Pavithra Gowda: ಪವಿತ್ರಾಗೌಡ ರಿಲೀಸ್ ದಿನವೇ ಬೆಂಗಳೂರಲ್ಲಿ ಕಾಣಿಸಿಕೊಂಡ ಮಾಜಿ ಪತಿ ಸಂಜಯ್ ಸಿಂಗ್: ಶಾಕಿಂಗ್ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಪವಿತ್ರಾ ಗೌಡ ಇಂದು ಹೊರಬಂದಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ ಕುಟುಂಬಸ್ಥರಿಗೆ ತುಂಬಾನೇ ಖುಷಿ ಆಗಿದೆ. ಅಲ್ಲದೆ ಈ ವಿಚಾರ ಕೇಳಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಅವರೂ ಕೂಡ ತುಂಬಾ ಸಂತೋಷಗೊಂಡಿದ್ದಾರೆ. ಪವಿತ್ರಾ ಮೇಲೆ ಏನೇ ಆರೋಪಗಳು ಇದ್ದರೂ ಕೂಡ ಸಂಜಯ್ ಅವರಿಗೆ ಪವಿತ್ರಾ ಮೇಲಿನ ಪ್ರೀತಿ ಒಂದು ಚೂರು ಕೂಡ ಕಡಿಮೆ ಆಗಿಲ್ಲ.
ಹೌದು.. ಪವಿತ್ರಾಗೌಡ ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ. ಸತತ ಆರು ತಿಂಗಳ ಬಳಿಕ ಅವರಿಗೆ ಜಾಮೀನು ಮಂಜೂರಾಗಿದೆ. ಕಾಕತಾಳೀಯ ಅಂದರೆ ಪವಿತ್ರಾಗೌಡ ರಿಲೀಸ್ ಆದ ದಿನವೇ (ಡಿಸೆಂಬರ್ 17) ಬೆಂಗಳೂರಲ್ಲಿ ಮಾಜಿ ಪತಿ ಸಂಜಯ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಗೌಡ ಜೈಲಿನಿಂದ ರಿಲೀಸ್ ಆಗಿದ್ದಾರೆ ಎನ್ನುವ ವಿಚಾರ ಕೇಳಿ ಸಂಜಯ್ ಸಿಂಗ್ ಕೂಡ ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸಂಜಯ್ ಪವಿತ್ರಾ ಬಗ್ಗೆ ಹೇಳಿದ್ದೇನು?

ಪವಿತ್ರಾಗೆ ಜಾಮೀನು ಸಿಗಲೆಂದು ಹರಕೆ ಹೊತ್ತಿದ್ದೆ- ಸಂಜಯ್
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಸಿಂಗ್ ಅವರು, 'ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಇಂದು ಯಾವುದೋ ಕೆಲಸಕ್ಕಾಗಿ ಬಂದಿದ್ದೆ. ಆದರೆ ಇಂದೇ ಪವಿತ್ರಾ ಗೌಡ ಅವರು ಜೈಲಿನಿಂದ ಹೊರಬಂದಿದ್ದಾರೆ ಎನ್ನುವ ವಿಚಾರ ತಿಳಿದು ತುಂಬಾ ಖುಷಿ ಆಯ್ತು' ಎಂದಿದ್ದಾರೆ.
'ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗಲೆಂದು ನಾನು ಯಾವಾಗಲೂ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಜೊತೆಗೆ ಅವರು ಈ ಪ್ರಕರಣದಿಂದ ಸಂಪೂರ್ಣವಾಗಿ ಹೊರಬರಲಿ ಎಂದು ಹರಕೆ ಕೂಡ ಹೊತ್ತಿದ್ದೇನೆ. ಆ ಹರಕೆ ಕೂಡ ನಾನು ತೀರಿಸುತ್ತೇನೆ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಕಡಿಮೆ ಆಗಿಲ್ಲ ಪತ್ನಿಯ ಮೇಲಿನ ಪ್ರೀತಿ
ಸಂಜಯ್ ಸಿಂಗ್ ಅವರು ಪವಿತ್ರಾ ಗೌಡ ಅವರಿಂದ ದೂರವಿರಬಹುದು. ಆದರೆ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ ಅನ್ನೋದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಪವಿತ್ರಾ ಅವರ ಮೇಲೆ ಸಂಜಯ್ ಅವರಿಗೆ ಪ್ರೀತಿ ಇಲ್ಲದೇ ಇದ್ದಿದ್ದರೆ ಪವಿತ್ರಾ ಜೈಲಿನಿಂದ ಹೊರಬರಲೆಂದು ಸಂಜಯ್ ಹರಕೆ ಹೊತ್ತುಕೊಳ್ಳುತ್ತಿರಲಿಲ್ಲ. ಆ ದೇವರಲ್ಲಿ ಪ್ರಾರ್ಥನೆ ಮಾಡುವ ಅವಶ್ಯಕತೆ ಕೂಡ ಇರಲಿಲ್ಲ.

ಸಾಮಾನ್ಯವಾಗಿ ಪತ್ನಿಯಿಂದ ದೂರವಾದ ವ್ಯಕ್ತಿ ಆಕೆಯ ಬಗ್ಗೆ ಮಾತನಾಡಲು ಬಯಸುವುದೇ ಇಲ್ಲ. ಆದರೆ ಸಂಜಯ್ ಮಾತ್ರ ಪತ್ನಿ ಪವಿತ್ರಾ ಬಗ್ಗೆ ಮಾತನಾಡಲು ಯಾವತ್ತೂ ಕೂಡ ಹಿಂಜರಿಯಲಿಲ್ಲ. ಸಂಜಯ್ ಅವರು ಈಗಲೂ ಕೂಡ ಪವಿತ್ರಾ ನನ್ನಿಂದ ದೂರ ಆಗಿರಬಹುದು. ಆದರೆ ನಾನು ಪವಿತ್ರಾ ಅವರಿಂದ ದೂರ ಆಗಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಾರೆ.
ಪವಿತ್ರಾ ಲೈಫ್ನಲ್ಲಿ ನಾನಿಲ್ಲ ಆದರೆ...
ಮಾಜಿ ಅನ್ನೋ ಪದ ಬೇಡ. ನಾನು ಅವರ ಪತಿ. ಅವರು ಹೊರಗಡೆ ಬಂದಿದ್ದು ತುಂಬಾ ಸಂತೋಷ ಆಗಿದೆ. ಪವಿತ್ರಾ ಗೌಡ ಲೈಫ್ ಅಲ್ಲಿ ನಾನು ಇಲ್ಲ. ಆದರೆ ನನ್ನ ಲೈಫ್ ಅಲ್ಲಿ ಪವಿತ್ರಾ ಗೌಡ ಸದಾ ಇರುತ್ತಾರೆ ಎನ್ನುವ ಮಾತುಗಳನ್ನು ಸಂಜಯ್ ಸಿಂಗ್ ಹೇಳಿದ್ದಾರೆ.
ಪವಿತ್ರಾ ಸಂಜಯ್ ಮೀಟ್ ಆಗಿದ್ದು ಎಲ್ಲಿ?
ಕೊಣನಕುಂಟೆ ಕ್ರಾಸ್ ಬಳಿ ಪವಿತ್ರಾ ಅವರದ್ದೇ ಒಂದು ಸ್ವಂತ ಶಾಪ್ ಇದೆ. ಮೊದಲ ಬಾರಿಗೆ ಸಂಜರ್ ಪವಿತ್ರಾ ಅವರನ್ನು ಭೇಟಿ ಮಾಡಿರುವುದು ಕೂಡ ಅಲ್ಲೆ. 2007ರಲ್ಲಿ ಇಬ್ಬರು ಇಷ್ಟಪಟ್ಟು ಪ್ರೀತಿಸಿ ಮದುವೆ ಅದರು. 2013ರಲ್ಲಿ ಇಬ್ಬರಿಗೂ ವಿಚ್ಚೇದನ ಆಯ್ತು. ಸಮಯ ಕೊಡಲು ಆಗದೆ ಹಾಗೂ ತಪ್ಪು ತಿಳುವಳಿಕೆಯಿಂದಾಗಿ ಇಬ್ಬರೂ ಕೂಡ ದೂರ ಆಗಿದ್ದೇವೆ ಎಂದು ಸಂಜಯ್ ಹೇಳಿದರು.
ದರ್ಶನ್ ಸೂಪರ್ ಸ್ಟಾರ್. ಅವರು ನನ್ನ ಮಗಳ ಹುಟ್ಟುಹಬ್ಬಕ್ಕೆ ಬಂದಿದ್ದು ತುಂಬಾ ಸಂತೋಷದ ವಿಚಾರ. ಅದರಲ್ಲಿ ತಪ್ಪೇನು ಇಲ್ಲ. ನನ್ನ ಮಗಳಿಗೆ ಯಾರೊಂದಿಗೆ ಹೇಗೆ ಇರಬೇಕು ಅನ್ನೋದು ಗೊತ್ತಿದೆ. ನನಗೆ ದರ್ಶನ್ ಅವರು ನನ್ನ ಮಗಳೊಂದಿಗೆ ನೃತ್ಯ ಮಾಡಿದ್ದು ಬೇಸರ ಇಲ್ಲ ಎಂದಿದ್ದಾರೆ ಸಂಜಯ್. ಪ್ರಸ್ತುತ ಪವಿತ್ರಾ ಅವರು ಜೈಲಿನಿಂದ ಹೊರಬಂದಿದ್ದಾರೆ. ಅವರಿಗೆ ನಾನು ತೊಂದರೆ ಕೊಡಲು ಇಷ್ಟಪಡಲ್ಲ. ಎಲ್ಲೇ ಇರಲಿ ಚೆನ್ನಾಗಿ ಇರಲಿ ಅನ್ನೋದು ನನ್ನ ಆಸೆ ಎಂದು ಸಂಜಯ್ ಹೇಳಿದರು.
ಪವಿತ್ರಾ ಬಂದರೆ ನಾನು ಬೇಡ ಅನ್ನಲ್ಲ- ಸಂಜಯ್
ಪವಿತ್ರಾ ಬಂದರೆ ನಾನು ಅವರನ್ನು ಸ್ವೀಕಾರ ಮಾಡುತ್ತೇನೆ. ನಾನು ಒಮ್ಮೆ ಪ್ರೀತಿ ಮಾಡಿದ್ದೇನೆ. ಅದನ್ನು ಅಳಿಸಲು ಸಾಧ್ಯವಿಲ್ಲ. ನಾವು ಉಸಿರಾಡೋದೇ ಪ್ರೀತಿ. ನನ್ನ ಪ್ರೀತಿ ಉಸಿರು ಇರುವವರೆಗೂ ಇರುತ್ತದೆ. ಬೆನ್ನಿನ ಮೇಲೆ ನನ್ನ ಮಗಳು ಹಾಗೂ ಪವಿತ್ರಾ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದೆ. ಅದು ಈಗಲೂ ಇದೆ ಎಂದು ಸಂಜಯ್ ತೋರಿಸಿದ್ದಾರೆ. ನಾನು ಮೊದಲು ಎಷ್ಟು ನನ್ನ ಕುಟುಂಬವನ್ನು ಪ್ರೀತಿ ಮಾಡ್ತಾಯಿದ್ನೋ ಈಗಲೂ ಅಷ್ಟೇ ಪ್ರೀತಿ ಮಾಡುತ್ತೇನೆ. ಪವಿತ್ರಾ ಮನಸ್ಸು ಬದಲಾಯಿಸಿ ಬಂದರೆ ನಾನು ಈಗಲೂ ಅವರನ್ನು ಸ್ವೀಕಾರ ಮಾಡಲು ತಯಾರಿದ್ದೇನೆ ಎಂದು ಸಂಜಯ್ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಪವಿತ್ರಾ ಜೈಲಿನಿಂದ ಹೊರಬಂದಿದ್ದಕ್ಕೆ ಮಾಜಿ ಪತಿ ಸಂಜಯ್ ಸಂತಸ ವ್ಯಕ್ತಪಡಿಸಿದ್ದರ ಹಿಂದೆ ಪವಿತ್ರಾ ಅವರ ಮೇಲಿನ ಪ್ರೀತಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದನ್ನು ಅರ್ಥ ಮಾಡಿಕೊಂಡು ಪವಿತ್ರಾ ಮತ್ತೆ ಸಂಜಯ್ ಅವರೊಂದಿಗೆ ಹೊಸ ಜೀವನ ಶುರು ಮಾಡಬಹುದು. ಇದರಿಂದ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹಾಡಿದಂತಾಗುತ್ತದೆ. ಅತ್ತ ದರ್ಶನ್ ಹಾಗೂ ವಿಜಯಲಕ್ಷ್ಮೀ ಜೀವನ ಚೆನ್ನಾಗಿರುತ್ತದೆ. ಇತ್ತ ಪವಿತ್ರಾ ಸಂಜಯ್ ಒಂದಾಗಿ ಸಮಾಜದಲ್ಲಿ ಮಾದರಿ ಜೀವನ ಮಾಡಬಹುದು. ಅವರವರ ಮಕ್ಕಳಿಗೆ ಉತ್ತಮ ತಂದೆ-ತಾಯಿ ಆಗಬಹುದು. ಆದರೆ ಇದೆಲ್ಲವೂ ಪವಿತ್ರಾ ಅವರ ಆಲೋಚನೆಗೆ ಬಿಟ್ಟಿದ್ದು. ಆದರೆ ಪವಿತ್ರಾ ಅವರು ಯಾವ ರೀತಿ ನಿರ್ಧಾರ ತೆಗೆದುಕೊಳ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications