Darshan Thoogudeepa: ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ದರ್ಶನ್ಗೆ ಇದೆಂತಾ ಅವಮಾನ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹೊರಗೆ ಬರಲಿ ಎಂದು ಅಭಿಮಾನಿಗಳು ಹಗಲಿರುಳು ಪ್ರಾರ್ಥನೆ ಮಾಡುತ್ತಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಹೊತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ನಟ ದರ್ಶನ್ರ ಫೋಟೊ ಹಿಡಿದು ಅಭಿಮಾನ ಪ್ರದರ್ಶಿಸುವುದು ಅಭಿಮಾನಿಗಳಿಗೆ ಸಾಮಾನ್ಯವಾಗಿದೆ. ಆದರೆ ಈಗ ದರ್ಶನ್ ಅವರಿಗೆ ರಾಜಕೀಯ ರ್ಯಾಲಿಯಲ್ಲಿ ಅವಮಾನ ಮಾಡಲಾಗಿದೆ!
ದರ್ಶನ್ ಹೊರಗಡೆ ಇದ್ದಾಗ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಎಲ್ಲಾ ಪಕ್ಷದವರೂ ಬಳಸಿಕೊಂಡಿದ್ದರು. ದರ್ಶನ್ ಕೂಡ ಎಲ್ಲಾ ಪಕ್ಷದ ನಾಯಕರ ಪರ ಪ್ರಚಾರ ಮಾಡಿದ್ದರು. ಈಗ ಅವರು ಜೈಲಿನಲ್ಲಿರುವಾಗ ಎಲ್ಲರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ದರ್ಶನ್ ಫೋಟೊ ಹಿಡಿದು ಬಂದ ಅಭಿಮಾನಿಯನ್ನು ಅವಮಾನಿಸಲಾಗಿದೆ.

ಬಿಜೆಪಿ-ಜೆಡಿಎಸ್ ಪಾದಯಾತ್ರೆ ವೇಳೆ ಅಭಿಮಾನಿಯೊಬ್ಬ ರಸ್ತೆ ಬದಿ ನಿಂತು ದರ್ಶನ್ ಫೋಟೊ ಪ್ರದರ್ಶನ ಮಾಡಿದ್ದಾನೆ. ಬಳಿಕ ರ್ಯಾಲಿಯಲ್ಲಿ ಸೇರಿಕೊಂಡು ದರ್ಶನ್ ಪರ ಜೈಕಾರ ಕೂಗುತ್ತಾ ಬರುತ್ತಿದ್ದಂತೆ ಆತನನ್ನು ಪಕ್ಷದ ಕಾರ್ಯಕರ್ತರು ರ್ಯಾಲಿಯಿಂದ ಹೊರಗಡೆ ತಳ್ಳಿದ್ದಾರೆ. ಕೆಲವು ಕಾರ್ಯಕರ್ತರು ಪಕ್ಕಕ್ಕೆ ಕರೆದುಕೊಂಡು ಹೋಗಿ ದರ್ಶನ್ ಫೋಟೊ ಇಲ್ಲಿ ಪ್ರದರ್ಶನ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ. ದರ್ಶನ್ ಫೋಟೊ ಹಿಡಿದ ಅಭಿಮಾನಿಯನ್ನು ಹೊರತಳ್ಳಿದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ದರ್ಶನ್ಗಿದೆ ರಾಜಕೀಯ ನಂಟು!
ನಟ ದರ್ಶನ್ ಬಿಜೆಪಿ ಮತ್ತು ಕಾಂಗ್ರೆಸ್ನ ಹಲವು ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಯಾವ ಒಂದು ಪಕ್ಷಕ್ಕೂ ಸೇರಿಲ್ಲ, ಸ್ನೇಹಿತರು ಕರೆದರೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಹಲವು ನಾಯಕರ ಪರ ಪ್ರಚಾರ ಕೂಡ ಮಾಡಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿಸುತ್ತಿದ್ದಂತೆ ಹಲವು ರಾಜಕೀಯ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತ್ರ ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ರನ್ನು ಭೇಟಿ ಮಾಡಿ ಬಂದಿದ್ದಾರೆ.












Click it and Unblock the Notifications