Vineesh Darshan: ದರ್ಶನ್ ಮಗ ವಿನೀಶ್ನ ನೋಡಿ ತುಂಬಾ ನೋವಾಯಿತು: ನಟ ಶಿವಣ್ಣ
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ದರ್ಶನ್ ಪುತ್ರ ವಿನೀಶ್ ಇದೇ ನೋವಿನಲ್ಲಿ ದಿನ ಕಳೆಯುತ್ತಿದ್ದಾರೆ. ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲಿಗೆ ಮರಳಬೇಕಾದ ಸನ್ನಿವೇಶದಲ್ಲಿ ವಿನೀಶ್ ಕಣ್ಣೀರಿಟ್ಟಿದ್ದಾಗಿ ವಿಜಯಲಕ್ಷ್ಮಿ ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದರು. ಇತ್ತೀಚೆಗೆ ನಟ ಶಿವರಾಜ್ಕುಮಾರ್ ಹಾಗೂ ವಿನೀಶ್ ಮುಖಾಮುಖಿ ಭೇಟಿಯಾಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಶಿವಣ್ಣ, 'ದರ್ಶನ್ ಮಗ ವಿನೀಶ್ನ ನೋಡಿ ತುಂಬಾ ನೋವಾಯಿತು' ಎಂದು ಬೇಸರ ಹೊರಹಾಕಿದ್ದಾರೆ.
ಕೆಂಗೇರಿ ಬಳಿಯ ಬಿಜಿಎಸ್ ಕಾಲೇಜ್ ಬಳಿ ಶಿವಣ್ಣ ಸಿನಿಮಾವೊಂದರ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ದರ್ಶನ್ ಪುತ್ರ ವಿನೀಶ್ ಶಿವಣ್ಣನನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರೂ ಕೆಲಕಾಲ ಆಪ್ತವಾಗಿ ಕುಶಲೋಪರಿ ವಿಚಾರಿಸಿ, ಶೇಕ್ ಹ್ಯಾಂಡ್ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಭೇಟಿ ವೇಳೆ ಶಿವಣ್ಣ ವಿನೀಶ್ಗೆ ಧೈರ್ಯ ತುಂಬಿದ್ದರು.

'ಒಂದೇ ಕುಟುಂಬದಂತಿದ್ದೆವು'
ಇತ್ತೀಚೆಗೆ '45' ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಶಿವಣ್ಣ, 'ನನ್ನ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ದರ್ಶನ್ ಮಗ ವಿನೀಶ್ ನಿಂತಿದ್ದ. ಅವನನ್ನು ನೋಡಿ ನನಗೆ ತುಂಬಾ ನೋವಾಯಿತು. ನನ್ನ ಬಳಿ ಬಂದು ಹೇಗಿದ್ದೀರಾ ಎಂದು ವಿಚಾರಿಸಿದ. ವಿನೀಶ್ ನನ್ನ ಬಗ್ಗೆ ಕೇರ್ ತಗೊಂಡಿದ್ದು ಮನಸ್ಸಿಗೆ ನಾಟಿತು. ಆಗ ನಾನು ತಲೆ ಕೆಡಿಸಿಕೊಳ್ಳಬೇಡ, ದೇವರ ಮೇಲೆ ಭಾರ ಹಾಕು ಎಲ್ಲ ಸರಿಹೋಗುತ್ತೆ ಎಂದು ಧೈರ್ಯ ತುಂಬಿದೆ ಎಂದಿದ್ದಾರೆ. ದರ್ಶನ್ಗೆ ಹೀಗೆಲ್ಲ ಆಗಿದ್ದೇಕೆ? ಎಂದು ಯಾರಿಗೂ ಗೊತ್ತಿಲ್ಲ. ಹೀಗೆ ಆಗಲಿ ಎಂದು ಯಾರೂ ಬಯಸುವುದಿಲ್ಲ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಕಾಲದಿಂದಲೂ ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದವರು' ಎಂದಿದ್ದಾರೆ ಶಿವಣ್ಣ.
ವೈರಲ್ ವಿಡಿಯೋದಲ್ಲಿ ಏನಿತ್ತು?
ಶೂಟಿಂಗ್ ಸಂದರ್ಭದಲ್ಲಿ ವಿನೀಶ್-ಶಿವಣ್ಣ ಭೇಟಿಯಾಗಿದ್ದ ವಿಡಿಯೋ ವೈರಲ್ ಆಗಿತ್ತು. ಆಗ ವಿನೀಶ್ನ ಕಂಡು ಶಿವಣ್ಣ, 'ಇಲ್ಲೇನಾ ಓದುತ್ತಿರೋದು?' ಎಂದು ಕೇಳಿದ್ದರು. ಇದಕ್ಕೆ ವಿನೀಶ್ 'ಹೌದು, ಹತ್ತನೇ ತರಗತಿ ಮುಗೀತು, ಇಲ್ಲೇ ಓದುತ್ತಿದ್ದೇನೆ' ಎಂದಿದ್ದರು. ಬಳಿಕ ಶಿವಣ್ಣನಿಗೆ 'ನೀವು ಚೆನ್ನಾಗಿದ್ದೀರಾ?' ಎಂದು ವಿನೀಶ್ ಯೋಗಕ್ಷೇಮ ವಿಚಾರಿಸಿದ್ದರು. ಇದಕ್ಕೆ ಶಿವಣ್ಣ, 'ನಾನು ಚೆನ್ನಾಗಿದ್ದೀನಿ, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ?' ಎಂದು ಶೇಕ್ ಹ್ಯಾಂಡ್ ಮಾಡಿದ್ದರು. ಕೊನೆಗೆ ವಿನೀಶ್ ಥ್ಯಾಂಕ್ಯೂ ಹೇಳಿದಾಗ ಕೈ ಕುಲುಕಿ, ಭುಜ ತಟ್ಟಿ ಮಾತನಾಡಿಸಿದ್ದರು.
ದರ್ಶನ್ ಅವರು ತಮ್ಮ ಸಿನಿಮಾಗಳಲ್ಲಿ ಈಗಾಗಲೇ ವಿನೀತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮುಂದೆ ದೊಡ್ಡ ಹೀರೋ ಮಾಡಬೇಕು ಎಂಬ ಕನಸು ಕೂಡ ಕಂಡಿದ್ದಾರೆ. ಈಗಾಗಲೇ ಇದಕ್ಕೆ ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಈ ಹೊತ್ತಲ್ಲೇ ಅಪ್ಪ ದರ್ಶನ್ ಅವರು ಜೈಲು ಸೇರಿರುವುದರಿಂದ ವಿನೀಶ್ ನೋವಿನಲ್ಲಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ವಿನೀಶ್ ದರ್ಶನ್ ಜೊತೆ ಜೊತೆಯಲ್ಲೇ ಇದ್ದರು. ಆದರೆ ಅಪ್ಪ ಈಗ ತನ್ನ ಜೊತೆಯಲ್ಲಿ ಇಲ್ಲ. ಯಾವಾಗ ಜೈಲಿನಿಂದ ಹೊರಗೆ ಬರ್ತಾರೋ ಎನ್ನುವ ಚಿಂತೆಯಲ್ಲೇ ಮುಳುಗಿದ್ದಾರೆ ವಿನೀಶ್.












Click it and Unblock the Notifications