Darshan Thoogudeepa: 2011ರಲ್ಲೇ ದರ್ಶನ್ ತೂಗುದೀಪ ಬಾಯ್ತಪ್ಪಿ ಆಡಿದ್ದ ಆ ಮಾತು ಈಗ ನಿಜವಾಗಿದೆ!
ಮನೆಯಿಂದ ಹೊರಡುವಾಗ ಅಥವಾ ಸಾಮಾನ್ಯವಾಗಿ ಶುಭ ಸಮರಾಂಭಗಳನ್ನು ಮುಗಿಸಿ ಹೊರಡುವಾಗ 'ಹೋಗು ಬರುತ್ತೇನೆ' ಎಂದು ಹೇಳಿವುದು ಭಾರತದಲ್ಲಿ ಕೆಲವು ಕಡೆಗಳಲ್ಲಿ ಆಚರಿಸುವ ಸಂಪ್ರದಾಯ. ಹೋಗಿ ಬರುತ್ತೇನೆ ಎಂದು ಹೇಳುವುದು, ಸುರಕ್ಷಿತವಾಗಿ ಹೋಗಿ ಬನ್ನಿ ಎನ್ನುವುದು ಭಾರತೀಯ ಸಂಪ್ರದಾಯ. ಆದರೆ, ನಟ ದರ್ಶನ್ ವಿಚಾರದಲ್ಲಿ ಇದು ಬೇರೆ ರೀತಿಯಾಗಿದ್ದು, ನಿವೃತ್ತ ಜೈಲು ಅಧಿಕಾರಿಯೊಬ್ಬರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ.
ನಿವೃತ್ತ ಜೈಲು ಅಧಿಕಾರಿ ಸತೀಶ್ 2011ರಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾಗ ಪರಪ್ಪನ ಅಗ್ರಹಾರದಲ್ಲಿ ಸಹಾಯಕ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ದರ್ಶನ್ ಜೈಲಿನಲ್ಲಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಅವರು ಹಲವು ಆಸಕ್ತಿಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ದರ್ಶನ್ 28 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆ ಸಂದರ್ಭದಲ್ಲಿ ಸತೀಶ್ ಅವರು ಆಗಾಗ ದರ್ಶನ್ ಜೊತೆ ಮಾತುಕತೆ ನಡೆಸುತ್ತಿದ್ದರು. ಜೈಲಿಗೆ ಬಂದ ಮೊದಲ ದಿನ ದರ್ಶನ್ ಭಾರಿ ಒತ್ತಡಕ್ಕೆ ಒಳಗಾಗಿದ್ದರು, ಜೈಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಹುಷಾರು ತಪ್ಪಿದ್ದರು ಎಂದು ಸತೀಶ್ ಹೇಳಿದ್ದಾರೆ.
ಕೆಲವು ದಿನಗಳ ಬಳಿಕ ಜೈಲಿನ ಪರಿಸ್ಥಿತಿಗೆ ಹೊಂದಿಕೊಂಡ ಅವರು ಜೈಲಿನಲ್ಲಿ ಆರಾಮಾಗಿ ಓಡಾಡಿಕೊಂಡು ಇರುತ್ತಿದ್ದರು. ಪತ್ನಿ ವಿಜಯಲಕ್ಷ್ಮಿ ಬಂದು ಮಾತನಾಡಿದ ನಂತರ ದರ್ಶನ್ ನಿರಾಳರಾಗಿದ್ದರು, ಕರ್ನಾಟಕದ ಜನ ನನಗೆ ಒಳ್ಳೆ ಸ್ಥಾನ ಕೊಟ್ಟಿದ್ದಾರೆ, ಸಣ್ಣ ತಪ್ಪಿನಿಂದ ಜೈಲು ಸೇರಬೇಕಾಯಿತು ಎಂದು ಪಶ್ಚಾತಾಪ ಪಟ್ಟಿದ್ದರು ಎಂದು ಸತೀಶ್ ಮಾಹಿತಿ ನೀಡಿದ್ದಾರೆ.
ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ, ತಪ್ಪು ತಿದ್ದಿಕೊಂಡು ನಡೆಯುತ್ತೇನೆ ಎಂದು ಹೇಳಿದ್ದ ದರ್ಶನ್ಗೆ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದರು. ಜೈಲಿನಿಂದ ಬಿಡುಗಡೆಯಾಗಿ ಹೊರಬರುವಾಗ ಜೈಲು ಅಧಿಕಾರಿಗಳ ಬಳಿ 'ಹೋಗಿ ಬರುತ್ತೇನೆ' ಎಂದು ಹೇಳಿದ್ದರು ಎಂದು ಸತೀಶ್ ಹೇಳಿದ್ದಾರೆ.
ರೂಢಿಯಿಂದ ಹೇಳಿದ್ದ ದರ್ಶನ್
ಹೋಗಿ ಬರುತ್ತೇನೆ ಎಂದು ಹೇಳುವುದು ಭಾರತೀಯರಲ್ಲಿ ಸಾಮಾನ್ಯವಾಗಿ ಎಲ್ಲಿಂದಲಾದರೂ ಹೊರಡುವಾಗ ಹೇಳುವುದು ರೂಢಿಯಾಗಿದೆ. ಜೈಲಿನ ಅಧಿಕಾರಿಗಳ ಬಳಿ ಕೂಡ ದರ್ಶನ್ ರೂಢಿಮಾತಿನಿಂದ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ 2011ರಲ್ಲಿ ಅವರು ಹೇಳಿದ್ದ ಮಾತು 2024ರಲ್ಲಿ ನಿಜವಾಗಿದೆ. ಅವರು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಬಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದಾರೆ.
2011ರಲ್ಲಿ ನಾಯಕನಾಗಿದ್ದಾಗ ಜೈಲು ಸೇರಿದ್ದ ದರ್ಶನ್, 2024ರಲ್ಲಿ ದೊಡ್ಡ ಸ್ಟಾರ್ ಆಗಿ ಜೈಲು ಸೇರಿದ್ದಾರೆ. ದರ್ಶನ್ ಸಿನಿ ಬದುಕಿನ ದೊಡ್ಡ ಹಿಟ್ 'ಕಾಟೇರ' ಬಳಿಕ ಸಾಲು ಸಾಲು ಸಿನಿಮಾ ಮಾಡಬೇಕಿದ್ದ ನಟ ಈಗ ಜೈಲು ಪಾಲಾಗಿದ್ದಾರೆ.
ಆದಷ್ಟು ಬೇಗ ದರ್ಶನ್ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ, ಮತ್ತೆ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅವರ ಸಿನಿಮಾಗೆ ಬಂಡವಾಳ ಹೂಡಿರುವ ನಿರ್ಮಾಪಕರು ಕೂಡ ಇದೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ.












Click it and Unblock the Notifications