ಒಲವಿನ ಉಡುಗೊರೆ ಹಾಡಿನ ಗಾಯಕ ಪಿ.ಜಯಚಂದ್ರನ್ ನಿಧನ
ರೆಬಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ ಹಾಡು ಒಲವಿನ ಉಡುಗೊರೆ ಕೊಡಲೇನು ಸೇರಿದಂತೆ ಕನ್ನಡದ ಅನೇಕ ಜನಪ್ರಿಯ ಹಾಡುಗಳ ಹಿಂದಿನ ಸ್ವರ ಖ್ಯಾತ ಗಾಯಕ ಪಿ.ಜಯಚಂದ್ರನ್ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಯಚಂದ್ರನ್ ನಿನ್ನೆ( ಜನವರಿ 09) ರ ಸಂಜೆ ನಿಧನರಾಗಿದ್ದಾರೆ.
ಪಿ. ಜಯಚಂದ್ರನ್ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ವಯೋಸಹಜವಾಗಿ ಚಿಕಿತ್ಸೆಗೆ ಸ್ಪಂದಿಸದೇ ತಾವು ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಪಿ. ಜಯಚಂದ್ರನ್ ಕೊನೆಯುಸಿರೆಳೆದಿದ್ದಾರೆ.

ಕೇರಳ ಮೂಲದ ಪಿ ಜಯಚಂದ್ರನ್ ಅವರು ಮಾರ್ಚ್ 3, 1944ರಲ್ಲಿ ಕೇರಳದ ಕೊಚ್ಚಿಯ ರವಿಪುರಂನ ಭದ್ರಲಯಂನಲ್ಲಿ ಜನಿಸಿದರು. ಪಾಳಿಯತ್ ಜಯಚಂದ್ರಕುಟ್ಟನ್ ಇವರ ಪೂರ್ಣ ಹೆಸರು. ಬಾಲ್ಯದಿಂದಲೇ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದ ಅವರು ಮೃದಂಗ ಬಾರಿಸುವುದರಲ್ಲಿ ನಿಪುಣರಾಗಿದ್ದರು. ಬಳಿಕ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ದಕ್ಷಿಣ ಭಾರತದ ಜನಪ್ರಿಯ ಹಾಗೂ ಬಹುಬೇಡಿಕೆಯ ಗಾಯಕರಾದರು. ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಇವರದು.
ಕನ್ನಡ ಸಂಗೀತ ಲೋಕಕ್ಕೆ ಪಿ.ಜಯಚಂದ್ರನ್ ಕೊಡುಗೆ
ಕನ್ನಡ ಚಿತ್ರರಂಗದ ಸಂಗೀತ ಲೋಕಕ್ಕೆ ಗಾಯಕ ಪಿ. ಜಯಚಂದ್ರನ್ ಅವರ ಕೊಡುಗೆ ಅಪಾರ. ಯಾಕೆಂದರೆ ಅವರು ಹಾಡಿರುವ ಕನ್ನಡದ ಅಷ್ಟೂ ಹಾಡುಗಳು ಸೂಪರ್ ಹಿಟ್. ಮಾತ್ರವಲ್ಲ ಆ ಹಾಡುಗಳೆಲ್ಲಾ ಎವೆರೆಗ್ರಿನ್. ರೆಬಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ ಹಾಡು ಒಲವಿನ ಉಡುಗೊರೆ ಕೊಡಲೇನು, ಅಮೃತ ಘಳಿಗೆ ಸಿನಿಮಾದ ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು, ರಂಗನಾಯಕಿ ಚಿತ್ರದಲ್ಲಿ ಮಂದಾರ ಪುಷ್ಪವು ನೀ, ಭಕ್ತ ಪ್ರಹ್ಲಾದ ಸಿನಿಮಾದ ಕಮಲ ನಯನ ಸೇರಿದಂತೆ ಪಿ.ಜಯಚಂದ್ರನ್ ಹಾಡಿರುವ ಎಲ್ಲಾ ಹಾಡುಗಳು ಕೂಡ ಕನ್ನಡದಲ್ಲಿ ಸೂಪರ್ ಹಿಟ್ ಆಗಿವೆ. ಪಿ. ಜಯಚಂದ್ರನ್ ಅವರ ನಿಧನದ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ಆಘಾತವಾಗಿದ್ದು, ಅಭಿಮಾನಿಗಳು, ಸಂಗೀತ ಕ್ಷೇತ್ರದ ಗಣ್ಯರು ಸೇರಿದಂತೆ ಅನೇಕ ಕಲಾವಿದರು ಪಿ. ಜಯಚಂದ್ರನ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.












Click it and Unblock the Notifications