ಆಯುಧ ಪೂಜೆ 2022: ಕರ್ನಾಟಕದ ನಗರಗಳಲ್ಲಿ ಇಂದಿನ ಹೂವು, ಹಣ್ಣಿನ ಬೆಲೆಯನ್ನು ತಿಳಿಯಿರಿ
ಬೆಂಗಳೂರು, ಅಕ್ಟೋಬರ್, 04: ರಾಜ್ಯದಲ್ಲಿ ನಾಡಹಬ್ಬ ಕಳೆಗಟ್ಟಿದ್ದು, ಎಲ್ಲೆಡೆ ಜನರು ವಿಜಯ ದಶಮಿ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ. ಇನ್ನು ಇಂದು ಆಯುಧ ಪೂಜೆ ಇರುವುದರಿಂದ ಮಾರುಕಟ್ಟೆಯಲ್ಲಿ ಜನರು ಪೂಜಾ ಸಾಮಗ್ರಗಳ ಖರೀದಿಯಲ್ಲಿ ಮುಳುಗಿದ್ದಾರೆ. ಎರಡು ವರ್ಷದಿಂದ ಮಹಾಮಾರಿ ಕೊರೊನಾ ಹಿನ್ನೆಲೆ ದಸರಾ ಹಬ್ಬದ ಸಂಭ್ರಮ ಕಳೆಗುಂದಿತ್ತು. ಮಾರುಕಟ್ಟೆಗಳಲ್ಲಿಯೂ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಕಂಗಾಲಾಗಿದ್ದರು. ಇದೀಗ ಮಹಾಮಾರಿ ಕೊರೊನಾ ಆರ್ಭಟ ತಗ್ಗಿದ್ದು, ಜನರು ಅದ್ದೂರಿಯಾಗಿ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.
ಮಾರುಕಟ್ಟೆಗಳತ್ತ ಜನರು ಮುಖ ಮಾರುತ್ತಿರುವುದು ಎಲ್ಲೋ ಒಂದು ಕಡೆ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ತರಿಸಿದೆ. ಗ್ರಾಹಕರು ಮಾರಕಟ್ಟೆಗೆ ಕಿಕ್ಕಿರಿದು ಬರುತ್ತಿರುವುದರಿಂದ ವ್ಯಾಪಾರವು ಭರದಿಂದ ಸಾಗಿದೆ. ಇದರಿಂದ ಮಾರುಕಟ್ಟೆಗಳಲ್ಲೂ ಹಬ್ಬದ ವಾತವರಣ ನಿರ್ಮಾಣವಾಗಿದೆ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಜಿಲ್ಲಾವಾರು ಮಾರುಟ್ಟೆಗಳಲ್ಲಿ ವಿವಿಧ ರೀತಿಯಾಗಿ ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳು ಇಂದು ಏರಿಕೆ ಆಗಿರುವುದನ್ನು ನೋಡಬಹುದಾಗಿದೆ.
ಎರಡು ವರ್ಷದ ಕೊರೊನಾ ಹಾವಳಿ ಕಡಿಮೆಯಾಗಿ ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿರುವುದರಿಂದ ಜನ ಖರೀದಿಗೂ ಉತ್ಸಾಹ ತೋರಿದ್ದಾರೆ. ಹೂ, ಬಾಳೆ ಹಣ್ಣು ಪೂಜಾ ಸಾಮಗ್ರಿ ಮಾಡುವ ಅಂಗಡಿಗಳ ಸಾಧ್ಯವಾಗದಷ್ಟು ಜನಜಂಗುಳಿ ತುಂಬಿತ್ತು. ಆಯುಧ ಪೂಜೆ ಹಾಗೂ ವಿಜಯದ ದಶಮಿಗೆ ಜನ ಹೂ ಹಣ್ಣು-ಬೂದು ಕುಂಬಳ ಕಾಯಿ ಸೇರಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ವಿಜಯದಶಮಿ ಸಂಭ್ರಮದಲ್ಲಿ ಜನರು
ಕೋವಿಡ್ ಎರಡು ವರ್ಷದ ಸಂಕಷ್ಟ ಕಳೆದು ಜನರು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಮಂಗಳವಾರ ನಗರದ ಹಲವು ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಆಯುಧ ಪೂಜೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು, ಹೂ-ಹಣ್ಣುಗಳ ಬೆಲೆ ಗಗನಕ್ಕೇರಿದರೂ ಜನ ಖರೀದಿಯಿಂದ ಹಿಂದೆ ಸರಿಯಲಿಲ್ಲ. ಎಲ್ಲ ಮಾರುಕಟ್ಟೆಗಳಲ್ಲಿ ಜನ ಜಂಗುಳಿಯೇ ನೆರೆದಿತ್ತು. ದೇವರಾಜ ಮಾರುಕಟ್ಟೆ, ಮಾರುಕಟ್ಟೆ ಹೊರಾವರಣ, ಸಯ್ಯಾಜಿರಾವ್ ರಸ್ತೆ, ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆ, ಮಹದೇವಪುರ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಾಳೆ ಕಂದು, ಕುಂಬಳಕಾಯಿ, ಹೂ, ಏಳದ ವ್ಯಾಪಾರ ಮಾಡಲು ವ್ಯಾಪಾರಿಗಳು ಮೂರು ದಿನಗಳಿಂದ ಟೆಂಟ್ ಹಾಕಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಹಬ್ಬದ ಹಿನ್ನೆಲೆಯಲ್ಲಿ ಹೂ-ಹಣ್ಣು ಬೆಲೆ ಹೆಚ್ಚಳ ಮತ್ತಷ್ಟು ಕೈಸುಡುವಂತೆ ಮಾಡಿದೆ.

ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಬೆಲೆ
ಮೈಸೂರಿನ ಮಾರುಕಟ್ಟೆಗಳಲ್ಲಿ ಒಂದು ಮಾರು ಮಲ್ಲಿಗೆ ಹೂ 190-220 ರೂ., ಮಾರು ಸೇವಂತಿಗೆ 180-200 ರೂ., ಮಾರು ಚೆಂಡು ಹೂ 100-130 ರೂ., ಕನಕಾಂಬರ ಹೂ 450 - 500 ರೂ., ಮಾರಿ ಸುಗಂಧರಾಜ 250-280 ರೂಪಾಯಿ ಇದ್ದರೆ ಒಂದು ಕೆ.ಜಿ ಕಾಕಡ 800 ರೂಪಾಯಿ ಇದೆ.
ಇನ್ನು ಹಣ್ಣಿನ ದರವನ್ನು ನೋಡುವುದಾದರೆ ಒಂದು ಕೆ.ಜಿ. ಸೇಬು- 120 ರಿಂದ 150 ರೂ., ಕೆ.ಜಿ ದಾಳಿಂಬೆ - 80 ರಿಂದ 120 ರೂ., ಕೆ.ಜಿ. ಮೂಸಂಬಿ - 80ರಿಂದ 100 ರೂ., ಕೆ.ಜಿ. ದ್ರಾಕ್ಷಿ - 80 ರೂ., ಕೆ.ಜಿ. ಕಪ್ಪು ದ್ರಾಕ್ಷಿ -70 ರೂ., ಕೆ.ಜಿ. ಬಾಳೆಹಣ್ಣು 80-90 ರೂಪಾಯಿ ಇದ್ದರೆ ಕೆ.ಜಿ ಪಚ್ಚಬಾಳೆಗೆ - 60ರೂಪಾಯಿ ನಿಗಧಿ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ದರ
ಕೋಟೆನಾಡು ಚಿತ್ರದುರ್ಗದಲ್ಲಿ ಮಾರು ಚೆಂಡು ಹೂವು 100-120, ( ಒಂದು ಸಾವಿರಕ್ಕೆ 12 ಮಾರು) ರೂಪಾಯಿ., ಮಾರು ಸೇವಂತಿಗೆ ಹೂವು 90-120 ರೂ., ಮಾರು ಮಲ್ಲಿಗೆ ಹೂವು 150-200 ರುಪಾಯಿ ಅಂದರೆ (ಒಂದು ಸಾವಿರಕ್ಕೆ 6 ಮಾರು), ಇನ್ನು ಮಾರು ಕನಕಾಂಬರ 150-200 ರೂಪಾಯಿ (ಒಂದು ಸಾವಿರಕ್ಕೆ 6 ಮಾರು), ಹೂವಿನ ಹಾರ 300 ರಿಂದ 5 ಸಾವಿರ ರೂಪಾಯಿಗೂ ಹೆಚ್ಚು ನಿಗಧಿ ಮಾಡಿದ್ದರು.

ಶಿವಮೊಗ್ಗದಲ್ಲಿ ಕಳೆಗಟ್ಟಿದ ದಸರಾ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣುಗಳ ಬೆಲೆ ನೋಡುವುದಾದರೆ, ಒಂದು ಕೆ.ಜಿ. ದ್ರಾಕ್ಷಿ 200 ರೂ., ಕೆ.ಜಿ. ಸೇಬು 100-150 ರೂ., ಮಿಕ್ಸ್ ಹಣ್ಣು 100 ರೂ., ಸೀತಾಫಲ 80 ರೂ., ಸೀಬೆಹಣ್ಣು 80 ರೂ., ಮೂಸಂಬಿ 50 ರೂ., ಬೂದುಗುಂಬಳಕಾಯಿಗೆ 30-50 ರೂಪಾಯಿ ನಿಗದಿ ಆಗಿತ್ತು.
ಹೂವುಗಳ ಬೆಲೆ ನೋಡುವುದಾದರೆ ಒಂದು ಮಾರು ಚೆಂಡು ಹೂವು 80 ರೂ., ಮಾರು ಕನಕಾಂಬರ, ಮಲ್ಲಿಗೆ 200 ರೂಪಾಯಿ, ಎಲ್ಲ ಹೂವುಗಳಿಗೆ ಸಾಮಾನ್ಯವಾಗಿ 80-100 ರೂಪಾಯಿ ನಿಗದಿ ಮಾಡಿದ್ದರು. ಇನ್ನು ಸಣ್ಣ ಹಾರ 200 ರೂಪಾಯಿ (ಸಾಮನ್ಯ ದಿನಗಳಲ್ಲಿ 100 ರೂ.), ದೊಡ್ಡ ಹಾರಗಳು 350 ರೂ. (ಸಾಮಾನ್ಯ ದಿನ 200 ರೂ.) ನಿಗದಿ ಆಗಿರುತ್ತದೆ.

ಬೆಲೆ ಏರಿಕೆಯಿಂದ ವಾಣಿಜ್ಯ ನಗರಿ ಜನ ತ್ತತ್ತರ
ಸಾಮಾನ್ಯವಾಗಿ ಹಬ್ಬದ ದಿನಗಳು ಹತ್ತಿರ ಬಂದರೆ ಸಾಕು ಜನಸಾಮಾನ್ಯರ ಜೇಬಿಗೆ ಹೊರೆ ಬೀಳುವುದು ಸಾಮಾನ್ಯ ಆಗಿಬಿಟ್ಟಿದೆ. ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುತ್ತಿರುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗಿಯೇ ಇರುತ್ತದೆ. ಅದರಂತೆಯೇ ಈ ಬಾರಿ ಆಯುಧಪೂಜೆ ದಸರಾಗೂ ದರ ಏರಿಕೆ ಆಗಿದೆ. ಅಲ್ಲದೇ ಭಾರಿ ಮಳೆಗೆ ಹೂವು ಹಾಗೂ ಹಣ್ಣಿನ ಬೆಲೆಗಳು ಗಗನಕ್ಕೇರಿವೆ.
ಹುಬ್ಬಳ್ಳಿಯಲ್ಲಿ ಬಾಳೆಕಂಬ ಜೋಡಿಗೆ 200 ರಿಂದ 300 ರೂಪಾಯಿಗೆ ಏರಿಕೆ ಆಗಿದೆ. ನಿಂಬೆಹಣ್ಣು, ಹೂವಿನ ಬೆಲೆಗಳು ಕೂಡ ಏರಿಕೆ ಆಗಿವೆ. ಅದರಲ್ಲೂ ಬಹು ಬೇಡಿಕೆಯ ಸೇವಂತಿಗೆ, ಚೆಂಡು ಹೂವುಗಳ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಕೆ.ಜಿ. ಸೇವಂತಿ ಹೂವು 200 ರಿಂದ 300 ರೂಪಾಯಿ, ಕೆ.ಜಿ. ಚೆಂಡು ಹೂವು 100 ರೂ, ಕೆ.ಜಿ. ಕನಕಾಂಬರ 2,000 ರೂ, ಕೆ.ಜಿ ಕಾಕಡ 500, ಕೆ.ಜಿ. ಗುಲಾಬಿ 250 ರೂ, ಕೆ.ಜಿ. ಸುಗಂಧರಾಜ 300 ರೂ, ಮತ್ತು ಮಲ್ಲಿಗೆ ಬೆಲೆ ಕೆ.ಜಿ.ಗೆ 800 ರೂಪಾಯಿಗೆ ತಲುಪಿದೆ. ರಾಜ್ಯದಲ್ಲಿ ಈ ಭಾರಿ ಮಳೆ ಆಗಿದ್ದರಿಂದ ಅಧಿಕ ಪ್ರಮಾಣದಲ್ಲಿ ಹೂವಿನ ಗಿಡಗಳು ಕೊಳೆತು ಹೋಗಿವೆ. ಆದ್ದರಿಂದ ದಸರಾ ಹಬ್ಬ ಪ್ರಯುಕ್ತ ಹೂವು ಹಾಗೂ ಹಣ್ಣಿನ ಬೆಲೆ ಗಗನಕ್ಕೇರಿದೆ. ಮಲ್ಲಿಗೆಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 800- 1,200 ಏರಿಕೆ ಆಗಿದೆ. ಈ ಬಾರಿಯ ನವರಾತ್ರಿಗೆ ಬೂದುಗುಂಬಳಕಾಯಿಯ ಬೆಲೆಯೂ ಕೂಡ ಹೆಚ್ಚಾಗಿದೆ. ನಿರಂತರ ಮಳೆಯ ಕಾರಣದಿಂದ ಆಯುಧ ಪೂಜೆಯ ಬಹು ಬೇಡಿಕೆಯ ಬೂದುಗುಂಬಳ ಬೆಳೆ ಎಲ್ಲೆಡೆ ಹಾಳಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 50 ರೂಪಾಯಿ ತಲುಪಿದೆ. ಸಗಟು ದರದಲ್ಲಿ ಕೆ.ಜಿ.ಗೆ 30 ರಿಂದ 35 ರೂಪಾಯಿ ದರ ಇದೆ.

ಕಳೆಗಟ್ಟಿದ ವಿಜಯ ದಶಮಿ ಸಂಭ್ರಮಾಚರಣೆ
ಇನ್ನು ರಾಮನಗರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಒಂದು ಮಾರು ಮಲ್ಲಿಗೆ ಹೂ -250 ರೂ., ಮಾರು ಕನಕಾಂಬರ ಹೂ- 200 ರೂಪಾಯಿ, ಮಾರು ಸೇವಂತಿಗೆ 150-180 ರೂ., ಕೆ.ಜಿ.ಬಾಳೆ ಹಣ್ಣು 80-100 ರೂಪಾಯಿ ಇದ್ದರೆ, ಸಣ್ಣ ಬೂದುಗುಂಬಳ 40 ರೂ., ದೊಡ್ಡ ಗಾತ್ರದ ಬೂದುಗುಂಬಳ 20 ರೂಪಾಯಿ ಇದೆ. ಪ್ರತಿ ಕೆ.ಜಿ. ಹಾರ 500-1000 ರೂಪಾಯಿ ಇದೆ. ಹಾಗೂ ಕೆ.ಜಿ. ಹಣ್ಣುಗಳ ಮಿಕ್ಸ್ 200-250 ರೂಪಾಯಿ ಇದೆ. ಹೀಗೆ ಜಿಲ್ಲಾವಾರು ಮಾರುಕಟ್ಟೆಗಳಲ್ಲಿ ಇಂದಿನ ಹೂವು, ಹಣ್ಣುಗಳ ಬೆಳೆಯನ್ನು ನೋಡಬಹುದಾಗಿದೆ.

ಗಗನಕ್ಕೇರಿದ ತರಕಾರಿ ಬೆಲೆ, ಜನರು ಕಾಂಗಾಲು
ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿಯ ಆಯುಧಪೂಜೆ ಹಬ್ಬವನ್ನು ಜನತೆ ಸಂಭ್ರಮ-ಸಡಗರದಿಂದಲೇ ಆಚರಿಸಿದರು. ಜಿಲ್ಲೆಯಲ್ಲಿ ಒಂದು ಮಾರು ಸೇವಂತಿಗೆ ಹೂವು 150 -200 ರೂ., ಮಾರು ಮಲ್ಲಿಗೆ 200 ರೂ., ಹಾರ ಕನಕಾಂಬರ 250 ರೂ., ಬಿಡಿ ಹೂ 100 ರೂಪಾಯಿ ಗ್ರಾಂಗೆ 500 ರೂಪಾಯಿ, ಗುಲಾಬಿ ಹಾರ 500 2000 ರೂಪಾಯಿ ಇದ್ದರೆ ಇತರೆ ಹಾರಗಳು ಕನಿಷ್ಟ 250 -1500 ರೂಪಾಯಿ ಇತ್ತು. ಹಣ್ಣಿನ ಬೆಲೆಯೂ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ಮಟ್ಟಿಗೆ ಏರಿಕೆ ಆಗಿದ್ದು, ಮಿಕ್ಸ್ ಹಣ್ಣಿನ ಬೆಲೆ ಪ್ರತಿ ಕೆ.ಜಿಗೆ 120 ರೂ., ಕೆ.ಜಿ. ಮೂಸಂಬಿ 80 ರೂ., ಕೆ.ಜಿ ಸೇಬು 100-120 ರೂ., ಕೆ.ಜಿ. ದಾಳಿಂಬೆ 80 ರೂ., ಕೆ.ಜಿ. ಕಿತ್ತಳೆ 80 ರೂ., ಕೆ.ಜಿ ದ್ರಾಕ್ಷಿ 120 ರೂ., ಕೆ.ಜಿ. ಬಾಳೆಹಣ್ಣು 80 ರೂಪಾಯಿ ಇದೆ.
ಇನ್ನು ತರಕಾರಿ ಬೆಲೆಯಲ್ಲೂ ಹೆಚ್ಚಳ ಆಗಿದ್ದು, ಕೆ.ಜಿ. ಮಿಕ್ಸ್ ತರಕಾರಿಗೆ 80 ರೂ., ಕೆ.ಜಿ. ಕ್ಯಾರೆಟ್ 80 ರೂ., ಕೆ.ಜಿ. ಬೀನ್ಸ್ 80 ರೂ., ಕೆ.ಜಿ. ಬದನೆಕಾಯಿ 60 ರೂ., ದಪ್ಪ ಮೆಣಸಿನಕಾಯಿ 80 ರೂ., ಕೆ.ಜಿ ಗೆಡ್ಡೆ ಕೋಸು 80 ರೂ., ಟೊಮ್ಯಾಟೋ 60 ರೂ., ಕೆ.ಜಿ ಬೀಟ್ರೋಟ್ 80 ರೂಪಾಯಿ ಇದ್ದರೆ, ಕೆ.ಜಿ ಅವರೆಕಾಯಿ 50 ರೂಪಾಯಿ, ಈರೇಕಾಯಿ 60 ರೂಪಾಯಿ ನಿಗಧಿ ಆಗಿದೆ.

ಜಿಲ್ಲೆಯಲ್ಲಿ ಹೂವು, ಹಣ್ಣಿನ ಬೆಲೆ ದುಬಾರಿ
ಬೆಣ್ಣೆನಗರಿ ದಾವಣಗೆರೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ 250-300 ರೂಪಾಯಿ ಆಗಿದ್ದರೆ, ಮಾರು ಚೆಂಡು ಹೂವು 120 -150 ರೂಪಾಯಿ ಇದ್ದರೆ, ಸಣ್ಣ ಹೂವಿನ ಹಾರಕ್ಕೆ 50-120ರೂಪಾಯಿ ಇದೆ. ಇನ್ನು ಮಲ್ಲಿಗೆ, ಕನಕಾಂಬರ ಹಾಗೂ ಗುಲಾಬಿ ಹೂವು ದರವೂ ದುಪ್ಪಟ್ಟಾಗಿದೆ. ನಿನ್ನೆ ರಾತ್ರಿ 120 ರೂಪಾಯಿ ಇದ್ದ ಸೇವಂತಿಗೆ ದುಪ್ಪಟ್ಟಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಳ್ಳಿ ಕಡೆಗಳಿಂದ ಬರುತ್ತಿದ್ದ ಹೂವು ಭಾರಿ ಮಳೆಯಿಂದ ಹಾನಿಗೀಡಾಗಿದೆ. ಕೈಗಾರಿಕೆಗಳು, ಅಂಗಡಿಗಳು, ಆಯುಧಗಳಿಗೆ ಪೂಜೆ ಸಲ್ಲಿಸುವುದರಿಂದ ದರ ದುಬಾರಿ ಆದರೂ ಜನರು ಖರೀದಿ ಮಾಡುತ್ತಿದ್ದಾರೆ. ಎಲ್ಲೆಡೆ ಚೌಕಾಸಿ ವ್ಯಾಪಾರ ಕಂಡು ಬರುತ್ತಿದೆ.












Click it and Unblock the Notifications