Sridevi Byrappa: ನಟ ಯುವರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಇನ್ಸ್ಟಾಗ್ರಾಂ ವಿಡಿಯೋ, ಪೋಸ್ಟ್ ಭಾರಿ ವೈರಲ್
Sridevi Byrappa: ನಟ ಯುವ ರಾಜ್ಕುಮಾರ್ ಮತ್ತು ಅವರ ಪತ್ನಿ ಶ್ರೀದೇವಿ ಬೈರಪ್ಪ ಅವರ ವೈವಾಹಿಕ ಜೀವನದ ವಿವಾದವು ಸದ್ಯ ಸುದ್ದಿಯಲ್ಲಿದೆ. ಈ ನಡುವೆಯೇ ಯುವ ರಾಜ್ಕುಮಾರ್ ಅವರ ಜನ್ಮದಿನದಂದೇ ಅಂದರೆ ಏಪ್ರಿಲ್ 23ರಂದು ಶ್ರೀದೇವಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮತ್ತು ಮಹಿಳೆಯರ ಹಕ್ಕುಗಳ ಕುರಿತಾದ ಸಂದೇಶವು ಇದೀಗ ಗಮನ ಸೆಳೆಯುತ್ತಿದೆ.
ಯುವ ರಾಜ್ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಶ್ರೀದೇವಿ ಅವರು, ಸದ್ಯ ವಿಚ್ಛೇದನದ ಕಾನೂನು ಹೋರಾಟದಲ್ಲಿದ್ದಾರೆ. ಈ ನಡುವೆಯೇ ಯುವರಾಜ್ಕುಮಾರ್ ಅವರ ಜನ್ಮದಿನವಾಗಿದ್ದರೂ, ಶ್ರೀದೇವಿ ಅವರು ಮಹಿಳಾ ಜಾಗೃತಿಯ ಬಗ್ಗೆ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ.

'ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ'
"ಹೆಣ್ಣುಮಕ್ಕಳನ್ನು ಕೇವಲ ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಲು ಸಿದ್ಧಪಡಿಸುತ್ತಾರೆಯೇ ಹೊರತು, ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡುವುದು ಕಡಿಮೆ. ನಾನು ಸಹ ಈ ಹಕ್ಕುಗಳನ್ನು ಶಾಲೆಯಲ್ಲಿ ಕಲಿಯಲಿಲ್ಲ. ಬದಲಿಗೆ ಕಠಿಣ ಸಂದರ್ಭಗಳಲ್ಲಿ ಮತ್ತು ನಮಗಿಂತ ಮೊದಲು ಹೋರಾಡಿದ ಮಹಿಳೆಯರಿಂದ ಕಲಿತಿದ್ದೇನೆ," ಎಂದು ಅವರು ಬರೆದುಕೊಂಡಿದ್ದಾರೆ.
'ಸುಳ್ಳು ಆರೋಪಗಳಿಗೆ ಎದೆಗುಂದಬೇಡಿ'
"ಒಂದು ಸುಂದರ ವೈವಾಹಿಕ ಜೀವನದ ನಂತರವೂ, ನಿಮ್ಮ ಮೇಲೆ ಯಾರಾದರೂ ಸುಳ್ಳು ಆರೋಪಗಳನ್ನು ಮಾಡಿದರೆ, ದಯವಿಟ್ಟು ತಾಳ್ಮೆಯಿಂದಿರಿ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ. ಆ ಆರೋಪಗಳನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಅವರದ್ದೇ ಹೊರತು ನಿಮ್ಮದಲ್ಲ. ಹೆಣ್ಣುಮಕ್ಕಳನ್ನು ಹೆದರಿಸಿ, ಸತ್ಯವನ್ನು ಮರೆಮಾಚುವಂತೆ ಮಾಡಲು ಸಮಾಜ ಬಳಸುವ ಅತ್ಯಂತ ಕೀಳುಮಟ್ಟದ ಅಸ್ತ್ರವೆಂದರೆ ಅವಮಾನ. ನ್ಯಾಯಾಲಯಕ್ಕೆ ಬೇಕಿರುವುದು ಬಲವಾದ ಸಾಕ್ಷ್ಯಗಳೇ ಹೊರತು ಯಾರೋ ಬರೆದ ಕೀಳುಮಟ್ಟದ ಕಟ್ಟುಕಥೆಗಳಲ್ಲ," ಎಂದು ತಿಳಿಸಿದ್ದಾರೆ.
'ಹಕ್ಕುಗಳ ಬಗ್ಗೆ ಸ್ಪಷ್ಟತೆ ಇರಲಿ'
"ಸಾಮಾಜಿಕ ಜಾಲತಾಣಗಳಿಂದ ಫೋಟೋಗಳನ್ನು ಅಥವಾ ದಾಖಲೆಗಳನ್ನು ಅಳಿಸಿಹಾಕುವುದಾಗಿ ಬೆದರಿಸುವುದು ಮತ್ತು ನಿನಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಹೇಳುವುದು ಸರಿಯಲ್ಲ. ನಿಜ ಹೇಳಬೇಕೆಂದರೆ, ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಅಕ್ರಮ ಸಂಬಂಧಗಳನ್ನು ಹೊಂದುವುದು ಮತ್ತು ಇಷ್ಟಬಂದಂತೆ ಸುತ್ತುವುದು ಕಾನೂನುಬಾಹಿರ ಹಾಗೂ ಅನೈತಿಕ. ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ಅರಿವಿರಲಿ," ಎಂದು ಬರೆದುಕೊಂಡಿದ್ದಾರೆ.
"ಎಲ್ಲಾ ಗಾಯಗಳೂ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ನಾವು ಸುಮ್ಮನಿದ್ದರೆ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಮಹಿಳೆಯರನ್ನು ಕೀಳಾಗಿ ಕಾಣುವ ಸಮಾಜವನ್ನು ನಾವು ಒಪ್ಪಬಾರದು. ಈ ಅನ್ಯಾಯಗಳು ನಮ್ಮ ತಲೆಮಾರಿಗೆ ಕೊನೆಯಾಗಬೇಕು. ನಮ್ಮ ಮನೆಗಳಲ್ಲಿ ಬೆಳೆಯುತ್ತಿರುವ ಮಕ್ಕಳು ಸುರಕ್ಷಿತ ಹಾಗೂ ಸುಂದರ ಜಗತ್ತಿನಲ್ಲಿ ಬದುಕುವಂತಾಗಲಿ," ಎಂದು ಬರೆದುಕೊಂಡಿದ್ದಾರೆ.
2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ಅವರ ಸಂಸಾರದಲ್ಲಿ ಕೆಲ ವರ್ಷಗಳಿಂದ ಬಿರುಕು ಕಾಣಿಸಿಕೊಂಡಿತ್ತು. ಯುವ ಅವರು ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಶ್ರೀದೇವಿ ಆರೋಪಿಸಿದ್ದರೆ, ಯುವ ಕೂಡ ಶ್ರೀದೇವಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ನಡುವೆಯೇ ಶ್ರೀದೇವಿ ಅವರ ಈ ನಡೆ ಮತ್ತೆ ಒಮದಾಗುವ ಮುನ್ಸೂಚನೆಯನ್ನು ನೀಡಿದಂತಿದೆ.
ಇನ್ನೂ ಶ್ರೀದೇವಿ ಭೈರಪ್ಪ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ಹುಟ್ಟು ಹಾಕಿದ್ದು, ಮಹಿಳೆಯರ ಹಕ್ಕುಗಳ ಪರ ಧ್ವನಿ ಎತ್ತಿದ್ದಕ್ಕಾಗಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಯುವರಾಜ್ಕುಮಾರ್ ಹಾಗೂ ಪತ್ನಿ ಶ್ರೀದೇವಿ ಅವರು ಮತ್ತೆ ಒಂದಾಗಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ.












Click it and Unblock the Notifications