Darshan Thoogudeepa: ಜೈಲಿಗೆ ಹೋಗಿ ದರ್ಶನ್ರನ್ನು ಭೇಟಿ ಮಾಡಲ್ಲ ಎಂದ ರಾಜ್ ಬಿ ಶೆಟ್ಟಿ! ಕಾರಣವೇನು?
ನಟ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದು ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ದರ್ಶನ್ರನ್ನು ಜಾಮೀನಿನ ಮೇಲೆ ಹೊರತರಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಪೊಲೀಸರು ಮಾತ್ರ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಸಜ್ಜಾಗಿದ್ದಾರೆ.
ದರ್ಶನ್ ಬಂಧನವಾದ ಆರಂಭದ ದಿನಗಳಲ್ಲಿ ಅಂತರ ಕಾಯ್ದುಕೊಂಡಿದ್ದ ಕನ್ನಡ ಚಿತ್ರರಂಗದವರು ಬಳಿಕ ಈ ಬಗ್ಗೆ ಮಾತನಾಡಲು ಆರಂಭಿಸಿದರು. ಒಬ್ಬೊಬ್ಬರಾಗಿ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇನ್ನೂ ಕೆಲವರು ದರ್ಶನ್ ಪ್ರಕರಣದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದು, ಕಾನೂನು ಪ್ರಕಾರ ತೀರ್ಮಾನವಾಗಲಿ ಎಂದು ಹೇಳಿದ್ದಾರೆ.

ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ದರ್ಶನ್ ಬಂಧನ ಪ್ರಕರಣದ ಬಗ್ಗೆ ಈ ಮೊದಲು ಮಾತನಾಡಿದ್ದರು. ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ, ಅದನ್ನು ಎಲ್ಲರಿಗೂ ಸಂಪಾದಿಸಲು ಆಗದು, ದೇವರು ಕೊಟ್ಟ ವರ ಎಂದು ಹೇಳಿದ್ದರು. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಅವರು ಜೈಲಿನಿಂದ ಹೊರಬರುವಾಗ ಬದಲಾಗಿ ಬರಲಿ ಎಂದು ಹಾರೈಸಿದ್ದರು.
ದರ್ಶನ್ ಭೇಟಿ ಮಾಡಲು ಹೋಗಲ್ಲ!
ಮಾಧ್ಯಮವೊಂದರಲ್ಲಿ ಮಾತನಾಡುವಾಗ ವರದಿಗಾರ ದರ್ಶನ್ರನ್ನು ಭೇಟಿ ಮಾಡಲು ಜೈಲಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ, ದರ್ಶನ್ ಅವರ ಜೊತೆ ನನಗೆ ಹೆಚ್ಚು ಪರಿಚಯವಿಲ್ಲ. ಅವರನ್ನು ಒಂದು ಬಾರಿ ಮಾತ್ರ ಭೇಟಿಯಾಗಿದ್ದೇನೆ. ನಾನು ಜೈಲಿಗೆ ಹೋಗಿ ಅವರನ್ನು ಭೇಟಿ ಮಾಡುವುದು ಸರಿಯಲ್ಲ, ನಾನು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಒಂದು ಸಲ ಭೇಟಿಯಾದವರನ್ನು ಜೈಲಿಗೆ ಹೋಗಲ್ಲ ಅಲ್ವಾ, ನನಗೆ ಗೊತ್ತಿಲ್ಲ ನಾನು ಯಾಕೆ ಹೋಗಬೇಕು ಅಂತ. ಅಂತಹ ಘಟನೆ ನಡೆಯಬಾರದಿತ್ತು ನಡೆದುಹೋಗಿದೆ. ಇದರಿಂದ ಎಲ್ಲರೂ ಪಾಠ ಕಲಿಯಬೇಕು. ನಾವು ಕೂಡ ಸಾಮಾನ್ಯರು, ಕಾನೂನನ್ನು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ, ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಪ್ರಕರಣವನ್ನು ನಿಭಾಯಿಸಿರುವ ರೀತಿ ತುಂಬಾ ಖುಷಿ ಅನ್ನಿಸಿದೆ, ಪ್ರಭಾವಿಗಳಿಗೆ ಶಿಕ್ಷೆ ಆಗಲ್ಲ ಎಂದು ಜನರಿಗೆ ಕಾನೂನಿನ ಬಗ್ಗೆ ಕೆಟ್ಟ ಅಭಿಪ್ರಾಯವಿತ್ತು, ಈಗ ಆರೋಪಿಗಳ ಸ್ಥಾನದಲ್ಲಿದ್ದಾರೆ ಅಪರಾಧಿ ಅಂತಾ ಸಾಬೀತಾಗುತ್ತಾ ಇಲ್ಲವಾ ಮುಂದೆ ನೋಡೋಣ ಎಂದು ಹೇಳಿದ್ದಾರೆ.
ದರ್ಶನ್ ಮನೆ ಊಟ ಕೇಳಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ದರ್ಶನ್ ಜೈಲು ಊಟವನ್ನೇ ತಿನ್ನಬೇಕಾಗಿದೆ. ಪತ್ನಿ ವಿಜಯಲಕ್ಷ್ಮಿ ಗಂಡನಿಗೆ ಒಳ್ಳೆಯದಾಗಲಿ ಎಂದು ದೇವರ ಮೊರೆ ಹೋಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಯಾಗ ಮಾಡಿಸಿದ್ದರು.












Click it and Unblock the Notifications