Bigg Boss: ಶಾಂತಿ ಕದಡಿದ ಆರೋಪ, ಬಿಗ್ಬಾಸ್ ವಿನ್ನರ್ ಅರೆಸ್ಟ್: ಅಷ್ಟಕ್ಕೂ ಆಗಿದ್ದೇನು?
ಹೈದರಾಬಾದ್, ಡಿಸೆಂಬರ್ 21: ತೆಲುಗು ಬಿಗ್ಬಾಸ್ ಸೀಸನ್ 7ರ ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ ಹಾಗೂ ಪೊಲೀಸರ ಆದೇಶ ಪಾಲಿಸದ ಆರೋಪದಡಿ ಪಲ್ಲವಿ ಪ್ರಶಾಂತ್ ಅವರನ್ನು ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸೋಷಿಯಲ್ ಮೀಡಿಯಾ ಸ್ಟಾರ್, ರೈತ ಬಿಡ್ಡ ಎಂದು ಕರೆಸಿಕೊಳ್ಳುವ ಪಲ್ಲವಿ ಪ್ರಶಾಂತ್ ಬಿಗ್ಬಾಸ್ ತೆಲುಗು ಸೀಸನ್ 7ರ ವಿನ್ನರ್ ಆಗಿ ಹೊರಹೊಮ್ಮಿದ್ದರು, ಅಮರ್ ದೀಪ್ ರನ್ನರ್ಅಪ್ ಆಗಿದ್ದರು. ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಪ್ರಶಾಂತ್ ಮತ್ತು ಅಮರ್ ಅಭಿಮಾನಿಗಳ ಗುಂಪಿನ ನಡುವೆ ಜಗಳ ನಡೆದಿದ್ದು, ಘಟನೆಯಲ್ಲಿ ಕಾರುಗಳಿಗೆ ಹಾಗೂ ಕೆಆರ್ಟಿಸಿ ಬಸ್ಗಳಿಗೆ ಹಾನಿಯಾಗಿತ್ತು.

ಇತ್ತ ಬಿಗ್ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದರೆ, ಅತ್ತ ಅನ್ನಪೂರ್ಣ ಸ್ಟುಡಿಯೋದ ಹೊರಗಡೆ ಕಿಡಿಗೇಡಿಗಳಿಂದ ಗಲಾಟೆ ಆರಂಭವಾಗಿತ್ತು. ಹೀಗಾಗಿ ವಿಜೇತರು ಜಗಳ ನಡೆಯುವ ಸ್ಥಳಕ್ಕೆ ಹೋಗಬೇಡಿ ಎಂದು ಪೊಲೀಸರು ಆದೇಶ ನೀಡಿದ್ದರು. ಅಲ್ಲದೇ ಸ್ಟುಡಿಯೋದ ಹಿಂಬಾಗಿಲಿನಿಂದ ಹೊರ ಹೋಗುವಂತೆ ತಿಳಿಸಿದ್ದರು. ಆದರೆ ಪಲ್ಲವಿ ಪ್ರಶಾಂತ್ ಪೊಲೀಸರ ಆದೇಶ ಧಿಕ್ಕರಿಸಿ ಗಲಾಟೆ ಸ್ಥಳಕ್ಕೆ ಹೋಗಿದ್ದರು. ಇದರಿಂದ ಜಗಳ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಇನ್ನು ಸ್ಟುಡಿಯೋದಿಂದ ಹೊರಕ್ಕೆ ಬಂದ ಬಳಿಕ ಪಲ್ಲವಿ ಪ್ರಶಾಂತ್ ಪೊಲೀಸರ ಆದೇಶ ಧಿಕ್ಕರಿಸಿ ತೆರೆದ ವಾಹನದಲ್ಲಿ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದಲ್ಲದೇ ಅದ್ಧೂರಿ ಮೆರವಣಿಗೆ ಸಹ ನಡೆಸಿದ್ದರು. ಈ ವೇಳೆ ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಸರ್ಕಾರಿ ಬಸ್ಗಳು ಹಾಗೂ ಖಾಸಗಿ ಕಾರುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ ಆರೋಪದಡಿ ಪಲ್ಲವಿ ಪ್ರಶಾಂತ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು.
ಬಿಗ್ಬಾಸ್ ತೆಲುಗು ಸೀಸನ್ 7ರ ವಿನ್ನರ್ ಆಗಿ ಪಲ್ಲವಿ ಪ್ರಶಾಂತ್ ಟ್ರೋಫಿ ಹಿಡಿದು ಸಂಭ್ರಮಿಸುವ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪಲ್ಲವಿ ಪ್ರಶಾಂತ್ ತಲೆಮರೆಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಜುಬಿಲಿ ಹಿಲ್ಸ್ ಪೊಲೀಸರು ತೆಲಂಗಾಣದ ಗಜ್ವೇಲ್ ಮಂಡಲದ ಕೋಲುಗೂರು ಗ್ರಾಮಕ್ಕೆ ತೆರಳಿ ಬಿಗ್ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ನನ್ನು ಆತನ ಮನೆಯಲ್ಲಿಯೇ ಬಂಧಿಸಿದ್ದಾರೆ. ಘಟನೆ ಸಂಬಂಧ ಮತ್ತಿಬ್ಬರನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications