ಮಹಾರಾಷ್ಟ್ರ ಬಿಜೆಪಿಯೊಳಗೆ ಗುರುತರ ಬದಲಾವಣೆ ಸಾಧ್ಯತೆ; ಫಡ್ನವಿಸ್ ಕೈ ಕಟ್ಟಿಹಾಕುವ ಯೋಜನೆ
ಮುಂಬೈ, ಜುಲೈ 7: ಮಹಾರಾಷ್ಟ್ರ ರಾಜಕೀಯದಲ್ಲಿ ದೇಶದೆಲ್ಲೆಡೆ ಅಚ್ಚರಿ ಹುಟ್ಟಿಸಿದ ಘಟನೆಗಳು, ಬೆಳವಣಿಗೆಗಳು ಇತ್ತೀಚೆಗೆ ನಡೆದಿವೆ. ಬಿಜೆಪಿ ಮತ್ತು ಶಿವಸೇನಾದೊಳಗೆ ಬಿರುಕು ಮೂಡಿದ್ದು, ಬಳಿಕ ಕಾಂಗ್ರೆಸ್, ಎನ್ಸಿಪಿ ಜೊತೆ ಸೇರಿ ಶಿವಸೇನಾ ಮಹಾರಾಷ್ಟ್ರ ವಿಕಾಸ್ ಆಘಾಡಿ ಮೈತ್ರಿ ಸರಕಾರ ರಚನೆ ಮಾಡಿದ್ದು; ನಂತರ ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದಿದ್ದು; ಆ ಬಳಿಕ ಶಿವಸೇನಾ ಭಿನ್ನಮತೀಯರು ಮತ್ತು ಬಿಜೆಪಿ ಸೇರಿ ಸರಕಾರ ರಚನೆ ಮಾಡಿವೆ.
ಅಷ್ಟೇ ಅಲ್ಲ, ಸಿಎಂ ಆಗಬೇಕಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಡಿಸಿಎಂ ಮಾಡಿದ್ದೂ ಒಂದು ದೊಡ್ಡ ಅಚ್ಚರಿ. ಬಹುತೇಕ ಡಿಸಿಎಂ ಪಟ್ಟ ನಿಶ್ಚಿತ ಎಂಬಂತಿದ್ದ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಭಾಗ್ಯ ಕೊಡಲಾಯಿತು. ಫಡ್ನವಿಸ್ರನ್ನು ಡಿಸಿಎಂ ಮಾಡುವ ಮೂಲಕ ಬಿಜೆಪಿ ಪರೋಕ್ಷವಾಗಿ ಕೆಲ ಸ್ಪಷ್ಟ ಸಂದೇಶಗಳನ್ನು ಜಾಹೀರುಮಾಡಿದೆ.
ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ನೀಡುವ ಐಡಿಯಾ ನನ್ನದೇ: ದೇವೇಂದ್ರ ಫಡ್ನವೀಸ್
ಮೊದಲಿಗೆ ದೇವೇಂದ್ರ ಫಡ್ನವಿಸ್ ಅವರು ಕೇಂದ್ರೀಯ ನಾಯಕರ ನಿಯಂತ್ರಣಕ್ಕೆ ಒಳಪಡಬೇಕು. ಅವರು ಸಿಎಂ ಎನ್ನುವುದಕ್ಕಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತ ಮಾತ್ರ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನೂ ಫಡ್ನವಿಸ್ ನಿಭಾಯಿಸುವುದು ಅವರ ಹೊಣೆ. ಈ ಒಂದು ಸಂದೇಶವನ್ನು ಸಾರಲು ಬಿಜೆಪಿ ಯತ್ನಿಸುತ್ತಿದೆ.
ಹಾಗೆಯೇ, ದೇವೇಂದ್ರ ಫಡ್ನವಿಸ್ ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯಕ್ಕೊಳಗಾಗಿದ್ದ ನಾಯಕರಿಗೆ ಈಗ ಒಳ್ಳೊಳ್ಳೆಯ ಮಂತ್ರಿಸ್ಥಾನಗಳು ಸಿಗುವ ನಿರೀಕ್ಷೆ ಇದೆ.
ಠಾಕ್ರೆಗಿಂತ ಶಿಂಧೆ ಬಣದ ಬಲ ಹೆಚ್ಚಲಿ
ಬಿಜೆಪಿಗೆ ಈಗ ಉದ್ಧವ್ ಠಾಕ್ರೆಯ ಬಲ ಕುಂದಿಸುವ ಮುಖ್ಯ ಗುರಿ ಇದೆ. ಠಾಕ್ರೆ ಬಣಕ್ಕಿಂತ ಒಂದು ಮಟ್ಟ ಹೆಚ್ಚು ಬಲವನ್ನು ಶಿಂಧೆ ಬಣಕ್ಕೆ ಒದಗಿಸುವ ಚಿಂತನೆಯಲ್ಲಿ ಬಿಜೆಪಿ ಇದೆ. ಏಕನಾಥ್ ಶಿಂಧೆ ಬಣದ ಕೆಲ ಶಾಸಕರು ಮತ್ತು ಅವರೊಂದಿಗೆ ಇರುವ ಪಕ್ಷೇತರ ಶಾಸಕರಿಗೆ ಪ್ರಮುಖ ಸಚಿವ ಸ್ಥಾನಗಳನ್ನು ನೀಡುವ ಉದ್ದೇಶದಲ್ಲಿ ಬಿಜೆಪಿ ಇದೆ.
ಆದರೆ, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಯ್ಕೆ ಮಾತ್ರ ಬಿಜೆಪಿ ನಾಯಕತ್ವದ ಬಳಿ ಇರಲಿದೆ. ಅಂದರೆ ಠಾಕ್ರೆ ಬಣಕ್ಕೆ ಪೈಪೋಟಿ ನೀಡಬಲ್ಲಂತಹ ವ್ಯಕ್ತಿಗಳಿಗೆ ಸಚಿವ ಸ್ಥಾನ ಕೊಟ್ಟು ಬಲ ತುಂಬಿಸುವುದು ಬಿಜೆಪಿಯ ತಂತ್ರ.
ಅಂದು ಮನಸಾರೆ ಕಣ್ಣೀರು, ಇಂದು ಕನಸಿಗೆ ತಣ್ಣೀರು; ಇವರಾ 'ಮಹಾ' ಶಾಸಕರು!?
ಫಡ್ನವಿಸ್ ಕೈಕಟ್ಟಲಿರುವ ಬಿಜೆಪಿ
ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಲು ಸುತಾರಾಂ ಇಷ್ಟ ಪಟ್ಟಿರಲಿಲ್ಲ. ಆದರೂ ಅವರನ್ನು ಬಲವಂತವಾಗಿ ಒಪ್ಪಿಸುವ ಮೂಲಕ ಬಿಜೆಪಿ, ಪಕ್ಷವೇ ಅಂತಿಮ ನಿರ್ಣಾಯಕ ಎಂಬ ಸಂದೇಶ ನೀಡಿದೆ.
2014ರಲ್ಲಿ ದೇವೇಂದ್ರ ಫಡ್ನವಿಸ್ಗೆ ಎಲ್ಲಾ ರೀತಿಯಲ್ಲಿ ಮುಕ್ತ ಹಸ್ತ ನೀಡಲಾಗಿತ್ತು. ಅವರು ಹೇಳಿದ್ದೇ ಅಂತಿಮ ಎನ್ನುವ ಹಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಸಚಿವರ ಆಯ್ಕೆಯಲ್ಲಿ ಫಡ್ನವಿಸ್ ಅವರಿಗೆ ಮುಕ್ತ ಹಸ್ತ ನೀಡಲಾಗುತ್ತಿಲ್ಲ. ಫಡ್ನವಿಸ್ ಹೇಳಿದ ವ್ಯಕ್ತಿಗಳಿಗೆ ಸಚಿವ ಸ್ಥಾನ ಸಿಗುತ್ತದೆ ಎಂದೇನಿಲ್ಲ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಹೈಕಮಾಂಡ್ ಅಂಗಳದಲ್ಲೇ ನಿರ್ಧಾರವಾಗಲಿದೆ.
ಫಡ್ನವಿಸ್ಗೆ ಪರ್ಯಾಯ ನಾಯಕರು
ದೇವೇಂದ್ರ ಫಡ್ನವಿಸ್ ಅಧಿಕಾರದಲ್ಲಿರುವಾಗ ಪಕ್ಷದೊಳಗೆ ಕಡೆಗಣಿತವಾಗಿದ್ದ ಸುಧೀರ್ ಮುಂಗಂತಿವಾರ್, ಆಶಿಶ್ ಶೇಲರ್ ಮೊದಲಾದವರಿಗೆ ಈ ಬಾರಿ ಆದ್ಯತೆ ಕೊಡುವ ಸಾಧ್ಯತೆ ಇದೆ. ಇವರಿಗೆಲ್ಲಾ ಪ್ರಮುಖ ಖಾತೆಗಳು ಸಿಗುವ ನಿರೀಕ್ಷೆ ಇದೆ. ಮುಂಬೈನ ಬಾಂದ್ರಾ ವೆಸ್ಟ್ ಕ್ಷೇತ್ರದ ಶಾಸಕ ಆಶಿಶ್ ಶೇಲರ್ ಗೃಹ ಸಚಿವ ಅಮಿತ್ ಶಾಗೆ ಆಪ್ತರು. ಅವರಿಗೆ ಮಹಾರಾಷ್ಟ್ರದ ಗೃಹ ಖಾತೆ ಸಿಕ್ಕರೂ ಅಚ್ಚರಿಇಲ್ಲ.
ಅತ್ತ, ದೇವೇಂದ್ರ ಫಡ್ನವಿಸ್ ನಾಮಕಾವಸ್ತೆಗೆ ಡಿಸಿಎಂ ಆಗಲಿದ್ದಾರೆ ಅಷ್ಟೇ. ಅವರಿಗೆ ಗೃಹ ಅಥವಾ ಬೇರೆ ಪ್ರಮುಖ ಖಾತೆಗಳು ಸಿಗುವುದು ಅನುಮಾನ ಎಂದು ಮೂಲಗಳು ಹೇಳುತ್ತವೆ. ಪಕ್ಷದ ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರನ್ನು ದೇವೇಂದ್ರ ಫಡ್ನವಿಸ್ ಕಡೆಗಣಿಸಿದ್ದಾರೆಂಬ ಟೀಕೆಗಳು ಹೆಚ್ಚಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಫಡ್ನವಿಸ್ರನ್ನು ಅಂಕೆಯಲ್ಲಿಡಲು ಬಿಜೆಪಿ ಈ ತಂತ್ರ ಅನುಸರಿಸುತ್ತಿರುವುದು ತಿಳಿದುಬಂದಿದೆ.
ಮುಂಬೈನ ಶಾಸಕರಿಗೆ ಮಂತ್ರಿಭಾಗ್ಯ ಹೆಚ್ಚು
ಈ ಬಾರಿ ಸಂಪುಟ ರಚನೆಯಲ್ಲಿ ಮುಂಬೈನ ಶಾಸಕರ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಬಹಳ ಎಚ್ಚರಿಕೆ ವಹಿಸಲಿದೆ. ಮುಂಬೈನಲ್ಲಿ ಶಿವಸೇನಾ ಬಲ ಬಹಳ ಇದೆ. ಇಲ್ಲಿ ಠಾಕ್ರೆ ಬಣದ ಶಿವಸೇನಾವನ್ನು ಎದುರಿಸಲು ಮುಂಬೈನ ಶಾಸಕರಿಗೆ ಬಲ ತುಂಬಿಸುವುದು ಅಗತ್ಯ. ಏಕನಾಥ್ ಶಿಂಧೆ ಬಣದಲ್ಲಿರುವ ಮುಂಬೈನ ಶಾಸಕರಲ್ಲಿ ಸೂಕ್ತರಾದವರನ್ನು ನೋಡಿಕೊಂಡು ಪ್ರಬಲ ಸಚಿವ ಸ್ಥಾನ ಕೊಡಲಾಗಲಿದೆ.
ಶಿಂಧೆ ಬಣದವರಾಗಲೀ ಬಿಜೆಪಿಯವರಾಗಲೀ ಮುಂಬೈನ ಯಾರೇ ಶಾಸಕರು ಸಚಿವರಾದರೂ ಅವರಿಗೆ ನಿರ್ದಿಷ್ಟ ಗುರಿಗಳನ್ನು ಕೊಡಲಾಗುತ್ತದೆ. ಚುನಾವಣೆ ವೇಳೆಗೆ ಇವರು ಆ ಗುರಿಗಳನ್ನು ಈಡೇರಿಸುವಂತೆ ನಿಗಾ ವಹಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
(ಒನ್ಇಂಡಿಯಾ ಸುದ್ದಿ)
Recommended Video