Bigg Boss: ಮತ್ತೆ ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್, ತನಿಷಾ ಎಂಟ್ರಿ
ಬಿಗ್ ಬಾಸ್ 11ನೇ ಸೀಸನ್ ಮುಗಿಯಲು ಇನ್ನು ಕೆಲವೇ ವಾರಗಳು ಬಾಕಿಯಿದ್ದು, ದಿನದಿಂದ ದಿನಕ್ಕೆ ಆಟ ರೋಚಕವಾಗುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ತೀವ್ರವಾಗಿದ್ದು ಗೆಲ್ಲಲು ಎಲ್ಲರೂ ಅವರೇ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ಬಹುತೇಕ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದ ಐಶ್ವರ್ಯ ಕೊನೆಯ ಹಂತದಲ್ಲಿ ಸೇಫ್ ಆಗಿದ್ದಾರೆ. ಈ ವಾರ ಯಾರೂ ಎಲಿಮಿನೇಷನ್ ಆಗದೇ ಇರುವುದು ಮತ್ತೊಂದು ವಿಶೇಷ, ಈ ನಡುವೆ ಬಿಗ್ ಬಾಸ್ 10ನೇ ಸೀಸನ್ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ಸೀಸನ್ನಲ್ಲಿ ಭಾರಿ ಸದ್ದು ಮಾಡಿದ್ದ ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್ ಮತ್ತು ತುಕಾಲಿ ಸಂತೋಷ್ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು ಸೋಮವಾರ ಈ ಎಪಿಸೋಡ್ ಪ್ರಸಾರವಾಗಲಿದೆ. ಪ್ರೋಮೋದಲ್ಲಿ ಹಳೆಯ ಸ್ಪರ್ಧಿಗಳು ಈ ಸೀಸನ್ ಸ್ಪರ್ಧಿಗಳಿಗೆ ಸಲಹೆ ಕೊಡುವುದನ್ನು ಪ್ರೋಮೋದಲ್ಲಿ ನೋಡಬಹುದು.
ಹನುಮಂತು ತನಿಷಾ ಕಾಲೆಳೆದರೆ, ಡ್ರೋನ್ ಪ್ರತಾಪ್ ಚೈತ್ರಾ ಕುಂದಾಪುರಗೆ ನನ್ನನ್ನು ಅಣ್ಣ ಎಂದು ಕರೆಯದಂತೆ ಮನವಿ ಮಾಡಿದ್ದಾರೆ. ಮಾವ ಮಾವ ಅಂತ ಮಾನಸನ್ನೆ ಮನೆಯಿಂದ ಆಚೆ ಕಳಿಸ್ಬಿಟ್ಟಲೋ ಅಂತಾ ತುಕಾಲಿ ಸಂತೋಷ್ ಹನುಮಂತುಗೆ ಹೇಳುವುದನ್ನು ಕೂಡ ಪ್ರೋಮೋದಲ್ಲಿ ತೋರಿಸಲಾಗಿದೆ. ಒಟ್ಟಾರೆ ಸೋಮವಾರದ ಎಪಿಸೋಡ್ನಲ್ಲಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗಲಿದೆ ಎನ್ನುವ ಸಂದೇಶ ಸಿಕ್ಕಿದೆ.
ಬೀನ್ ಬ್ಯಾಗ್ ಹಿಡಿದು ಬಂದ ವರ್ತೂರು ಸಂತೋಷ್
ಬಿಗ್ ಬಾಸ್ 10ನೇ ಆವೃತ್ತಿಯಲ್ಲಿ ತಮ್ಮ ವಿಭಿನ್ನ ಶೈಲಿಯ ಮಾತುಗಾರಿಕೆ, ಹುಲಿ ಉಗುರು ವಿವಾದದಿಂದ ಭಾರಿ ಹೆಸರು ಮಾಡಿರುವ ವರ್ತೂರು ಸಂತೋಷ್ ಬೀನ್ ಬ್ಯಾಗ್ ಹಿಡಿದು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಹಳೆ ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಏನೆಲ್ಲಾ ಸಲಹೆ ನೀಡುತ್ತಾರೆ ಎನ್ನುವ ಕುತೂಹಲವಿದ್ದು ಸೋಮವಾರದ ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ.
ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ, ಐಶ್ವರ್ಯಾ
ಭಾನುವಾರದ ಸಂಚಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಷನ್ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಐಶ್ವರ್ಯ ಮತ್ತು ಚೈತ್ರಾ ಕುಂದಾಪುರ ಡೇಂಜರ್ ಜೋನ್ನಲ್ಲಿದ್ದ ಕಾರಣ ಇಬ್ಬರನ್ನೂ ಸೀಕ್ರೇಟ್ ರೂಂಗೆ ಕಳಿಸಲಾಯಿತು. ಚೈತ್ರಾ ಕುಂದಾಪುರರನ್ನು ಕನ್ಫೆಷನ್ ರೂಮ್ಗೆ ತೆರಳಿದರೆ, ಐಶ್ವರ್ಯಾ ಅವರನ್ನ ಆ್ಯಕ್ಟಿವಿಟಿ ರೂಮ್ಗೆ ಕಳಿಸಲಾಯಿತು.
ಐಶ್ವರ್ಯಾ ಅವರನ್ನು ಮನೆಯಿಂದ ಹೊರಬರುವಂತೆ ಕೇಳಲಾಯಿತು. ಆದರೆ ಕೊನೆ ಕ್ಷಣದಲ್ಲಿ ಸುದೀಪ್ ಟ್ವಿಸ್ಟ್ ಕೊಟ್ಟರು, ನೀವು ಮನೆಗೆ ವಾಪಸ್ ಹೋಗಿ ಆಟ ಆಡಿ ಎಂದರು. ಅದನ್ನು ಕೇಳುತ್ತಿದ್ದಂತೆ ಐಶ್ವರ್ಯ ಬಿಕ್ಕಿ ಬಿಕ್ಕಿ ಅತ್ತರು.
ಕನ್ಫೆಷನ್ ರೂಮ್ನಲ್ಲಿದ್ದ ಚೈತ್ರಾ ಕುಂದಾಪುರ ಮನೆಯ ಇತರ ಸ್ಪರ್ಧಿಗಳು ತಮ್ಮ ಬಗ್ಗೆ ಆಡುವ ಮಾತುಗಳನ್ನು ಕೇಳಿಸಿಕೊಂಡರು. ತಮ್ಮ ಬಗ್ಗೆ ರಜತ್, ತ್ರಿವಿಕ್ರಮ್ ಸೇರಿದಂತೆ ಹಲವು ಸ್ಪರ್ಧಿಗಳು ಆಡಿದ ಮಾತು ಕೇಳಿ ಚೈತ್ರಾ ಕಣ್ಣೀರು ಹಾಕಿದರು.












Click it and Unblock the Notifications