21 ವರ್ಷಕ್ಕೇ ಮೇಯರ್ ಚುಕ್ಕಾಣಿ ಹಿಡಿದ ಆರ್ಯ ರಾಜೇಂದ್ರನ್ ವ್ಯಕ್ತಿಚಿತ್ರ
ತಿರುವನಂತಪುರಂ, ಡಿಸೆಂಬರ್ 28: ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು ಫಲಿತಾಂಶದ ಬಳಿಕ ತಿಳಿಯಾಗಿದೆ.
ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಮುನ್ನಡೆಸುವ ಮೇಯರ್ ಸ್ಥಾನಕ್ಕೆ ಸಿಪಿಎಂ ಪಕ್ಷ 21 ವರ್ಷದ ಆರ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದಲ್ಲೇ ಯುವ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಧ್ಯಮವರ್ಗದಲ್ಲಿ ಬೆಳೆದಿರುವ ಆರ್ಯ ಅವರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಎಲ್ಐಸಿ ಏಜೆಂಟ್ ಆಗಿದ್ದಾರೆ. ಆರ್ಯ ಆಲ್ ಸೈಂಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾರೆ. ಅಲ್ಲದೆ ಬಾಲ ಸಂಘದ ರಾಜ್ಯಾಧ್ಯಕ್ಷೆ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾದ ರಾಜ್ಯ ಸಮಿತಿಯ ಸದಸ್ಯೆಯಾಗಿದ್ದಾರೆ.

ತಿರುವನಂತಪುರಂ ಮುಡವನ್ಮುಗಲ್ ವಾರ್ಡ್ ನಿಂದ ಸಿಪಿಎಂ ಪಕ್ಷದ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಆರ್ಯ ರಾಜೇಂದ್ರನ್ , ಶ್ರೀಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸಿಪಿಎಂ ಜಿಲ್ಲಾ ಕಾರ್ಯಾಲಯ ಆರ್ಯ ಹೆಸರನ್ನು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಶಿಫಾರಸು ಮಾಡಿತ್ತು. ಇದೀಗ ಶಿಫಾರಸ್ಸಿಗೆ ಸಿಪಿಎಂ ರಾಜ್ಯ ಸಮಿತಿ ಒಪ್ಪಿಗೆ ನೀಡಿದ್ದು, ದೇಶದ ಕಿರಿಯ ಮೇಯರ್ ಆಗಿ ಆರ್ಯ ರಾಜೇಂದ್ರನ್ ತಿರುವನಂತಪುರಂ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದಿದ್ದಾರೆ.
ಈ ಹಿಂದೆ ಅಲಹಾಬಾದ್ ನ ಮೇಯರ್ ಆಗಿ ಆಯ್ಕೆಯಾಗಿದ್ದ 23 ವರ್ಷದ ಅಬಿಲಾಶಾ ಗುಪ್ತಾ ನಂದಿ ಅವರ ದಾಖಲೆಯನ್ನು ಆರ್ಯ ಸರಿಗಟ್ಟಿದ್ದಾರೆ.
ಮೇಯರ್ ಸ್ಥಾನಕ್ಕೆ ಪಕ್ಷದ ಅನುಭವಿ ಸದಸ್ಯರಾದ ಜಮೀಲಾ ಶ್ರೀಧರನ್ , ಗಾಯತ್ರಿ ಬಾಬು ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಪಕ್ಷ ಆರ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಿದೆ.











Click it and Unblock the Notifications