Actor Darshan: ಸಿನಿಮಾ ನೋಡಲ್ಲ ಎಂದ ದರ್ಶನ್ ಫ್ಯಾನ್ಸ್ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?
ದುನಿಯಾ ವಿಜಯ್ ನಿರ್ದೇಶಕನಾಗಿ ಮತ್ತೆ ಗೆಲುವು ಸಾಧಿಸಿದ್ದಾರೆ. ಸಲಗ ಸಿನಿಮಾ ನಿರ್ದೇಶನ ಮಾಡಿ ಗೆಲುವು ಕಂಡಿದ್ದ ದುನಿಯಾ ವಿಜಯ್, ಇದೀಗ ಭೀಮನಾಗಿ ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದ ಕನ್ನಡ ಚಿತ್ರರಂಗಕ್ಕೆ 'ಭೀಮ'ಬಲ ಸಿಕ್ಕಂತಾಗಿದೆ. ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಭೀಮ, ಸೋಮವಾರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸೋಮವಾರದ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ.
ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದೆ. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದುನಿಯಾ ವಿಜಯ್, ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಡ್ರಗ್ಸ್ ಮಾಫಿಯಾ, ಅದರ ಹಿಂದಿನ ಕರಾಳ ಮುಖಗಳನ್ನು ಸಿನಿಮಾದಲ್ಲಿ ಅನಾವರಣ ಮಾಡಲಾಗಿದ್ದು, ಡ್ರಗ್ಸ್ ವಿರುದ್ಧ ಜನಾಂದೋಲನವಾಗಬೇಕು ಎಂದು ವಿಜಯ್ ಹೇಳಿದ್ದಾರೆ.

ಡ್ರಗ್ಸ್ ದಂಧೆ ಎನ್ನುವುದು ಬೆಂಗಳೂರಿನಲ್ಲಿ ಭಯಾನಕವಾಗಿದೆ. ಹದಿ ಹರೆಯದ ಮಕ್ಕಳ ಜೀವನ ನರಕವಾಗಿದೆ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಡ್ರಗ್ಸ್ ದಂಧೆಯನ್ನು ಮಟ್ಟಹಾಕಬಹುದು ಎಂದು ವಿಜಯ್ ಹೇಳಿದ್ದಾರೆ.
ದರ್ಶನ್ ಫ್ಯಾನ್ಸ್ ಬಗ್ಗೆ ಹೇಳಿದ್ದೇನು?
ಕಾರ್ಯಕ್ರಮದ ವೇಳೆ ಪತ್ರಕರ್ತರೊಬ್ಬರು ದರ್ಶನ್ ಅಭಿಮಾನಿಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ದರ್ಶನ್ ಅಭಿಮಾನಿಗಳು ಬೇರೆ ಸಿನಿಮಾ ನೋಡಲ್ಲ ಎಂದಿದ್ದರು, ಆದರೂ ಭೀಮ ಸಿನಿಮಾ ಯಶಸ್ವಿಯಾಗಿದೆ ಇದರ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರ ಕೊಟ್ಟ ದುನಿಯಾ ವಿಜಯ್ "ದರ್ಶನ್ ಅಭಿಮಾನಿಗಳ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಅದು ಅವರ ಇಷ್ಟ, ಕೆಲವರು ನೋಡದೇ ಇರಬಹುದು, ಆದರೆ ನೋಡಿದವರು ಸಿನಿಮಾವನ್ನು ಇಷ್ಟಪಟ್ಟಿದ್ದಾರೆ, ಸಿನಿಮಾ ನೋಡದಿದ್ದರೂ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದ್ದಾರೆ.
ಚಂದನವನಕ್ಕೆ 'ಭೀಮ' ಬಲ
2024ರಲ್ಲಿ 8 ತಿಂಗಳು ಕಳೆದರೂ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹಿಟ್ ಸಿನಿಮಾಗಳು ಬಂದಿರಲಿಲ್ಲ. ಹೊಸಬರ ಉತ್ತಮ ಸಿನಿಮಾಗಳು ಬಂದರೂ ಅವಕ್ಕೆ ದೊಡ್ಡ ಮಟ್ಟದ ಗೆಲುವು ಸಿಗಲಿಲ್ಲ. ಇದೀಗ ಭೀಮ ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡುತ್ತಿದ್ದು, ಸ್ಯಾಂಡಲ್ವುಡ್ಗೆ ಹೊಸ ಭರವಸೆ ತಂದುಕೊಟ್ಟಿದೆ. ಕೊನೆಯ 4 ತಿಂಗಳು ಹಲವು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ನಿರ್ಮಾಪಕರಿಗೆ ಧೈರ್ಯ ಬಂದಂತಾಗಿದೆ.












Click it and Unblock the Notifications