ಬೆಂಗಳೂರಿನ ಖ್ಯಾತ ವೈದ್ಯರೊಬ್ಬರ ಮೊದಲ 20 ನಿಮಿಷದ ಚಿಕಿತ್ಸೆ ಇದೇ ನೋಡಿ...
"ಈಗಿನವರಿಗೆ ಬಲೇ ಆತುರ. ಕೆಲಸಕ್ಕೆ ಸೇರಿದ ಎರಡ್ಮೂರು ವರ್ಷಕ್ಕೇ ಕಾರು, ನಾಲ್ಕೈದು ವರ್ಷಕ್ಕೆ ಫ್ಲ್ಯಾಟ್, ತತ್ ಕ್ಷಣ ಪ್ರಮೋಷನ್...ಎಲ್ಲವೂ ಛಕಾ ಛಕ್ ಆಗಬೇಕು. ಹೀಗೆ ಆಗಬೇಕು ಅನ್ನೋ ಆತುರದಲ್ಲಿ ಬದುಕನ್ನೂ ಬೇಗ ಮುಗಿಸಿಕೊಂಡು, ಆ ದೇವರು ದೀರ್ಘ ಕಾಲಕ್ಕೆ ನೀಡಿದ ದೇಹವನ್ನು ಸಹ ರೋಗದ ಗೂಡು ಮಾಡಿಕೊಳ್ತಾರೆ" ಎಂದರು.
-ಇದ್ಯಾರೋ ಸ್ವಾಮೀಜಿ ಹೇಳಿದ ಮಾತಲ್ಲ. ಬೆಂಗಳೂರಿನಲ್ಲಿ ಅದ್ಭುತವಾದ ಪ್ರಾಕ್ಟೀಸ್ ಇರುವಂಥ, ಮೂಲವ್ಯಾಧಿ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಬಹಳ ಹೆಸರುವಾಸಿಯಾದ ವೈದ್ಯ ಎಂ.ಆರ್.ರಾಜಶೇಖರ್ ಹೇಳಿದ ಮಾತಿದು. ಅವರ ಬಳಿ ಹೋಗುವ ರೋಗಿಗಳಿಗೆ ಪ್ರಶ್ನೆಗಳ ಸರಣಿ ಹೀಗೆ ಶುರುವಾಗುತ್ತದೆ...
* ಎಲ್ಲಿ ಹಾಗೂ ಏನು ಕೆಲಸ ಮಾಡ್ತೀರಿ?
* ಇಷ್ಟಪಟ್ಟೇ ಕೆಲಸ ಮಾಡ್ತಿದ್ದೀರೋ ಅಥವಾ ಇಎಂಐ ತುಂಬಬೇಕು, ಕಮಿಟ್ ಮೆಂಟ್ ಅನ್ನೋ ಕಾರಣಕ್ಕೆ ಒತ್ತಡ ಹಾಕಿಕೊಂಡಿದ್ದೀರೋ?
* ಈ ಕೆಲಸ ಬಿಟ್ಟೂ ಸಹ ಬದುಕಬಹುದು ಅಂದರೆ ಯಾಕೆ ಸುಮ್ಮನೆ ಒತ್ತಡ ಹಾಕಿಕೊಳ್ತೀರಿ?

ಇದೇನ್ರಿ ಡಾಕ್ಟರ್ ಆದವರು ಇಂಥ ಕಿಡಿಗೇಡಿ ಸಲಹೆಗಳನ್ನು ಕೊಡ್ತಾರಾ ಎಂಬ ಅನುಮಾನ ಬರುವುದು ಸಹಜ. "ನಿಮ್ಮ ಅಗತ್ಯಕ್ಕೆ ದುಡಿಯುವಂಥ ಕೆಲಸ ಹಾಗೂ ನೆಮ್ಮದಿ ಇವೆರಡು ನಾನು ಕೊಡಲಾಗದ ಮತ್ತು ನೀವೇ ತಂದುಕೊಳ್ಳಬೇಕಾದ ಸಂಗತಿ. ದೇಹಕ್ಕೆ ಆದದ್ದನ್ನು ಪೂರ್ಣ ಸರಿ ಮಾಡುವುದಕ್ಕೆ ನೀವು ಏನು ಮಾಡ್ತೀರಿ ಹೇಳಿ?" ಎಂದು ಸುಮ್ಮನಾದರು ರಾಜಶೇಖರ್.
ಮನಸಿಗೆ ಆದ ಘಾಸಿಯು ದೇಹದ ಯಾವ ಭಾಗದಲ್ಲಿ ಕಾಯಿಲೆಯಾಗಿ ರೂಪಾಂತರ ಆಗುತ್ತದೋ ಕಾಣೆ. ಆದರೆ ನಾವು ತಾತ್ಕಾಲಿಕವಾಗಿ ದೇಹಕ್ಕೆ ಔಷಧ ಕೊಟ್ಟು ಶಮನ ಮಾಡುವ ಪ್ರಯತ್ನದಲ್ಲಿರುತ್ತೇವೆ, ಅಷ್ಟೇ. ಶಾಶ್ವತ ಪರಿಹಾರ ಮಾತ್ರ ಮನಸ್ಸಿನಲ್ಲೇ ಇರುತ್ತದೆ ಎಂಬ ವಿಚಾರ ಅವರದು.
ಡಯಾಬಿಟೀಸ್ ಗೆ ಆಹಾರದ ಪಾತ್ರ ಇಲ್ಲವೇ ಇಲ್ಲ ಎಂದು ನಾನು ಹೇಳಲಾರೆ. ಆದರೆ ಮುಖ್ಯವಾಗಿ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಿ. ಉದ್ವಿಗ್ನರಾಗಬೇಡಿ. ಕೋಪ- ಸಿಟ್ಟು ಇವೆಲ್ಲ ಕೂಡ ಆಸ್ಪತ್ರೆ ಹಾಗೂ ಔಷಧದ ಖರ್ಚು ಹೆಚ್ಚಿಸಲು ದಾರಿಯಷ್ಟೇ. ನಾನು ಕೂಡ ಫೇಸ್ ರೀಡರ್ (ದೊಡ್ಡದಾಗಿ ನಕ್ಕು). ನಿಮ್ಮ ಸಮಸ್ಯೆ ತಾತ್ಕಾಲಿಕವಾಗಿ ಖಂಡಿತಾ ಸರಿ ಮಾಡ್ತೀನಿ. ಆದರೆ ನನ್ನ ಮಾತಿನಂತೆ ಒತ್ತಡ ದೂರ ಮಾಡಿಕೊಳ್ಳಿ ಎಂದು ಮಾತು ಮುಗಿಸಿದ ನಂತರವೇ ತಮ್ಮ ಚಿಕಿತ್ಸೆ ಆರಂಭಿಸುತ್ತಾರೆ.
ವೈದ್ಯರೆಲ್ಲರೂ ಹೇಳುವುದು ಇದನ್ನೇ ಅನ್ನೋರಿಗೆ ಒಂದು ಮಾತು. ಆದರೆ ವೈದ್ಯರು ಇದನ್ನೇ ಆರಂಭದಲ್ಲಿ ಹೇಳಿ ಆ ನಂತರವೇ ಎಷ್ಟು ಮಂದಿ ಚಿಕಿತ್ಸೆ ಆರಂಭಿಸುತ್ತಾರೆ? ರಾಜಶೇಖರ್ ಅವರ ಕನ್ಸಲ್ಟೇಷನ್ ಫೀ ಇಲ್ಲದೆ ಮೊದಲ ಇಪ್ಪತ್ತು ನಿಮಿಷದ ಚಿಕಿತ್ಸೆಯನ್ನು ಇಲ್ಲಿ ಬಯಲು ಮಾಡಲಾಗಿದೆ.












Click it and Unblock the Notifications