K.Shivaram: ಅಂತಿಮ ದರ್ಶನದ ವೇಳೆ ಶಿವರಾಮ್ ಪತ್ನಿ ಪ್ರಿಯಾಂಕ್ ಖರ್ಗೆಯನ್ನು ವಿರೋಧಿಸಿದ್ದು ಏಕೆ?
ಬೆಂಗಳೂರು, ಮಾರ್ಚ್ 06: ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಫೆಬ್ರವರಿ 29ರಂದು ವಿಧಿವಶರಾದರು. ಅವರ ಅಂತಿಮ ದರ್ಶನಕ್ಕೆ ಬಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆ. ಶಿವರಾಮ್ ಪತ್ನಿ ವಾಣಿ ಶಿವರಾಮ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
ಅಂತಿಮ ದರ್ಶನದಂತಹ ಸಂದರ್ಭದಲ್ಲಿಯೂ ಕೂಡ ವಾಣಿ ಶಿವರಾಮ್ ಯಾಕೆ ಹಾಗೆ ನಡೆದುಕೊಂಡರು ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಈ ಬಗ್ಗೆ ಕೆ. ಶಿವರಾಮ್ ಅಳಿಯ ಪ್ರದೀಪ್ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಂದರ್ಭದ ಬಗ್ಗೆ ಪ್ರದೀಪ್ ವಿವರಿಸಿದ್ದಾರೆ.

'ನಮ್ಮ ಅತ್ತೆ ಆ ಸಂದರ್ಭದಲ್ಲಿ ಹಾಗೆ ನಡೆದುಕೊಂಡಿರುವುದಕ್ಕೆ ಸಾಕಷ್ಟು ವಿಚಾರಗಳಿವೆ. ಅದನ್ನು ಈ ಸಂದರ್ಭದಲ್ಲಿ ಹೇಳಿದರೆ ತಪ್ಪಾಗಬಹುದು. ಯಾಕೆಂದರೆ, ಒಬ್ಬ ವ್ಯಕ್ತಿ ಯಾರ ಬಗ್ಗೆ ನಾವು ಇವತ್ತು ಮಾತನಾಡುತ್ತಿದ್ದವಲ್ಲಾ, ಅವರೆಂದು ದ್ವೇಷ ಕಾರಿದವರಲ್ಲ. ಅವರು ಯಾವತ್ತೂ ಬೇರೆಯವರ ಬಗ್ಗೆ ಮಾತನಾಡಿದವರಲ್ಲ, ಅವರು ಯಾವತ್ತೂ ಹಿಂದೆ ಮಾತನಾಡಿದವರಲ್ಲ, ಯಾರೇ ಇದ್ದರೂ, ಎಲ್ಲೇ ಇದ್ದರೂ ಎದುರುಗಡೆ ಮಾತನಾಡಿದ ವ್ಯಕ್ತಿ.
ವೇದಿಕೆಯಲ್ಲೂ ಕೂಡ ನೇರ ನೇರವಾಗಿ ಹೇಳುತ್ತಿದ್ದರು. ಅಧಿಕಾರಿಗಳಿಗೂ ನೇರವಾಗಿ ಕರೆ ಮಾಡುತ್ತಿದ್ದರು. ಎಂದೂ ಯಾರು ಹೇಳಿರುವುದನ್ನು ಕೇಳಿಸಿಕೊಂಡು ಮಾಡಿಲ್ಲ, ಅವರಿಗೆ ಏನು ಅನಿಸಿದೆ ಅದನ್ನೇ ಮಾಡಿದ್ದಾರೆ' ಎಂದು ಕೆ. ಶಿವರಾಮ್ ಅವರನ್ನು ನೆನಪಿಸಿಕೊಂಡರು
ಮಾತು ಮುಂದುವರಿಸಿದ ನಟ ಪ್ರದೀಪ್, 'ಯಾವುದೇ ಒಬ್ಬ ವ್ಯಕ್ತಿ ಅಂತಹ ಸಮಯದಲ್ಲೂ ಕೂಡ ಒಂದು ಮಾತನ್ನು ಆಡುತ್ತಾರೆ ಎಂದರೆ, ಅದಕ್ಕೆ ಒಂದು ಬಲವಾದ ಕಾರಣ ಇರಲೇಬೇಕು. ಆ ಕಾರಣ ಇವತ್ತು ನಾವು ಮಾತನಾಡಿದರೆ ತಪ್ಪಾಗುತ್ತದೆ. ಆ ವ್ಯಕ್ತಿನೇ ಇರದಿದ್ದ ಮೇಲೆ ಅಂತಹ ಸಂದರ್ಭದಲ್ಲಿ ಆ ಮಾತು ಏಕೆ ಬಂತು ಎನ್ನುವ ಬಗ್ಗೆ ನಾವು ಈ ಸಂದರ್ಭದಲ್ಲಿ ಮಾತನಾಡಿದರೆ ತಪ್ಪಾಗುತ್ತದೆ. ಅದು ನಮ್ಮ ಮಾವನಿಗೆ ಗೌರವವೂ ಅಲ್ಲ. ಹಾಗಾಗಿ ಸದ್ಯ ಆ ಮಾತು ಬೇಡ' ಎಂದಿದ್ದಾರೆ.
ಕೆ. ಶಿವರಾಮ್ ಅಂತಿಮ ದರ್ಶನದ ವೇಳೆ ನಡೆದಿದ್ದೇನು..?
ಫೆಬ್ರವರಿ 29ರಂದು ಕೆ.ಶಿವರಾಮ್ ವಿಧಿವಶರಾಗಿದ್ದು, ಮಾರ್ಚ್ 01ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಆಗಮಿಸಿ ಕೆ.ಶಿವರಾಮ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಕೆ.ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಶಿವರಾಮ್ ಅವರ ಪಾರ್ಥಿವ ಶರೀರದ ದರ್ಶನ ಪಡೆಯುವ ರೈಟ್ಸ್ ನಿಮಗೆ ಇಲ್ಲ.. ಅವರು ಯಾಕೆ ಬಂದರು? ದಯವಿಟ್ಟು ಅವರನ್ನು ಕಳುಹಿಸಿ ಎಂದು ಹೇಳಿದ್ದು, ದುಃಖದ ನಡುವೆ ಅಸಮಾಧಾನ ಹೊರಹಾಕಿದ್ದರು.












Click it and Unblock the Notifications