Sudeep: ನೀವು ಕಪಾಳಕ್ಕೆ ಹೊಡೆದ್ರೆ ಹೊಡೆಸಿಕೊಳ್ಳುವವರಲ್ಲ: 'ಕ್ಲಾಸ್ ಫ್ಯಾನ್ಸ್' ಎಂದ ವಿಜಯಲಕ್ಷ್ಮಿಗೆ ಸುದೀಪ್ ತಿರುಗೇಟು
ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್ ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಯಾಂಡಲ್ವುಡ್ನಲ್ಲಿ ಫ್ಯಾನ್ ವಾರ್ ತಾರಕಕ್ಕೇರಿತ್ತು. ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಕ್ಕೆ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ಸಹ ನೀಡಿದ್ದರು. ಕೆಟ್ಟ ಕಾಮೆಂಟ್ಗಳ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದ ದರ್ಶನ್ ಪತ್ನಿ, "ಕ್ಲಾಸ್ ಫ್ಯಾನ್ಸ್ಗೆ ಇದು ಎಚ್ಚರಿಕೆಯ ಸಂದೇಶ" ಎಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, 'ನೀವು ಕಪಾಳಕ್ಕೆ ಹೊಡೆದರೆ ನಾವು ಹೊಡೆಸಿಕೊಳ್ಳುವವರಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳು ಬೇರೆ, ಪಕ್ಕದ ಮನೆಯವರು ಹೊಡೆಯುವ ಏಟುಗಳು ಬೇರೆಯೇ ಆಗುತ್ತೆ' ಎಂದು ತಿರುಗೇಟು ನೀಡಿದ್ದಾರೆ.
'ಮಾರ್ಕ್' ಸಿನಿಮಾ ಸಕ್ಸಸ್ ಮೀಟ್ನಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಸುದೀರ್ಘವಾಗಿ ಮಾತನಾಡಿದ್ದಾರೆ. 'ನೀವು ಕಪಾಳಕ್ಕೆ ಹೊಡೆದರೆ ನಾವು ಹೊಡೆಸಿಕೊಳ್ಳುವವರಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳು ಬೇರೆಯಾಗುತ್ತೆ, ಆದರೆ ಪಕ್ಕದ ಮನೆಯವರು ಹೊಡೆಯುವ ಏಟುಗಳೇ ಬೇರೆ. ಅವರಿಗೆ ನಮ್ಮ ಮೇಲಿನ ಒಲವು ಇರುತ್ತೆ ಅಲ್ವಾ? ಕೊನೇ ಪಕ್ಷ ಅವರು ಯಾವುದೇ ಫೇಕ್ ಐಡಿಯಿಂದ ಮಾಡಿಲ್ವಲ್ಲಾ?' ಎಂದಿದ್ದಾರೆ.

'ಮೊದಲು ಎಲ್ಲಿಂದ ಶುರುವಾಯ್ತು ಅಂತ ಬುಡಕ್ಕೆ ಹೋಗಿ ಅಂತ ನಾನು ಯಾವಾಗಲೂ ಬಿಗ್ಬಾಸ್ನಲ್ಲಿ ಹೇಳುತ್ತಿರುತ್ತೇನೆ. ಯಾಕೆ ಇಡೀ ಚಿತ್ರರಂಗದಲ್ಲಿ ಆ ವಾತಾವರಣ ಇಲ್ಲ? ಎಲ್ಲಿಂದ ಪ್ರಾರಂಭ ಆಗ್ತಿದೆ. ಉದಾಹರಣೆಗೆ ಒಂದು ಪ್ರತ್ಯೇಕ ಚಾನಲ್ಗೆ ಸ್ವಲ್ಪ ರಫ್ ಆಗಿ ಇದ್ಕೊಂಡು, ಏನೇನೋ ಮಾತನಾಡಿಕೊಂಡು ನಿಮಗೆ ಏನಾದ್ರೂ ನೋವುಂಟು ಮಾಡಿದಾಗ ಪ್ರತಿಕ್ರಿಯೆ ಕೊಡ್ತೀರಾ? ಇಲ್ವಾ? ಪ್ರಾರಂಭ ನೀವು ಮಾಡಿಲ್ಲ, ಹಾಗಂತ ಇದನ್ನೆಲ್ಲ ನಾನು ಒಪ್ಪಿಕೊಳ್ತೀನಿ ಅಂತನೂ ಅಲ್ಲ' ಎಂದು ಖಾರವಾಗಿ ಮಾತನಾಡಿದ್ದಾರೆ.
'ಗಲಾಟೆ ಮಾಡಲು ಚಿತ್ರರಂಗಕ್ಕೆ ಬಂದಿಲ್ಲ'
'ನಾನು ಚಿತ್ರರಂಗಕ್ಕೆ ಬಂದಿರುವುದೇ ಇಂತಹ ಗಲಾಟೆ ಮಾಡಬೇಕು ಅಂತಲ್ಲ. ಮೇಕಪ್ ಹಾಕಿ ಸಿನಿಮಾ ಮಾಡಿ, ನಗಿಸೋಕೆ. ಖುಷಿಯಾಗಿರೋಕೆ, ನಾವೂ ಜೀವನದಲ್ಲಿ ಏನೋ ಸಕ್ಸಸ್ ಆಗಿದ್ದೀವಿ ಅಂತ ಅನಿಸಿಕೊಳ್ಳೋಕೆ. ಹಾಗೆಂದ ಮಾತ್ರಕ್ಕೆ ನಾನು ಬಲಹೀನನೂ ಅಲ್ಲ. ನಾನು ಸರಿಯಾಗಿರುವುದರ ಕಡೆ ಸದಾ ನಿಲ್ಲುತ್ತೇನೆ. ಈಗ ಇದು ಮಾತ್ರ ಕೇಳಿಸುತ್ತೆ, ಪ್ರತಿ ಸಲ ಎಲ್ಲ ಅಭಿಮಾನಿಗಳನ್ನ ಎಷ್ಟೋ ಕೇಳಿಕೊಂಡಿದ್ದು ಗೊತ್ತಿಲ್ವಾ? ಎಷ್ಟೋ ಸಲ ಹೇಳಿದ್ದೀವಿ, ನಮಗೆ ಈ ಯುದ್ಧ ಎಲ್ಲ ಬರೋದಿಲ್ಲ, ನಾವು ಯಾವತ್ತೂ ಅದನ್ನ ಮಾಡಿಕೊಂಡು ಕೂತವರಲ್ಲ. ನಮ್ಮ ಕಡೆಯಿಂದ ಯಾವುದಾದರೂ ತಪ್ಪಾದಾಗ ಓಪನ್ ಆಗಿ ಮುಂದೆ ಬಂದು ಹೇಳಿದ್ದೀವಿ, ಅಂತದ್ದನ್ನ ಮಾಡಬೇಡಿ ಅಂತ ಬುದ್ಧಿವಾದವೂ ಹೇಳಿದ್ದೀವಿ' ಎಂದಿದ್ದಾರೆ.

ದುಡ್ಡು ಕೊಟ್ಟರೆ ಗೌರವ ಸಿಗುತ್ತಾ?
'ಇಂದು ನನಗೆ ಕರ್ನಾಟಕದಲ್ಲಿ ಗೌರವ ಸಿಗುತ್ತಿದೆ ಅಂದ್ರೆ ನಾನು ಆ ರೀತಿ ನಡೆದುಕೊಂಡಿದ್ದೀನಿ ಅಲ್ವೇ? ಇದನ್ನ ದುಡ್ಡು ಕೊಟ್ಟು ತೆಗೆದುಕೊಳ್ಳೋಕೆ ಆಗುತ್ತಾ? ನಂದನ್ನು ನಾನು ಮಾತನಾಡಬಲ್ಲೆ. ಆದರೆ ಮಿಕ್ಕವರು ಯಾರು ಅವರ ಜೀವನದಲ್ಲಿ ಹಾಗೆ ಇದ್ದಾರೋ ಅವರೇ ಭೂತಕನ್ನಡಿ ಹಾಕಿ ಹುಡುಕಿದರೆ, ಆ ಸ್ಪಷ್ಟತೆ ಅವರಿಗೆ ಸಿಗುತ್ತೆ. ಸರಿಪಡಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ ಇಡೀ ಚಿತ್ರರಂಗ ಚೆನ್ನಾಗಿದ್ದೀವಿ' ಎಂದು ಹೇಳಿದ್ದಾರೆ.
'ನನ್ನಲ್ಲಿ ಕೆಲ ಹುಡುಗರು ಸರಿ ಅಲ್ಲ ಅಂದ್ರೆ ಸರಿಪಡಿಸಿಕೊಳ್ಳೋಣ. ಆದರೆ ಇದು ಎಲ್ಲಿಂದ ಆಗ್ತಿದೆ? ಕೆಲವೊಮ್ಮೆ ಮಾತನಾಡುವ ಅವಶ್ಯಕತೆ ಬರೋದಿಲ್ಲ, ಆದ್ರೆ ಉತ್ತರ ಕೊಡುವ ಕಡೆ, ಉತ್ತರ ಕೊಡುತ್ತಲೇ ಇರ್ತಾರೆ. ಈಗ ನೀವು ಹೇಳಿರೋದು ನಿಮಗೆ ಗೊತ್ತಿರಬಹುದು. ಆದ್ರೆ ನಾವು ಆ ವಿಚಾರದಲ್ಲೇ ಇಲ್ಲ, ಹೀಗಾಗಿ ನಾನೇಕೆ ಅದರ ಬಗ್ಗೆ ಮಾತನಾಡಲಿ?' ಎಂದು ಸುದೀಪ್ ಖಡಕ್ ಆಗಿ ಮಾತನಾಡಿದ್ದಾರೆ.












Click it and Unblock the Notifications