Hanumantha: ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ವಿನ್ನರ್ ಹನುಮಂತ?
ಬಿಗ್ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಗೆದ್ದ ಹಳ್ಳಿಹೈದ ಹನುಮಂತ ಅವರಿಗೆ ಈಗಾಗಲೇ ಸಿನಿಮಾಗೆ ಬರುವಂತೆ ಆಫರ್ಗಳು ಬಂದಿವೆ. ಟಿವಿ ವಾಹಿನಿಗಳ ಟಿಆರ್ಪಿ ಕಿಂಗ್ ಆಗಿರುವ ಹನುಮಂತ ಇದೀಗ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ.
ಹೌದು.. ಬಿಗ್ಬಾಸ್ನಲ್ಲಿ ವಿಜೇತರಾದ ಬಳಿಕ ಎಷ್ಟೇ ಗೌರವ ಸಿಕ್ಕರೂ ಕೂಡ ಹನುಮಂತ ಮೊದಲಿನಂತೆ ತುಂಬಾ ಸರಳವಾಗಿದ್ದಾರೆ. ಹೀಗಾಗಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಯಾವುದೇ ಸಂಗೀತ ತರಬೇತಿ ಇಲ್ಲದೆ ತನ್ನ ಗಾಯನದ ಮೂಲಕ ಹನುಮಂತ ಎಲ್ಲರ ಗಮನ ಸೆಳೆದಿದ್ದಾರೆ. ಹನುಮಂತ ಹಾಡೋದ್ರಲ್ಲಿ ಮಾತ್ರವಲ್ಲ ಓದುವುದರಲ್ಲೂ ಮೇಲುಗೈ ಸಾಧಿಸಿದ್ದಾರೆ.

ಹನುಮಂತನಿಗೆ ರಾಜಕೀಯದ ಆಫರ್
ಇದೀಗ ಸಿನಿಮಾ ಅಲ್ಲದೆ ಹನುಮಂತನಿಗೆ ಮತ್ತೊಂದು ಆಫರ್ ಕೂಡ ಬಂದಿದೆ. ಅದು ರಾಜಕೀಯದ ಆಫರ್. ಈ ಹಿಂದೆ ಹನುಮಂತ ಹಾವೇರಿ ಜಿಲ್ಲೆಯ ಮತದಾರ ಜಾಗೃತಿಯ ಸ್ವೀಪ್ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಈಗ ಕರ್ನಾಟಕದ ಮಾಜಿ ಸಚಿವರೊಬ್ಬರು ಹನುಮಂತನಿಗೆ ಕರೆ ಮಾಡಿದ ವಿಚಾರ ಭಾರೀ ಸುದ್ದಿ ಮಾಡಿದೆ. ಇದರ ಬೆನ್ನಲ್ಲೇ ಹಳ್ಳಿಹೈದ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಕಡಿಮೆ ದಿನದಲ್ಲಿ ಉತ್ತಮ ಆಟ ಆಡಿ ಗೆದ್ದಿದ್ದಾರೆ. ಕೆಲವೇ ದಿನಗಳಲ್ಲಿ ಇಡೀ ರಾಜ್ಯದ ಮನಸ್ಸನ್ನು ಗೆದ್ದಿರುವ ಹನುಮಂತ ಬಿಗ್ಬಾಸ್ ಮನೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ಪ್ರತೀ ವಾರ ಸೇಫ್ ಆಗುತ್ತಿದ್ದರು. ಹನುಮಂತ ಆಡುತ್ತಿದ್ದ ನ್ಯಾಯಪರ ಆಟ ಹಾಗೂ ಸಹ ಸ್ಪರ್ಧಿಗಳು ಮಾಡುತ್ತಿದ್ದ್ ಕುತಂತ್ರಗಳನ್ನು ನೋಡುತ್ತಿದ್ದ ವೀಕ್ಷಕರು ಹನುಮಂತನಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಬಿಗ್ಬಾಸ್ ಫಿನಾಲೆಯಲ್ಲಿ ಹನುಮಂತ ಐದು ಕೋಟಿಗೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಇದರ ಮೂಲಕ ಹನುಮಂತನಿಗೆ ಸ್ಟಾರ್ ಪಟ್ಟ ಕೂಡ ಸಿಕ್ಕಿದೆ.
ಇದೇ ಖುಷಿಯಲ್ಲಿ ಇರುವ ಹನುಮಂತ ತಾವು ಗೆದ್ದ ಟ್ರೋಫಿಯನ್ನು ತೆಗೆದುಕೊಂಡು ತಮ್ಮ ಅರಾಧ್ಯ ದೈವ ಹನುಮಂತನ ಪಾದಕ್ಕೆ ಅರ್ಪಿಸಿ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗರ್ಲ್ಸ್ ವರ್ಸಸ್ ಬಾಯ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ ಹನುಮಂತ ಟಿವಿ ವಾಹಿನಿಗಳ ಟಿಆರ್ಪಿ ಕಿಂಗ್ ಆಗಿ ಪರಿವರ್ತನೆ ಆಗುತ್ತಿದ್ದಾರೆ.
ಹನುಮಂತನನ್ನು ರಾಜಕೀಯಕ್ಕೆ ಕರೆತರಲು ಕಸರತ್ತು
ಹನುಮಂತನಿಗೆ ಸಿನಿಮಾ ಆಫರ್ ಜೊತೆಗೆ ರಾಜಕೀಯ ಆಫರ್ ಕೂಡ ಬಂದಿದೆ. ಇದಕ್ಕಾಗಿ ಸ್ವತ: ಹಾವೇರಿ ಜಿಲ್ಲೆಯ ರಾಜಕೀಯ ನಾಯಕರಾದ ಮತ್ತು ಮಾಜಿ ಸಚಿವರು ಹನುಮಂತನಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯ ರಾಜಕಾರಣಕ್ಕೆ ಹನುಮಂತ ಅವರು ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಶುರುವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರು ಆದ ಬಿಸಿ ಪಾಟೀಲ್ ಅವರು ಹನುಮಂತನಿಗೆ ಕರೆ ಮಾಡಿ ಬಿಗ್ಬಾಸ್ ವಿನ್ನರ್ ಆಗಿದ್ದಕ್ಕೆ ಶುಭಕೋರಿದ್ದರು. ಅಲ್ಲದೆ ನೀವು ಹಾವೇರಿಯ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀರಾ, ನಾನು ನಿನ್ನ ಆಟ ನೋಡಿದ್ದೇ, ತುಂಬಾ ಚೆನ್ನಾಗಿ ಆಡಿದ್ದೀರಾ ಎಂದು ಸಹ ಹೇಳಿದ್ದಾರೆ.
ಈ ಆಡಿಯೋವನ್ನು ಸ್ವತ: ಬಿಸಿ ಪಾಟೀಲ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಇಲ್ವಾ ಎನ್ನುವುದು ಮಾತ್ರ ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ಹನುಮಂತನನ್ನು ರಾಜಕೀಯಕ್ಕೆ ಕರೆತರೋದಕ್ಕಾಗಿ ಚಿಂತನೆಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಸಹ ಹನುಮಂತನನ್ನು ಸೆಳೆಯಲು ಮುಂದಾಗಿವೆ. ಆದರೆ ಯಾರು ಏನೇ ಹೇಳಲಿ ಹನುಮಂತ ಮಾತ್ರ ಅವರಿಗೆ ಏನ್ ಸರಿ ಅನಿಸುತ್ತೋ ಅದನ್ನೇ ಮಾಡೋದು ಅನ್ನೋದನ್ನು ಆಗಾಗ ಪ್ರೂ ಮಾಡುತ್ತಾ ಬಂದಿದ್ದಾರೆ.
ಒಟ್ಟಿನಲ್ಲಿ ಹನುಮಂತ ಸಿನಿಮಾ ಮಾಡುತ್ತಾರಾ? ಅಥವಾ ರಾಜಕೀಯ ಮಾಡುತ್ತಾರಾ? ಇಲ್ಲ ತಮ್ಮ ಗಾಯನ ವೃತ್ತಿ, ರಿಯಾಲಿಟಿ ಶೋಗಳಲ್ಲೇ ತಮ್ಮ ಪಯಣವನ್ನು ಮುಂದುವರೆಸುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications