಿಂದಲೇ ನೀರು ಏಕೆ ಪಡೆದುಕೊಳ್ಳಬಾರದು. ನದಿ ನೀರು ವಿವಾದ ಹುಟ್ಟಿಕೊಳ್ಳುತ್ತದೆ ಎನ್ನುತ್ತಾರೆ. ಆದರೆ ನಾವು ಕೃಷಿಗೆ ಅಲ್ಲ, ಕುಡಿಯಲು ನೀರು ಕೇಳಿದರೆ ವಿವಾದ ಆಗುವುದಿಲ್ಲ. ಕೆ.ಸಿ.ವ್ಯಾಲಿ, ಎಚ್ಸಿ ವ್ಯಾಲಿಗಳಿಗಿಂತಲೂ ಇದು ಹೆಚ್ಚು ಪರಿಣಾಮಕಾರಿ. ಕೋಲಾರದ ಕಡೆಯಿಂದ ನೋಡುವುದಾದರೆ ಮಾಲೂರಿಗೆ ಹತ್ತಿರದಲ್ಲಿ ನೆಟ್ಟಕಲ್ಲಿನಲ್ಲಿ ಕಾವೇರಿ ಹರಿಯುತ್ತಿದೆ, ಅಲ್ಲಿಂದ ಕಾವೇರಿ ನೀರನ್ನು ಕೋಲಾರಕ್ಕೆ ತರುವ ಸಾಧ್ಯತೆ ಇದೆ, ಕೃಷ್ಣದಿಂದಲೂ ತರುವ ಸಾಧ್ಯತೆ ಇದೆ, ಆದರೆ ಇಚ್ಛಾಶಕ್ತಿ ಬೇಕು ಅಷ್ಟೆ. ಅಂಬೇಡ್ಕರ್ ಅವರು ಹೇಳುವಂತೆ, ರೈಲು ಹಳಿಗಳು ಹೇಗೆ ಅಡೆತಡೆಯಿಲ್ಲದೆ ಸರಾಗವಾಗಿ ನಿರ್ಮಿಸಲ್ಪಟ್ಟಿದೆಯೋ ಹಾಗೆಯೇ ನದಿ ಕಾಲುವೆಗಳು ಸಹ ವಿವಾದಗಳು, ಅಡೆ-ತಡೆಗಳು ಇಲ್ಲದೆ ನಿರ್ಮಾಣವಾಗಬೇಕು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications