ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು: ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ ರಜತ್ ದೂರು
ಕನ್ನಡ ಬಿಗ್ಬಾಸ್ ಸೀಸನ್-12ರ ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ (ಡಾಗ್ ಸತೀಶ್) ಅವರು ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದೆ. ನಟ ಸುದೀಪ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ. ಕನ್ನಡ ಬಿಗ್ಬಾಸ್ ಮೂಲಕ ಗಮನ ಸೆಳೆದ ಸತೀಶ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಏನಿದು ವಿವಾದ?
ಸತೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೌಚಾಲಯದಲ್ಲಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ನಟ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ 'ದಾದ ಯಾರ್ ಗೊತ್ತಾ?' ಹಾಡನ್ನು ಎಡಿಟ್ ಮಾಡಿ ಹಾಕಿದ್ದಾರೆ. ಜೊತೆಗೆ "ಅಣ್ಣ ಸುಸು ಮಾಡಿದ್ರೂ ನ್ಯೂಸ್ ಆಗುತ್ತೆ" ಎಂಬ ಬರಹವೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಈ ಕ್ರಮವನ್ನು ಸುದೀಪ್ ಅಭಿಮಾನಿಗಳು ಅವಮಾನಕರ ಎಂದು ಆಕ್ಷೇಪಿಸಿದ್ದಾರೆ. ಹಿರಿಯ ನಟ ಸುದೀಪ್ ಅವರನ್ನು ಅವಮಾನಿಸುವ ಉದ್ದೇಶದಿಂದಲೇ ಈ ವಿಡಿಯೋ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ದೂರು ಕೊಟ್ಟ ರಜತ್
ಬಿಗ್ಬಾಸ್ನ ಮಾಜಿ ಸ್ಪರ್ಧಿ ರಜತ್ ಕಿಶನ್, ಸುದೀಪ್ ಅಭಿಮಾನಿಗಳ ಸಂಘದೊಂದಿಗೆ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ಸತೀಶ್ ವಿರುದ್ಧ ದೂರು ನೀಡಿದ್ದಾರೆ. ಹಿರಿಯ ನಟನಿಗೆ ಅವಮಾನ ಮಾಡುವ ಉದ್ದೇಶದಿಂದ ಈ ವಿಡಿಯೋ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಈ ಸಂಬಂಧ ಚೆನ್ನಮ್ಮನ ಅಚ್ಚುಕಟ್ಟು ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಮೆಂಟ್ನಲ್ಲೇ ಚಳಿ ಬಿಡಿಸಿದ ವಿನಯ್-ರಜತ್
ಈ ವಿಡಿಯೋಗೆ ನಟ ವಿನಯ್ ಗೌಡ ಕೂಡ ಕಾಮೆಂಟ್ ಮಾಡಿ, "ಮೊದಲು ಹಾಡು ಡಿಲೀಟ್ ಮಾಡು, ಇಲ್ಲದಿದ್ದರೆ ಜನ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ" ಎಂದು ಎಚ್ಚರಿಸಿದ್ದಾರೆ. ರಜತ್ ಸಹ ಕಾಮೆಂಟ್ ಮೂಲಕವೇ "ವಿಡಿಯೋ ತೆಗೆಯೋ, ಸಾಂಗ್ ಡಿಲೀಟ್ ಮಾಡು" ಎಂದು ಖಡಕ್ ಆಗಿ ಹೇಳಿದ್ದಾರೆ.
ಈ ಬಗ್ಗೆ ರಜತ್ ಕಿಶನ್ ಪ್ರತಿಕ್ರಿಯಿಸಿ, "ಸುದೀಪ್ ಸರ್ ಬಗ್ಗೆ ಏಕವಚನದಲ್ಲಿ ಮಾತನಾಡುವುದು ತಪ್ಪು. ಅವರ ಹಾಡನ್ನು ಟಾಯ್ಲೆಟ್ ವಿಡಿಯೋಗೆ ಬಳಸುವುದು ಅವಮಾನಕರ. ಇಂತಹ ವರ್ತನೆ ಮುಂದುವರಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ. ಫೋನ್ ಮಾಡಿದರೂ ಸತೀಶ್ ಪ್ರತಿಕ್ರಿಯಿಸುತ್ತಿಲ್ಲ ಎಂದು ಕೂಡ ಅವರು ಆರೋಪಿಸಿದ್ದಾರೆ. ಕೆಲವು ಸಂದರ್ಶನಗಳಲ್ಲಿ ಸತೀಶ್, "ನನ್ನ ಪಬ್ಲಿಸಿಟಿ ನೋಡಿ ಕೆಲವರಿಗೆ ಹೊಟ್ಟೆ ಉರಿ" ಎಂದು ಹೇಳಿಕೊಂಡಿರುವುದು ಮತ್ತು ರಜತ್ ಅವರನ್ನು 'ರೋಸ್ಟ್' ಮಾಡಿದ್ದೇನೆ ಎಂದು ಹೇಳಿದ್ದಾರೆ ಎನ್ನುವ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

ಸತೀಶ್ ಕ್ಯಾಡಬಾಮ್ಸ್ ಬಿಗ್ಬಾಸ್ ಮನೆಯಿಂದ ಹೊರಬಂದ ನಂತರ ಸತತವಾಗಿ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿಂದೆ ತಮ್ಮ 'ದುಬಾರಿ ನಾಯಿಗಳ' ಮೂಲಕ ಸುದ್ದಿಯಾಗಿದ್ದ ಸತೀಶ್, ಈಗ ಸುದೀಪ್ ಅವರಂತಹ ದೊಡ್ಡ ನಟನ ಹೆಸರನ್ನು ಬಳಸಿಕೊಂಡು 'ನೆಗೆಟಿವ್ ಪಬ್ಲಿಸಿಟಿ' ಪಡೆಯಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಬನಶಂಕರಿ ಪೊಲೀಸರು ಈ ದೂರನ್ನು ದಾಖಲಿಸಿಕೊಂಡಿದ್ದರೂ, ಘಟನೆಯ ತೀವ್ರತೆಯನ್ನು ಗಮನಿಸಿ ಇದನ್ನು 'ಚೆನ್ನಮ್ಮನ ಅಚ್ಚುಕಟ್ಟು' ಪೊಲೀಸ್ ಠಾಣೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಸತೀಶ್ ಅವರು ಈ ಕುರಿತು ಪೊಲೀಸರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಬೇಕಾಗಬಹುದು. ಒಂದು ವೇಳೆ ವಿಡಿಯೋ ಡಿಲೀಟ್ ಮಾಡದಿದ್ದರೆ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ.












Click it and Unblock the Notifications