Darshan: ದರ್ಶನ್ ಯಾವ ತಪ್ಪೂ ಮಾಡಿಲ್ಲ! ಆದಷ್ಟು ಬೇಗ ಹೊರಗೆ ಬರುತ್ತಾರೆ; ನಿರ್ಮಾಪಕ ಕೆ ಮಂಜು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿರ್ಮಾಪಕ ಕೆ.ಮಂಜು ಭೇಟಿ ಮಾಡಿದರು. ಸೋಮವಾರ ಜೈಲಿನಲ್ಲಿ ದರ್ಶನ್ರನ್ನು ಭೇಟಿಯಾದ ಮಂಜು, ದರ್ಶನ್ ಯಾವ ತಪ್ಪು ಮಾಡಿಲ್ಲ ಎಂದು ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಕೆ. ಮಂಜು, ಎಲ್ಲಾ ಒಳ್ಳೆಯದಾಗುತ್ತದೆ ದೇವರಿದ್ದಾನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ, ನೋವು ಆಗದೇ ಇರುತ್ತದಾ ಎಂದ ಅವರು, ಏನೋ ಘಟನೆ ನಡೆದಿದೆ ಆದರೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ ಎಂದಿದ್ದಾರೆ.
ದರ್ಶನ್ ಕೊಲೆ ಮಾಡಿಲ್ಲ!
ಕೆ. ಮಂಜು ಅವರ ಮಾತಿಗೆ ಮಾಧ್ಯಮದವರು ಹಾಗಿದ್ದರೆ ದರ್ಶನ್ ಕೊಲೆ ಮಾಡಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಕೆ ಮಂಜು, ದರ್ಶನ್ ಕೊಲೆ ಮಾಡಿಲ್ಲ, ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ ಎಂದು ಉತ್ತರ ನೀಡಿದರು.
ಕಾನೂನಿನ ಮೇಲೆ ನಮ್ಮಿಬ್ಬರಿಗೂ ನಂಬಿಕೆ ಇದೆ. ಸತ್ಯ ಏನೆಂದು ಜಗತ್ತಿಗೆ ಗೊತ್ತಾಗುತ್ತದೆ. ದರ್ಶನ್ ಶೀಘ್ರದಲ್ಲೇ ಹೊರಗಡೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮಿಬ್ಬರ ವೈಯಕ್ತಿಕ ವಿಚಾರಗಳನ್ನು ಮಾತನಾಡಿದ್ದೇವೆ, ಎಲ್ಲವನ್ನೂ ಹೇಳಲು ಆಗಲ್ಲ ಎಂದರು.
ವಾರಕ್ಕೆ ಮೂರು ಜನರಿಗೆ ಭೇಟಿಗೆ ಅವಕಾಶ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಒಂದು ತಿಂಗಳಾಗಿದೆ. ದರ್ಶನ್ ಬಂಧನ ಇಡೀ ಕನ್ನಡ ಚಿತ್ರರಂಗವನ್ನೇ ಆಘಾತಕ್ಕೆ ದೂಡಿದೆ. 12 ದಿನ ಸತತವಾಗಿ ವಿಚಾರಣೆ ನಡೆಸಿದ ಬಳಿಕ ದರ್ಶನ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದರ್ಶನ್ ಬಂಧನದ ಆರಂಭದಲ್ಲಿ ಅಂತರ ಕಾಯ್ದುಕೊಂಡಿದ್ದ ಸ್ಯಾಂಡಲ್ವುಡ್ ನಟ, ನಟಿಯರು ಮತ್ತು ನಿರ್ಮಾಪಕರು ಈಗ ದರ್ಶನ್ ಪರ ಮಾತನಾಡಲು ಶುರು ಮಾಡಿದ್ದಾರೆ. ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್, ವಿನೋದ್ ಪ್ರಭಾಕರ್, ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಈಗಾಗಲೇ ದರ್ಶನ್ರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ.
ವಾರಕ್ಕೆ ಮೂರು ಜನರಿಗೆ ಮಾತ್ರ ಅವರನ್ನು ಜೈಲಿನಲ್ಲಿ ಭೇಟಿ ಮಾಡಲು ಅವಕಾಶವಿದ್ದು, ದರ್ಶನ್ ಆಪ್ತರು ಅವರನ್ನು ಭೇಟಿ ಮಾಡಿಕೊಂಡು ಬರುತ್ತಿದ್ದಾರೆ.












Click it and Unblock the Notifications