Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್-12ರ ವಿನ್ನರ್ ಗಿಲ್ಲಿಗೆ ಗೆಲುವಿನ ಸಂಭ್ರಮದ ನಡುವೆಯೇ ದೊಡ್ಡ ಸಂಕಷ್ಟ ಎದುರಾಗಿದೆ. ಬಿಗ್ಬಾಸ್ ನಂತರ ರಾಜ್ಯಾದ್ಯಂತ ಮನೆಮಾತಾಗಿರುವ ಗಿಲ್ಲಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸಿನಿಮಾ ನಿರ್ಮಾಪಕ ತೇಜಸ್ವಿ ಅವರು ಕರ್ನಾಟಕ ಫಿಲ್ಮ್ ಚೇಂಬರ್ಗೆ ಗಿಲ್ಲಿ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.
ಬಿಗ್ಬಾಸ್ ಮನೆ ಪ್ರವೇಶಿಸುವ ಮುನ್ನ ಗಿಲ್ಲಿ ನಟಿಸಿದ್ದ "ಸರ್ಕಾರಿ ಶಾಲೆ ಎಚ್8" ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರಕ್ಕೆ ಗಿಲ್ಲಿ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ನಿರ್ಮಾಪಕರು ಮಾಡಿದ್ದಾರೆ. ಸದ್ಯ ಗಿಲ್ಲಿ ಗೆಲುವಿನ ಸಂಭ್ರಮದಲ್ಲಿರುವ ಗಿಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇದರ ನಡುವೆ ತನ್ನದೇ ನಟನೆಯ ಸಿನಿಮಾ ಪ್ರಚಾರದಿಂದ ಗಿಲ್ಲಿ ದೂರ ಸರಿದಿರುವ ಆರೋಪ ಕೇಳಿಬಂದಿದೆ.

ತನ್ನದೇ ಸಿನಿಮಾ ಪ್ರಚಾರ ಮಾಡುತ್ತಿಲ್ಲ
"ಸರ್ಕಾರಿ ಶಾಲೆ ಎಚ್8" ಸಿನಿಮಾದಲ್ಲಿ ಗಿಲ್ಲಿಗೆ ಪ್ರಮುಖ ಪಾತ್ರ ನೀಡಲಾಗಿತ್ತು. ಬಿಗ್ಬಾಸ್ಗೆ ಹೋಗುವ ಮುನ್ನವೇ ಅವರು ಕೇಳಿದ ಸಂಪೂರ್ಣ ಸಂಭಾವನೆಯನ್ನು ಪಾವತಿಸಲಾಗಿದೆ. ಆದರೆ ಸಿನಿಮಾ ಬಿಡುಗಡೆಯಾಗಿದ್ದರೂ ಗಿಲ್ಲಿ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ. ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಕನಿಷ್ಠ ಪಕ್ಷ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಒಂದು ಪೋಸ್ಟ್ ಕೂಡ ಹಂಚಿಕೊಂಡಿಲ್ಲ" ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಚಿತ್ರದ ಯಶಸ್ಸಿಗೆ ನಟರ ಪ್ರಚಾರ ಮಹತ್ವದ್ದಾಗಿರುವುದರಿಂದ ಗಿಲ್ಲಿಯ ಈ ನಡೆ ನಿರ್ಮಾಪಕರಿಗೆ ತೀವ್ರ ನಿರಾಸೆ ಉಂಟುಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರುವನ್ನು ಸ್ವೀಕರಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್, ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಈ ಬೆಳವಣಿಗೆ ಬಿಗ್ಬಾಸ್ ಗೆಲುವಿನ ಬೆನ್ನಲ್ಲೇ ಗಿಲ್ಲಿಗೆ ಎದುರಾದ ಮೊದಲ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಇನ್ನು ಈ ವಿಚಾರದಲ್ಲಿ ಗಿಲ್ಲಿ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದ್ದು, ಚೇಂಬರ್ ವಿಚಾರಣೆಯ ಬಳಿಕ ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ.
ಬಿಗ್ಬಾಸ್ ಕನ್ನಡ ಸೀಸನ್-12ರ ಟ್ರೋಫಿಯನ್ನು ಗಿಲ್ಲಿ ತಮ್ಮದಾಗಿಸಿಕೊಂಡು ಕರ್ನಾಟಕದ ಮನೆಮಾತಾಗಿದ್ದಾರೆ. ಸ್ಪರ್ಧೆ ಆರಂಭದಿಂದಲೇ ಸರಳತೆ, ನೇರ ನಿಲುವು ಮತ್ತು ಆಟದ ಮೇಲೆ ಸಂಪೂರ್ಣ ಫೋಕಸ್ ಇಟ್ಟ ಗಿಲ್ಲಿ, ಫೈನಲ್ವರೆಗೆ ನಿರಂತರವಾಗಿ ಜನರ ಬೆಂಬಲ ಪಡೆದಿದ್ದರು.
ಇನ್ನು ಗಿಲ್ಲಿ ಸಿನಿಮಾ ಹಾಗೂ ಟಿವಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಬಿಗ್ಬಾಸ್ ವೇದಿಕೆಯಿಂದಲೇ ಅವರಿಗೆ ಭಾರೀ ಜನಪ್ರಿಯತೆ ದೊರಕಿತು. "ಸರ್ಕಾರಿ ಶಾಲೆ ಎಚ್8" ಸಿನಿಮಾದಲ್ಲಿ ನಟಿಸಿದ್ದ ಗಿಲ್ಲಿ, ಬಿಗ್ಬಾಸ್ಗೆ ಕಾಲಿಟ್ಟಾಗಲೇ ತಮ್ಮ ಸರಳ ಬದುಕಿನ ಕಥೆ, ಶ್ರಮ ಮತ್ತು ಕನಸುಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದರು. ಸೀಸನ್-12ರಲ್ಲಿ ಗಿಲ್ಲಿ ಜಗಳಕ್ಕಿಂತ ಆಟಕ್ಕೆ ಹೆಚ್ಚಿನ ಮಹತ್ವ ನೀಡಿದರು. ಅನಗತ್ಯ ವಾಗ್ವಾದಗಳಿಂದ ದೂರ ಉಳಿದು, ಸ್ನೇಹ, ನಿಷ್ಠೆ ಮತ್ತು ನೇರ ಮಾತುಗಳ ಮೂಲಕ ಮನೆಮಂದಿಯಲ್ಲೂ ಹಾಗೂ ಪ್ರೇಕ್ಷಕರಲ್ಲೂ ಒಳ್ಳೆಯ ಅಭಿಪ್ರಾಯ ಮೂಡಿಸಿದ್ದರು.












Click it and Unblock the Notifications