Ranya Rao: ರನ್ಯಾ ರಾವ್ ಪ್ರಕರಣ; ಡಿಜಿಪಿ ಕೆ. ರಾಮಚಂದ್ರ ರಾವ್ಗೆ ಕಡ್ಡಾಯ ರಜೆ
ಚಿನ್ನದ ಕಳ್ಳ ಸಾಗಾಟ ಪ್ರಕರಣದಲ್ಲಿ ಬಂಧಿತವಾಗಿರುವ ನಟಿ ರನ್ಯಾ ರಾವ್ಗೆ ಜಾಮೀನು ನಿರಾಕರಿಸುವ ಮೂಲಕ ಶುಕ್ರವಾರ ಕೋರ್ಟ್ ಶಾಕ್ ಕೊಟ್ಟಿತ್ತು. ಇದೀಗ ರನ್ಯಾ ರಾವ್ ಮಲತಂದೆ ಹಿರಿಯ ಪೊಲೀಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ ಅವರ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ಆಗಿರುವ ಕೆ. ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಗೆ ಕಳುಹಿಸುವ ಆದೇಶವನ್ನು ಶನಿವಾರ ಸಂಜೆ ಹೊರಡಿಸಲಾಗಿದೆ. ಆದೇಶದಲ್ಲಿ ಕಡ್ಡಾಯ ರಜೆಗೆ ಯಾವುದೇ ನಿರ್ದಿಷ್ಟ ಕರಣವನ್ನು ನೀಡಿಲ್ಲ.

ಮಾರ್ಚ್ 3ರಂದು ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಂಧಿಸಲಾಗಿತ್ತು. ನಟಿ ದುಬೈನಿಂದ ತಂದಿದ್ದ 14.8 ಚಿನ್ನವನ್ನು ಡಿಆರ್ ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ರನ್ಯಾ ರಾವ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೆ. ರಾಮಚಂದ್ರ ರಾವ್ "ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಮಾಧ್ಯಮಗಳ ಮೂಲಕವೇ ನನಗೂ ಈ ವಿಚಾರ ಗೊತ್ತಾಗಿದ್ದು ಆಘಾತವಾಗಿದೆ. ಇದರ ಬಗ್ಗೆ ನಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ, ರನ್ಯಾ ರಾವ್ ನಮ್ಮ ಜೊತೆ ವಾಸ ಮಾಡುತ್ತಿಲ್ಲ, ಆಕೆ ಗಂಡನ ಜೊತೆ ಬೇರೆ ವಾಸ ಮಾಡುತ್ತಿದ್ದು, ಕುಟುಂಬದಲ್ಲಿ ಏನೋ ಸಮಸ್ಯೆ ಇರಬಹುದು ಎಂದು ಹೇಳಿದ್ದರು.
ರನ್ಯಾ ರಾವ್ ಮೇಲೆ ಗಂಭೀರ ಆರೋಪ
ಪ್ರಾಥಮಿಕ ವಿಚಾರಣೆಯಲ್ಲಿ ರನ್ಯಾ ರಾವ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯನ್ನು ತಪ್ಪಿಸಿಕೊಳ್ಳಲು ಪ್ರಭಾವ ಬಳಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಾನು ಡಿಜಿಪಿಯ ಮಗಳು ಎಂದು ಹೇಳಿಕೊಂಡಿದ್ದ ಅವರು, ಸ್ಥಳೀಯ ಪೊಲೀಸರನ್ನು ಸಂಪರ್ಕಿಸುತ್ತಿದ್ದರು. ಆದರೆ ರನ್ಯಾ ರಾನ್ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿದ್ದರಿಂದ, ಅವರ ಮೇಲೆ ಕಣ್ಣಿಡಲಾಗಿತ್ತು.
ಮಾರ್ಚ್ 3 ರಂದು ದುಬೈನಿಂದ ಆಗಮಿಸಿದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಂದ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ನಂತರ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. ಹೆಚ್ಚಿನ ಚಿನ್ನವನ್ನು ಧರಿಸುತ್ತಿದ್ದ ಅವರು, ಬಳಿಕ ವಿಶೇಷವಾಗಿ ವಿನ್ಯಾಸ ಮಾಡಿದ್ದ ಬಟ್ಟೆಯಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬರುತ್ತಿದ್ದರು ಎನ್ನುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು.
ಅಧಿಕಾರಿಗಳು ರನ್ಯಾ ರಾವ್ ಮನೆಯನ್ನು ಶೋಧ ನಡೆಸಿದ ಸಂದರ್ಭದಲ್ಲಿ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂಪಾಯಿ ಮೌಲ್ಯದ ನಗದು ಪತ್ತೆಯಾಗಿದೆ.
ಪ್ರಕರಣದ ತನಿಖೆಯನ್ನು ಡಿಆರ್ಐ, ಸಿಬಿಐ ಮತ್ತು ಇಡಿಗಳು ತನಿಖೆ ಮಾಡುತ್ತಿದ್ದು, ಹವಾಲಾ, ಕಳ್ಳ ಸಾಗಾಣೆ ಸೇರಿದಂತೆ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತವಾಗಿದೆ.












Click it and Unblock the Notifications