ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!
Recommended Video

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ತಹತಹಿಸುತ್ತಿರುವ ಜೆಡಿಎಸ್, ಇದೀಗ ತನ್ನ ಬತ್ತಳಿಕೆಗೆ ರೇವಣಾಸ್ತ್ರವನ್ನು ಸೇರಿಸಿಕೊಳ್ಳಲು ಯತ್ನಿಸುತ್ತಿದೆ,. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರನ್ನು ಸೋಲಿಸುವ ಜೆಡಿಎಸ್ ನ ಮಹತ್ವಾಕಾಂಕ್ಷೆಗೆ ಪೂರಕವಾಗಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಕೂಡಾ ತೆರೆಮರೆಯ ಹಿಂದೆ ಕೈ ಜೋಡಿಸುವ ಲಕ್ಷಣಗಳು ದಟ್ಟವಾಗಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ಬಾರಿಯ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವ ಅನಿವಾರ್ಯತೆಯಲ್ಲಿರುವ ಸಿದ್ದರಾಮಯ್ಯ, ತಮ್ಮ ಮಗ ಯತೀಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಯಸಿರುವುದು ಮತ್ತು ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿರುವುದು ರಹಸ್ಯದ ವಿಷಯವೇನಲ್ಲ. ಆದರೆ ಅವರನ್ನು ಚಾಮುಂಡೇಶ್ವರಿಯ ಕಣದಲ್ಲೇ ಪರಾಭವಗೊಳಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಯಸಿದ್ದಾರೆ.
ಇದಕ್ಕೆ ಕಾರಣ, ಸಿದ್ದರಾಮಯ್ಯ ವಿಷಯದಲ್ಲಿ ಅವರಿಗಿರುವ ಅಸಮಾಧಾನ.ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರು ತಮ್ಮನ್ನು ತುಳಿಯಲು ಸತತ ಯತ್ನ ನಡೆಸಿದರು ಎಂಬುದು ದೇವೇಗೌಡ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಅಸಮಾಧಾನದ ಮೂಲ.ರಾಜಕೀಯವಾಗಿ ದೇವೇಗೌಡ ಅಂಡ್ ಫ್ಯಾಮಿಲಿ ಮತ್ತು ಯಡಿಯೂರಪ್ಪ ಅವರ ನಡುವೆ ಹೇಳಿಕೊಳ್ಳುವ ವಿಶ್ವಾಸ ಇಲ್ಲದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಏಕ ಕಾಲಕ್ಕೆ ಅವರ ಪಾಲಿಗೆ ಪರಮ ಶತ್ರು. ಶತ್ರುವಿನ ಶತ್ರು ಮಿತ್ರ ಎಂಬುದು ಗಾದೆ. ಈ ಗಾದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ನಿಜವಾಗುವ ಲಕ್ಷಣಗಳು ಕಾಣುತ್ತಿರುವುದೇ ಸದ್ಯದ ವಿಶೇಷ.
ಅಂದ ಹಾಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವವರು ಜೆಡಿಎಸ್ ನ ಜಿ.ಟಿ. ದೇವೇಗೌಡ. ಕಳೆದ ಬಾರಿ ಅವರ ಎದುರು ಹೇಳಿಕೊಳ್ಳುವಂತಹ ಅಭ್ಯರ್ಥಿ ಇರಲಿಲ್ಲ ಅನ್ನುವುದೇನೋ ನಿಜ.ಆದರೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಎಲ್ಲ ತಂತ್ರಗಳನ್ನು ಬಳಸುವುದು ಸಹಜವಾದ್ದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವುದಂತೂ ನಿಶ್ಚಿತ.

ಚುನಾವಣೆ ಎದುರಿಸುವಲ್ಲಿ ಸಿದ್ದು ನಿಸ್ಸೀಮ
ಮುಖ್ಯಮಂತ್ರಿಯಾದ ನಂತರ ಚುನಾವಣೆಗಳನ್ನು ಎದುರಿಸುವ ವಿಷಯದಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂಬುದು ದೇವೇಗೌಡ ಹಾಗೂ ಯಡಿಯೂರಪ್ಪ ಅವರಿಗೆ ಚೆನ್ನಾಗಿ ಗೊತ್ತು. ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲುವು ಗಳಿಸಿದ್ದೇ ಇದಕ್ಕೆ ಸಾಕ್ಷಿ. ಅವತ್ತಿನ ಮಟ್ಟಿಗೆ ಕಾಂಗ್ರೆಸ್ ಗೆಲ್ಲಲು ಜೆಡಿಎಸ್ ಸಹಕಾರ ನೀಡಿದ್ದು ರಹಸ್ಯವೇನಲ್ಲ.

ಅಂದು ಕಾಂಗ್ರೆಸ್ ಕೈಹಿಡಿದಿದ್ದ ಕುಮಾರಣ್ಣ
ಒಂದು ವೇಳೆ ಉಪಚುನಾವಣೆಯ ಕಣದಲ್ಲಿ ಬಿಜೆಪಿ ಗೆದ್ದರೆ 2018ರ ಚುನಾವಣೆಯ ವೇಳೆಗೆ ಆ ಪಕ್ಷದ ಹವಾ ಮೇಲೆದ್ದಿರುತ್ತದೆ. ಹೀಗಾಗಿ ಅದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕಾಗಿ ಜೆಡಿಎಸ್ ಸ್ಪರ್ಧೆಯ ಕಣಕ್ಕೇ ಇಳಿಯಲಿಲ್ಲ.
ಅವತ್ತು ಕುಮಾರಸ್ವಾಮಿ ಅವರು ಮಾಡಿಸಿದ ಸರ್ವೇ ವರದಿ, ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದರೆ ಬಿಜೆಪಿ ಗೆಲುವು ನಿಶ್ಚಿತ ಎಂದು ನಿಖರವಾಗಿ ಪ್ರತಿಪಾದಿಸಿತ್ತು. ಮತ್ತು ಇದೇ ಕಾರಣಕ್ಕಾಗಿ ಉಪಚುನಾವಣೆಯ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್ ಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ನಿರ್ಧರಿಸಿತ್ತು.
ಚಾಮುಂಡೇಶ್ವರಿ ವಿಧಾನಸಭೆ ಫಲಿತಾಂಶ 2013

ಜಿಟಿ ದೇವೇಗೌಡ ಅವರಿಗೆ ಪೂರಕರ ವಾತಾವರಣ
ಆದರೆ ಈ ಬಾರಿ ಹಾಗಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ತುಂಬ ಮುಖ್ಯ ಎಂಬುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಗೊತ್ತಿದೆ. ಕಾಂಗ್ರೆಸ್ ನ ಸರ್ವೋಚ್ಚ ನಾಯಕ ಸೋಲುವಂತೆ ಮಾಡುವುದು ಅನಿವಾರ್ಯ ಎಂಬುದೂ ಅರ್ಥವಾಗಿದೆ. ಒಂದು ಸೈನ್ಯದ ನಾಯಕ ಸೋಲುತ್ತಾರೆ ಎಂಬ ಬಾವನೆ ಮೂಡಿಸಿದರೆ ಸಾಕು, ಸಹಜವಾಗಿಯೇ ಆ ಸೈನ್ಯದ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಬೇಕು ಎಂಬುದು ಜೆಡಿಎಸ್ ಹಾಗೂ ಬಿಜೆಪಿಯ ಬಯಕೆ.
ಆದರೆ ಸದ್ಯದ ಸ್ಥಿತಿಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿರುವುದರಿಂದ ಸಹಾಯಕ ಸೈನ್ಯ ಪದ್ಧತಿಯ ಶೈಲಿಯಲ್ಲಿ ಜಿ.ಟಿ. ದೇವೇಗೌಡರ ಗೆಲುವಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಾತಿ ಅಂಕಿಸಂಖ್ಯೆ
ಇವತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ 282,111 ಮಂದಿ ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗರ ಮತದಾರರ ಸಂಖ್ಯೆ ಹೆಚ್ಚು. ಸುಮಾರು ಎಪ್ಪತ್ತು ಸಾವಿರದಷ್ಟಿರುವ ಒಕ್ಕಲಿಗ ಮತದಾರರ ಪೈಕಿ ಗಣನೀಯ ಸಂಖ್ಯೆಯ ಮತದಾರರು ಜಿ.ಟಿ. ದೇವೇಗೌಡರ ಬೆನ್ನಿಗೆ ನಿಲ್ಲುತ್ತಾರೆ.
ಉಳಿದಂತೆ ಲಿಂಗಾಯತ ಮತದಾರರು ನಲವತ್ತೈದು ಸಾವಿರದಷ್ಟಿದ್ದರೆ, ಕುರುಬ ಮತದಾರರೂ ಸರಿ ಸುಮಾರು ಅಷ್ಟೇ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ನಲವತ್ತು ಸಾವಿರದಷ್ಟು ಪರಿಶಿಷ್ಟ ಜಾತಿಯ ಮತಗಳಿವೆ. ಮೂವತ್ತು ಸಾವಿರ ನಾಯಕರ ಮತಗಳಿವೆ. ಉಳಿದಂತೆ ವಿವಿಧ ಸಮುದಾಯಗಳ ಮತಗಳು ಸೇರಿವೆ.
ಕಾಂಗ್ರೆಸ್, ಜೆಡಿಎಸ್ ಗೆಲುವಿಗೆ ಜಾತಿ ಲೆಕ್ಕಾಚಾರ
ಕುರುಬರು, ಪರಿಶಿಷ್ಟರು, ನಾಯಕರ ಮತಗಳ ಜತೆ ತಮ್ಮ ಕಾರ್ಯಕ್ರಮಗಳನ್ನು ಮೆಚ್ಚಿದ ಅಭಿಮಾನಿ ಮತದಾರರು ಸೇರಿದರೆ ತಮ್ಮ ಗೆಲುವು ನಿಶ್ಚಿತ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಆದರೆ ಒಕ್ಕಲಿಗ, ಲಿಂಗಾಯತ ಮತದಾರರ ಜತೆ ನಾಯಕರ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಸೆಳೆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ನಲ್ಲಿದೆ.
ಅಂದ ಹಾಗೆ ಜಿ.ಟಿ. ದೇವೇಗೌಡರ ಪರವಾಗಿ ಒಕ್ಕಲಿಗ ಮತಗಳನ್ನು ಕನ್ ಸಾಲಿಡೇಟ್ ಮಾಡುವುದು ಜೆಡಿಎಸ್ ಗೆ ಸಾಧ್ಯವಿದೆ. ಅದೇ ರೀತಿ ನಾಯಕ ಮತಗಳ ಪೈಕಿ ಗಣನೀಯ ಪ್ರಮಾಣದ ಮತಗಳು ಜೆಡಿಎಸ್ ಜತೆಗಿವೆ.

ರೇವಣಾಸ್ತ್ರ ಬತ್ತಳಿಕೆ ಸೇರಿಸಿಕೊಳ್ಳಲು ಯತ್ನ
ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಹೆಚ್ಚಿನ ಶಕ್ತಿ ಬೇಕು. ಹೀಗಾಗಿ ಜೆಡಿಎಸ್ ಈಗ ಕಾಂಗ್ರೆಸ್ ಪಕ್ಷದ ಬುಟ್ಟಿಗೇ ಕೈ ಹಾಕಿ ರೇವಣಾಸ್ತ್ರವನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ರೇವಣಾಸ್ತ್ರ ಎಂದರೆ ಮಾಜಿ ಪೋಲೀಸ್ ಅಧಿಕಾರಿ ಎಲ್. ರೇವಣಸಿದ್ಧಯ್ಯ. ಒಂದು ಕಾಲದಲ್ಲಿ ಎಸ್.ಎಂ.ಕೃಷ್ಣ ಅವರ ಇಶಾರೆಯ ಮೇರೆಗೆ ಕೈ ಪಾಳೆಯಕ್ಕೆ ಹೋಗಿದ್ದ ರೇವಣಸಿದ್ಧಯ್ಯ 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸುಮಾರು ಐವತ್ತು ಸಾವಿರದಷ್ಟು ಮತಗಳನ್ನು ಪಡೆದಿದ್ದರು. ಅವತ್ತು ಅವರು ಗೆಲ್ಲಲಿಲ್ಲವಾದರೂ ಜೆಡಿಎಸ್ ಕ್ಯಾಂಡಿಡೇಟ್ ಆಗಿದ್ದ ಸಿದ್ದರಾಮಯ್ಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.

ಕೃಷ್ಣ ರಾಷ್ಟ್ರ ರಾಜಕಾರಣಕ್ಕೆ ತೆರಳಿದ ನಂತರ
ಮುಂದಿನ ದಿನಗಳಲ್ಲಿ ಎಸ್.ಎಂ.ಕೃಷ್ಣ ರಾಷ್ಟ್ರ ರಾಜಕಾರಣಕ್ಕೆ ಹೋದರು. ಇಲ್ಲಿ ರೇವಣಸಿದ್ಧಯ್ಯ ಅವರ ಮನಸ್ಸಿಗೆ ಮುಜುಗರದ ವಾತಾವರಣ ನಿರ್ಮಾಣವಾಯಿತು. ಇದನ್ನು ಗುರುತಿಸಿದ ಯಡಿಯೂರಪ್ಪ 2008ರ ವಿಧಾನಸಭಾ ಚುನಾವಣೆಗೂ ಮುನ್ನ ರೇವಣಸಿದ್ಧಯ್ಯ ಅವರನ್ನು ಬಿಜೆಪಿಗೆ ಕರೆತಂದು ವರುಣಾ ಕ್ಷೇತ್ರದ ಕ್ಯಾಂಡಿಡೇಟ್ ಆಗುವಂತೆ ಮಾಡಿದರು.
ನಂತರ ಬಿಜೆಪಿಯಲ್ಲೂ ಅದೇ ಮುಜುಗರದ ಕತೆ. ಆಗ ಇದನ್ನು ಗುರುತಿಸಿದ ಸಿದ್ದರಾಮಯ್ಯ ಅವರು ರೇವಣಸಿದ್ಧಯ್ಯ ಅವರ ಮನವೊಲಿಸಿ ಕೈ ಪಾಳೆಯಕ್ಕೆ ಕರೆ ತಂದರು.

ಸಿದ್ದರಾಮಯ್ಯ ಗೆಲುವಿನ ಹಿಂದೆ ರೇವಣಸಿದ್ಧಯ್ಯ
2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲುವಿನ ಹಿಂದೆ ರೇವಣಸಿದ್ಧಯ್ಯ ಅವರ ಕಾಣಿಕೆಯೂ ಇತ್ತು.
ಆದರೆ ಗೆದ್ದ ನಂತರ ಸಿದ್ದರಾಮಯ್ಯ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ರೇವಣಸಿದ್ಧಯ್ಯ ಅವರ ನೋವು. ಇದೇ ನೋವು ಅವರ ಬೆಂಬಲಿಗರಲ್ಲಿರುವುದೂ ರಹಸ್ಯವಲ್ಲ. ಹಾಗಂತಲೇ ಮೊನ್ನೆ ತೋಟದ ಮನೆಯೊಂದರಲ್ಲಿ ಸಭೆ ಸೇರಿದ ಅವರ ಬೆಂಬಲಿಗರು, ಸಿದ್ದರಾಮಯ್ಯ ಅವರನ್ನು ಪರಾಭವಗೊಳಿಸಿ ತಕ್ಕ ಪಾಠ ಕಲಿಸಲು ಬೇರೆ ಪಕ್ಷಕ್ಕೆ ಹೋಗಿ ಎಂದು ರೇವಣಸಿದ್ಧಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ.

ರೇವಣಸಿದ್ಧಯ್ಯರನ್ನು ಪಕ್ಷಕ್ಕೆ ಸೆಳೆಯಲು ಗೌಡರ ಯತ್ನ
ಯಾವಾಗ ರೇವಣಸಿದ್ಧಯ್ಯ ಮತ್ತವರ ಬೆಂಬಲಿಗರಲ್ಲಿ ಈ ಅಸಮಾಧಾನ ಇರುವುದು ಗೊತ್ತಾಯಿಯೋ? ಆನಂತರ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣವೇ ರೇವಣಸಿದ್ಧಯ್ಯ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ.
ಈ ವಿಷಯದಲ್ಲಿ ಕೆಲ ಸುತ್ತುಗಳ ಮಾತುಕತೆಯೂ ಆಗಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾಗಿ ರೇವಣಾಸ್ತ್ರ ಜೆಡಿಎಸ್ ಬತ್ತಳಿಕೆಗೆ ಸೇರಿದರೆ ಒಕ್ಕಲಿಗ ಮತಗಳ ಜತೆ, ಲಿಂಗಾಯತ ಮತಗಳನ್ನೂ ದೊಡ್ಡ ಮಟ್ಟದಲ್ಲಿ ಪಡೆಯಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ.
ಅದರ ಲೆಕ್ಕಾಚಾರಕ್ಕೆ ಪೂರಕವಾಗಿ ತಮ್ಮ ಪಕ್ಷದ ವತಿಯಿಂದ ದುರ್ಬಲ ಕ್ಯಾಂಡಿಡೇಟ್ ಅನ್ನು ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರ ಕಮಲ ಪಾಳೆಯದಲ್ಲಿದೆ. ಈ ಲೆಕ್ಕಾಚಾರ ವರ್ಕ್ ಔಟ್ ಆದರೆ ಸಿಎಂ ಸಿದ್ದರಾಮಯ್ಯ ಅವರು ಗೆಲುವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದು ಅಸಹಜವೇನಲ್ಲ.-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications