Get Updates
Get notified of breaking news, exclusive insights, and must-see stories!

ಮಹಂತೇಗೌಡರ ಮನೆಯಲ್ಲೇ ಮನಸು ಆಗಾಗ ಸುಳಿದಾಡಿ ಬರುತ್ತದೆ

ಅಭಿಮಾನಿ ಓದುಗ ಬಳಗಕ್ಕೆ ನಮಸ್ಕಾರ. ನನ್ನ ಬಹುದಿನದ ಸ್ಮರಣೆಯ ಘಟನೆ ಇದು. ಆಗ ನಾನು ಹಾಸನದ ಆಕಾಶವಾಣಿ ಕೇಂದ್ದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಸುಮಾರು ಹದಿನೈದು ವರುಷಗಳ ಹಿಂದಿನ ಮಾತು.

ಮಲೆನಾಡಿನ ಬೆರಗಿನ ಸೆರಗಾದ ಹಾಸನದ ಜನ ಮಹಾವಿಶ್ವಾಸಿಗಳು. ಅವರ ಅಭಿರುಚಿಯ ಮಟ್ಟವೂ ಅಷ್ಟೇ ಎತ್ತರ. ರೇಡಿಯೋ ಅವರ ಪ್ರಿಯ ಸಂಗಾತಿ. ಆಗಾಗ ವಿದ್ಯುಚ್ಛಕ್ತಿ ಕಡಿತದ ತೊಂದರೆಯೂ ಈ ಕೇಳ್ಮೆಯ ಹವ್ಯಾಸ ಪೋಷಿಸುವುದಕ್ಕೆ ಕಾರಣ. ಅನೇಕ ಕಾರ್ಯಕ್ರಮಗಳನ್ನು ಅರ್ಪಿಸುತ್ತಿದ್ದ ನಾವೆಲ್ಲ ಅವರ ಮನೆಮಂದಿಯಾಗಿದ್ದೆವು. ಅಷ್ಟು ಪ್ರೀತಿ.

ನಾನು ನನ್ನ ಸಹೋದ್ಯೋಗಿಗಳು ಪರವೂರಿಗೂ ಹೋಗಿ ಅಲ್ಲಿ ವಿಶೇಷವಾಗಿ ಕಂಡವರನ್ನು ಧ್ವನಿಮುದ್ರಿಸಿ ಪ್ರಸಾರ ಮಾಡುತ್ತಿದ್ದೆವು. ಹೀಗೆ ಕೇಳುಗರ ಭಾಗವಿಸುವಿಕೆಯಿಂದಾಗಿ ನಮ್ಮ ಮಾಧ್ಯಮ ಅವರಿಗೆ ಹತ್ತಿರವಾಗಿತ್ತು. ತಾಂತ್ರಿಕ ದೃಷ್ಟಿಯಿಂದಲೂ ಅದು ಕರ್ನಾಟಕದ ಮೊದಲ ಈಒ ಕೇಂದ್ರ.

ರಾಜ್ಯದ‌ ನಾನಾ ಮೂಲೆಗಳಲ್ಲಿರುವ ಪ್ರತಿಭಾವಂತರನ್ನು ಪೋನ್ ನಲ್ಲೇ ಸಂದರ್ಶನ ಮಾಡಿ ಕಾರ್ಯಕ್ರಮ ಕೇಳಿಸುತ್ತಿದ್ದೆವು. ಹಾಗೆ ಹೊರ ಪ್ರವಾಸ ಧ್ವನಿಮುದ್ರಣ ಕಾರ್ಯಕ್ರಮಕ್ಕಾಗಿ ಸಕಲೇಶಪುರದ ಸಮೀಪದ ಉದ್ಯಾವರಕ್ಕೆ ಭೇಟಿ‌ ನೀಡಿದ ಸಂದರ್ಭ. ವಿಶೇಷವಾಗಿ ಊರಿನ ಹಿರಿಯಜ್ಜ 96ರ ಪ್ರಾಯದ ಮಹಂತೇಗೌಡರನ್ನು ಮಾತನಾಡಿಸುವ ಪರಿಚಯಿಸುವ ಅವಕಾಶ.

A beautiful message about humanity by village elderly man

ಉದ್ಯಾವರ ಪ್ರಕೃತಿಮಾತೆ ಬಿಡುವಾಗಿ ಹರಸಿರುವ ಬೆಚ್ಚನೆಯ ಹಸಿರು ಕವಚ ತೊಟ್ಟ ದಟ್ಟ ಕಾನನದ ಪುಟ್ಟ ಊರು. ಇಲ್ಲಿದೆ ಊರಿಗೆ ಉಪಕಾರಿಯಾಗಿ ಬಾಳಿ ಬದುಕಿದ ಮಹಂತೇಗೌಡರ ವಿಶಾಲ ವಾಸಸ್ಥಳ. ಈ ನಿಲಯಕ್ಕೆ ಸುಮಾರು ನಾನೂರು ವರ್ಷ ಕಾಲದ ಇತಿಹಾಸ. ರವಿಚಂದ್ರನ್ ಅವರ "ಸಿಪಾಯಿ" ಸಿನಿಮಾದಲ್ಲಿ ಈ ಮನೆಯನ್ನು ಚಿತ್ರೀಕರಿಸಲಾಗಿದೆಯಂತೆ.

ವಾಸ್ತುಶಾಸ್ರ್ರದ ಪ್ರಕಾರ ಮೂರು ತಲೆಮಾರಿನ ನಂತರ ಒಂದೇ ಬಾಗಿಲಲ್ಲಿ ನಡೆದಾಡುವುದು ಶ್ರೇಯಸ್ಕರವಲ್ಲವೆಂದು ಆ ಬಾಗಿಲು ಮಾತ್ರ ಸ್ಥಳಾಂತರಗೊಂಡಿದೆ. ವಿಶಾಲವಾದ ಕಂಬಗಳನ್ನು ಹೊಂದಿರುವ ಆ ಶತಮಾನದ ತೊಟ್ಟಿಮನೆ. ಪ್ರವೇಶದ ಅಂಗಳವೇ ಸಾಕಷ್ಟು ದೊಡ್ಡದು. ಗೇಟಿನಿಂದ ಮನೆಮುಟ್ಟಲೇ ಅರ್ಧ ಕಿಲೋಮೀಟರ್ ನಡೆಯಬೇಕು. ತುಂಬಿದ ಮನೆ.

ಗೌಡರ ಪತ್ನಿ ಕಾಲವಾಗಿದ್ದರು. ಸೊಸೆಯದೇ ಆಡಳಿತವಿರಬೇಕು. ನಾವು ಪವರ್ ಪಾಯಿಂಟ್ ಹುಡುಕಿ ರೆಕಾರ್ಡಿಂಗ್ ಆರಂಭಿಸುವ ಹೊತ್ತಿಗೆ ನಮಗೆಲ್ಲ ಸಣ್ಣ ಯಜಮಾನ್ತಿಯಿಂದ ಟೀ ಸರಬರಾಜಾಯಿತು. ಹಾಗೆ ಕೈಯಲ್ಲಿನ ಮೈಕ್ ಸರಿ‌ ಮಾಡಿಕೊಳ್ಳುತ್ತ ಮನೆಯ ಗೋಡೆಯನ್ನು ಗಮನಿಸಿದೆ. ಅಲ್ಲಿ ಮಹಂತೇಗೌಡರು ಊರಿಗೆ ನಾನಾ ಸಂಗತಿಗಳಿಗಾಗಿ ಭೇಟಿಯಿತ್ತ ಅನೇಕ ಗಣ್ಯರೊಡನೆ ತೆಗೆಸಿಕೊಂಡಿರುವ ಪಟಗಳು ತೂಗಾಡುತ್ತಿದ್ದವು.

ಅಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧಿ, ಸಾಹಿತಿ ಕುವೆಂಪು ಹೀಗೆ ಅತಿಮಾನ್ಯರ ಚಿತ್ರಗಳು ವಿಜೃಂಭಿಸುತ್ತಿದ್ದವು. ಸಂದರ್ಶನದ ವೇಳೆ ನನಗೆ ತಿಳಿದುಬಂದ ವಿಚಾರವೆಂದರೆ ಅಧಿಕಾರ ಸ್ಥಾನದಲ್ಲಿರುವ ಯಾವ ಪ್ರಮುಖರೇ ತಮ್ಮ ಊರಿಗೆ ಬಂದರೂ ಮಹಂತೇಗೌಡರು ಖುದ್ದಾಗಿ ಹಾಜರಾಗಿ, ಅವರ ಕೊರಳಿಗೊಂದು ಏಲಕ್ಕಿ ಹಾರ ಹಾಕಿ, ಕೈಗೆ ನಿಂಬೆಹಣ್ಣು ನೀಡಿ ಗೌರವ ಸಮರ್ಪಣೆ ಮಾಡಿ ಅವರನ್ನು ಬರಮಾಡಿಕೊಳ್ಳುತ್ತಿದ್ದರು ಹಾಗೂ ಅವರು‌ ಹೊರಡುವಾಗ ಅವರಿಗೊಂದು ಮನವಿ ಪತ್ರವನ್ನು‌ ತಪ್ಪದೇ ನೀಡುತ್ತಿದ್ದರಂತೆ.

ಅದರಲ್ಲಿ ಅವರ ಇಲಾಖೆಯಿಂದ ಊರಿಗೆ ಆಗಬೇಕಾದ ಉಪಕಾರದ ಕೆಲಸದ ಅಹವಾಲಿರುತ್ತಿತ್ತು. ಜೊತೆಯಲ್ಲೇ ತಾವು ಈ ಪುಣ್ಯಕಾರ್ಯದ ಅನುಷ್ಠಾನದಲ್ಲಿ ಸರ್ಕಾರದೊಡನೆ ಆರ್ಥಿಕವಾಗಿ ಕೈಜೋಡಿಸುವ ವಿನಂತಿಯೂ ಅಡಕವಾಗಿರುವುದು. ಮಹಂತೇಗೌಡರ ಇಂತಹ ಕಾಳಜಿಯಿಂದ ಊರಿಗೆ ಡಾಂಬರು ರಸ್ತೆ, ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲು, ಜ್ಯೂನಿಯರ್ ಕಾಲೇಜು, ಪ್ರಾಥಮಿಕ ಆರೋಗ್ಯ‌ಕೇಂದ್ರ ಇಂತಹ ಹಲವಾರು ಮೂಲಭೂತ ಸೌಕರ್ಯಗಳು ದೊರೆತವು.

ನಮ್ಮ ಮಾತುಕತೆಯಲ್ಲಿ ಗೌಡರು ಈ ವಿಷಯಗಳನ್ನು ತಮ್ಮ ಸಾಧನೆಯೆಂದು ಬಣ್ಣಿಸದೆ ವಿನಮ್ರವಾಗಿ ವಿವರಿಸುವಾಗ ನಾನು ಅವರ ಸನ್ನಿಧಿಯಲ್ಲಿ ಒಂದು ಅಲೌಕಿಕ ಆನಂದ ಅನುಭವಿಸುತ್ತಿದ್ದೆ. ಸಂದರ್ಶನ ಮುಗಿದ ನಂತರ ನಮ್ಮ ಕರಾರುಪತ್ರಕ್ಕೆ ಸಹಿ ಪಡೆದುಕೊಂಡೆ. ಸರ್ಕಾರದ ಪರವಾಗಿ ಅವರಿಗೆ ಗೌರವಧನ ಕಳಿಸುವ ಜವಾಬ್ದಾರಿ‌, ಹೆಮ್ಮೆ ನನ್ನದಾಗಿತ್ತು. ನಾವು ಅವರಿಗೆ ವಂದಿಸಿ ಹೊರಟೆವು.

ಮೊದಲೇ ಹೇಳಿದಂತೆ ನಮ್ಮ ವಾಹನ ಮುಟ್ಟಲು ಸುಮಾರು ದೂರ ನಡೆಯಬೇಕಿತ್ತು. ನಮ್ಮ ತಂಡದವರು ರೆಕಾರ್ಡಿಂಗ್ ಉಪಕರಣವನ್ನು ಜೀಪ್ ನಲ್ಲಿಟ್ಟು ಇನ್ನೇನು ಹೊರಡಬೇಕು ನಮ್ಮ ಡ್ರೈವರ್ ಗೆ ಕನ್ನಡಿಯಲ್ಲಿ ಯಾರೋ ಓಡಿಬರುತ್ತಿರುವ ಬಿಂಬ ಕಾಣಿಸಿತು. "ಮೇಡಂ ಒಂದು ‌ನಿಮಿಷ, ಯಾರೋ ಅವಸರವಾಗಿ ಬರ್ತಿದಾರೆ" ಎಂದರು.

ನಾನು ವಾಹನದಿಂದ ಇಳಿದುಬಿಟ್ಟೆ. ಹಿಂತಿರುಗಿ ನೋಡಿದಾಗ ಕಂಡವರು ಮಹಂತೇಗೌಡರು. ಒಂದು ವೇಳೆ ಅವರ ಮನೆಯಲ್ಲಿ ಏನಾದರೂ ಮರೆತು ಬಂದೆವಾ ಎಂದರೆ ಏನೂ ನೆನಪಿಗೆ ಬಾರಲಿಲ್ಲ. ಈ ಹೊಯ್ದಾಟದಲ್ಲಿರುವಾಗಲೇ ಗೌಡರು ಬಳಿ ಬಂದರು. ಬಂದವರೇ ತಮ್ಮ‌ ಜೇಬಿಗೆ ಕೈ ಹಾಕಿ ತಮ್ಮ ಮುಷ್ಠಿಯ ತುಂಬ ‌ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ‌ನನ್ನ ಅಂಗೈ ತೆರೆದು ತುಂಬಿದರು. ನಾನು ಅವಾಕ್ಕಾದೆ ಅವರ ಪ್ರೀತಿ ನೋಡಿ.

ಅವರು ನಾವು ಅವರಿಗೆ ಸಿಕ್ಕ ತೃಪ್ತಭಾವದಲ್ಲಿ ಕೈ ಮುಗಿದರು. ನನ್ನ ಹೃದಯ ಕರಗಿ ಕಂಗಳು ಮಂಜಾದವು. ನಮ್ಮ ನಡುವೆ ಮಾತು ಮೂಕವಾಗಿತ್ತು. ಅವರ ಔದಾರ್ಯಕ್ಕೆ ನಾ ಶರಣಾದೆ. ನಂತರದ ನಮ್ಮ ಮರುಪ್ರಯಾಣದಲ್ಲಿ ನನ್ನ ವಿಶ್ಲೇಷಣೆ ಭಿನ್ನನೆಲೆಯಲ್ಲಿ ಸಾಗಿತ್ತು. ಗೌಡರದು ಮಡದಿಯಿಲ್ಲದ ಮನೆ. ಅವರಿಗೆ‌ ನಮ್ಮ ತಂಡವನ್ನು‌ ಉಪಚರಿಸುವ ಹೆಬ್ಬಯಕೆ ಇದ್ದಿರಬೇಕು. ಬಹುಶಃ ಸೊಸೆಗೆ ಹೇಳಿ ಮಾಡಿಸುವ ಗಟ್ಟಿತನ ಇಲ್ಲದಿರಬಹುದು. ಅದಕ್ಕಾಗಿಯೇ ಆ ಮಹಾನುಭಾವರು ನಮಗೆ ತಮ್ಮ ಸ್ವಾತಂತ್ರ್ಯದಲ್ಲಿರುವ ಒಣಹಣ್ಣುಗಳ ಉಪಚಾರಕ್ಕೆ ಸಜ್ಜಾಗಿ ಓಡಿಬಂದರೇನೋ. ನಾವು ನಿಷ್ಕ್ರಮಿಸಿಬಿಟ್ಟೆವೇನೋ ಎಂಬ ದುಗುಡ. ಹಾಗಾಗದೆ ನಾವು ಸಿಕ್ಕ ಖುಷಿ ಅವರ‌ ಮೊಗದಲ್ಲಿ ತಾಂಡವವಾಡುತ್ತಿದ್ದ ಕಳೆ ನಮಗೆ ವಿವರಿಸಿತು.

ಇಂದಿಗೂ ಮಹಂತೇಗೌಡರು ಕರದ ತುಂಬ ಆದರಪೂರ್ವಕವಾಗಿ ಒಣಹಣ್ಣುಗಳ ಸರಕು ಹಿಡಿದು ಧಾವಿಸಿ ಬಂದ ಚಿತ್ರ ನನ್ನ ಚಿತ್ತಪಟಲದಲ್ಲಿ, ಭಾವಕೋಶದಲ್ಲಿ ಬೆರೆತುಹೋಗಿದೆ. ನಿಮಗಾಗಿ ಅದರ ನಿವೇದನೆಯ ಪ್ರಯತ್ನವಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+