ಕನ್ನಡಿಗರು ನನಗೆ ಏನೂ ಕಡಿಮೆ ಮಾಡಿಲ್ಲ: ತೆಲುಗು ಸಿನಿಮಾ ಪ್ರಚಾರದಲ್ಲಿ ಶ್ರೀನಿಧಿ ಶೆಟ್ಟಿ ಗುಣಗಾನ
ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿಗೆ ಬೇರೆ ಚಿತ್ರರಂಗಗಳಿಂದ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ತನ್ನ ಮೊದಲ ಸಿನಿಮಾ ಕೆಜಿಎಫ್ನಿಂದಲೇ ಪ್ಯಾನ್ ಇಂಡಿಯಾ ನಟಿಯಾಗಿರುವ ಅವರು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಟಾಲಿವುಡ್ನಲ್ಲಿ ಅವರ ಮೊದಲ ಸಿನಿಮಾ ಹಿಟ್-3 ರಿಲೀಸ್ ಆಗುತ್ತಿದೆ. ಆದರೆ ತೆಲುಗು ಸಿನಿಮಾ ಪ್ರಚಾರದ ವೇಳೆ ಶ್ರೀನಿಧಿ ಅವರು ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಆಡಿರುವ ಮಾತುಗಳು ಎಲ್ಲ ಹೃದಯಗೆದ್ದಿದೆ. ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ಸಾಮಾನ್ಯವಾಗಿ ಕನ್ನಡದಿಂದ ಬೇರೆ ಭಾಷೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೆಲವು ನಟಿಯರು ಅಲ್ಲಿಗೆ ಹೋದ ತಕ್ಷಣ ಆ ಭಾಷೆಯನ್ನು ಕಲಿಯುವ ಮೂಲಕ ಇಂಪ್ರೆಸ್ ಮಾಡಿರುವುದೇ ಹೆಚ್ಚು. ಜೊತೆಗೆ ಮೊದಲಿಗೆ ಅವಕಾಶ ಕೊಟ್ಟ ಕನ್ನಡವನ್ನು ಕಡೆಗಣಿಸಿರುವುದೂ ಉಂಟು. ಆದರೆ ಶ್ರೀನಿಧಿ ಶೆಟ್ಟಿ ಅವರಿಗೆಲ್ಲ ಮಾದರಿಯಾಗಿದ್ದಾರೆ. ಬೇರೆ ಭಾಷೆ ಸಿನಿಮಾದಲ್ಲಿ ನಟಿಸಿದ್ದರೂ ಕನ್ನಡಿಗರ ಗುಣಗಾನ ಮಾಡಿದ್ದಾರೆ.

ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಅವರ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರೀನಿಧಿ ಅವರು ಕನ್ನಡಿಗರ ಹೃದಯ ಗೆಲ್ಲುವ ಮಾತುಗಳನ್ನಾಡಿದ್ದಾರೆ.
ನಾನು ಮೂಲತಃ ಮಂಗಳೂರಿನವಳು, ಆದರೆ ಕಲಿತಿದ್ದು, ಈಗ ನೆಲೆಸಿರೋದು ಬೆಂಗಳೂರಿನಲ್ಲಿ, ನಮ್ಮ ಕರ್ನಾಟಕದ ಜನರು ನನಗೆ ಯಾವತ್ತೂ ಯಾವುದಕ್ಕೂ ಕಡಿಮೆ ಮಾಡಿಲ್ಲ. ಕನ್ನಡಿಗರು ನನಗೆ ತುಂಬಾನೇ ಪ್ರೀತಿ ಕೊಟ್ಟಿದ್ದಾರೆ. ನಾನು ಸಿನಿಮಾ ಮಾಡುವ ಮುಂಚೆಯೂ, ಸಿನಿಮಾ ಮಾಡಿದ ನಂತರ ಕೂಡ ಅದೇ ಪ್ರೀತಿ ಕೊಟ್ಟಿದ್ದಾರೆ. ಕೆಜಿಎಫ್ ಮೊದಲ ಚಾಪ್ಟರ್ ಬಳಿಕ ಮೂರು ವರ್ಷ ಗ್ಯಾಪ್ ಇದ್ದಾಗಲೂ ಅವರ ಪ್ರೀತಿ ಕಡಿಮೆಯಾಗಿಲ್ಲ ಎಂದು ಶ್ರೀನಿಧಿ ಶೆಟ್ಟಿ ಕೊಂಡಾಡಿದ್ದಾರೆ.

ಕನ್ನಡಿಗರು ಏನೂ ಕಡಿಮೆ ಮಾಡಲಿಲ್ಲ, ಅವರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಈಗ ನನ್ನ ಮೊದಲ ತೆಲುಗು ಸಿನಿಮಾ ಬರುತ್ತಿದೆ. ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಎಲ್ಲರೂ ಬಂದು ನೋಡಿ ಬೆಂಬಲಿಸಿ, ನಿಮಗೆ ಈ ಸಿನಿಮಾ ಇಷ್ಟ ಆಗುತ್ತೆ ಎಂದು ನಾನು ಭಾವಿಸಿದ್ದೇನೆ ಎಂದು ಕೇಳಿಕೊಂಡಿದ್ದಾರೆ.
ನಟ ನಾನಿಗೆ ಕನ್ನಡ ಹೇಳಿಕೊಟ್ಟ ಶ್ರೀನಿಧಿ
ತೆಲುಗು ನಟ ನಾನಿ ಅವರಿಗೆ ಕನ್ನಡದಲ್ಲಿ ಪ್ರಪೋಸ್ ಮಾಡುವುದನ್ನು ಕೂಡ ಶ್ರೀನಿಧಿ ಹೇಳಿಕೊಟ್ಟಿದ್ದಾರೆ. "ನನ್ನ ಪ್ರೀತಿಯ ಶಮೀರಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ನಾನಿ ಅವರಿಂದ ಹೇಳಿಸಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಸಿನಿಮಾದ ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ, ನೀನೇ ರಾಜಕುಮಾರ ಹಾಡನ್ನು ಸಹ ನಾನಿ ಅವರಿಂದ ಹಾಡಿಸಿದ್ದಾರೆ.
ಕೆಜಿಎಫ್ ಸರಣಿಯ ಎರಡು ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಕೆಜಿಎಫ್-3 ಬರುವುದು ಇನ್ನೂ ತಡವಾಗಲಿದ್ದು, ಇದರ ನಡುವೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶ್ರೀನಿಧಿ ಚಿಯಾನ್ ವಿಕ್ರಮ್ ಅವರೊಂದಿಗೆ ನಟಿಸಿದ್ದರು. ಇದೀಗ ನಾನಿ ಅವರೊಂದಿಗೆ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್ನ ಬಹುನಿರೀಕ್ಷಿತ ರಾಮಾಯಣ್ ಸಿನಿಮಾದಲ್ಲೂ ಸೀತೆಯ ಪಾತ್ರಕ್ಕೆ ಶ್ರೀನಿಧಿ ಆಯ್ಕೆಯಾಗಿದ್ದರು. ಆದರೆ, ಯಶ್ ಅವರು ಇದರಲ್ಲಿ ರಾವಣನ ಪಾತ್ರ ಮಾಡುತ್ತಿದ್ದ ಕಾರಣ ಜನ ಎದುರಾಳಿ ಪಾತ್ರಗಳನ್ನು ಒಪ್ಪುವುದಿಲ್ಲ ಎಂದು ಆ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications