ಮೊದಲ ಬಾರಿ ಸಚಿವರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪರಿಚಯ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ, ಜಿಲ್ಲಾ ಬಿಜೆಪಿಯ ಹಿರಿಯ ನಾಯಕ ಆರಗ ಜ್ಞಾನೇಂದ್ರ ಸಚಿವರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಜ್ಞಾನೇಂದ್ರ 4 ಬಾರಿ ಗೆಲುವು ಸಾಧಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಸಚಿವರಾಗಿದ್ದಾರೆ.
1983ರ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಜೊತೆ ಚುನಾವಣೆಗೆ ಸ್ಪರ್ಧೆ ಮಾಡಿದ ಕೆಲವೇ ನಾಯಕರಲ್ಲಿ ಆರಗ ಜ್ಞಾನೇಂದ್ರ ಸಹ ಒಬ್ಬರು. ಪಕ್ಷ ನಿಷ್ಠೆ, ಜನಪರ ಹೋರಾಟ, ಸರಳ ಜೀವನ ಶೈಲಿ, ಜನರೊಂದಿಗೆ ಸದಾ ಬೆರೆಯುವ ಆರಗ ಜ್ಞಾನೇಂದ್ರಗೆ ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಕ್ಕೆ ಈಗ ಸಚಿವ ಸ್ಥಾನ ಸಿಕ್ಕಿದೆ.
2013ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್ ಆರಗ ಜ್ಞಾನೇಂದ್ರರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಆಗ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಬಳಿಕ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ಗೆ ಸಚಿವ ಸ್ಥಾನ ಕೈತಪ್ಪಿತ್ತು. 2018ರ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಸೋಲಿಸಿದ್ದ ಆರಗ ಜ್ಞಾನೇಂದ್ರಗೆ ಈಗ ಸಚಿವ ಸ್ಥಾನ ಒಲಿದು ಬಂದಿದೆ.

2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಆರಗ ಜ್ಞಾನೇಂದ್ರ ಸಚಿವರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಶಿಕಾರಿಪುರ ಕ್ಷೇತ್ರದ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಶಿವಮೊಗ್ಗ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಸಚಿವರಾದರು. ಈಗ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಶಿವಮೊಗ್ಗ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿದೆ.
ಆರಗ ಜ್ಞಾನೇಂದ್ರ ಪರಿಚಯ; ಆರಗ ಜ್ಞಾನೇಂದ್ರ 15/3/1951ರಲ್ಲಿ ಜನಿಸಿದರು. ಬಿ.ಕಾಂ ವಿದ್ಯಾಭ್ಯಾಸ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಆರ್ಎಸ್ಎಸ್ ಸಂಪರ್ಕಕ್ಕೆ ಬಂದಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಆರು ತಿಂಗಳ ಸೆರೆವಾಸವನ್ನು ಸಹ ಅನುಭವಿಸಿದ್ದಾರೆ.
ತಾಲೂಕು ಬೋರ್ಡ್ ಚುನಾವಣೆ ಮೂಲಕ ಆರಗ ಜ್ಞಾನೇಂದ್ರ ಸಕ್ರಿಯ ರಾಜಕಾರಣ ಆರಂಭಿಸಿದರು. 1983ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣಾ ಕಣಕ್ಕಿಳಿದರು. 2 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು.
1985, 1989ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿದರು. ಆದರೆ ಸೋತರು. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಲಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸಿದರು ಆರಗ ಜ್ಞಾನೇಂದ್ರ.
1994ರ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಡಿ. ಬಿ. ಚಂದ್ರೇಗೌಡರನ್ನು ಸೋಲಿಸಿ ವಿಧಾನಸಭೆ ಆಯ್ಕೆಯಾದರು. ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳುಮಾಡಿ ಮೂರು ಬಾರಿ ಗೆದ್ದರು. 2013ರಲ್ಲಿ ಮತ್ತೆ ಸೋಲು ಕಂಡರು. 2018ರ ಚುನಾವಣೆಯಲ್ಲಿ ಮತ್ತೆ ಗೆಲುವು ಕಂಡರು.
ರೈತರ ಬಗ್ಗೆ, ಅಡಕೆ ಬೆಳೆಗಾರರ ಬಗ್ಗೆ ಆರಗ ಜ್ಞಾನೇಂದ್ರರಿಗೆ ಅಪಾರವಾದ ಕಾಳಜಿ, ಜ್ಞಾನವಿದೆ. ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ ರಾಜ್ಯ ಅಡಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ನೇಮಕವಾದರು. ಯಡಿಯೂರಪ್ಪ ಸರ್ಕಾರ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿಯೂ ಅವರನ್ನು ನೇಮಕ ಮಾಡಿತು.
ಸುಮಾರು 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಆರಗ ಜ್ಞಾನೇಂದ್ರರಿಗೆ ಈಗ ಸಚಿವ ಸ್ಥಾನ ಒಲಿದು ಬಂದಿದೆ. ಮಲೆನಾಡಿನ ಸರಳ ರಾಜಕಾರಣಿಗೆ ಸಚಿವ ಸ್ಥಾನ ಸಿಕ್ಕಿರುವುದು ಅಭಿಮಾನಿಗಳಿಗೂ ಸಂತಸ ತಂದಿದೆ.
ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಸಮೀಪದ ಗುಡ್ಡೇಕೊಪ್ಪ ಎಂಬ ಹಳ್ಳಿಯಲ್ಲಿ ಪತ್ನಿ, ಮಗ, ಸೊಸೆಯ ಜೊತೆ ವಾಸವಾಗಿದ್ದಾರೆ. ಶಾಸಕರು ಚುನಾವಣೆ ಬಳಿಕ ಕೈಗೆ ಸಿಗುವುದಿಲ್ಲ ಎಂಬ ಆರೋಪಕ್ಕೆ ಜ್ಞಾನೇಂದ್ರ ವಿರುದ್ಧ. ಸದಾಕಾಲ ಜನರ ಜೊತೆಯೇ ಇರುವ ಸರಳ ವ್ಯಕ್ತಿತ್ವ ಅವರದ್ದು.












Click it and Unblock the Notifications