Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ
ಸ್ಯಾಂಡಲ್ವುಡ್ನ 'ಡೆಡ್ಲಿ ಸೋಮ' ಖ್ಯಾತಿಯ ನಟ ಆದಿತ್ಯ ಮತ್ತು ದರ್ಶನ್ ಅವರ ನಡುವಿನ ಸ್ನೇಹ ದಶಕಗಳಷ್ಟು ಹಳೆಯದು. ಇತ್ತೀಚೆಗೆ ದರ್ಶನ್ ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಿದಾಗ ಅನೇಕರು ಅವರಿಂದ ಅಂತರ ಕಾಯ್ದುಕೊಂಡರು ಎಂಬ ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆ ಆದಿತ್ಯ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಸ್ನೇಹಕ್ಕೆ ಪ್ರಚಾರದ ಅಗತ್ಯವಿಲ್ಲ
ಆದಿತ್ಯ ಅವರ ಪ್ರಕಾರ, ದರ್ಶನ್ ಜೊತೆಗಿನ ಸ್ನೇಹವನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿ ಅಥವಾ ತಮಟೆ ಬಾರಿಸಿ ಸಾಬೀತುಪಡಿಸುವ ಅಗತ್ಯವಿಲ್ಲ. "ದರ್ಶನ್ ಅಂದ್ರೆ ಏನು ಅಂತ ನನಗೆ ಗೊತ್ತು, ನಾನೇನು ಅಂತ ದರ್ಶನ್ಗೆ ಗೊತ್ತು. ಅಷ್ಟು ಸಾಕು. ಬೇರೆ ಇನ್ಯಾರಿಗೂ ನಮ್ಮ ಸ್ನೇಹವನ್ನು ಸಾಬೀತುಪಡಿಸುವ ಅನಿವಾರ್ಯತೆ ನನಗಿಲ್ಲ" ಎಂದು ಅವರು ಎಸ್ಎಸ್ಟಿವಿ ಯುಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಆದಿತ್ಯ ತಿರುಗೇಟು ನೀಡಿದ್ದಾರೆ.

'ನಿನ್ನೆ ಮೊನ್ನೆ ಬಂದವರ' ಬಗ್ಗೆ ಕಿಡಿ
ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಅವರ ಸುತ್ತಮುತ್ತ ಕಾಣಿಸಿಕೊಂಡು, "ನಾವು ದರ್ಶನ್ ಅವರಿಗೆ ತುಂಬಾ ಕ್ಲೋಸ್ ಹತ್ತಿರ" ಎಂದು ಬಿಂಬಿಸಿಕೊಳ್ಳುತ್ತಿರುವವರ ಬಗ್ಗೆಯೂ ಆದಿತ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿನ್ನೆ ಮೊನ್ನೆ ಬಂದವರೆಲ್ಲಾ ನಾವು ದರ್ಶನ್ಗೆ ತುಂಬಾ ಕ್ಲೋಸ್ ಅಂತ ಅಂದುಕೊಳ್ಳುತ್ತಿದ್ದಾರೆ, ಅದರ ಬಗ್ಗೆ ನಾನು ಕೇರ್ ಮಾಡಲ್ಲ. ನಮ್ಮಿಬ್ಬರ ಸ್ನೇಹ ಏನು ಎಂಬುದು ನಮಗೆ ಮಾತ್ರ ತಿಳಿದಿದೆ" ಎನ್ನುವ ಮೂಲಕ ಗೆಳೆಯನ ಸ್ಥಾನವನ್ನು ಎತ್ತಿ ಹಿಡಿದಿದ್ದಾರೆ.
ದರ್ಶನ್ ಜೊತೆಗಿನ ದೋಸ್ತಿ ಬದಲಾಗಲ್ಲ
ದರ್ಶನ್ ಅವರಿಂದ ಉಪಕಾರ ಪಡೆದವರು ಈಗ ಅವರ ಕಷ್ಟದ ಸಮಯದಲ್ಲಿ ಹಿಂದೆ ಸರಿದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಆದಿತ್ಯ, "ಅದರ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು. ಬೇರೆಯವರು ಯಾವ ಕಾರಣಕ್ಕೆ ಹಾಗೆ ಪ್ರತಿಕ್ರಿಯಿಸಿದರೋ ಗೊತ್ತಿಲ್ಲ. ಆದರೆ ನನ್ನ ಮತ್ತು ದರ್ಶನ್ ದೋಸ್ತಿ ಎಂದಿಗೂ ಬದಲಾಗುವುದಿಲ್ಲ. ಎಂದಿದ್ದಾರೆ.
ಆದಿತ್ಯ ತಮ್ಮ ಸಿನಿಮಾ ಪ್ರಚಾರದ ಬಗ್ಗೆ ನೆನಪಿಸಿಕೊಳ್ಳುತ್ತಾ, "ಇಂದು ದರ್ಶನ್ ಹೊರಗಡೆ ಇದ್ದಿದ್ದರೆ, ನಾನು ಅವರನ್ನು ಸಿನಿಮಾ ಪ್ರಚಾರಕ್ಕೆ ಕರೆಯುವ ಅಗತ್ಯವೇ ಇರುತ್ತಿರಲಿಲ್ಲ. ವಿಷಯ ತಿಳಿದ ತಕ್ಷಣ ತಾನಾಗಿಯೇ ಪ್ರಚಾರಕ್ಕೆ ಬರುತ್ತಿದ್ದ. ಆ ಮಟ್ಟದ ಬಾಂಧವ್ಯ ನಮ್ಮದು" ಎಂದಿದ್ದಾರೆ.

ಅಣ್ಣನ ಸ್ಥಾನದಲ್ಲಿ ನಿಂತಿರುವ ದೋಸ್ತ್
ದರ್ಶನ್ ಅವರ ಮೇಲಿರುವ ಆರೋಪಗಳ ಬಗ್ಗೆ ಮಾತನಾಡಿದ ಆದಿತ್ಯ, "ದರ್ಶನ್ ನಿಜಕ್ಕೂ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಯಾರಿಗೂ ಪೂರ್ಣವಾಗಿ ಗೊತ್ತಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ. ಆದರೆ ಒಬ್ಬ ಸ್ನೇಹಿತನಾಗಿ ನನ್ನ ಜೀವನದಲ್ಲಿ ಅವರ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ. ಅವನು ನನಗೆ ಅಣ್ಣನ ಸ್ಥಾನದಲ್ಲಿ ನಿಂತಿರುವ ದೋಸ್ತ್. ಜೀವನಪೂರ್ತಿ ಅವರು ನನ್ನ ದೋಸ್ತಾಗಿಯೇ ಇರುತ್ತಾನೆ" ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಆದಿತ್ಯ ಅವರ ಮಾತುಗಳು ಚಿತ್ರರಂಗದಲ್ಲಿ ಸ್ನೇಹದ ನಿಜವಾದ ಅರ್ಥವನ್ನು ಎತ್ತಿ ತೋರಿಸಿವೆ. ಸೋಷಿಯಲ್ ಮೀಡಿಯಾ ಟ್ರೆಂಡ್ಗಳಿಗಿಂತ ವೈಯಕ್ತಿಕ ಸಂಬಂಧಗಳು ಮುಖ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ. ದರ್ಶನ್ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಆದಿತ್ಯ ನೀಡಿರುವ ಈ ಹೇಳಿಕೆ ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ.












Click it and Unblock the Notifications