ಬೆಟ್ಟದ ಮೇಲಿನ ಹಳ್ಳಿಗೆ ತಾವೇ ರಸ್ತೆ ನಿರ್ಮಿಸಿದ ಗ್ರಾಮಸ್ಥರು: ಸ್ಫೂರ್ತಿದಾಯಕ ಘಟನೆ
ವಿಶಾಖಪಟ್ಟಣ, ಆಗಸ್ಟ್ 27: ಎಷ್ಟೇ ಆಧುನಿಕತೆ ಬೆಳೆದಿದೆ ಎಂದರೂ ಇಂದು ಅನೇಕ ಹಳ್ಳಿಗಳಿಗೆ ಕನಿಷ್ಠ ರಸ್ತೆ ಸೌಲಭ್ಯವೂ ಮರೀಚಿಕೆಯಾಗಿದೆ. ವಾಹನ ಓಡಾಟಕ್ಕೆ ಸೂಕ್ತ ರಸ್ತೆಗಳಿಲ್ಲದೆ ಹಳ್ಳಿಗರು ಪರದಾಡುವ ಸ್ಥಿತಿ ಬದಲಾಗಿಲ್ಲ. ಅದಕ್ಕೊಂದು ಉದಾಹರಣೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚಿಂತಮಾಲಾ ಗ್ರಾಮ. ಆದರೆ ಅಧಿಕಾರಿಗಳು ತಮ್ಮ ಅಹವಾಲಿಗೆ ಕಿಮ್ಮತ್ತು ನೀಡದೆ ಇದ್ದಾಗ ಏನು ಮಾಡಬಹುದು ಎಂಬುದಕ್ಕೆ ಕೂಡ ಈ ಗ್ರಾಮಸ್ಥರು ಉದಾಹರಣೆಯಾಗಿದ್ದಾರೆ.
ತಮ್ಮೂರಿಗೆ ರಸ್ತೆ ಮಾಡಿಕೊಡದ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧದ ಆಕ್ರೋಶದ ಫಲವಾಗಿ ಈ ಗ್ರಾಮವೇ ತಮಗಾಗಿ ರಸ್ತೆ ನಿರ್ಮಿಸಿದೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಮತ್ತು ಗ್ರಾಮಸ್ಥರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಟ್ಟದ ಮೇಲಿರುವ ತಮ್ಮ ಹಳ್ಳಿಗೆ ವಾಹನ ಓಡಾಟಕ್ಕೆ ಪೂರಕವಾದ ರಸ್ತೆ ನಿರ್ಮಿಸಿಕೊಡುವ ಭರವಸೆಯೊಂದಿಗೆ ದಶಕಗಳಿಂದ ಕಾದಿದ್ದ ಚಿಂತಮಾಲಾದ ಜನರು ಸ್ವತಃ ರಸ್ತೆ ನಿರ್ಮಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಮುಂದೆ ಓದಿ.

ಒಂದೂ ರಸ್ತೆಯಿಲ್ಲ
ಚಿಂತಮಾಲಾ ಎಂಬ ಬೆಟ್ಟದ ತುದಿಯಲ್ಲಿನ ಹಳ್ಳಿಯಲ್ಲಿ ಸುಮಾರು 89 ಕುಟುಂಬಗಳಿವೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಉರುಳಿದರೂ ಬುಡಕಟ್ಟು ಸಮುದಾಯದವರೇ ಇರುವ ಈ ಗ್ರಾಮಕ್ಕೆ ಒಂದು ರಸ್ತೆ ಸಂಪರ್ಕವಿಲ್ಲ. ಇದರಿಂದ ಅವರ ದಿನನಿತ್ಯದ ಜೀವನಕ್ಕೆ ಬಹಳ ತೊಂದರೆಯಾಗುತ್ತಿತ್ತು. ಇನ್ನು ವೈದ್ಯಕೀಯ ತುರ್ತಿನ ಸಂದರ್ಭಗಳಲ್ಲಿ ಅವರ ಸ್ಥಿತಿಯಂತೂ ದೇವರಿಗೇ ಪ್ರೀತಿ.

ಜನರಿಂದಲೇ ಹಣ ಸಂಗ್ರಹ
ಸಾಲೂರು ಮಂಡಲದ ಜತಾಪು ಬುಡಕಟ್ಟು ಸಮುದಾಯದ ಈ ಬಡ ಗ್ರಾಮಸ್ಥರು ಸಗುಮಾರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ತಮ್ಮ ಜನರಿಂದಲೇ ಹಣ ಸಂಗ್ರಹಿಸಿದ್ದಾರೆ. ತಮ್ಮೂರಿಗೆ ರಸ್ತೆ ಬೇಕೆಂಬ ಕಾರಣಕ್ಕೆ ಎಷ್ಟೋ ಮಂದಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಹಣ ಹೊಂದಿಸಿದ್ದಾರೆ. ಇನ್ನು ಕೆಲವರು ತಮ್ಮ ಒಡವೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಗಿರವಿ ಇಟ್ಟಿದ್ದಾರೆ.

ಸಂಪರ್ಕ ಇರುವುದು ಒಡಿಶಾಕ್ಕೆ
ಈ ಹಳ್ಳಿ ಇರುವುದು ಆಂಧ್ರಪ್ರದೇಶ-ಒಡಿಶಾ ಗಡಿಯಲ್ಲಿ. ಒಡಿಶಾದ ಕೊರಪುಟ್ ಜಿಲ್ಲೆಯ ನಾರಾಯಣಪಟ್ಟಣ ಬ್ಲಾಕ್ ಹಳ್ಳಿ ಇಲ್ಲಿಂದ ಕೇವಲ 3 ಕಿ.ಮೀ. ಗ್ರಾಮಸ್ಥರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಮೀಪದ ಒಡಿಶಾದ ಹಳ್ಳಿಗಳನ್ನು ಅವಲಂಬಿಸಿದ್ದಾರೆ. ವೈದ್ಯಕೀಯ ತುರ್ತು ಸಂದರ್ಭ ಬಂದಾಗ ತಮ್ಮದೇ ಸ್ಟ್ರೆಚರ್ ಮೂಲಕ ರೋಗಿಗಳನ್ನು ಹೊತ್ತುಕೊಂಡು ಬರುತ್ತಾರೆ.

ಹೊತ್ತುಕೊಂಡೇ ಆಸ್ಪತ್ರೆಗೆ ಹೋಗಬೇಕು
ಆಂಧ್ರಪ್ರದೇಶದ ಕೊಡಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ 14 ವಾಸ ಸ್ಥಳಗಳಿವೆ. ಈ ಯಾವ ಗ್ರಾಮಕ್ಕೂ ರಸ್ತೆ ಸಂಪರ್ಕವಿಲ್ಲ. ಮಳೆಗಾಲದಲ್ಲಿ ಇಲ್ಲಿನ ಜನರು ಹೊರ ಜಗತ್ತಿನ ಜತೆ ಸಂಪರ್ಕ ಇರಿಸಿಕೊಳ್ಳುವುದೇ ಅಸಾಧ್ಯ. ವಾಹನಗಳು ಸಿಗಬೇಕೆಂದರೆ ಕಾಡಿನಿಂದ ಆವೃತವಾದ ಗುಡ್ಡಗಾಡಿನಲ್ಲಿ ಐದು ಕಿ.ಮೀ. ನಡೆದು ಸಾಗಬೇಕು. ಹೀಗಾಗಿ ಇಲ್ಲಿ ಗರ್ಭಿಣಿಯರನ್ನು ಮತ್ತು ರೋಗಿಗಳನ್ನು ಹೊತ್ತುಕೊಂಡು ಆಸ್ಪತ್ರೆಗೆ ಧಾವಿಸುವುದು ಸಾಮಾನ್ಯ.

ಸ್ಫೂರ್ತಿ ಪಡೆದ ಪಕ್ಕದ ಹಳ್ಳಿ
ಯಾವ ರಾಜಕಾರಣಿಗಳೂ, ಅಧಿಕಾರಿಗಳು ತಮ್ಮ ಮನವಿಗೆ ಕಿವಿಗೊಡದೆ ಇದ್ದಾಗ ಗ್ರಾಮಸ್ಥರು ಸಭೆ ನಡೆಸಿ ಪ್ರತಿ ಮನೆಯಿಂದ ತಲಾ 2000 ರೂ.ನಂತೆ ಸಂಗ್ರಹಿಸಿದರು. ಒಟ್ಟು ಹತ್ತು ಲಕ್ಷ ರೂ. ಹೊಂದಿಸಿದರು. ಅದಕ್ಕೆ ಬೇಕಾದ ಸಲಕರಣೆಗಳಿಗೆ ಹಣ ವಿನಿಯೋಗಿಸಿ ತಾವೇ ಸೇರಿಕೊಂಡು ರಸ್ತೆ ನಿರ್ಮಿಸಿದರು. ರಸ್ತೆ ನಿರ್ಮಾಣ ಕಾರ್ಯಕ್ಕೆ ಅರ್ಥ್ ಮೂವರ್ಗಳನ್ನು ಬಳಸಿದ್ದರು. ಇದರಿಂದಾಗಿ 21 ದಿನದಲ್ಲಿ ಕೆಲಸ ಮುಗಿಯಿತು.
ಚಿಂತಮಾಲಾ ಗ್ರಾಮಸ್ಥರ ಕೆಲಸದಿಂದ ಸ್ಫೂರ್ತಿ ಪಡೆದು ಕೊಡಮ ಗ್ರಾಮದ ಜನರು ನಾಲ್ಕು ಲಕ್ಷ ರೂ ಸಂಗ್ರಹಿಸಿ ತಮ್ಮ ಊರಿಂದ ಬರ್ಲಗಂಡಕ್ಕೆ ನಾಲ್ಕು ಕಿ.ಮೀ. ರಸ್ತೆ ನಿರ್ಮಿಸಿದ್ದಾರೆ.











Click it and Unblock the Notifications