ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಜಗದ್ಧಾತ್ರಿ ಎಂಟ್ರಿ: ಮುಕ್ತಾಯವಾಗಲಿದೆ ಕನ್ನಡದ ಈ ಪ್ರಮುಖ ಧಾರಾವಾಹಿ
ಕನ್ನಡದ ಪ್ರಮುಖ ಸೀರಿಯಲ್ವೊಂದು ಮುಕ್ತಾಯವಾಗುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರವಾದ ಚರ್ಚೆ ಶುರುವಾಗಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಜಗದ್ಧಾತ್ರಿ ಸೀರಿಯಲ್ ಪ್ರಾರಂಭವಾಗುತ್ತಿದೆ. ಹೊಸ ಸೀರಿಯಲ್ ಪ್ರಾರಂಭವಾಗುವಾಗ ಸಾಮಾನ್ಯವಾಗಿ ಹಳೆಯ ಸೀರಿಯಲ್ ಮುಕ್ತಾಯವಾಗತ್ತದೆ. ಇದೀಗ ಮೋಕ್ಷಿತಾ ಪೈ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಜಗದ್ಧಾತ್ರಿ ಪ್ರಸಾರವಾಗುವುದಕ್ಕೆ ಸಿದ್ಧವಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೂರು ಪ್ರಮುಖ ಸೀರಿಯಲ್ಗಳಲ್ಲಿ ಯಾವುದಾದರೂ ಒಂದು ಮುಕ್ತಾಯವಾಗಬಹುದು ಎನ್ನುವುದು ಪ್ರೇಕ್ಷಕರ ಲೆಕ್ಕಾಚಾರವಾಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಸೀರಿಯಲ್ಗಳು ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕೆಲವು ಪ್ರಮುಖ ಸೀರಿಯಲ್ಗಳು 900ಕ್ಕೂ ಹೆಚ್ಚು ಸಂಚಿಕೆಗಳನ್ನು ಕಂಡಿದ್ದರೆ, ಇನ್ನೂ ಕೆಲವು ಸೀರಿಯಲ್ಗಳು 1000 ದಿನಗಳನ್ನು ಪೂರೈಸಿವೆ. ಅಮೃತಧಾರೆ, ಲಕ್ಷ್ಮೀ ನಿವಾಸ ಹಾಗೂ ಕರ್ಣ ಸೀರಿಯಲ್ಗಳನ್ನು ಮುಕ್ತಾಯ ಮಾಡಿ ಎಂದು ಕೆಲವು ವೀಕ್ಷಕರು ಆಗ್ರಹಿಸುತ್ತಿದ್ದಾರೆ. ಅಮೃತಧಾರೆ ಸೀರಿಯಲ್ನಲ್ಲಿ ಬಹುತೇಕ ಕಥೆ ಮುಕ್ತಾಯವಾಗಿದೆ. ಆದರೆ ಈ ಸೀರಿಯಲ್ನಲ್ಲಿ ಬದಲಾಗಿದ್ದ ವಿನಲ್ಗಳನ್ನು ಮತ್ತೆ ವಿಲನ್ಗಳನ್ನಾಗಿ ತೋರಿಸುತ್ತಿರುವುದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿದೆ. ಈ ಸೀರಿಯಲ್ ಮುಕ್ತಾಯವಾಗುವ ಸಾಧ್ಯತೆ ಇದೆ ಎನ್ನುವುದು ತುಂಬಾ ದಿನಗಳಿಂದ ಕೇಳಿ ಬರುತ್ತಿರುವ ಮಾತು.

ಅಮೃತಧಾರೆ ಸೀರಿಯಲ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಸೀರಿಯಲ್ಗಳಲ್ಲಿ ಅಮೃತಧಾರೆ ಸೀರಿಯಲ್ ಸಹ ಒಂದು. ಅಮೃತಧಾರೆ ಸೀರಿಯಲ್ನಲ್ಲಿ ಬಹುತೇಕ ಒಂದು ಸುತ್ತು ಕಥೆ ಮುಗಿದಿದೆ. ಗೌತಮ್ - ಭೂಮಿಕಾ ಒಂದಾಗಿದ್ದು, ಗೌತಮ್ ಆಸ್ತಿ ವಾಪಸ್ ಬಂದಿದೆ. ಮಿಂಚುನೇ ಮಗಳು ಎನ್ನುವ ವಿಷಯವೂ ಗೊತ್ತಾಗಿದೆ. ಎಲ್ಲ ಸತ್ಯಗಳು ರಿವೀಲ್ ಆಗಿದ್ದು. ಜೈದೇವ್ ಬಿಟ್ಟು ಎಲ್ಲ ವಿಲನ್ಗಳು ಸಹ ಬದಲಾಗಿರುವಂತೆ ತೋರಿಸಲಾಗಿತ್ತು. ಆದರೆ ಇದೀಗ ಶಾಕುಂತಲಾ ಮತ್ತೆ ವಿಲನ್ ಆಗಿರುವಂತೆ ತೋರಿಸಲಾಗಿದೆ. ಅಮೃತಧಾರೆ ಸೀರಿಯಲ್ ಇತ್ತೀಚಿಗೆ ಹಲವು ಟ್ವಿಸ್ಟ್ಗಳಿಗೆ ಕಾರಣವಾಗಿದೆ. ಹೀಗಾಗಿ, ಈ ಸೀರಿಯಲ್ ಮುಕ್ತಾಯವಾಗಲಿದೆ ಎಂದೇ ಪ್ರೇಕ್ಷಕರು ಲೆಕ್ಕಾಚಾರ ಹಾಕಿದ್ದಾರೆ. ಒಂದೊಮ್ಮೆ ಜೈದೇವ್ಗೆ ಪಾಠ ಕಲಿಸುವ ಉದ್ದೇಶದಿಂದ ಶಾಕುಂತಲಾ ಈ ರೀತಿ ನಾಟಕವಾಡುತ್ತಿರಬಹುದು ಅಂತಲೂ ವೀಕ್ಷಕರು ಲೆಕ್ಕಾಚಾರ ಹಾಕಿದ್ದಾರೆ. ಈ ಸೀರಿಯಲ್ ಕಥೆ ಬಹುತೇಕ ಮುಕ್ತಾಯವಾಗಿದ್ದು, ಇದನ್ನು ಮುಗಿಸುವ ಸಾಧ್ಯತೆ ಇದೆ.
ಲಕ್ಷ್ಮೀ ನಿವಾಸ ಸೀರಿಯಲ್
ಇನ್ನು ಕನ್ನಡದ ಮತ್ತೊಂದು ಪ್ರಮುಖ ಸೀರಿಯಲ್ ಲಕ್ಷ್ಮೀ ನಿವಾಸ. ಈ ಸೀರಿಯಲ್ ಹಲವು ತಿರುವುಗಳಿಗೆ ಕಾರಣವಾಗಿದ್ದು, ಇದು ಸಹ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ಸೀರಿಯಲ್ನಲ್ಲಿ ಹಲವು ಪಾತ್ರಗಳು ಈಗಾಗಲೇ ಬದಲಾಗಿವೆ. ಈ ಸೀರಿಯಲ್ ಸಹ ಮುಕ್ತಾಯವಾಗಬಹುದು ಎನ್ನುವುದು ವೀಕ್ಷಕರ ಲೆಕ್ಕಾಚಾರವಾಗಿದೆ. ಆದರೆ ಈ ಸೀರಿಯಲ್ನಲ್ಲಿ ಹಲವು ತಿರುವುಗಳು ಈಗಷ್ಟೇ ಶುರುವಾಗಿರುವುದರಿಂದ ಇದು ಮುಕ್ತಾಯವಾಗುವ ಸಾಧ್ಯತೆ ಕಡಿಮೆ ಇದೆ ಅಂತಲೇ ಹೇಳಲಾಗಿದೆ.
ಕರ್ಣ - ಬ್ರಹ್ಮಗಂಟು
ಇನ್ನು ಈಚೆಗೆ ಪ್ರಾರಂಭವಾಗಿ ಅತ್ಯುತ್ತಮ ಟಿಆರ್ಪಿ ಗಳಿಸಿದ್ದ ಹಾಗೂ ಟಿಆರ್ಪಿ ಓಟದಲ್ಲಿ ಮುಂಚೂಣಿಯಲ್ಲಿರುವ ಕರ್ಣ ಸೀರಿಯಲ್ ಮುಕ್ತಾಯವಾಗಬಹುದು ಎನ್ನುವುದು ಸಹ ಕೆಲವು ವೀಕ್ಷಕರ ಲೆಕ್ಕಾಚಾರವಾಗಿದೆ. ಕರ್ಣ ಸೀರಿಯಲ್ನಲ್ಲಿ ಪ್ರಮುಖ ಪಾತ್ರಧಾರಿ ನಿತ್ಯಾ - ನಮ್ರತಾ ಗೌಡ ಅವರು ಕಳೆದ ಹಲವು ಎಪಿಸೋಡ್ಗಳಲ್ಲಿ ಕಾಣಿಸಿಕೊಂಡಿಲ್ಲ. ಇವರು ಈ ಸೀರಿಯಲ್ನಿಂದ ದೂರ ಸರಿದಿದ್ದಾರೆ ಎನ್ನುವ ಮಾತು ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ಬ್ರಹ್ಮಗಂಟು ಸೀರಿಯಲ್ನಲ್ಲಿ ಹಲವು ವಿಷಯಗಳು ರಿವೀಲ್ ಆಗಿದ್ದು, ಈ ಸೀರಿಯಲ್ ಸಹ ಮುಕ್ತಾಯವಾಗಬಹುದು ಎಂದು ಹೇಳಲಾಗಿದೆ.












Click it and Unblock the Notifications