Bengaluru Rains : ಆಡಳಿತ ಯಂತ್ರದ ವೈಫಲ್ಯ: ಬೆಂಗಳೂರಿಗರಿಗೆ ಸಾಡೇಸಾಥ್
ಬೆಂಗಳೂರಿಗರನ್ನು ಹೇಗೆ ಮಳೆರಾಯ ಬೆಚ್ಚಿಬೀಳಿಸುತ್ತಿದ್ದಾನೋ ಹಾಗೆಯೇ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಇದೇ ಪರಿಸ್ಥಿತಿ ಇದ್ದರೂ ಇರಬಹುದು. ಬೆಂಗಳೂರು ರಣಚಂಡಿ ಮಳೆ ಎಲ್ಲರ ನಿದ್ದೆಗೆಡಿಸುತ್ತಿದೆ.
ಸಿಲಿಕಾನ್ ವ್ಯಾಲಿ, ದೇಶದ ಎರಡನೇ ವಾಣಿಜ್ಯ ನಗರಿ ಎಂದು ಕರೆಯಲ್ಪಡುವ ಬೆಂಗಳೂರು, ಒಂದು ಟ್ರಾಫಿಕ್ ಜಾಂಗೆ ಇನ್ನೊಂದು ಇತ್ತೀಚಿನ ದಿನಗಳಲ್ಲಿ ಮಳೆಯಿಂದಾಗುತ್ತಿರುವ ಸಮಸ್ಯೆಗಳಿಗೆ ಕುಖ್ಯಾತಿಯನ್ನು ಪಡೆಯುತ್ತಿದೆ. ಇಲ್ಲಿಂದ, ಐಟಿಬಿಟಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಪಕ್ಕದ ರಾಜ್ಯಗಳು ಕರ್ನಾಟಕದ ಪರಿಸ್ಥಿತಿಯನ್ನು ನೋಡಿ ಮುಸಿಮುಸಿ ನಗುತ್ತಿವೆ.
Bengaluru Rains Live: ವೈಟ್ಫೀಲ್ಡ್ ಜಲಾವೃತ ರಸ್ತೆಯಲ್ಲಿ ಸ್ಕೂಟಿಯಿಂದ ಬಿದ್ದ ಯುವತಿ: ವಿದ್ಯುತ್ ಹರಿದು ಸಾವು
ಎ1 ಸೌಕರ್ಯ, ಮೂಲಭೂತ ವ್ಯವಸ್ಥೆಯನ್ನು ನೀಡುತ್ತೇವೆ, ಬನ್ನಿ ನಮ್ಮ ರಾಜ್ಯಕ್ಕೆ ಎಂದು ಪಕ್ಕದ ರಾಜ್ಯಗಳು ಖಾಸಗಿ ಸಂಸ್ಥೆಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತಿವೆ. ಆದರೆ, ವಿದೇಶಿ ಕಂಪೆನಿಗಳಿಗೆ ಬೆಂಗಳೂರೇ ಮೊದಲ ಆಯ್ಕೆ ಎನ್ನುವುದು ಹೂಡಿಕೆದಾರರ ಸಮಾವೇಶದಲ್ಲಿ ವಾಣಿಜ್ಯೋದ್ಯಮಿಗಳಿಂದ ಬಂದಂತಹ ಪ್ರತಿಕ್ರಿಯೆಯಾಗಿತ್ತು.
ನೋಡ ಬನ್ನಿ ನಮ್ಮ ಬೆಂಗಳೂರಾ.. ತೇಲುತಿಹೆ ನೋಡಾ..
ಈಗ ಏನು ವಾಡಿಕೆಗಿಂತ ಹೆಚ್ಚು ಬೀಳುತ್ತಿರುವ ಮಳೆಯಿಂದ ಬೆಂಗಳೂರಿನ ಬ್ರ್ಯಾಂಡ್ ಹಾಳಾಗುತ್ತಿದೆಯೋ ಅದು ಬೆಂಗಳೂರು ಪೂರ್ವ, ಸೆಂಟ್ರಲ್, ಕಂಟೋನ್ಮೆಂಟ್ ಮತ್ತು ಆಗ್ನೇಯ ಭಾಗದಲ್ಲಿ. ಈ ಸಮಸ್ಯೆಗಳಿಂದ ಬೆಂಗಳೂರಿನ ಇತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೊಂದರೆಯಾಗುತ್ತಿಲ್ಲ. ಇದಕ್ಕೆ ಏನು ಕಾರಣ ಇರಬಹುದು ಎನ್ನುವುದನ್ನು ವಿಶ್ಲೇಷಿಸಲು ಹೊರಟಾಗ ಎದುರು ಕಾಣುವುದು ಹಣದ ದಾಹ.. ಅಧಿಕಾರದ ಅಮಲು..
ಸರ್ಜಾಪುರ, ಬೆಳ್ಳಂದೂರು, ವರ್ತೂರು, ಮಹದೇವಪುರ
ದಶಕಗಳ ಹಿಂದಿನ ಬೆಂಗಳೂರು ಪೂರ್ವಭಾಗವನ್ನು ಅವಲೋಕಿಸಿದಾಗ ಹೆಂಗಿದ್ದ ಸರ್ಜಾಪುರ, ಬೆಳ್ಳಂದೂರು, ವರ್ತೂರು, ಮಹದೇವಪುರ ಮುಂತಾದ ಪ್ರದೇಶಗಳು ಈಗ ಹೇಗಾಗಿದೆ? ಎಲ್ಲೆಂದರಲ್ಲಿ ತಲೆ ಎತ್ತಿರುವ ಬಹುಮಹಡಿ ಕಟ್ಟಡಗಳು ಅಲ್ಲಿ ಮಲ್ಟಿ ನ್ಯಾಷನಲ್ ಕಂಪೆನಿಗಳು, ಪ್ರತಿಷ್ಠಿತ ಅಪಾರ್ಟ್ಮೆಂಟ್, ವಿಲ್ಲಾಗಳು, ಎಲ್ಲವೂ ಒಂದಿಂಚಾದರೂ ಅತಿಕ್ರಮ, ಕಾಲುವೆಗಳ ಮೇಲೆ ದುರಾಸೆಯ ಸೌಧದಿಂದಲೇ ತಲೆ ಎತ್ತಿರುವ ಬಿಲ್ಡಿಂಗ್ ಗಳು. ಹಾಗಾದರೆ, ಇದಕ್ಕೆ ಯಾರನ್ನು ದೂಷಿಸಬೇಕು? ಒಂದು ವರ್ಷದ ಹಿಂದೆ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರಿಂದ ಹಿಡಿದು ಹಿಂದಿನ ಎಲ್ಲಾ ಸರಕಾರವನ್ನಲ್ಲವೇ?
ನಲವತ್ತು ಪರ್ಸೆಂಟ್ ಕಮಿಷನ್ ವಿಚಾರ
ನಲವತ್ತು ಪರ್ಸೆಂಟ್ ಕಮಿಷನ್ ವಿಚಾರ ಈಗ ಮುನ್ನಲೆಯಲ್ಲಿ ಇರುವುದರಿಂದ ಬಿಜೆಪಿ ಸರಕಾರದ ಮಾನಮರ್ಯಾದೆ ಬೆಂಗಳೂರಿನ ಮಳೆಯಲ್ಲಿ ತೊಯ್ದೋಗುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ನೋಡುತ್ತಿದ್ದರೆ, ಬೆಂಗಳೂರಿಗರಿಗೆ ಸಾಡೇಸಾಥ್ ತಗಲಿಕೊಂಡಂತಿದೆ. ಇದಕ್ಕೆ ಬೊಮ್ಮಾಯಿ ಸರಕಾರದಿಂದ ಹಿಡಿದು ಎಲ್ಲಾ ಮೂರು ಪಕ್ಷಗಳೂ ಉತ್ತರದಾಯಿಗಳು ಜೊತೆಗೆ ನಮ್ಮ ರಾಜಕೀಯ/ಆಡಳಿತ ವ್ಯವಸ್ಥೆ.
ಕಳೆದ ಒಂದು ದಶಕಗಳಲ್ಲಿ ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು
ಒಂದು ಉದಾಹರಣೆಯನ್ನು ನೋಡೋಣ.. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಬೆಳ್ಳಂದೂರು ಔಟರ್ ರಿಂಗ್ ರೋಡ್ ಮುಕ್ತಾಯಗೊಳ್ಳುವ ಹತ್ತೆರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಳೆಯ ಸಮಸ್ಯೆ ವಿಪರಿಮೀತ ಕಾಡುತ್ತಿದೆ. ಅದು ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗುತ್ತಿದೆ, ಕಾರಣ ಅಲ್ಲಿಂದ ಸರಕಾರಕ್ಕೆ ಬರುತ್ತಿರುವ ರೆವಿನ್ಯೂ. ಈ ಪ್ರದೇಶಗಳು ಬಿಬಿಎಂಪಿ ವ್ಯಾಪ್ತಿಗೆ ಬಂದಿದ್ದು, ಯಾವಾಗ? ಕಾವೇರಿ ಕನೆಕ್ಷನ್ ಪೈಪ್ ಲೈನ್ ಎಳೆದದ್ದು ಯಾವಾಗ ಎಂದು ಪುಟ ತಿರುವಿದಾಗ ಕಾಣಿಸುವ ಸತ್ಯ 2007-2008ರಲ್ಲಿ. ಅಂದರೆ, ಬಹುತೇಕ ಹನ್ನೆರಡು ವರ್ಷಗಳ ಹಿಂದೆ. ಹಾಗಾಗಿ, ಕಳೆದ ಒಂದು ದಶಕಗಳಲ್ಲಿ ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು/ಬಿಬಿಎಂಪಿಗಳು ಇಂದಿನ ಪರಿಸ್ಥಿತಿಗೆ ಕಾರಣ.
ಮಳೆಯಿಂದಾಗಿ ಸರಕಾರದ ನಿದ್ದೆಗೆಡಿಸುತ್ತಿವೆ
26.4 ಚದರಡಿ ವಿಸ್ತೀರ್ಣದ ಬೆಳ್ಳಂದೂರು ಮತ್ತು ಇತರ ಸುತ್ತಮುತ್ತಲಿನ ಭಾಗಗಳು ಮಳೆಯಿಂದಾಗಿ ಸರಕಾರದ ನಿದ್ದೆಗೆಡಿಸುತ್ತಿವೆ. ಇಲ್ಲಿನ ಸಮಸ್ಯೆಗಳಿಗೆ, ನಮ್ಮ ಬೆಂಗಳೂರು ನಗರಕ್ಕೆ ಆಗುತ್ತಿರುವ ಅವಮಾನಕ್ಕೆ ಯಾರನ್ನು ದೂರೋಣ? ದಶಕಗಳಿಂದ ರಾಜಕಾರಣಿಗಳ ಹಣದ ದಾಹ, ಅಧಿಕಾರಕ್ಕಾಗಿ ಎಂತದ್ದನ್ನೂ ಮುಚ್ಚಿಹಾಕುವ ದರ್ಪದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ, ಬೆಂಗಳೂರಿನ ಮಳೆಯ ಸಮಸ್ಯೆಗೆ ಎಲ್ಲರೂ ಉತ್ತರದಾಯಿಗಳು.