Explainer: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ಪ್ರತಿಭಟನಾಕಾರರ ಬೇಡಿಕೆಗಳೇನು?
ನವದೆಹಲಿ, ಜೂನ್ 18: ಕೇಂದ್ರ ಸರ್ಕಾರದ ಘೋಷಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಯುವಕರು ಕೆರಳಿದ್ದಾರೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಉದ್ಯೋಗ ಭದ್ರತೆ ಮತ್ತು ಪಿಂಚಣಿಗಾಗಿ ಬೇಡಿಕೆ ಇಡುತ್ತಿದ್ದಾರೆ.
ಅಗ್ನಿಪಥ್ ಯೋಜನೆ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಕೇವಲ ನಾಲ್ಕು ವರ್ಷಗಳ ಮಟ್ಟಿಗೆ ತಾತ್ಕಾಲಿಕವಾಗಿ ನೀಡುವ ಉದ್ಯೋಗದ ವಿರುದ್ಧ ಯುವ ಸಮುದಾಯ ಕೆರಳಿ ಕೆಂಡವಾಗಿದೆ.
ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಜನರು ಹಲವು ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಸೇವಾ ಭದ್ರತೆಯ ಜೊತೆಗೆ ಪಿಂಚಣಿ ಸೌಲಭ್ಯ ಸೇರಿದಂತೆ ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳೇನು?, ಅಗ್ನಿಪಥ್ ಯೋಜನೆಯು ಅಸಲಿಗೆ ಹೇಳುವುದೇನು?, ಅಗ್ನಿಪಥ್ ನೇಮಕಾತಿ ಯೋಜನೆಯಿಂದ ಲಾಭವೆಷ್ಟು ಮತ್ತು ನಷ್ಟವೆಷ್ಟು ಎನ್ನುವುದರ ಕುರಿತು ಮುಂದೆ ಓದಿ ತಿಳಿಯಿರಿ.

ಅಗ್ನಿಪಥ್ ನೇಮಕಾತಿ ಯೋಜನೆಗೆ ವಿರೋಧವೇಕೆ?
* ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಆಯ್ಕೆ ಆಗುವ ಉದ್ಯೋಗಿಗಳು ನಾಲ್ಕು ವರ್ಷಗಳ ತಾತ್ಕಾಲಿಕ ಸೇವಾವಧಿಯನ್ನು ಹೊಂದಿರುತ್ತಾರೆ.
* ನಾಲ್ಕು ವರ್ಷಗಳ ಸೇವಾವಧಿ ನಂತರದಲ್ಲಿ ಶೇ.75ರಷ್ಟು ಉದ್ಯೋಗಿಗಳು ಕಡ್ಡಾಯ ನಿವೃತ್ತಿ ಹೊಂದುತ್ತಾರೆ.
* ಈ ನಾಲ್ಕು ವರ್ಷಗಳ ಸೇವಾವಧಿಯಲ್ಲಿ 6 ತಿಂಗಳ ತರಬೇತಿ ಅವಧಿ ಮತ್ತು ರಜೆ ಅವಧಿಯೂ ಸೇರಿರುತ್ತದೆ.
* ನಾಲ್ಕು ವರ್ಷಗಳ ಸೇವಾವಧಿ ನಂತರದಲ್ಲಿ ಶೇ.25ರಷ್ಟು ಯೋಧರನ್ನು ಮಾತ್ರ ಸೇನೆಗೆ ಶಾಶ್ವತವಾಗಿ ಸೇರಿಸಿಕೊಳ್ಳಲಾಗುವುದು.
* ತಾತ್ಕಾಲಿಕ ಸೇವಾವಧಿ ನಂತರದಲ್ಲಿ ನಿವೃತ್ತಿ ಹೊಂದುವ ಶೇ.75ರಷ್ಟು ಯೋಧರಿಗೆ ಪಿಂಚಣಿ ಇರುವುದಿಲ್ಲ.
* ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯೋಧರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಎನ್ನುವುದೇ ಪ್ರತಿಭಟನಾಕಾರರ ವಾದ.

"ಮೂರೂವರೆ ವರ್ಷದಲ್ಲಿ ದೇಶಸೇವೆ ಹೇಗೆ ಸಾಧ್ಯವಾಗುತ್ತೆ?"
"ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಯೋಧರಲ್ಲಿ ಶೇ.25ರಷ್ಟು ಜನರನ್ನು ಮಾತ್ರ ಶಾಶ್ವತವಾಗಿ ಸೇನೆಗೆ ನೇಮಿಸಿಕೊಳ್ಳಲಾಗುತ್ತದೆ. ಆದರೆ ಉಳಿದ ಶೇ.75ರಷ್ಟು ಉದ್ಯೋಗಿಗಳು ಬೀದಿಗೆ ಬರಬೇಕಾಗುತ್ತದೆ. ನಾಲ್ಕು ವರ್ಷಗಳ ತಾತ್ಕಾಲಿಕ ನೇಮಕಾತಿಯಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿರುತ್ತದೆ. ಹೀಗೆ ಇರುವಾಗ ಕೇವಲ ಮೂರೂವರೆ ವರ್ಷದಲ್ಲಿ ಹೇಗೆ ತಾನೇ ದೇಶ ಸೇವೆ ಮಾಡುವುದಕ್ಕೆ ಸಾಧ್ಯ," ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದ್ದಾರೆ.
"ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳಲು ನಾವು ಶ್ರಮಿಸುತ್ತೇವೆ. ತಿಂಗಳ ತರಬೇತಿ ಮತ್ತು ರಜೆಯೊಂದಿಗೆ 4 ವರ್ಷಗಳವರೆಗೆ ಸೇವೆ ಹೇಗೆ ಇರುತ್ತದೆ? ಕೇವಲ 3 ವರ್ಷಗಳ ತರಬೇತಿ ಪಡೆದ ನಂತರ ನಾವು ರಾಷ್ಟ್ರವನ್ನು ಹೇಗೆ ರಕ್ಷಿಸುತ್ತೇವೆ? ಈ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು," ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಉದ್ಯೋಗ ಆಕಾಂಕ್ಷಿಗಳ ಬೇಡಿಕೆಯೇನು?
* ಅಗ್ನಿಪಥ್ ಯೋಜನೆಯು ನೇಮಕಗೊಂಡ ಸೈನಿಕರಲ್ಲಿ ಕೇವಲ ಶೇ.25ರಷ್ಟು ಸೈನಿಕರನ್ನು ಪೂರ್ಣ ಅವಧಿಗೆ ಉಳಿಸಿಕೊಳ್ಳುವುದರ ಬದಲಿಗೆ ಎಲ್ಲಾ ಯೋಧರನ್ನು ಶಾಶ್ವತವಾಗಿ ಸೇವೆಯಲ್ಲಿ ಉಳಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.
* ಈ ಯೋಜನೆಯು ನಾಲ್ಕು ವರ್ಷಗಳವರೆಗೆ ಮಾತ್ರ ಉದ್ಯೋಗವನ್ನು ನೀಡುತ್ತದೆ, ಅಲ್ಲದೇ ಉದ್ಯೋಗ ಭದ್ರತೆ ಮತ್ತು ಪಿಂಚಣಿ ಬಗ್ಗೆ ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ.
* ಭಾರತೀಯ ಸೇನಾ ನೇಮಕಾತಿಗಾಗಿ ಬಾಕಿ ಉಳಿದಿರುವ ಲಿಖಿತ ಪರೀಕ್ಷೆಯನ್ನು ನಡೆಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದ್ದರಿಂದ ಹಲವರು ಅಗ್ನಿಪಥ್ ಯೋಜನೆ ಹಿಂಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ.
* ಅಗ್ನಿಪಥ್ ಯೋಜನೆಯ ಮೂಲಕ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಉದ್ಯೋಗಾಕಾಂಕ್ಷಿಗಳು ವಯಸ್ಸಿನ ಮಿತಿಯ ಸಮಸ್ಯೆಯನ್ನು ಸಹ ಸೂಚಿಸಿದ್ದಾರೆ.
* ರಕ್ಷಣಾ ಉದ್ಯೋಗಾಕಾಂಕ್ಷಿಗಳು ಅಗ್ನಿಪಥ್ ಯೋಜನೆಯ ಮೂಲಕ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಸಮಯ ಮಿತಿಯನ್ನು ನಾಲ್ಕು ವರ್ಷಗಳಿಗೆ ನಿಗದಿಪಡಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಗ್ನಿಪಥ್ ಯೋಜನೆಯಲ್ಲಿ ಉಲ್ಲೇಖ ಆಗಿರುವುದು ಏನು?
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.











Click it and Unblock the Notifications