Kichcha Sudeep: ಕಿಚ್ಚ ಸುದೀಪ್ ಬಗ್ಗೆ ಯೋಗರಾಜ್ ಭಟ್ ಹೇಳಿದ ಮಾತು ಕೇಳಿ ಒದ್ದೆಯಾಯ್ತು ಕನ್ನಡಿಗರ ಕಣ್ಣು!
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇತ್ತೀಚೆಗಷ್ಟೆ ನಿಧನರಾದರು. ಹೀಗಾಗಿ ಈ ವಾರ ಬಿಗ್ಬಾಸ್ ಶೋನಲ್ಲಿ ಕಿಚ್ಚನ ಜೊತೆ ವಾರದ ಕತೆ ಇರಲಿಲ್ಲ. ಬದಲಿಗೆ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್ಬಾಸ್ ಮನೆಗೆ ಭೇಟಿ ನೀಡಿ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಸುದೀಪ್ ಬಗ್ಗೆ ಯೋಗರಾಜ್ ಭಟ್ ಅವರು ಹೇಳಿದ ಮಾತು ಕನ್ನಡ ನಾಡಿನ ಜನತೆಯ ಕಣ್ಣಲ್ಲಿ ನೀರು ತರಿಸಿದೆ.
ಹೌದು... ಈ ವಾರ ಸುದೀಪ್ ಅವರು ಬಿಗ್ಬಾಸ್ ಶೋಗೆ ಯಾಕೆ ಬಂದಿಲ್ಲ ಎಂದು ಬಿಗ್ಬಾಸ್ ಸ್ಪರ್ಧಿಗಳಿಗೆ ತಿಳಿಸಿದ ಯೋಗರಾಜ್ ಭಟ್, ಸುದೀಪ್ ಬಗ್ಗೆ ಕನ್ನಡಿಗರ ಕರುಳು ಕಿವುಚುವ ಮಾತ್ತೊಂದನ್ನು ಹೇಳಿದ್ದಾರೆ. ಇದನ್ನ ಕೇಳಿದ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟೇ ಅಲ್ಲ ಬಿಗ್ಬಾಸ್ ನೋಡುವ ಪ್ರತಿಯೊಬ್ಬ ಪ್ರೇಕ್ಷಕರ ಕಣ್ಣುಗಳು ತುಂಬಿ ಬಂದಿವೆ. ಅಷ್ಟಕ್ಕೂ ಸುದೀಪ್ ಬಗ್ಗೆ ಯೋಗರಾಜ್ ಭಟ್ ಅವರು ಹೇಳಿದ ಮಾತೇನು ಗೊತ್ತಾ?

ತಾಯಿಯ ಸ್ಥಿತಿ ಗಂಭೀರವಾಗಿರುವಾಗಲೂ ಕರ್ತವ್ಯ ನಿಷ್ಠೆ ತೋರಿದ ಕಿಚ್ಚ ಸುದೀಪ್
ಕಳೆದ ಶನಿವಾರ ಅಂದರೆ ಅಕ್ಟೋಬರ್ 19ರಂದು ಸುದೀಪ್ ಬಿಗ್ಬಾಸ್ ಶೋ ನಡೆಸಿಕೊಡುತ್ತಿದ್ದರು. ಈ ದಿನ ಶೋ ಮುಗಿಯುವುದು ಕೂಡ ತಡವಾಗಿತ್ತು. ಸುದೀಪ್ ಅವರ ಫೋನ್ಗೆ ಮನೆಯಿಂದ ಪದೇ ಪದೇ ಕರೆಗಳು ಬರುತ್ತಲೇ ಇದ್ದವು. ಶೋನಿಂದ ಕೊಂಚ ವಿರಾಮ ಪಡೆದು ಹೊರಬಂದ ಸುದೀಪ್, ಮನೆಯಿಂದ ಬಂದ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದರು. ಈ ವೇಳೆ ಅವರಿಗೆ ತಾಯಿಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ತಿಳಿದು ಬಂದಿತ್ತು. ಈ ವಿಚಾರ ತಿಳಿದ ಕೂಡಲೇ ಸುದೀಪ್ ಮನೆಗೆ ಬೇಗ ಬರುವುದಾಗಿ ಹೇಳಿ ಕಾಲ್ ಕಟ್ ಮಾಡಿದ್ದರು.

ತಾಯಿ ಸ್ಥಿತಿ ಗಂಭೀರವಾಗಿರುವಾಗ ಬಿಗ್ಬಾಸ್ ತಂಡಕ್ಕೆ ಸುದೀಪ್ ಹೇಳಿದ್ದಿಷ್ಟು...
ಆದರೆ ಸುದೀಪ್ ಮನೆಗೆ ಅಂದು ಬೇಗ ಹೋಗಲೇ ಇಲ್ಲ. ಬದಲಿಗೆ ಶೋ ಅನ್ನು ಮುಂದುವರಿಸಿ ಸ್ಪರ್ಧಿಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಆಲಿಸಿ, ಅವರಿಗೆ ಹೇಳಬೇಕಾದ ಮಾತುಗಳೆನ್ನೆಲ್ಲವನ್ನೂ ತಾಳ್ಮೆಯಿಂದ ಹೇಳಿದರು. ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ನೋವನ್ನು ಎದೆಯಲ್ಲಿ ಗಟ್ಟಿಯಾಗಿ ಇಟ್ಟುಕೊಂಡು ಶೋ ಪೂರ್ಣಗೊಳಿಸಿದರು ಕಿಚ್ಚ ಸುದೀಪ್.
ಬಿಗ್ಬಾಸ್ ತಂಡ 'ಸರ್, ನೀವು ಮನೆಗೆ ಬೇಗ ಹೋಗಿ' ಅಂದರೆ ಸುದೀಪ್ ಅವರು 'ಪಾಪ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ನನ್ನ ಮನೆಯ ಪರಿಸ್ಥಿತಿ ಏನೂ ಗೊತ್ತಿಲ್ಲ. ನಾನು ಅರ್ಧಕ್ಕೆ ಶೋ ಬಿಟ್ಟು ಹೋಗುವುದು ಸರಿ ಅಲ್ಲ. ನಾನು ಬಿಗ್ಬಾಸ್ ಮನೆಯ ಸದಸ್ಯರ ಸಮಸ್ಯೆ ಕೇಳುತ್ತೇನೆ' ಅಂತ ಶೋ ಅನ್ನು ಮುಂದುವರೆಸಿದರು ಸುದೀಪ್.

ಸುದೀಪ್ ಕರ್ತವ್ಯ ನಿಷ್ಠೆಯನ್ನು ವಿವರಿಸದ ಯೋಗರಾಜ್ ಭಟ್
ಸುದೀಪ್ ಅವರ ಕರ್ತವ್ಯ ನಿಷ್ಠೆಯನ್ನು ಯೋಗರಾಜ್ ಭಟ್ ಸ್ಪರ್ಧಿಗಳ ಮುಂದೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾಯಿ ಎಲ್ಲರಿಗೂ ಇರುತ್ತಾಳೆ, ಹುಟ್ಟಿದಾಗಿನಿಂದ ಪ್ರತಿ ಕ್ಷಣದಲ್ಲೂ ನಮ್ಮೊಂದಿಗೆ ಇದ್ದು, ಕಷ್ಟ ಸುಖ:ದಲ್ಲಿ ಭಾಗಿಯಾಗಿ ನಮ್ಮನ್ನು ದೊಡ್ಡವರನ್ನಾಗಿ ಮಾಡಿರುತ್ತಾರೆ. ತಾಯಿ ಮೇಲೆ ಅಪಾರ ಪ್ರೀತಿ ಹೊಂದಿದ್ದ ಸುದೀಪ್ ಅಂತಹ ಸಂದರ್ಭದಲ್ಲೂ ಮನೆಗೆ ಬೇಗ ಹೋಗಲಿಲ್ಲ. ಇದು ಅವರ ಕರ್ತವ್ಯ ನಿಷ್ಠೆ ಹಾಗೂ ಕೆಲಸದ ಮೇಲೆ ಅವರಿಗೆ ಇರುವ ಗೌರವ.
''ನಾನು ತಾಯಿಯನ್ನು ಕಳೆದುಕೊಂಡೆ...''
ಅವರು ಶೋ ಮುಗಿಸಿ ಹೋದ ಮೇಲೆ ಬಿಗ್ಬಾಸ್ ತಂಡಕ್ಕೆ ಸುದೀಪ್ ಅವರಿಂದ ಒಂದು ಮೆಸೇಜ್ ಬರುತ್ತದೆ. ಅದು 'ನಾನು ನನ್ನ ತಾಯಿಯನ್ನು ಕಳೆದುಕೊಂಡೆ' ಅಂತ. ಒಂದು ವೇಳೆ ಶೋಯಿಂದ ಬೇಗ ಹೋಗಿದ್ದರೆ ಸುದೀಪ್ ಅವರು ಸ್ವಲ್ಪ ಹೊತ್ತು ತಾಯಿಯ ಜೊತೆ ಕಳೆಯಬಹುದಿತ್ತು. ಹೀಗೆಂದು ಹೇಳುವಾಗ ಯೋಗರಾಜ್ ಭಟ್ ಅವರಿಗೆ ದು:ಖ ತುಂಬಿ ಬಂತು. ಆದರೆ ಅದನ್ನು ಅವರು ಸ್ಪರ್ಧಿಗಳ ಮುಂದೆ ತೋರಿಸಿಕೊಳ್ಳಲಿಲ್ಲ.

ಬಿಕ್ಕಿ ಬಿಕ್ಕಿ ಅತ್ತ ಬಿಗ್ಬಾಸ್ ಸ್ಪರ್ಧಿಗಳು
ಯೋಗರಾಜ್ ಭಟ್ ಅವರು ಈ ವಿಚಾರ ಕೇಳುತ್ತಿರುವಾಗ ಬಿಗ್ಬಾಸ್ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಸುದೀಪ್ ಅವರ ತಾಯಿ ಸರೋಜ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಸುದೀಪ್ ಅವರಿಗೆ ದು:ಖ ಭರಿಸುವಂತಹ ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಈ ವಿಚಾರವನ್ನು ಹೇಳಿ ಯೋಗರಾಜ್ಭಟ್ ಅವರು ಬಿಗ್ಬಾಸ್ ಮನೆಯಿಂದ ನಿರ್ಗಮಿಸಿದರು.
ಭಾನುವಾರದ ಈ ಶೋ ನೋಡಿದ ಪ್ರೇಕ್ಷಕರ ಕಣ್ಣು ಕೂಡ ಒದ್ದೆಯಾಗಿವೆ. ಸುದೀಪ್ ತಾಯಿಯ ಆರೋಗ್ಯ ಗಂಭೀರವಾಗಿರುವ ಸುದ್ದಿ ತಿಳಿದು ಆ ನೋವನ್ನು ಎದೆಯಲ್ಲಿಟ್ಟುಕೊಂಡು ಶೋ ಅನ್ನು ಸುದೀಪ್ ಅವರು ಪೂರ್ಣಗೊಳಿಸಿದ್ದು ಕನ್ನಡಿಗರ ಕರುಳು ಕಿವುಚಿದ್ದು ಸುಳ್ಳಲ್ಲ.












Click it and Unblock the Notifications