Darshan Help: ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಲು ಮುಂದಾದ ದರ್ಶನ್!
ಬೆಂಗಳೂರು ಜುಲೈ 19: ರೇಣುಕಾಸ್ವಾಮಿ ಕೊಲೆಯಾದ ಬಳಿಕ ಅವರ ಕುಟುಂಬಸ್ಥರ ಜೀವನ ಅತಂತ್ರವಾಗಿದೆ. ಮನೆಯಲ್ಲಿ ರೇಣುಕಾಸ್ವಾಮಿ ಅವರೇ ಆಧಾರಸ್ತಂಭವಾಗಿದ್ದರು. ಅವರ ಕುಟುಂಬಕ್ಕೆ ನೆರಳಾಗಿದ್ದರು. ಅವರ ದುಡಿಮೆಯಿಂದಲೇ ಅವರ ಕುಟುಂಬಸ್ಥರ ಜೀವನ ಸಾಗುತ್ತಿತ್ತು. ಆದರೀಗ ರೇಣುಕಾಸ್ವಾಮಿ ಪೋಷಕರು ಹಾಗೂ ಗರ್ಭಿಣಿ ಪತ್ನಿಗೆ ದಿಕ್ಕು ತೋಚದಂತಾಗಿದೆ. ಇದಕ್ಕಾಗಿ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಲು ದರ್ಶನ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು... ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯಹಸ್ತ ಚಾಚಲು ನಟ ದರ್ಶನ ತೂಗುದೀಪ ಯೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ವಿಷಯವನ್ನು ದರ್ಶನ್ ಮುಂದೆ ಕುಟುಂಬಸ್ಥರು ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಹಾಗೂ ಕುಟುಂಬಸ್ಥರು ಮೃತ ರೇಣುಕಾಸ್ವಾಮಿ ಪತ್ನಿ ಹಾಗೂ ಮಗುವಿಗೆ ಸಹಾಯ ಮಾಡುವ ಯೋಚನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿದ ಕುಟುಂಬಸ್ಥರು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ವಿಷಯವನ್ನು ದಾಸನ ಮುಂದೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದ್ದು ಜೈಲಿನಿಂದ ಹೊರ ಬಂದ ಬಳಿಕ ಪ್ರಾಶಸ್ತ್ಯದಲ್ಲಿ ರೇಣುಕಾಸ್ವಾಮಿ ಪೋಷಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಕುಟುಂಬಸ್ಥರು ಈ ಸಲಹೆಯನ್ನು ನೀಡಿದ್ದು ಇದಕ್ಕೆ ರೇಣುಕಾಸ್ವಾಮಿ ಪೋಷಕರು ಒಪ್ಪುತ್ತಾರಾ ಎನ್ನುವ ಪ್ರಶ್ನೆ ಮಾಡಿದೆ. ಆದರೆ ರೇಣುಕಾಸ್ವಾಮಿ ಪತ್ನಿ ಹಾಗೂ ಪೋಷಕರಿಗೆ ಈ ಪ್ರಕರಣದಲ್ಲಿ ರಾಜಿಯಾಗುವ ಆಸೆ ಇಲ್ಲ. ಯಾಕೆಂದರೆ ಈ ಹಿಂದೆ ಅವರು ಮಗನ ಕೊಲೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದರು.
ರೇಣುಕಾಸ್ವಾಮಿ ತಂದೆ, 'ನನ್ನ ಮಗನನ್ನು ಮನಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಯಾರು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು' ಎಂದು ಒತ್ತಾಯಿಸಿದ್ದರು. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದೆ. ಆದರೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ್ ಅವರಿಂದ ರೇಣುಕಾಸ್ವಾಮಿ ಪೋಷಕರು ಸಹಾಯ ಪಡೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಯಾಕೆಂದರೆ ರೇಣುಕಾಸ್ವಾಮಿಯನ್ನು ಕಳೆದುಕೊಂಡ ಪೋಷಕರಿಗೆ ಹಾಗೂ ಪತ್ನಿಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬ ಒತ್ತಾಯವಿದೆ. ಹೀಗಾಗಿ ಅವರು ದರ್ಶನ್ ಸಹಾಯವನ್ನು ಸ್ವೀಕರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಮತ್ತೆ 14 ದಿನಗಳ ಕಾಲ ಅಂದರೆ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಲಾಗಿದೆ. ನಟ ದರ್ಶನ್,ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಮೂರನೇ ಬಾರಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಮತ್ತೆ 14 ದಿನದ ನಂತರ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಬೇಕು.

ದರ್ಶನ್ಗೆ ಮನೆಯೂಟ ಕ್ಯಾನ್ಸಲ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಅವರಿಗೆ ಮನೆ ಊಟಕ್ಕೆ ವ್ಯವಸ್ಥೆ ಮಾಡುವ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ ನಿಡಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿ ಆದೇಶಿಸಿದೆ.
ದರ್ಶನ್ ಕುಟುಂಬಸ್ಥರಿಂದ 5 ಕೋಟಿ ಪರಿಹಾರ?
ದರ್ಶನ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಯೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ನಡುವೆ ಮತ್ತೊಂದು ಸುದ್ದಿ ಹರಿದಾಡತೊಡಗಿದೆ. ಅದೇನೆಂದರೆ ದರ್ಶನ್ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ಐದು ಕೋಟಿ ಪರಿಹಾರ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡ ತೊಡಗಿದೆ.
ಮೃತ ರೇಣುಕಾಸ್ವಾಮಿ ಕುಟುಂಬಸ್ಥರು ಬಡವರಾಗಿದ್ದು ಅವರಿಗೆ ಸಹಾಯ ಮಾಡಲು ದರ್ಶನ್ ಕುಟುಂಬ ಯೋಚಿಸಿದೆ. ದರ್ಶನ್ ಬಿಡುಗಡೆಯಾಗಿ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಹಾಯ ಮಾಡುವ ಬಗ್ಗೆ ಜೈಲಿನಲ್ಲಿ ದರ್ಶನ್ನೊಂದಿಗೆ ವಿಜಯಲಕ್ಷ್ಮಿ ಹಾಗೂ ದರ್ಶನ್ ಕುಟುಂಬಸ್ಥರು ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.
ಆದರೆ ಎಷ್ಟು ಹಣ ಸಹಾಯ ಮಾಡಲಿದ್ದಾರೆನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕುಟುಂಬಸ್ಥರು ಐದು ಕೋಟಿ ಹಣ ಪರಿಹಾರ ನೀಡಲು ಯೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡತೊಡಗಿದೆ.












Click it and Unblock the Notifications