ಯಾರೂ ಗ್ರಹಿಸದ ತೀವ್ರ ಸಂದಿಗ್ದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿ!
ಮತ್ತೆ 150ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ಅಧಿಕಾರಕ್ಕೆ ಬರುತ್ತೇವೆ ಎನ್ನುವ ರಾಜ್ಯ ಬಿಜೆಪಿ ನಾಯಕರ ವಿಶ್ವಾಸದ ಮಾತಿಗೆ ಪಕ್ಷದ ಕಾರ್ಯಕರ್ತರಿಬ್ಬರ ಕಗ್ಗೊಲೆ ಅಡ್ಡಿಯಾಗುವ ಸಾಧ್ಯತೆಯಿದೆಯೇ?. ಯಾಕೆ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ?.
ಶಿವಮೊಗ್ಗದದಲ್ಲಿ ಹರ್ಷನ ಕೊಲೆಯ ನಂತರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಏನು ಪ್ರಯೋಜನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ನಂತರ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪಕ್ಷಕ್ಕೆ ತೀವ್ರ ಹಿನ್ನಡೆಯನ್ನು ತಂದೊಡ್ಡಿದೆ.
ಅಕ್ಷರಶಃ ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ತಮ್ಮದೇ ಪಕ್ಷದ ನಾಯಕರ ವಿರುದ್ದ ತಿರುಗಿ ಬೀಳುತ್ತಿದ್ದಾರೆ. ಈ ರೀತಿಯ ಸನ್ನಿವೇಶ ಎದುರಾಗಬಹುದು? ಎನ್ನುವ ಯಾವ ನಿರೀಕ್ಷೆಯಲ್ಲೂ ಇರದ ಬಿಜೆಪಿ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಕಾರ್ಯಕರ್ತರೇ ಪಕ್ಷದ ಬೇರು ಎಂದು ಹೇಳಿಕೊಂಡು ಬರುತ್ತಿದ್ದ ನಾಯಕರಿಗೆ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಮುಖಂಡರ ಸಾಮೂಹಿಕ ರಾಜೀನಾಮೆ ವರಿಷ್ಠರ ನಿದ್ದೆಗೆಡಿಸಿದೆ.

ಎಬಿವಿಪಿ ಕಾರ್ಯಕರ್ತರಿಂದ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ
ಬಿಜೆಪಿ ಮುಖಂಡ ಪ್ರವೀಣ್ ಹಂತಕರನ್ನು ರಾಜ್ಯ ಪೊಲೀಸರಿಗೆ ಸೆರೆಹಿಡಿಯಲು ಇನ್ನೂ ಸಾಧ್ಯವಾಗದೇ ಇರುವುದು ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಆಗುತ್ತಿರುವ ಮತ್ತೊಂದು ಹಿನ್ನಡೆ. ತಮ್ಮದೇ ಸರಕಾರದ ವಿರುದ್ದ ತಮ್ಮದೇ ಪಕ್ಷದ ಕಾರ್ಯಕರ್ತರು ರಸ್ತೆಗಿಳಿದಿರುವುದರಿಂದ ಕೇಂದ್ರದ ನಾಯಕರು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿದ್ದಾರೆ. ಪಕ್ಷದ ವಿದ್ಯಾರ್ಥಿ ಘಟಕ ಎಬಿವಿಪಿ ಸಂಘಟನೆಯ ಕಾರ್ಯಕರ್ತರೇ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಿರುವುದು ಬಿಜೆಪಿ ವಿರುದ್ದ ಕಾರ್ಯಕರ್ತರ ಸಿಟ್ಟು ಎಷ್ಟಿದೆ? ಎನ್ನುವುದಕ್ಕೆ ಒಂದು ಉದಾಹರಣೆಯಾಗಬಲ್ಲದು.

60 ಸ್ಥಾನ ಗೆಲ್ಲುವುದು ಕಷ್ಟ ಎನ್ನುವುದು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಮಾತು
ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಕೇಂದ್ರದ ನಾಯಕರು ಸೂಚಿಸಿದ್ದರೆ, ರಾಜ್ಯದಲ್ಲಿ ಆಗುತ್ತಿರುವುದು ಇನ್ನೊಂದು. ಈಗಿನ ಪರಿಸ್ಥಿತಿ ಚುನಾವಣೆಯ ವೇಳೆಯೂ ಮುಂದುವರಿದರೆ, ಬಿಜೆಪಿ ಅರವತ್ತು ಸ್ಥಾನವನ್ನು ಗೆಲ್ಲುವುದು ಕಷ್ಟ ಎನ್ನುವುದು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿರುವ ಮಾತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ಅಶಾಂತಿ ಬಿಜೆಪಿ ಪಾಲಿಗೆ ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ. ಯಾಕೆಂದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ 13 ಕ್ಷೇತ್ರಗಳ ಪೈಕಿ 12ರಲ್ಲಿ ಇಲ್ಲಿ ಗೆಲುವು ಸಾಧಿಸಿತ್ತು.

ಪ್ರವೀಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದ ಕಟೀಲ್
ಪ್ರವೀಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾರ್ಯಕರ್ತರು ಘೇರಾವ್ ಹಾಕಿದ ರೀತಿ ರಾಜ್ಯ ನಾಯಕರನ್ನು ಬೆಚ್ಚಿಬೀಳಿಸಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಬರೋಬ್ಬರಿ ಮಧ್ಯರಾತ್ರಿ ವರ್ಷಾಚರಣೆ ಸಂಭ್ರಮವನ್ನು ರದ್ದುಗೊಳಿಸುವಷ್ಟು. ಸಂಘ ಪರಿವಾರದ ಹಲವು ಮುಖಂಡರು ಬೊಮ್ಮಾಯಿ ಸರಕಾರದ ವೈಫಲ್ಯತೆಯ ಬಗ್ಗೆ ಬಿಜೆಪಿ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ಎದುರಾಗುತ್ತಿರುವ ಪ್ರತಿಕೂಲ ಸನ್ನಿವೇಶ
ಕಾರ್ಯಕರ್ತರು ರಸ್ತೆಗಿಳಿದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದರೆ, ಮುಖಂಡರ ಮಕ್ಕಳು ಐಷಾರಾಮಿ ಜೀವನ್ನು ನಡೆಸುತ್ತಿದ್ದಾರೆ ಎನ್ನುವ ಕೂಗು ಬಿಜೆಪಿಯಲ್ಲಿ ಹೆಚ್ಚಾಗುತ್ತಿರುವುದು ಚುನಾವಣಾ ವರ್ಷದಲ್ಲಿ ಪಕ್ಷಕ್ಕಾಗುತ್ತಿರುವ ಭಾರೀ ಹೊಡೆತ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸರಕಾರ ತುರ್ತಾಗಿ ಮೃತ ಪಟ್ಟ ಕುಟುಂಬಕ್ಕೆ ಲಕ್ಷಲಕ್ಷ ದುಡ್ಡು, ನೌಕರಿ ಕೊಟ್ಟರೂ, ಬಿಜೆಪಿಯಲ್ಲಿ ನಮಗೆ ಭದ್ರತೆಯಿಲ್ಲ ಎನ್ನುವ ಭಯ ಕಾರ್ಯಕರ್ತರು/ ಮುಖಂಡರಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ, ಪ್ರತಿಕೂಲ ಸನ್ನಿವೇಶವನ್ನು ಬಿಜೆಪಿ ನಾಯಕರು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವುದು ಪ್ರಶ್ನೆ.












Click it and Unblock the Notifications