ವರನಟನಿಗೆ ವರವಾದ ಆ ಹೋಟೆಲ್ ಯಾವುದು?: ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಇಂದು ವರ ನಟ ಡಾ. ರಾಜಕುಮಾರ್ 19ನೇ ವರ್ಷದ ಪುಣ್ಯ ಸ್ಮರಣೆ. 2006ರ ಏಪ್ರಿಲ್ 12ರಂದು ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಅಣ್ಣಾವ್ರು ನಮ್ಮೆನ್ನೆಲ್ಲಾ ಅಗಲಿದರು. ಡಾ. ರಾಜಕುಮಾರ್ ಅವರು ಇಹಲೋಕ ತ್ಯಜಿಸಿ ಇಂದಿಗೆ 19 ವರ್ಷಗಳು ಕಳೆದಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಎಲ್ಲೆಡೆ ಇಂದು ಡಾ. ರಾಜಕುಮಾರ್ ಅವರ ಸವಿನೆನಪುಗಳನ್ನು ಸ್ಮರಿಸಲಾಗುತ್ತಿದೆ.
ನಟ ಡಾ.ರಾಜಕುಮಾರ್ ಅವರ 19ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು, ಅಣ್ಣಾವ್ರ ಬಗ್ಗೆ ಹಾಗೂ ಅವರಿಗೆ ಅದೃಷ್ಟ ತಂದುಕೊಟ್ಟ ಬೆಂಗಳೂರಿನ ಹೋಟೆಲ್ವೊಂದರ ಬಗ್ಗೆ ಇಂಟ್ರಸ್ಟಿಂಗ್ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗಣೇಶ್ ಕಾಸರಗೋಡು ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಬಹಳ ಸಮೀಪದಿಂದ ಕಂಡವರಾದ ಕಾರಣ ಕನ್ನಡ ಚಿತ್ರರಂಗದ ನಟ, ನಟಿಯರ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ವಿಚಾರಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಒಂದು ವಿಷಯದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ಆ ಕುರಿತು ಮಾಹಿತಿ ಹಂಚಿಕೊಳ್ಳುವ ಗಣೇಶ್ ಕಾಸರಗೋಡು ಅವರ ಬರಹಗಳು ಎಂತವರನ್ನಾದರೂ ಆಕರ್ಷಿಸುತ್ತದೆ. ಇದೀಗ ವರನಟ ರಾಜಕುಮಾರ್ ಅವರಿಗೆ ವರವಾದ ಹೋಟೆಲು.. ಒಂದು ನೆನಪು.. ರಾಜ್ ಮರೆಯಾಗಿ ಭರ್ತಿ 19 ವರ್ಷ ಎನ್ನುವ ಶೀರ್ಷಿಕೆ ಕೊಟ್ಟು ವಿಶೇಷ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.
ವರ ನಟನಿಗೆ ವರವಾದ ಬೆಂಗಳೂರಿನ ಹೈಲ್ಯಾಂಡ್ಸ್ ಹೋಟೆಲ್
ಡಾ. ರಾಜಕುಮಾರ್ ಅವರ ಪಾಲಿಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿಯಿರುವ ಹೈಲ್ಯಾಂಡ್ಸ್ ಹೋಟೆಲ್ ಬರಿಯ ಕಲ್ಲು ಕಟ್ಟಡವಾಗಿ ಇರಲಿಲ್ಲ. ವೃತ್ತಿ ಬದುಕಿನಲ್ಲಿ ಹಂತ ಹಂತವಾಗಿ ಮೇಲೇರಿ ಕನ್ನಡದ ಕಣ್ಮಣಿಯಾದ ರಾಜಕುಮಾರ್ ಅವರಿಗೆ ಅದೊಂದು ನೆನಪಿನ ಬುತ್ತಿ. ರಾಜ್ ಈಗ ನೆನಪು ಮಾತ್ರ. ಅಂತೆಯೇ ಅವರು 20 ವರ್ಷಗಳ ಕಾಲ ವಾಸ್ತವ್ಯವಿದ್ದ ಹೈಲ್ಯಾಂಡ್ಸ್ ಹೋಟೆಲು ಕೂಡಾ.
ರಾಜಕುಮಾರ್ ಅವರ ಅಂತರಂಗದ ಗೆಳೆಯನಂತಿದ್ದ ಈ ಹೋಟೆಲಿನ ರೂಮಿನಲ್ಲಿದ್ದುಕೊಂಡೇ ಅಭಿಮಾನಿ ದೇವರುಗಳ ಹೃದಯ ಗೆದ್ದು ಬಿಟ್ಟರು. ಬೆಂಗಳೂರಿನಲ್ಲಿ ಸ್ವಂತ ಬಂಗಲೆಯಿದ್ದರೂ ಬಾಡಿಗೆಗೆ ಹಿಡಿದಿದ್ದ ಈ ರೂಮನ್ನು ಎಂದೂ ಬಿಟ್ಟು ಕೊಡಲಿಲ್ಲ ರಾಜ್. ಈ ರೂಮು ತಮ್ಮ ವೃತ್ತಿ ಬದುಕಿಗೆ ಅದೃಷ್ಟ ತಂದುಕೊಟ್ಟ ಗರ್ಭಗುಡಿಯೆಂದೇ ಅವರು ಭಾವಿಸಿದ್ದರು ಎಂದು ರಾಜಕುಮಾರ್ ಅವರ ಮೆಚ್ಚಿನ ಹೈಲ್ಯಾಂಡ್ಸ್ ಹೋಟೆಲ್ ಬಗ್ಗೆ ಕನ್ನಡದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ವಿಶೇಷ ವಿವರಣೆಯನ್ನು ಹಂಚಿಕೊಂಡಿದ್ದಾರೆ.

ಹೈಲ್ಯಾಂಡ್ಸ್ ಹೋಟೆಲ್ ಮಾಲೀಕ ಯಾರು? ಹೋಟೆಲ್ನ ಇತಿಹಾಸವೇನು?
ವಾಸ್ತವವಾಗಿ ಈ ಹೈಲ್ಯಾಂಡ್ಸ್ ಹೋಟೆಲಿನ ಮಾಲೀಕರಾಗಿದ್ದವರು ದಿವಾನ್ ಮಾಧವ ರಾವ್. 1906ರಲ್ಲಿ ಈ ಕಟ್ಟಡದ ಒಡೆತನ ಪಡೆದ ಇವರು ಶಾಸ್ತ್ರಿ ಎನ್ನುವವರಿಗೆ ಲೀಸ್ಗೆ ಕೊಟ್ಟಿದ್ದರು. ಇವರು ವರ್ಷಗಟ್ಟಲೆ ಈ ಹೋಟೆಲ್ ಮೇಲೆ ಹಿಡಿತ ಸಾಧಿಸಿದ್ದರು. ಕೊನೆಗೆ ಗತ್ಯಂತರವಿಲ್ಲದೇ 1962ರಲ್ಲಿ ಇದನ್ನು ಗೋವಿಂದ ರೆಡ್ಡಿ ಎನ್ನುವವರಿಗೆ ಲೀಸ್ಗೆ ಕೊಟ್ಟರು.
ದಿವಾನ್ ಮಾಧವ ರಾವ್ ಅನ್ನುವವರಿಗೂ ಈ ಗೋವಿಂದ ರೆಡ್ಡಿ ಅನ್ನುವವರಿಗೂ ನಡುವೆ ಒಳ್ಳೆಯ ಸ್ನೇಹ ಸಂಬಂಧವಿದ್ದುದರಿಂದ ಒಂದು ಹಂತದಲ್ಲಿ ಹೋಟೆಲ್ ಸಹಿತ ಎರಡು ಎಕರೆ ಜಾಗವನ್ನು ಗೋವಿಂದ ರೆಡ್ಡಿಯವರಿಗೇ ಮಾರಿದರು. ಕೇವಲ 6 ಲಕ್ಷದ ವ್ಯವಹಾರವಿದು. ಇಂಡಿಯಾ ಮಿಲ್ಕ್ ಹೌಸ್ ಮೂಲಕ ಹಾಲು ಮಾರಾಟ ಮಾಡಿ ದುಡ್ಡು ಸಂಪಾದಿಸಿದ ರೆಡ್ಡಿಯವರು ಈ ಹೊಟೇಲನ್ನು ನಡೆಸುತ್ತಿದ್ದ ಹೊತ್ತಿನಲ್ಲೇ ರಾಜಕುಮಾರ್ ಅವರು ಗುಬ್ಬಿ ಕಂಪನಿಯಲ್ಲಿ ನಾಟಕ ಆಡಿಕೊಂಡಿದ್ದರು.
ರಾಜ್ ಸಜ್ಜನಿಕೆಗೆ ಸಿಕ್ಕ ಲಕ್ಕಿ ಹೋಟೆಲ್
ವಾಸ್ತವ್ಯದ ಸಮಸ್ಯೆ ಎದುರಾದಾಗ ಒಂದು ರೂಮು ಕೊಡಿಸುವಂತೆ ಗೋವಿಂದ ರೆಡ್ಡಿಯವರಿಗೆ ಗಂಟು ಬಿದ್ದರಂತೆ ರಾಜ್. ಆದರೆ ಆ ಹೊತ್ತಿಗಾಗಲೇ ಗೋವಿಂದ ರೆಡ್ಡಿಯವರ ಹಿರಿಯ ಸೋದರ ಶ್ರೀರಾಮ ರೆಡ್ಡಿಯವರು ರಾಜಕೀಯದಲ್ಲಿದ್ದುದರಿಂದಾಗಿ ಆ ಹೋಟೆಲು ಒಂದು ಮಿನಿ ವಿಧಾನ ಸೌಧದಂತಿತ್ತು. ಆದರೆ ಪದೇ ಪದೇ ರಾಜ್ ಅವರು ವಿನಂತಿಸಿಕೊಂಡಾಗ ಅವರ ಸಜ್ಜನಿಕೆಗೆ ಇಲ್ಲವೆನ್ನಲಾಗದೆ ಒಂದು ರೂಮನ್ನು ಅವರಿಗೆ ಅಲಾಟ್ ಮಾಡಿದರಂತೆ ರೆಡ್ಡಿಗಾರು.
ರಾಜ್ ಅವರಿಗೆ 9 ಅದೃಷ್ಟದ ಸಂಖ್ಯೆಯಾದುದರಿಂದ 18ನೇ ನಂಬರಿನ (1+8=9) ಕೋಣೆಯನ್ನು ರೆಡ್ಡಿಯವರು ಬಿಟ್ಟುಕೊಟ್ಟರು. ಗುಬ್ಬಿ ಕಂಪನಿಯಿಂದ ಚಿತ್ರರಂಗಕ್ಕೆ ಕಾಲಿಟ್ಟು ಮದ್ರಾಸು ಸೇರಿಕೊಂಡಾಗಲೂ ರಾಜ್ ಅವರು ಈ ರೂಮನ್ನು ಬಿಟ್ಟು ಕೊಡಲಿಲ್ಲ. ಬೆಂಗಳೂರಿಗೆ ಬಂದಾಗಲೆಲ್ಲಾ ಅವರು ವಾಸ್ತವ್ಯ ಹೂಡುತ್ತಿದ್ದುದು ಇದೇ ರೂಮಿನಲ್ಲಿ. ವೃತ್ತಿ ಬದುಕಿನಲ್ಲಿ ಹಂತ ಹಂತವಾಗಿ ಮೇಲೇರಿದ ರಾಜ್ ಈ ರೂಮನ್ನು ಮಾತ್ರ ಬಿಟ್ಟು ಕೊಡಲಿಲ್ಲ.
ರಾಜಕುಮಾರ್ ಹೈಲ್ಯಾಂಡ್ಸ್ ಹೋಟೆಲ್ ರೂಮ್ ಬಿಟ್ಟಿದ್ಯಾಕೆ?
ಕೊನೆಗೊಂದು ದಿನ ಹೆಂಡತಿ ಮತ್ತು ಮಕ್ಕಳ ಒತ್ತಾಯಕ್ಕೆ ಮಣಿದು ರಾಜ್ ಅವರು ಈ ರೂಮನ್ನು ಬಿಟ್ಟು ಕೊಟ್ಟು ಸದಾಶಿವ ನಗರದ ಬಂಗಲೆ ಸೇರಿಕೊಂಡರು. ಆದರೆ ರಾಜ್ ಅವರ ಸಜ್ಜನಿಕೆಯ ಸವಿ ನೆನಪಿಗಾಗಿ ಬಹಳ ವರ್ಷಗಳ ಕಾಲ ಈ ರೂಮನ್ನು ಬೇರೆ ಯಾರಿಗೂ ಬಾಡಿಗೆಗೆ ಕೊಡದೇ ಬೀಗ ಹಾಕಿಸಿ ಕಾಯ್ದಿರಿಸಿಕೊಂಡಿದ್ದರಂತೆ ಗೋವಿಂದ ರೆಡ್ಡಿಗಾರು.
ಈಗ ರಾಜಕುಮಾರ್ ಇಲ್ಲ, ಪಾರ್ವತಮ್ಮನೂ ಇಲ್ಲ, ಗೋವಿಂದ ರೆಡ್ಡಿಯವರೂ ಇಲ್ಲ. ಇಂತಹ ಅದ್ಭುತ ಇತಿಹಾಸವಿದ್ದ ಹೈಲ್ಯಾಂಡ್ಸ್ ಹೋಟೆಲು ಇದೀಗ ಇತಿಹಾಸದ ಪುಟ ಸೇರಿಕೊಂಡಿದೆ. ಆ ಜಾಗದಲ್ಲಿ ಪಂಚತಾರಾ ಹೋಟೆಲೊಂದು ತಲೆಯೆತ್ತಿ ಮುಗಿಲು ಚುಂಬಿಸುತ್ತಿದೆ. ರಾಜ್ ಕುಮಾರ್ ಹೆಸರು ಮುಗಿಲು ದಾಟಿ ಬೆಳೆದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಗಣೇಶ್ ಕಾಸರಗೋಡು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರನಟ ರಾಜಕುಮಾರ್ ಅವರ ಬಗ್ಗೆ ಯಾರಿಗೂ ತಿಳಿಯದ ಅದ್ಭುತವಾದ ಮಾಹಿತಿಯನ್ನು ಹಂಚಿಕೊಂಡಿರುವುದಕ್ಕೆ ಕನ್ನಡ ಚಿತ್ರರಂಗದ ದೊಡ್ಮನೆ ಅಭಿಮಾನಿಗಳು ಗಣೇಶ್ ಕಾಸರಗೋಡು ಅವರನ್ನು ಅಭಿನಂದಿಸಿದ್ದಾರೆ.












Click it and Unblock the Notifications