ದರ್ಶನ್ ನಿಮ್ಮ ಗೆಳೆಯಾ ಅಲ್ವಾ ಎಂದಿದ್ದಕ್ಕೆ ಸುದೀಪ್ ಏನಂದ್ರು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ. ದರ್ಶನ್ ಬಂಧನ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸುದೀಪ್ ಮಾತನಾಡಿ, ಕೊಲೆಯಾಗಿರುವ ರೇಣುಕಾಸ್ವಾಮಿಗೆ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.

ಇನ್ನು ದರ್ಶನ್ ನಿಮ್ಮ ಆಪ್ತ ಸ್ನೇಹಿತರಾಗಿದ್ದವರು, ಜೊತೆಯಲ್ಲೇ ಕ್ರಿಕೆಟ್ ಆಡಿದ್ದವರು. ಎಂದಿಗೂ ದರ್ಶನ್ ವಿರುದ್ಧ ಮಾತನಾಡಿಲ್ಲ, ಈಗ ಏನು ಹೇಳುತ್ತೀರಾ ಎನ್ನುವ ಬಗ್ಗೆ ಉತ್ತರ ಕೊಟ್ಟ ಅವರು, ಸ್ನೇಹ ಬೇರೆ, ಈಗ ಆಗಿರುವ ಪ್ರಕರಣ ಬೇರೆ ಎಂದರು.
ನ್ಯಾಯ ಸಿಕ್ಕರೆ ಖುಷಿಯಾಗುತ್ತದೆ
ರೇಣುಕಾಸ್ವಾಮಿ ಬಾಳಿ ಬದುಕಬೇಕಾಗಿದ್ದ ಯುವಕ, ಆತನ ಸಾವಿಗೆ ನ್ಯಾಯ ಸಿಗಬೇಕು. ಗರ್ಭಿಣಿಯಾಗಿರುವ ಆತನ ಪತ್ನಿ ಮತ್ತು ಹುಟ್ಟುವ ಮಗುವಿಗೆ ಕೂಡ ನ್ಯಾಯ ಸಿಗಬೇಕು ಎಂದರು.
ಮಾಧ್ಯಮಗಳಲ್ಲಿ ಏನು ಬರುತ್ತಿದೆ ಅದಷ್ಟೇ ನನಗೂ ಗೊತ್ತಿರುವುದು. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರ ನನಗೇನೂ ಗೊತ್ತಿಲ್ಲ. ಕನ್ನಡ ಚಿತ್ರರಂಗ ರೇಣುಕಾಸ್ವಾಮಿ ಕುಟುಂಬದ ಪರವಾಗಿ ಇರುತ್ತದೆ ಎಂದರು.
ಬ್ಯಾನ್ ಮಾಡಲು ನಮಗೆ ಅಧಿಕಾರ ಇಲ್ಲ. ದರ್ಶನ್ ಈ ಪ್ರಕರಣದಿಂದ ಹೊರಬಂದರೆ ಬ್ಯಾನ್ ಮಾಡಲಾಗದು, ಅವರ ಆರೋಪ ಸಾಬೀತಾದರೆ ಬ್ಯಾನ್ ಮಾಡುವ ಅಗತ್ಯ ಕೂಡ ಬರುವುದಿಲ್ಲ ಎಂದರು.
ಸುದೀಪ್-ದರ್ಶನ್ ಸ್ನೇಹ
ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದಲ್ಲಿ ಒಂದೇ ಸಮಯದಲ್ಲಿ ಮುನ್ನಲೆಗೆ ಬಂದ ನಟರು. ಆರಂಭದ ದಿನಗಳಲ್ಲಿ ಇಬ್ಬರ ನಡುವೆ ಒಟ್ಟಿಗೆ ಉತ್ತಮ ಬಾಂಧವ್ಯ ಇತ್ತು, ಆದರೆ ನಂತರದ ದಿನಗಳಲ್ಲಿ ಇಬ್ಬರೂ ಕೂಡ ದೂರವಾದರು.
ದೂರವಾದರೂ ಕೂಡ ಸುದೀಪ್ ಎಂದಿಗೂ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರಲ್ಲ. ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ನಾನು ಸುದೀಪ್ ಇನ್ನು ಸ್ನೇಹಿತರಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.
ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಅವರಿಗೆ ಅವಕಾಶ ಸಿಗಲು ಸುದೀಪ್ ಕಾರಣ ಎನ್ನುವ ವಿಚಾರ ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಮ್ಯಾಕ್ಸ್ ಸಿನಿಮಾ ಯಾವಾಗ?
ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಬಗ್ಗೆ ಕೂಡ ಸುದೀಪ್ ಮಾತನಾಡಿದ್ದು, ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು. ಆಗಸ್ಟ್ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಅಭಿಮಾನಿಗಳು ಬಿಡುಗಡೆಗಾಗಿ ಕಾಯುತ್ತಿದ್ದಾರೆ.












Click it and Unblock the Notifications