ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ತೂಕದ ಮಾತುಗಳಿಗೆ ವ್ಯಾಪಕ ಮೆಚ್ಚುಗೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರನ್ನು ಬಂಧಿಸಲಾಗಿದೆ. ದರ್ಶನ್ ಕೊಲೆ ಪ್ರಕರಣದ ಬಗ್ಗೆ ಮಾಜಿ ಗೆಳೆಯ, ಕನ್ನಡ ಚಿತ್ರರಂಗದ ಮತ್ತೊಬ್ಬ ಸೂಪರ್ ಸ್ಟಾರ್ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತುಂಬಾ ಸೂಕ್ಷ್ಮವಾದ ವಿಚಾರದ ಬಗ್ಗೆ ಮಾತನಾಡುವಾಗ ಸುದೀಪ್ ಅಳೆದು ತೂಗಿ ಮಾತನಾಡಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿದ್ದರೂ ಫ್ಯಾನ್ ವಾರ್ ಆಗುವ ಅಪಾಯವಿತ್ತು, ಸುದೀಪ್ ವಿರುದ್ಧ ದರ್ಶನ್ ಅಭಿಮಾನಿಗಳು ಕೋಪಗೊಳ್ಳುವ ಸಾಧ್ಯತೆ ಕೂಡ ಇತ್ತು. ಆದರೆ ಸುದೀಪ್ ಮಾತ್ರ ಈ ವಿಚಾರದಲ್ಲಿ ತುಂಬಾ ಬುದ್ಧಿವಂತಿಕೆಯಿಂದ ಮಾತನಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಎಕ್ಸ್ನಲ್ಲಿ ಟ್ರೆಂಡಿಂಗ್
ದರ್ಶನ್ ವಿಚಾರದಲ್ಲಿ ಸುದೀಪ್ ಪ್ರತಿಕ್ರಿಯೆ ನೀಡಿದ ದೃಶ್ಯಗಳು ಎಕ್ಸ್ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಟ್ರೆಂಡಿಂಗ್ನಲ್ಲಿದೆ. ಪ್ರಬುದ್ಧವಾಗಿ ಮಾತನಾಡಿರುವ ಸುದೀಪ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀರೋ ಮೊದಲು ಹೀರೋ ಆಗೋದು ನಿಲ್ಲಿಸಬೇಕು ಆಗಲೇ ಹೀರೋ ಆಗೋದು ಎಂದು ರಾಮರಸ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೊಸ ಹೀರೋಗಳಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಬಾಳಿ ಬದುಕಬೇಕಿದ್ದ ಯುವಕ ಕೊಲೆಯಾಗಿದ್ದಾನೆ ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ನನ್ನ ವೈಯಕ್ತಿಕ ನಿಲುವು ಏನೂ ಇಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡುತ್ತಿದ್ದೇನೆ. ಸುದ್ದಿಗಳನ್ನು ನೋಡುವ ಮೂಲಕ ನಾವು ಏನು ಮಾಡಬಾರದರು ಎನ್ನುವ ವಿಚಾರವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಬ್ಯಾನ್ ಮಾಡುವ ಬಗ್ಗೆ ಹೇಳಿದ್ದೇನು?
ಇನ್ನು ದರ್ಶನ್ರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಬಗ್ಗೆ ಕೂಡ ಸುದೀಪ್ ಪ್ರತಿಕ್ರಿಯೆ ನೀಡಿ, ಬ್ಯಾನ್ ಬಗ್ಗೆ ನಾವು ನಿರ್ಧರಿಸಲು ಆಗದು. ಪ್ರಕರಣದಿಂದ ಅವರು ಹೊರಬಂದರೆ ಬ್ಯಾನ್ ಎನ್ನುವುದು ಬರುವುದೇ ಇಲ್ಲ, ಒಂದು ವೇಳೆ ಆರೋಪ ಸಾಬೀತಾಗಿ ಶಿಕ್ಷೆಯಾದರೆ ಆಗಲೂ ಬ್ಯಾನ್ ಎನ್ನುವ ಪ್ರಶ್ನೆ ಇರುವುದಿಲ್ಲ ಎಂದು ಹೇಳಿದರು.
ದರ್ಶನ್ ಮತ್ತು ಸುದೀಪ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದವರು, ಇಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು. ಇಬ್ಬರು ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವುದು ಅಭಿಮಾನಿಗಳ ಅಸೆಯಾಗಿತ್ತು. ಆದರೆ ದಿನಕಳೆದಂತೆ ಇಬ್ಬರು ಕೂಡ ದೂರವಾದರು.












Click it and Unblock the Notifications