ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ನಂದಗೋಕುಲ: ಯಶ್, ರಾಧಿಕಾ ಫ್ಯಾನ್ಸ್ ಫುಲ್ ಖುಷ್ ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲು ಸಜ್ಜಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಖ್ಯಾತಿಯ ನಟ ತ್ರಿವಿಕ್ರಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮುದ್ದು ಸೊಸೆ ಧಾರಾವಾಹಿ ಮುಂದಿನ ವಾರದಿಂದ ರಾತ್ರಿ 7:30ಕ್ಕೆ ಪ್ರಸಾರವಾಗುವುದು ಖಚಿತವಾಗಿದೆ. ಮುದ್ದು ಸೊಸೆ ಧಾರಾವಾಹಿ ಆರಂಭದ ಖುಷಿಯಲ್ಲಿದ್ದ ಪ್ರೇಕ್ಷಕರಿಗೆ ಡಬ್ಬಲ್ ಧಮಾಕ ಸಿಕ್ಕಿದ್ದು, ಇನ್ನೊಂದು ಹೊಸ ಧಾರಾವಾಹಿ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ.
ಈ ಹಿಂದೆ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸೂಪರ್ ಹಿಟ್ ಧಾರಾವಾಹಿ ನಂದಗೋಕುಲ ಹೆಸರಿನಲ್ಲಿಯೇ ಹೊಸ ಧಾರಾವಾಹಿ ಮೂಡಿ ಬರಲಿದ್ದು, ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆಯೇ ನಂದಗೋಕುಲ ಎನ್ನುವ ಕ್ಯಾಪ್ಷನ್ನೊಂದಿಗೆ ಹೊಸ ಧಾರಾವಾಹಿ ನಂದಗೋಕುಲದ ಪ್ರೋಮೋ ವೈರಲ್ ಆಗುತ್ತಿದೆ.

ತಂದೆ ನಂದನ್ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಗಂಡು ಮಕ್ಕಳನ್ನು ತನ್ನಿಷ್ಟದಂತೆ ಬೆಳೆಸುವ ಪರಿಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ನಾನು ಹಾಕಿದ ಗೆರೆಯನ್ನು ನನ್ನ ಕುಟುಂಬದಲ್ಲಿ ಯಾರು ದಾಟುವುದಿಲ್ಲ, ಮುಂದೆ ಬರುವ ಸೊಸೆಯಂದಿರು ಕೂಡ ದಾಟುವುದಿಲ್ಲ. ನನ್ನ ಕುಟುಂಬ ಈಗ ಹೇಗೆ ಇದೆಯೋ ಮುಂದೆಯೂ ಹಾಗೇ ಹೆಸರಿಗೆ ತಕ್ಕಂತೆ ನಂದಗೋಕುಲವಾಗಿರುತ್ತದೆ ಎಂದು ಊರಿನವರ ಮುಂದೆ ನಂದನ್ ಸವಾಲು ಹಾಕುತ್ತಾನೆ. ನಂದನ್ ಕುಟುಂಬ ನಂದಗೋಕುಲವಾಗಿಯೇ ಇರುತ್ತಾ ಎನ್ನುವುದೇ ಧಾರಾವಾಹಿಯ ಕಥಾಹಂದರವಾಗಿದೆ.
ಪ್ರೋಮೋದಲ್ಲಿಯೇ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ನಂದಗೋಕುಲ ಧಾರಾವಾಹಿ ಮಧ್ಯಮ ವರ್ಗದ ತುಂಬು ಕುಟುಂಬದ ಕಥೆಯಾಗಿದ್ದು, ಕಿರುತೆರೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವುದರಲ್ಲಿ ಎರಡು ಮಾತಿಲ್ಲ. ದೃಷ್ಟಿಬೊಟ್ಟು ಹಾಗೂ ನೂರು ಜನ್ಮಕೂ ಧಾರಾವಾಹಿ ನಿರ್ದೇಶನ ಮಾಡಿರುವ ನಿರ್ದೇಶಕ ಶ್ರವಂತ್, ನಂದಗೋಕುಲ ಧಾರಾವಾಹಿಗೂ ಕೂಡ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಶ್ರವಂತ್ ಹಾಗೂ ಪತ್ನಿ ರಾಧಿಕಾ ಅವರ ಹೊಸ ಧಾರಾವಾಹಿ ನಿರ್ಮಾಣ ಸಂಸ್ಥೆ ಜಾಹ್ನವಿ ಫಿಲ್ಮ್ ಎಂಫೈರ್ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ.

ನಂದಗೋಕುಲ ಧಾರಾವಾಹಿಯಲ್ಲಿ ನಟ ಅರವಿಂದ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿಷೇಕ್, ವಿಜಯ್ ಚಂದ್ರ ಹಾಗೂ ಯಶವಂತ್ ಮಕ್ಕಳ ಪಾತ್ರದಲ್ಲಿ ನಟಿಸುತ್ತಿದ್ದು, ನಟಿ ಅಮೃತಾ ನಾಯ್ಡು ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಪ್ರೋಮೋ ಮೂಲಕ ಕುತೂಹಲ ಹೆಚ್ಚಿಸಿರುವ ನಂದಗೋಕುಲ ಆದಷ್ಟು ಬೇಗ ಪ್ರಸಾರ ಕಂಡು ಯಶಸ್ಸು ಕಾಣಲಿ ಎಂದು ಪ್ರೇಕ್ಷಕರು ಹಾರೈಸಿದ್ದಾರೆ.












Click it and Unblock the Notifications