ಅದ್ಧೂರಿ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಂಡ ಚೆನ್ನಭೈರಾದೇವಿ ಮಿರ್ಜಾನ್ ಕೋಟೆ!
ಕಾರವಾರ, ಆಗಸ್ಟ್, 08: ದೇಶವೇ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಡೆ ಈ ಅಮೃತ ಮಹೋತ್ಸವವನ್ನು ಭಿನ್ನ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದೇಶದ ಐತಿಹಾಸಿ ಹಾಗೂ ನಾಲ್ಕು ಶತಮಾನಗಳ ಹಿಂದಿನ ಮಿರ್ಜಾನ್ ಕೋಟೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಕೋಟೆಯನ್ನು ವಿಭಿನ್ನವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನೋಡುಗರ ಗಮನ ಸೆಳೆದಿದೆ.
ಹೌದು ದೇಶದೆಲ್ಲೆಡೆ 75ನೇ ಸ್ವಾಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಈ ಅವಿಸ್ಮರಣೀಯ ಗಳಿಗೆಗಳನ್ನು ಅಮೃತಮಹೋತ್ಸವದ ಮೂಲಕ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಆದರೆ ಇದೀಗ ಸ್ವಾತಂತ್ರ್ಯೋತ್ಸವಕ್ಕೆ ಒಂದು ವಾರ ಬಾಕಿ ಉಳಿದಿದ್ದು, ಎಲ್ಲೆಡೆ ಸಿದ್ದತೆಗಳು ಜೋರಾಗಿವೆ. ಅದರಂತೆ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಆಳಿದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯಲ್ಲಿಯೂ ಸ್ವಾಂತ್ರೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋಟೆಯನ್ನು ಕೆಸರಿ, ಬಿಳಿ, ಹಸಿರು ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಳಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕುಮಟಾ ತಾಲೂಕಿನಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಮಿರ್ಜಾನ್ ಕೋಟೆಯಲ್ಲಿ ಹಸಿರು ಹುಲ್ಲು ಬೆಳೆದು ಕಂಗೊಳಿಸುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿರುವುದು ಕೋಟೆಗೆ ಮತ್ತಷ್ಟು ಮೆರುಗು ನೀಡಿದೆ.
ಕೋಟೆಯ ಲೈಟ್ಗಳು ಕಂಗೊಳಿಸುವ ಸಮಯ
ಪುರಾತತ್ವ ಇಲಾಖೆಗೆ ಒಳಪಡುವ ಈ ಕೋಟೆಯನ್ನು ಅಮೃತ ಮಹೋತ್ಸವದ ನಿಮಿತ್ತ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯು ಕೇಸರಿ, ಬಿಳಿ, ಹಸಿರು ತ್ರಿವರ್ಣದ ಕಾಂಬಿನೇಶನ್ನಲ್ಲಿ ಹ್ಯಾಲೋಜಿನ್ ಲೈಟ್ಗಳನ್ನು ಬಳಸಿ ಶೃಂಗರಿಸಿದೆ. ಸಂಜೆ 6ರಿಂದ ರಾತ್ರಿ 11 ರವರೆಗೂ ಲೈಟ್ಗಳು ಉರಿಯಲಿದ್ದು, ಆಗಸ್ಟ್ 15ರ ತನಕವೂ ಕೋಟೆ ಹೀಗೆಯೇ ಕಂಗೊಳಿಸಲಿದೆ.
ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ ಕೋಟೆ
ಪ್ರತಿ ಮಳೆಗಾಲದ ವೇಳೆ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದ ಕೋಟೆ, ಇದೀಗ ವಿದ್ಯುತ್ ಅಲಂಕಾರದಿಂದಾಗಿ ಮತ್ತಷ್ಟು ಮೆರುಗು ಹೆಚ್ಚಿಸಿಕೊಂಡಿದೆ. ಕೋಟೆಯ ಮುಂಭಾಗದ ಉದ್ದಕ್ಕೂ ಅಳವಡಿಸಿರುವ ಕೇಸರಿ, ಬಿಳಿ, ಹಸಿರು ಬಣ್ಣದ ಲೈಟ್ಗಳು ನೋಡುವವರಿಗೆ ರೊಮಾಂಚನಗೊಳಿಸುವಂತಿದೆ. ಇದೇ ಕಾರಣದಿಂದ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದ್ದು, ದೀಪಾಲಂಕಾರವೂ ನೋಡುಗರ ಕಣ್ಮನ ಸೆಳೆಯುತ್ತಿದೆ.
ನಿರ್ಮಾಣ ಮಾಡಿದವರ ಬಗ್ಗೆ ಗೊಂದಲ
ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಹೊಂದಿರುವ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ, ಈ ಕೋಟೆಯನ್ನು 16ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿವೆ. ಇಬ್ನಬಟೂಟ ಎಂಬ ನವಾಯತ ರಾಜ 1200ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ 1608-1640ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದ್ದನೆಂದು ಹೇಳುತ್ತಾರೆ.
ಚೆನ್ನಭೈರಾದೇವಿ ರಾಣಿಯ ಹಿನ್ನೆಲೆ?
ಆದರೆ, ಸ್ಥಳೀಯರು ಸೇರಿದಂತೆ ಹಲವು ಜನರ ಪ್ರಕಾರ ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತುಗಳಿದೆ. ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು, ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನ್ನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ. ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳು ಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಪ್ತು ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
Recommended Video