Darshan Thoogudeepa: ಕನ್ನಡ ಮಾತಾಡಲ್ಲ ಎಂದ ಪುಷ್ಪ-2 ನಟ ಅಲ್ಲು ಅರ್ಜುನ್: ಡಿ-ಬಾಸ್ ಖಡಕ್ ವಾರ್ನಿಂಗ್!
ಇಂದು ಪುಷ್ಪ-2 ಸಿನಿಮಾ ರಿಲೀಸ್ ಆಗಿದೆ. ಆದರೆ ಈ ಸಿನಿಮಾ ಕರ್ನಾಟಕದಲ್ಲಿ ವಿವಾದವನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಮೊದಲನೆಯಾಗಿ ಕನ್ನಡ ಸಿನಿಮಾಗಳನ್ನು ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ಹಾಕುವುದಿಲ್ಲ. ಒಂದು ವೇಳೆ ಹಾಕಿದರೂ ಕೆಲವೇ ಕೆಲವು ದಿನಗಳ ಬಳಿಕ ತೆಗೆದು ಬಿಡುತ್ತಾರೆ. ಇತ್ತೀಚೆಗೆ ತೆರೆಕಂಡಿದ್ದ ಶ್ರೀಮುರಳಿ ಅವರ ಬಘೀರ ಸಿನಿಮಾವನ್ನೂ ಕೂಡ ಹೆಚ್ಚು ದಿನಗಳ ಕಾಲ ಆಂಧ್ರ ಪ್ರದೇಶದಲ್ಲಿ ಹಾಕಿಲ್ಲ. ಅಲ್ಲದೆ ಅದಕ್ಕೆ ಯಾವುದೇ ರೀತಿಯ ಥಿಯೇಟರ್ಗಳ ಅವಕಾಶವನ್ನೂ ಕೂಡ ಮಾಡಿಕೊಟ್ಟಿಲ್ಲ. ಪ್ರಸ್ತುತ ಪುಷ್ಪ-2 ಗೆ ಕನ್ನಡಿಗರು ಅದೇ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ.
ಹೌದು.. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದಿಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಓಡ್ತಾಯಿದ್ದರೆ ಅಂತಹ ಸಿನಿಮಾವನ್ನು ಒಂದೆರೆಡು ದಿನ ಥಿಯೇಟರ್ಗಳಲ್ಲಿ ಹಾಕಿದರೆ ಹೆಚ್ಚು. ಹೀಗಿರುವಾಗ ತೆಲಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ಯಾಕೆ ಹೆಚ್ಚು ಥಿಯೇಟರ್ ಹಾಗೂ ಪ್ರಾಶಸ್ತ್ಯ ನೀಡಬೇಕು ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿನ ನಟರು ಕನ್ನಡ ಮಾತನಾಡಲು ಮನಸ್ಸು ಮಾಡುವುದಿಲ್ಲ. ಕನ್ನಡ ಮಾತನಾಡುವುದಿಲ್ಲ ಅಂತ ನೇರವಾಗಿ ಹೇಳಿ ಬಿಡುತ್ತಾರೆ. ಹೀಗಿರುವಾಗ ಕರ್ನಾಟಕದಲ್ಲಿ ತೆಲುಗು ಸಿನಿಮಾಗಳನ್ನು ಯಾಕೆ ಬೆಳಸಬೇಕು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡ ಮಾತಾಡಲ್ಲ ಎಂದ ಅಲ್ಲು ಅರ್ಜುನ್
ಇದೇ ವೇಳೆ ಅಲ್ಲು ಅರ್ಜುನ್ ಹೇಳಿದ ಆ ಒಂದು ಮಾತು ದೊಡ್ಡ ಕಿಚ್ಚನ್ನು ಹಚ್ಚಿಬಿಟ್ಟಿದೆ. ಬೇರೆ ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲು ಅರ್ಜುನ್ ಅವರು ಸ್ಥಳೀಯ ಭಾಷೆಯಾದ ತಮಿಳು ತೆಲುಗು ಮಾತನಾಡುತ್ತಾರೆ. ಸ್ಥಳೀಯ ಭಾಷೆಗಳಲ್ಲಿ ಮಾತನಾಡಿ ಅಭಿಮಾನಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳುತ್ತಾರೆ. ಆದರೆ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ಆಗಲ್ಲ ಎಂದು ಹೇಳಿಬಿಟ್ಟಿದ್ದರು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಿರುವಾಗ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ನೋಡದಿರಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ನೋಡಿದವರೂ ಕೂಡ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಫಸ್ಟ್ ಡೇ ಫಸ್ಟ್ ಶೋಗೆ ಮಲ್ಟಿಪ್ಲಸ್ ಸಿನಿಮಾ ಮಂದಿರಗಳಲ್ಲಿ ದುಬಾರಿ ಹಣಕ್ಕೆ ಟಿಕೆಟ್ ದರ ನಿಗಧಿಯಾಗಿದ್ದು ಕನ್ನಡಿಗರ ಕೋಪ ನೆತ್ತಿಗೇರುವಂತೆ ಮಾಡಿದೆ.
ಡಿ-ಬಾಸ್ ಖಡಕ್ ವಾರ್ನಿಂಗ್!
ಇನ್ನೂ ಅಲ್ಲು ಅರ್ಜುನ್ ಕನ್ನಡ ಮಾತನಾಡಲು ನಿರಾಕರಿಸಿದ್ದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಡಿ-ಬಾಸ್ ನಮ್ಮ ಕನ್ನಡದಲ್ಲೂ ಸಹ ಎಷ್ಟೋ ಯುವ ಪ್ರತಿಭೆಗಳಿದ್ದಾರೆ. ಅವರಿಗೆ ಸಪೋರ್ಟ್ ಮಾಡುತ್ತೇವೆ ಹೊರತು ಬೇರೆಯವರಿಗೆ ನಾವು ಸಪೋರ್ಟ್ ಮಾಡುವ ಅವಶ್ಯಕತೆ ಇಲ್ಲ ಅಂತ ಇನ್ಡೈರೆಕ್ಟ್ ಆಗಿ ದರ್ಶನ್ ಟಾಂಗ್ ಕೊಟ್ಟಿದ್ದರು.

ತಾಯಿನಾಡು ವಿಚಾರಕ್ಕೆ ಬಂದರೆ ಮೊದಲು ಮುಂದೆ ನಿಂತಿಕೊಳ್ಳುವುದು ಡಿ-ಬಾಸ್ ದರ್ಶನ್. ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವಿಚಾರದಲ್ಲಿ ಯಾರನ್ನೂ ಕೂಡ ಲೆಕ್ಕಿಸುವುದಿಲ್ಲ. ತಮಗೆ ಅನಿಸಿದ್ದನ್ನು ನೇರವಾಗಿಯೇ ಹೇಳಿ ಬಿಡ್ತಾರೆ. ಈ ಗುಣ ಅವರ ಅಭಿಮಾನಿಗಳಿಗೆ ತುಂಬಾನೇ ಇಷ್ಟ.
ಒಟ್ಟಿನಲ್ಲಿ ಪುಷ್ಪ-2 ಸಿನಿಮಾಕ್ಕೆ ಮಾತ್ರ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಡಿನಿಂದಲೇ ಅರ್ಧ ಸಿನಿಮಾ ಹಾಳಾದರೆ ಸಿನಿಮಾದಲ್ಲಿ ಚಿತ್ರ ತಂಡು ತುಂಬಾ ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಸಿನಿಮಾವನ್ನು ಸಂಪೂರ್ಣವಾಗಿ ಹಾಳು ಮಾಡಿಬಿಟ್ಟಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಪುಷ್ಪ-2 ಚಿತ್ರದ ವಿರುದ್ಧ ದೂರು
ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಜಾಗವಿಲ್ಲದಂತೆ ಪುಷ್ಪ-2 ಚಿತ್ರಕ್ಕೆ ಜಾಗ ಮಾಡಿಕೊಡುತ್ತಿರುವುದು ಕಂಡು ಬಂದಿದೆ. ಈ ಸಿನಿಮಾಕ್ಕಾಗಿ ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಖಂಡಿಸಲಾಗಿದೆ. ಅಲ್ಲದೆ ಸಿನಿಮಾ ತೆರೆ ಕಾಣುವ ಮುನ್ನ ಟಿಕೆಟ್ ದರಕ್ಕೆ ಲಗ್ಗುಲಗಾಮ್ ಇರಲಿಲ್ಲ. ರಾಜ್ಯದ ಪ್ರತಿಷ್ಟಿತ ಚಿತ್ರ ಮಂದಿರಗಳಲ್ಲಿ ರಾತ್ರೋರಾತ್ರಿ ಕನ್ನಡ ಸಿನಿಮಾ ಬಿಟ್ಟು ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಕನ್ನಡ ಚಲನಚಿತ್ರ ನಿರ್ಮಾಪಕ ಸಂಘ ರಾಜ್ಯದ ನಿಯಮ ಗಾಳಿಗೆ ತೂರಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.
ರಾಜ್ಯದಲ್ಲಿ ಬೆಳಗ್ಗೆ ಆರು ಗಂಟೆಯ ಒಳಗೆ ಸಿನಿಮಾ ಪ್ರದರ್ಶನ ಮಾಡುವಂತಿಲ್ಲ. ಜೊತೆಗೆ ಟಿಕೆಟ್ ದರ ಮನಸೋ ಇಚ್ಚೆ ಹೆಚ್ಚಿಸಲಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿರ್ಮಾಪಕ ಸಂಘ ದೂರು ದಾಖಲಿಸಿತ್ತು. ನಿರ್ಮಾಪಕ ಸಂಘದ ದೂರು ಸ್ವೀಕರಿಸಿ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.
ಪುಷ್ಪರಾಜ್ ವಿರುದ್ಧ ಕೇಸ್ ದಾಖಲು
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಚಿತ್ರ ದೇಶದೆಲ್ಲೆಡೆ ಅದ್ಧೂರಿಯಾಗಿ ತೆರೆ ಕಂಡಿದ್ದು ಸಾಕಷ್ಟು ವಿಘ್ನಗಳು ಎದುರಾಗಿವೆ. ಪುಷ್ಪ-2 ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾ ನೋಡಲು ಬಂದ ಓರ್ವ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಹೀಗಾಗಿ ಚಿತ್ರ ತಂಡ, ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ (ಡಿಸೆಂಬರ್ 4) ರಾತ್ರಿ 10:30ಕ್ಕೆ ಚಿತ್ರ ಪ್ರೀಮಿಯರ್ ಶೋ ಪ್ರದರ್ಶನಗೊಂಡಿತ್ತು. ಇದಕ್ಕೆ ದಿಲ್ಸುಖ್ನಗರದ ನಿವಾಸಿ ರೇವತಿ ತಮ್ಮ ಪತಿ ಭಾಸ್ಕರ್ ಹಾಗೂ ಅವರ ಇಬ್ಬರು ಮಕ್ಕಳೊಂದಿಗೆ ಸಿನಿಮಾ ನೋಡಲು ಥಿಯೇಟರ್ಗೆ ಬಂದಿದ್ದರು. ಈ ವೇಳೆ ಥಿಯೇಟರ್ಗೆ ನಟ ಅಲ್ಲು ಅರ್ಜುನ್ ಆಗಮಿಸಿದ ಬೆನ್ನಲ್ಲೇ ನೂಕುನುಗ್ಗಲು ಆಗಿ ಕಾಲ್ತುಳಿತಕ್ಕೆ ಮಹಿಳೆ ಮೃತಪಟ್ಟಿದ್ದಾಳೆ. ಘಟನೆಯಿಂದ ಹಲವಾರು ಜನರಿಗೆ ಗಾಯಗಳಾಗಿವೆ.












Click it and Unblock the Notifications