ಲೋಕ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನಾಗಬಹುದು?
Recommended Video
ಪ್ರಧಾನಿ ಗದ್ದುಗೆಗಾಗಿ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕರ್ನಾಟಕದ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಎಲ್ಲ ಲಕ್ಷಣಗಳು ಇದೀಗ ಕಂಡು ಬರುತ್ತಿದೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಮತ್ತು ವಿಪಕ್ಷಗಳು ನರೇಂದ್ರಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇಬೇಕೆಂಬ ಹಠತೊಟ್ಟಿದ್ದರೂ ಲೋಕಸಭಾ ಚುನಾವಣೆ ವೇಳೆ ಈ ಒಗ್ಗಟ್ಟು ಅಷ್ಟೊಂದಾಗಿ ಕಂಡು ಬಂದಿಲ್ಲ. ಬಹುಶಃ ಫಲಿತಾಂಶದ ನಂತರ ಏನಾಗುತ್ತೋ ಗೊತ್ತಿಲ್ಲ. ಆದರೆ ಕರ್ನಾಟಕದ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಯಂತು ಕಂಡು ಬರುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಲೋಕಸಭಾ ಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಎದುರಿಸುವ ಸಂಕಲ್ಪ ಮಾಡಿದ್ದರು. ಅದು ಎಷ್ಟರ ಮಟ್ಟಿಗೆ ಯಶಸ್ಸಾಯಿತೋ? ಆಗಿತ್ತಾ? ಎಂಬುದು ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಕುರಿತಂತೆ ಹೇಳಿಕೆಗಳು ಹರಿದಾಡುತ್ತಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
ಒಂದೆಡೆ ಸಿದ್ದರಾಮಯ್ಯ ಅವರ ಹಿಂಬಾಲಕರು ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಮಾತನ್ನು ತೇಲಿ ಬಿಟ್ಟಿರುವುದು ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಚಲಿತರನ್ನಾಗುವಂತೆ ಮಾಡಿದೆ. ಈ ಸಂಬಂಧ ಚರ್ಚೆ, ಸ್ಪಷ್ಟನೆಗಳು ಹೊರಬಂದರೂ ಕಾಂಗ್ರೆಸ್ ವಲಯದಲ್ಲಿ ಅಂತಹದೊಂದು ಬಯಕೆಗಳು ಇದ್ದೇ ಇದೆ.
ಕಾಂಗ್ರೆಸ್ಗಿಂತಲೂ ಕಡಿಮೆ ಸ್ಥಾನ ಪಡೆದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರೂ ಕಾಂಗ್ರೆಸ್ನವರನ್ನು ಮುಖ್ಯಮಂತ್ರಿಗಳು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವೂ ಇತ್ತು. ಹೀಗಾಗಿಯೇ ಇಂತಹದೊಂದು ಬೆಳವಣಿಗೆಯಾಯಿತಾ? ಇದು ಕುಮಾರಸ್ವಾಮಿ ಅವರನ್ನು ಹೆದರಿಸಲು ಮಾಡಿದ ತಂತ್ರನಾ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಸಿದ್ದರಾಮಯ್ಯ ಬೆಂಬಲಿಗರಿಗೆ ಟಾಂಗ್ ಕೊಟ್ಟ ಸಿಎಂ
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ನಾಯಕರಿಗೆ ಇರಿಸು-ಮುರಿಸನ್ನುಂಟು ಮಾಡಿದ್ದ ಸಿದ್ದರಾಮಯ್ಯ ಬೆಂಬಲಿಗರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಟಾಂಗ್ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಮುಖ್ಯಮಂತ್ರಿಯಾಗಲು ಅರ್ಹತೆ ಇರುವ ನಾಯಕರೇ ಇಲ್ಲ ಎಂಬಂತೆ ಮಾತನಾಡುತ್ತಿದ್ದವರಿಗೆ ಮಲ್ಲಿಕಾರ್ಜುನಖರ್ಗೆ ಅವರ ಹೆಸರನ್ನು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರ ಬೆಂಬಲಿಗರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಕುಮಾರಸ್ವಾಮಿ ಮಾಡಿದ ತಂತ್ರ
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬಂದಿತ್ತಾದರೂ ಬಳಿಕ ಅದು ತಣ್ಣಗಾಗಿತ್ತು. ಈಗ ರಾಷ್ಟ್ರ ರಾಜಕಾರಣದಲ್ಲಿರುವ ಖರ್ಗೆ ಅವರ ಹೆಸರನ್ನು ಎಳೆದು ತಂದಿರುವುದೇಕೆ ಎಂಬುದೇ ಅಚ್ಚರಿಯನ್ನುಂಟು ಮಾಡಿದೆ. ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಅವರ ಬೆಂಬಲಿಗರ ಬಾಯಿ ಮುಚ್ಚಿಸಲು ಇರುವ ಒಂದೇ ಒಂದು ತಂತ್ರವೆಂದರೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಎಳೆದು ತರುವುದು. ಅದನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆ.

ಸಿಎಂ ಗಾದಿ ಪಡೆದುಕೊಳ್ಳಲು ಪ್ರಯತ್ನ
ಹಾಗೆ ನೋಡಿದರೆ ಚುನಾವಣೆ ಸಂದರ್ಭ ಇಂತಹ ಹೇಳಿಕೆಗಳು ಕೇಳಿ ಬರುತ್ತವೆ. ಬಳಿಕ ಎಲ್ಲರೂ ಮರೆಯುತ್ತಾರೆ ಎಂಬುದು ಖರ್ಗೆಗೂ ಗೊತ್ತಿದೆ. ಆದರೆ ಸ್ವತಃ ಕುಮಾರಸ್ವಾಮಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿರುವುದರಿಂದ ಒಂದಷ್ಟು ಮಹತ್ವ ಬಂದಂತಾಗಿದೆ. ಮೇಲ್ನೋಟಕ್ಕೆ ಈ ಹೇಳಿಕೆ, ಪ್ರತಿ ಹೇಳಿಕೆಗಳೆಲ್ಲವೂ ಸಿಎಂ ಗಾದಿ ಉಳಿಸಿಕೊಳ್ಳಲು, ಪಡೆದುಕೊಳ್ಳಲು ನಡೆಯುತ್ತಿರುವ ಮುಸುಕಿನ ಗುದ್ದಾಟದಂತೆ ಕಂಡು ಬರುತ್ತಿರುವುದಂತು ಸತ್ಯ.

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ
ಮೇಲಿಂದ ಮೇಲೆ ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ಸಹನೆ ಕಳೆದುಕೊಂಡ ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ಇತರ ನಾಯಕರು ಬಹಿರಂಗ ವಾಕ್ಸಮರವನ್ನೇ ನಡೆಸಿದ್ದನ್ನು ನಾವು ನೋಡಿದ್ದೇವೆ. ಇದೆಲ್ಲವನ್ನು ಗಮನಿಸಿದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತಿದೆ. ಹೀಗಾಗಿಯೇ ಲೋಕಸಭಾ ಚುನಾವಣಾ ಫಲಿತಾಂಶ ಮೈತ್ರಿ ಅಭ್ಯರ್ಥಿಗಳಿಗೆ ವ್ಯತಿರಿಕ್ತವಾಗಿ ಬಂದರೆ ಒಳಗಿದ್ದ ಅಸಮಾಧಾನಗಳು ಹೊರಗೆ ಬರಲಿದೆ. ಅದು ತಾರಕಕ್ಕೇರಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಗೂ ದಾರಿ ಮಾಡಿಕೊಟ್ಟರೂ ಅಚ್ಚರಿ ಪಡುವಂತಿಲ್ಲ. ಸದ್ಯಕ್ಕೆ ಏನಾಗಬಹುದೆಂದನ್ನು ಕಾಯುವುದಷ್ಟೆ ನಮ್ಮ ಮುಂದಿರೋದು.












Click it and Unblock the Notifications