'ಕರಿಮಣಿ' ಮಾಲೀಕ ಇನ್ನಿಲ್ಲ: ಮುಂದಿನ ಕಥೆ ಏನು..?
ಬೆಂಗಳೂರು, ಜುಲೈ 21: ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಧಾರಾವಾಹಿ ನಿರ್ದೇಶಕ ವಿನೋದ್ ದೋಂಡಳೆ ಸಾವಿಗೆ ಶರಣಾಗಿದ್ದಾರೆ. ಧಾರಾವಾಹಿಗಳಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟು ಯಶಸ್ವಿಯಾಗಿದ್ದ ವಿನೋದ್ ದೋಂಡಾಲೆ ನಾಗರಭಾವಿಯ ತಮ್ಮ ನಿವಾಸದಲ್ಲಿ ನಿನ್ನೆ ನೇಣಿಗೆ ಶರಣಾಗಿದ್ದಾರೆ.
ಕರಿಮಣಿ ಧಾರಾವಾಹಿಯ ನಿರ್ದೇಶಕ ವಿನೋದ್ ದೋಂಡಳೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಿರುತೆರೆಗೆ ಬೆಸ್ಟ್ ಧಾರಾವಾಹಿಗಳನ್ನು ನೀಡಿದ ವಿನೋದ್ ಅವರ ಅಗಲಿಕೆಯಿಂದ ಮನೋರಂಜನೆ ಕ್ಷೇತ್ರಕ್ಕೆ ಶಾಕ್ ಆಗಿದೆ.

ಆತ್ಮಹತ್ಯೆಗೂ ಮುನ್ನ ವಿನೋದ್ ಅವರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ ಕೂಡ ಪತ್ತೆಯಾಗಿದ್ದು, 'ಸಿನಿಮಾ ನಿರ್ಮಾಣ ಮಾಡಲು ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮ್ಮ ವೃತ್ತಿ ಬದುಕಿನ ನಿರ್ಧಾರದಿಂದಲೇ ವಿನೋದ್ ದೋಂಡಳೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ವಿನೋದ್ ದೋಂಡಾಲೆ ಅವರು ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರದ ನಿರ್ದೇಶಕರಾಗಿದ್ದಾರೆ. ಅಶೋಕ್ ಬ್ಲೇಡ್ ಸಿನಿಮಾ ಚಿತ್ರೀಕರಣ ಮುಕ್ತಾಯದವರೆಗೂ ನಡೆದಿದ್ದು, ಕೊನೆಯ ಹಂತದ ಕ್ಲೈಮ್ಯಾಕ್ಸ್ ಬಾಕಿ ಉಳಿದಿದೆ ಎನ್ನಲಾಗಿದೆ. ವಿನೋದ್ ಸ್ನೇಹಿತರೊಬ್ಬರ ಜೊತೆ ಸೇರಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು. ಈ ಮೊದಲು ನನ್ನರಸಿ ರಾಧೆ ಧಾರಾವಾಹಿ ಮಾಡಿ ಯಶಸ್ಸು ಕಂಡಿದ್ದ ವಿನೋದ್ ದೋಂಡಾಲೆ ಸದ್ಯ ಕರಿಮಣಿ ಧಾರಾವಾಹಿ ನಿರ್ದೇಶಿಸುತ್ತಿದ್ದರು.
ಇತ್ತೀಚಿಗಷ್ಟೇ ಕರಿಮಣಿ ಧಾರಾವಾಹಿ ಯಶಸ್ವಿಯಾಗಿ ನೂರು ಸಂಚಿಕೆಗಳನ್ನು ಪೂರೈಸಿತ್ತು. ಈವರೆಗೂ ಒಂದು ಜೋನ್ನಲ್ಲಿ ಸಾಗುತ್ತಿದ್ದ ಕರಿಮಣಿ ಧಾರಾವಾಹಿ, ಸದ್ಯದಲ್ಲೇ ಕರ್ಣನ ತಾಯಿ ಕಥೆ ಹಾಗೂ ಸಾಹಿತ್ಯ ಮದುವೆಯಂತಹ ಥ್ರಿಲ್ಲಿಂಗ್ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿತ್ತು. ಈ ನಡುವೆ ನಿರ್ದೇಶಕರ ಅಗಲಿಕೆಯಿಂದ ಧಾರಾವಾಹಿ ಮುಂದಿನ ಕಥೆ ಏನು ಎನ್ನುವಂತಾಗಿದೆ.
ಇನ್ನು ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ಬಾಸ್ ರಿಯಾಲಿಟಿ ಶೋನ 11 ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದ್ದು, ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ, ಅಂತರಪಟ ಮತ್ತು ಕೆಂಡಸಂಪಿಗೆಯನ್ನು ಕೂಡ ಮುಗಿಸಲು ತಯಾರಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಸದ್ಯದಲ್ಲೇ ಕರಿಮಣಿ ಧಾರಾವಾಹಿ ಅಂತ್ಯವಾಗುವ ಸಾಧ್ಯತೆ ಇದೆ.












Click it and Unblock the Notifications