Sudeep: ಕಳ್ಳತನದ ಮಾಲ್ಗೆ ಆಸೆ ಪಡೋರು ಶಿವಾಜಿನಗರದಲ್ಲಿ ಸಿಕ್ಕೇ ಸಿಗ್ತಾರೆ: ಪೈರಸಿ ಬಗ್ಗೆ ಮತ್ತೆ ಗುಡುಗಿದ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರು ಪೈರಸಿ ಎಂಬ ಪಿಡುಗಿನ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಇತ್ತೀಚೆಗೆ ನಡೆದ "ಕೆಡಿ" ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈರಸಿ ಮಾಡುವವರನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ಎಂಬ ದೊಡ್ಡ ಸಮಸ್ಯೆಯ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮದೇ ಶೈಲಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ತಮ್ಮ ಮಾರ್ಕ್ ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ವಿರುದ್ಧ ಸಮರ ಸಾರಿದ್ದ ಸುದೀಪ್, ಈಗ 'ಕೆಡಿ' ಚಿತ್ರದ ಸುದ್ದಿಗೋಷ್ಠಿಯಲ್ಲೂ ಅದೇ ಎಚ್ಚರಿಕೆ ಕೊಟ್ಟಿದ್ದಾರೆ. 'ಕೆಡಿ' ಚಿತ್ರಕ್ಕೆ ಪೈರಸಿ ಕಾಟ ಎದುರಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, "ಈ ಚಿತ್ರದ ನಾಯಕ ಧ್ರುವ ಸರ್ಜಾ ಅವರಿಗೆ ಕರ್ನಾಟಕದಾದ್ಯಂತ ಅತಿದೊಡ್ಡ ಅಭಿಮಾನಿ ಬಳಗವಿದೆ. ಒಂದು ವೇಳೆ ಯಾರಾದರೂ ಪೈರಸಿ ಮಾಡಲು ಪ್ರಯತ್ನಿಸಿದರೆ, ಧ್ರುವ ಅವರ ಆ ದೊಡ್ಡ ಸೈನ್ಯ ರಾಜ್ಯಾದ್ಯಂತ ಹರಡಿಕೊಂಡಿದೆ, ಅವರೇ ಇದನ್ನು ಸಮರ್ಥವಾಗಿ ಎದುರಿಸುತ್ತಾರೆ ಮತ್ತು ನೋಡಿಕೊಳ್ಳುತ್ತಾರೆ" ಎಂದಿದ್ದಾರೆ.

ಕಳ್ಳ ಮಾಲಿಗೆ ಆಸೆ ಪಡುವವರು ಕಳ್ಳರೇ
ಪೈರಸಿ ಮಾಡುವವರು ಮತ್ತು ಅದನ್ನು ನೋಡುವವರ ಮನಸ್ಥಿತಿಯ ಬಗ್ಗೆ ಮಾತನಾಡಿದ ಅವರು, "ಕಳ್ಳತನದ ಮಾಲಿಗೆ ಆಸೆ ಪಡುವವರು ಶಿವಾಜಿನಗರದಲ್ಲಿ ಸಿಕ್ಕೇ ಸಿಗುತ್ತಾರೆ. ಆದರೆ, ಕಳ್ಳತನ ನಡೆಯುತ್ತಿದೆ ಎಂಬ ಕಾರಣಕ್ಕೆ ಯಾವ ದೊಡ್ಡ ಮಾಲ್ಗಳೂ ಮುಚ್ಚಿಲ್ಲ. ಅದೇ ರೀತಿ ಪೈರಸಿ ಕೂಡ, ಕಳ್ಳತನದ ಮಾಲನ್ನು ಖರೀದಿಸುವವರು ಅಥವಾ ನೋಡುವವರು ಅಕ್ಷರಶಃ ಕಳ್ಳರೇ. ಇಂತಹ 'ಕಳ್ ನನ್ನ ಮಕ್ಕಳ' ಬಗ್ಗೆ ಮಾತನಾಡಿ ನಾವು ಸಮಯ ವ್ಯರ್ಥ ಮಾಡುವುದು ಬೇಡ" ಎಂದು ಹೇಳಿದ್ದಾರೆ.
ಥಿಯೇಟರ್ ನಮಗೆ ದೇವಸ್ಥಾನ
ಪೈರಸಿ ಮಾಡುವವರ ಬಗ್ಗೆ ಚರ್ಚಿಸುವುದಕ್ಕಿಂತ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಅಭಿಮಾನಿಗಳ ಬಗ್ಗೆ ಮಾತನಾಡುವುದು ಉತ್ತಮ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. "ನಮಗೆ ಥಿಯೇಟರ್ ಎನ್ನುವುದು ದೇವರ ಸಮಾನ. ಅಲ್ಲಿಗೆ ಹಣ ಕೊಟ್ಟು, ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಬರುವ ಅಭಿಮಾನಿಗಳೇ ನಮಗೆ ಮುಖ್ಯ. ಅಂತಹ ಪ್ರಾಮಾಣಿಕ ಪ್ರೇಕ್ಷಕರ ಬಗ್ಗೆ ಮಾತನಾಡೋಣ" ಎನ್ನುವ ಮೂಲಕ ಸಿನಿಮಾ ಸಂಸ್ಕೃತಿಯನ್ನು ಗೌರವಿಸುವಂತೆ ಕರೆ ನೀಡಿದ್ದಾರೆ
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದು, ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಈ ನೇರ ನುಡಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪೈರಸಿ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.












Click it and Unblock the Notifications