Girish Shivanna: ರಾಜಾಹುಲಿ ಹಿಟ್ ಆದ್ರೂ ನನಗೆ ಸಿನಿಮಾ ಅವಕಾಶಗಳು ನಿಂತು ಹೋಯ್ತು: ಹಾಸ್ಯ ನಟ ಗಿರಿ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, 'ರಾಜಾಹುಲಿ ಚೆಲುವ' ಎಂದೇ ಗುರುತಿಸಿಕೊಂಡಿರುವ ಗಿರೀಶ್ ಶಿವಣ್ಣ (Girish Shivanna) ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಬದುಕಿನ ಕಠಿಣ ಹಾದಿ ಮತ್ತು ನಟ ಯಶ್ ಅವರೊಂದಿಗಿನ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಗಿರಿ ಅವರ ಯಶಸ್ಸಿನ ಹಿಂದೆ ದೊಡ್ಡ ಮಟ್ಟದ ಶ್ರಮ ಅಡಗಿದೆ. ಸಿನಿಮಾ ಹಿಟ್ ಆದರೂ ಅವಕಾಶಗಳಿಲ್ಲದೆ ಒದ್ದಾಡಿದ್ದ ದಿನಗಳಲ್ಲಿ ಗಿರಿ ಮೆಲುಕು ಹಾಕಿದ್ದಾರೆ.
ಮನೆ ಮನೆಗೆ ಪೇಪರ್ ಹಾಕ್ತಿದ್ದೆ
ನಟನೆಯ ಕ್ಷೇತ್ರಕ್ಕೆ ಬರುವ ಮೊದಲು ಗಿರಿ ಅವರು ಜೀವನೋಪಾಯಕ್ಕಾಗಿ ಮನೆ ಮನೆಗೆ ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದರು. ನಂತರ ಎಲೆಕ್ಟ್ರಿಷಿಯನ್ ಆಗಿ ವೃತ್ತಿ ಆರಂಭಿಸಿದರು. "ಒಂದು ಮನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದೆ. ಆಗ ಕೈ ಮೂಳೆ ಮುರಿದಿದ್ದರಿಂದ ಕೈಯಲ್ಲಿದ್ದ ಕೆಲಸಗಳೆಲ್ಲ ಹೋಗಿದ್ದವು. ಅನಿವಾರ್ಯವಾಗಿ ಜೀವನಕ್ಕಾಗಿ ಮತ್ತೆ ಡ್ರೈವಿಂಗ್ ಕೆಲಸ ಕಲಿತು ಚಾಲಕನಾಗಿ ಕೆಲಸ ಮಾಡಿದೆ" ಎಂದು "ನ್ಯೂಸೋ ನ್ಯೂಸು" ಸಂದರ್ಶನದಲ್ಲಿ ಗಿರಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಗಿರಿ ಅವರ ಸ್ನೇಹಿತರೊಬ್ಬರ ನಿರಂತರ ಒತ್ತಾಯದಿಂದಾಗಿ ಅವರು ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ರಂಗಭೂಮಿಯ ಅನುಭವ ಅವರನ್ನು ಧಾರಾವಾಹಿಗಳತ್ತ ಕರೆತಂದಿತು. ಆರಂಭದಲ್ಲಿ ಖಳನಟನ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು, ನಂತರ ಹಾಸ್ಯ ನಟನಾಗಿ ಜನಪ್ರಿಯತೆ ಗಳಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಯಶ್, ಗಣೇಶ್ ಗುರುಗಳಿದ್ದಂತೆ
"ನನಗೆ ನಟ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಂಗಾಯಣ ರಘು ಅವರು ಗುರುಗಳಿದ್ದಂತೆ" ಎಂದು ಹೇಳುವ ಗಿರಿ ಅವರು ಯಶ್ ಅವರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇಂದು ಸಿನಿಮಾರಂಗಕ್ಕೆ ಹೊಸದಾಗಿ ಬರುವವರು ತಕ್ಷಣವೇ ಯಶ್ ಆಗಿಬಿಡಬೇಕು ಎಂದು ಕನಸು ಕಾಣುತ್ತಾರೆ. ಆದರೆ ಯಶ್ ಈ ಎತ್ತರಕ್ಕೆ ಬೆಳೆಯಲು 25 ವರ್ಷಗಳ ಕಾಲ ಸವೆಸಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ" ಎಂದಿದ್ದಾರೆ.

ರಾಜಾಹುಲಿ ಹಿಟ್ ಆದ್ರೂ ಅವಕಾಶ ಇಲ್ಲವಾಯ್ತು
ಗಿರಿ ಅವರಿಗೆ ಸಿನಿಮಾಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದೇ ನಟ ಯಶ್. 'ರಾಜಾಹುಲಿ' ಸಿನಿಮಾದಲ್ಲಿನ 'ಚೆಲುವ' ಎಂಬ ವಿಭಿನ್ನ ಪಾತ್ರ ದೊರಕಲು ಯಶ್ ಅವರೇ ಕಾರಣ ಎಂದು ಗಿರಿ ಹೇಳಿದ್ದಾರೆ. ಈ ಪಾತ್ರದ ಮೂಲಕ ಗಿರಿ ಅವರು ಮನೆಮಾತಾದರು. ಆದರೆ, ಒಂದು ಸಿನಿಮಾದ ಯಶಸ್ಸಿನ ನಂತರ ಅವರಿಗೆ ವಿಚಿತ್ರ ಅನುಭವವಾಯಿತು. ರಾಜಾಹುಲಿ ಹಿಟ್ ಆದ ಮೇಲೆ ನನಗೆ ದಿಢೀರ್ ಕೆಲಸಗಳೇ ನಿಂತು ಹೋಯ್ತು. ಹಲವು ತಿಂಗಳ ಕಾಲ ಅವಕಾಶಗಳೇ ಬರಲಿಲ್ಲ. ಆ ನಂತರ ದೃಢ ನಿರ್ಧಾರ ಮಾಡಿ ಧಾರಾವಾಹಿಗಳನ್ನು ಬಿಟ್ಟು ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡೆ ಎಂದಿದ್ದಾರೆ. ಸದ್ಯ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಗಿರಿ, ಸಣ್ಣ ಪಾತ್ರಗಳಿಂದ ಹಿಡಿದು ಪೂರ್ಣ ಪ್ರಮಾಣದ ಹಾಸ್ಯ ನಟನಾಗಿ ಕನ್ನಡಿಗರನ್ನು ರಂಜಿಸುತ್ತಿದ್ದಾರೆ.













Click it and Unblock the Notifications